Home ಅಂಕಣ ನೈತಿಕತೆಯ ಕಟಕಟೆಯಲ್ಲಿ ಭಾರತದ ನ್ಯಾಯಾಂಗ

ನೈತಿಕತೆಯ ಕಟಕಟೆಯಲ್ಲಿ ಭಾರತದ ನ್ಯಾಯಾಂಗ

0

ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ತಾವು ನಿವೃತ್ತಿಗೊಂಡು ಕೇವಲ ಒಂದು ತಿಂಗಳಾಗುತ್ತಿದ್ದಂತೆಯೇ ರಾಜ್ಯಪಾಲರಾಗಿ ನೇಮಕಗೊಳ್ಳುತ್ತಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಸರಕಾರವು ಅಂದರೆ ಆ ಸರಕಾರದ ಹಿಂದೆ ಇರುವ ರಾಜಕೀಯ ಪಕ್ಷವು ಕೊಟ್ಟ ಉಡುಗೊರೆಯನ್ನು ಸ್ವೀಕರಿಸುವುದು ನೈತಿಕವಾಗಿ ಎಷ್ಟು ಸರಿ ಎಂಬ ವಿಶ್ಲೇಷಣೆ ಇಂದಿನ ಶ್ರೀನಿ ಕಾಲಂ ನಲ್ಲಿ.  

“ನಾನು ಪ್ರಾಮಾಣಿಕ, ಸತ್ಯಸಂಧ, ಯಾವುದೇ ಆಮಿಷಕ್ಕೆ ಬಲಿಯಾಗುವವನಲ್ಲ” ಎಂದು ನೀವು ಎಷ್ಟೇ ಎದೆತಟ್ಟಿಕೊಂಡು ಹೇಳಿಕೊಳ್ಳಬಹುದು. ಆದರೆ ನೀವು ನಿಜವಾಗಿಯೂ ಪ್ರಾಮಾಣಿಕರೋ, ಸತ್ಯಸಂಧರೋ, ಸುಲಭದಲ್ಲಿ ಆಮಿಷಗಳಿಗೆ ಬಲಿಯಾಗದವರೋ ಎಂಬುದನ್ನು ತೀರ್ಮಾನಿಸುವುದು ನಿಮ್ಮ ಬದುಕಿನಲ್ಲಿ ಎದುರಾಗುವ ಅಗ್ನಿಪರೀಕ್ಷೆಯಂತಹ ಕೆಲ ವಿಶಿಷ್ಟ ಸಂದರ್ಭಗಳು. ನಿಮ್ಮ ಪ್ರಾಮಾಣಿಕತೆಯ ಮೆಟ್ಟಲುಗಳಿಂದ ಸುಲಭದಲ್ಲಿ ಜಾರಿ ಬೀಳಬಹುದಾದ ಸಂದರ್ಭಗಳಲ್ಲಿ ನೀವು ಅವನ್ನು ಎದುರಿಸುವ ರೀತಿಯಿಂದ.

ಸಾವಿರ ರುಪಾಯಿಯ ಆಮಿಷವನ್ನು ನೀವು ದಿಟ್ಟವಾಗಿ ಧಿಕ್ಕರಿಸಿ ನಿಲ್ಲಬಹುದು. ಆದರೆ ಲಕ್ಷಗಟ್ಟಲೆ ರುಪಾಯಿ ಸಂಭಾವನೆ, ದೊಡ್ಡ ಹುದ್ದೆಯ ಗೌರವ, ಐಷಾರಾಮಿ ಸವಲತ್ತುಗಳು ನಿಮ್ಮ ಮುಂದೆ ಬಂದು ನಿಂತಾಗಲೂ ನೀವು ಅವನ್ನು ಧಿಕ್ಕರಿಸಿ ನಿಲ್ಲುವುದು ಅಷ್ಟು ಸುಲಭವಲ್ಲ ಮತ್ತು ನಮ್ಮಲ್ಲಿ ಹಾಗೆ ಧಿಕ್ಕರಿಸಿದವರು ಕಾಣಸಿಗುವುದು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ.

ಸಮಾಜದ ಒಟ್ಟಾರೆ ಪರಿಸ್ಥಿತಿ ಹೀಗೆ ಇರುವುದರಿಂದಲೇ ನಾವು ಎಲ್ಲರಿಂದಲೂ ಇದನ್ನು ನಿರೀಕ್ಷಿಸದ ಮತ್ತು ಎಲ್ಲ ಅನೈತಿಕ ನಡೆಗಳನ್ನೂ ಮಾಮೂಲು ಎಂದು ಒಪ್ಪಿಕೊಳ್ಳುವಂತಹ ಒಂದು ವಿಷಾದಕರ ಸ್ಥಿತಿಯನ್ನು ತಲಪಿದ್ದೇವೆ. ಆದರೆ ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು- ಸಾರ್ವಜನಿಕ ಬದುಕಿನಲ್ಲಿರುವವರ ಮೇಲೆ ಸಾವಿರ ಕಣ್ಣುಗಳು ನೆಟ್ಟಿರುತ್ತವೆ. ಅವರ ಪ್ರತಿಯೊಂದು ನಡೆ ನುಡಿಯನ್ನೂ ಅವು ಕ್ಷಣ ಕ್ಷಣವೂ ನಿಕಷಕ್ಕೊಡ್ಡುತ್ತಿರುತ್ತವೆ.

ವಿಶೇಷವಾಗಿ ಪ್ರಜಾತಂತ್ರ ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಮತ್ತು ವ್ಯವಸ್ಥೆಯಿಂದ ತೀರಾ ನಿರಾಶೆಯಾದ ಸಂದರ್ಭದಲ್ಲಿಯೂ ಒಂದು ಭರವಸೆಯ ಆಶಾಕಿರಣವೆಂಬಂತೆ ಇಡೀ ದೇಶ ಎದುರು ನೋಡುವ ನ್ಯಾಯಾಂಗದಿಂದಂತೂ ಇದನ್ನು ಅತಿಯಾಗಿ ನಿರೀಕ್ಷಿಸಲಾಗುತ್ತದೆ. ಯಾಕೆಂದರೆ ನ್ಯಾಯಾಂಗದ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾದರೆ ಅಲ್ಲಿಗೆ ಇಡೀ ಜನತಾಂತ್ರಿಕ ಆಡಳಿತ ವ್ಯವಸ್ಥೆಯೇ ಕುಸಿದು ಬಿದ್ದಂತೆ.

ನಿರಾಶೆಗೊಳಿಸುತ್ತಿರುವ ನ್ಯಾಯಾಂಗ

ಭಾರತದ ನ್ಯಾಯಾಂಗವು ನೈತಿಕತೆಯ ಕಟಕಟೆಯಲ್ಲಿ ನಿಲ್ಲುವ ಪರೀಕ್ಷೆಯನ್ನು ತನ್ನ ಇತಿಹಾಸದ ಉದ್ದಕ್ಕೂ ಎದುರಿಸುತ್ತಲೇ ಬಂದಿದೆ. ಬಹುತೇಕ ಬಾರಿ ಅದು ಈ ಪರೀಕ್ಷೆಯಲ್ಲಿ ಗೆದ್ದಿದೆ ಕೂಡಾ. ಸುಮಾರು ಒಂದು ದಶಕದ ಹಿಂದಿನ ನ್ಯಾಯಾಂಗವನ್ನು ಗಮನಿಸಿದರೆ ಇದು ಸ್ಪಷ್ಟವಾದೀತು. ಆದರೆ, ತೀರಾ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಟೀಕೆ, ಗೇಲಿಯ ಹೊರತಾಗಿಯೂ ಅದು ಹಿಡಿದಿರುವ ಹಾದಿ ಅಚ್ಚರಿಯ ಜತೆಯಲ್ಲಿ ಬೇಸರ ಮೂಡಿಸುವಂತಿದೆ. ಇದಕ್ಕೆ ತೀರಾ ಇತ್ತೀಚಿನ ಉದಾಹರಣೆ- ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ತಾವು ನಿವೃತ್ತಿಗೊಂಡು ಕೇವಲ ಒಂದು ತಿಂಗಳಾಗುತ್ತಿದ್ದಂತೆಯೇ, ರಾಜಕೀಯ ಪಕ್ಷವೊಂದು ಒಡ್ಡಿರುವ ಆಮಿಷಕ್ಕೆ ಬಲಿಯಾಗಿ ರಾಜ್ಯಪಾಲರಾಗಿ ನೇಮಕಗೊಳ್ಳುತ್ತಿರುವುದು.

ನ್ಯಾ. ಅಬ್ದುಲ್ ನಜೀರ್ ಅವರು ಭಾರತದ ನ್ಯಾಯದಾನ ಇತಿಹಾಸದಲ್ಲಿಯೇ ಅತ್ಯಂತ ಮಹತ್ತ್ವದ್ದೆಂದು ಪರಿಗಣಿತವಾದ ಬಾಬ್ರಿ ಮಸೀದಿ ವಿವಾದದ ತೀರ್ಪು ನೀಡಿದ ಐವರು ನ್ಯಾಯಮೂರ್ತಿಗಳ ಪೀಠದ ಸದಸ್ಯರಾಗಿದ್ದವರು; ಅದರ ಏಕೈಕ ಮುಸ್ಲಿಂ ಸದಸ್ಯರಾಗಿದ್ದವರು. ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕೆಂದು ಎತ್ತಿ ಹಿಡಿದ ಕೆ ಎಸ್ ಪುಟ್ಟಸ್ವಾಮಿ ಪ್ರಕರಣ ಒಂಬತ್ತು ನ್ಯಾಯಾಧೀಶರ ಪೀಠ, ಭಾರತ ಸರಕಾರದ ನಗದು ರದ್ಧತಿಯಂತಹ ಪ್ರಕರಣಗಳಲ್ಲಿಯೂ ತೀರ್ಪು ನೀಡಿದ ಪೀಠದಲ್ಲಿದ್ದವರು.

ಅವರು ನೀಡಿದ ಯಾವ ತೀರ್ಪುಗಳನ್ನೂ ನಾವು ಅನುಮಾನದಿಂದ ನೋಡಬೇಕಾಗಿಲ್ಲ. ದೇಶದ ಸಂವಿಧಾನದ ಪರಿಚ್ಛೇದಗಳು, ಕಾನೂನು ನಿಯಮಗಳು, ಪೀಠದ ಮುಂದೆ ಮಂಡಿಸಿದ ಸಾಕ್ಷ್ಯಾಧಾರಗಳು ಮತ್ತು ನ್ಯಾಯವಾದಿಗಳು ಮಂಡಿಸಿದ ವಾದಗಳು ಇತ್ಯಾದಿಗಳ ನೆಲೆಯಲ್ಲಿ ಅವೆಲ್ಲವೂ ಅತ್ಯಂತ ನಿಷ್ಪಕ್ಷಪಾತ ತೀರ್ಪುಗಳೇ ಇರಬಹುದು. ಆದರೆ ಈ ತೀರ್ಪುಗಳ ಮೇಲೆ ಜನರಿಗೆ ಅನುಮಾನ ಮೂಡುವುದು ಸದರಿ ನ್ಯಾಯಮೂರ್ತಿಗಳು ತಮ್ಮ ನಿವೃತ್ತಿಯ ನಂತರ ತಮ್ಮ ದೀರ್ಘ ವೃತ್ತಿಗೆ ಸಲ್ಲದ ರೀತಿಯಲ್ಲಿ ನಡೆದುಕೊಂಡು ನೈತಿಕವಾಗಿ ದಾರಿ ತಪ್ಪಿದಾಗ.

ಬಾಬ್ರಿ ಮಸೀದಿ ತೀರ್ಪು

ಉದಾಹರಣೆಗೆ, ಬಾಬ್ರಿ ಮಸೀದಿ ತೀರ್ಪು ನೀಡಿದ ಪೀಠದದಲ್ಲಿದ್ದ ಐವರು ನ್ಯಾಯಮೂರ್ತಿಗಳೆಂದರೆ ನ್ಯಾ. ಎಸ್ ಎ ಬೊಬ್ಡೆ, ನ್ಯಾ. ರಂಜನ್ ಗೊಗೋಯ್, ನ್ಯಾ. ಅಶೋಕ್ ಭೂಷಣ್, ನ್ಯಾ. ಎಸ್ ಎ ನಜೀರ್ ಮತ್ತು ನ್ಯಾ. ಡಿ ವೈ ಚಂದ್ರಚೂಡ್.

ಇವರಲ್ಲಿ ರಂಜನ್ ಗೊಗೋಯ್ ಅಂತೂ ಬಿಜೆಪಿಯ ಡಾರ್ಲಿಂಗ್ ಆಗಿ, ಕೊನೆಗೆ ಬಿಜೆಪಿ ನೇತೃತ್ವದ ಸರಕಾರ ನೀಡಿದ ಉಡುಗೊರೆಯನ್ನು ವಿನಮ್ರವಾಗಿ ಸ್ವೀಕರಿಸಿ, ನಿವೃತ್ತಿಯ ನಾಲ್ಕೇ ತಿಂಗಳಲ್ಲಿ ಅಂದರೆ 2020 ರ ಮಾರ್ಚ್ ನಲ್ಲಿ ರಾಜ್ಯಸಭೆಯ ಸದಸ್ಯರೂ ಆದರು; ತೀವ್ರ ಟೀಕೆಗೆ, ಅಪಹಾಸ್ಯಕ್ಕೆ ಗುರಿಯಾದರು.

ನ್ಯಾ. ಅಶೋಕ್ ಭೂಷಣ್ ಅವರನ್ನು ನಿವೃತ್ತಿಯಾದ ನಾಲ್ಕೇ ತಿಂಗಳಲ್ಲಿ ಮೋದಿ ಸರಕಾರವು ದೇಶದ ಅತ್ಯಂತ ದೊಡ್ಡ ಕಾರ್ಪೋರೇಟ್ ಗಳ ಕೋಟ್ಯಂತರ ಮೌಲ್ಯದ ವ್ಯಾಜ್ಯಗಳನ್ನು ಬಗೆಹರಿಸುವ ‘ನೇಶನಲ್ ಕಂಪನಿ ಲಾ ಅಪೆಲೆಟ್ ಟ್ರಿಬ್ಯೂನಲ್’ (NCLAT) ನ ಅಧ್ಯಕ್ಷರನ್ನಾಗಿ 2021 ರ ನವೆಂಬರ್ ನಲ್ಲಿ ನೇಮಿಸಿತು.

ನ್ಯಾ. ಎಸ್ ಎ ಬೊಬ್ಡೆಯವರು ಈ ತನಕ ಯಾವುದೇ ಹುದ್ದೆಯನ್ನು ಸ್ವೀಕರಿಸಿಲ್ಲವಾದರೂ ಅವರು ಸಂಘದ ಸಿದ್ಧಾಂತಗಳಿಗೆ ಪೂರಕವಾಗಿ ಈಗಲೂ ಮಾತನಾಡುತ್ತಿರುವುದರಿಂದ ಮುಂದೆ ಅಚ್ಚರಿ ಹುಟ್ಟಿಸುವಂತಹ ಹುದ್ದೆಯನ್ನು ಅಲಂಕರಿಸಿದರೂ ವಿಶೇಷವೇನೂ ಇಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ.

ನ್ಯಾ. ಚಂದ್ರಚೂಡ್ ಅವರು ಈಗ ಸಿಜೆಐ ಆಗಿ ಮುಂದುವರಿದಿದ್ದಾರೆ. ಎರಡು ವರ್ಷದ ಬಳಿಕ ನಿವೃತ್ತಿಯಾಗಲಿದ್ದು ಆಗ ಏನು ಮಾಡುತ್ತಾರೆ ಎಂಬುದನ್ನು ಕಾಲವೇ ಹೇಳಬೇಕು.

ಇದೀಗ ನ್ಯಾ. ಅಬ್ದುಲ್ ನಜೀರ್ ಅವರು ಕಳೆದ ತಿಂಗಳು ಅಂದರೆ ಜನವರಿ 4, 2023 ರಂದು ನಿವೃತ್ತರಾದವರು ತಿಂಗಳು ಕಳೆಯುತ್ತಿದ್ದಂತೆ, ಅಂದರೆ ಫೆಬ್ರವರಿ 12, 2023 ರಂದು ಆಂಧ‍್ರಪ್ರದೇಶ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ!

ಸ್ಥಾನಮಾನದ ಬಯಕೆಗಳು

ಹಾಗೆ ನೋಡಿದರೆ, ನ್ಯಾಯಮೂರ್ತಿಗಳಾದವರು ಇಂತಹ ಹುದ್ದೆಗಳನ್ನು ಅಲಂಕರಿಸಲು ತಾಂತ್ರಿಕ ತೊಂದರೆಯೇನೂ ಇಲ್ಲ. ಕಾನೂನು ಅವರನ್ನು ನಿರ್ಬಂಧಿಸುವುದೂ ಇಲ್ಲ. ಆದರೆ ಸರಕಾರವು ಅಂದರೆ ಆ ಸರಕಾರದ ಹಿಂದೆ ಇರುವ ರಾಜಕೀಯ ಪಕ್ಷವು ಕೊಟ್ಟ ಉಡುಗೊರೆಯನ್ನು ಸ್ವೀಕರಿಸುವುದು ನೈತಿಕವಾಗಿ ಎಷ್ಟು ಸರಿ ಮತ್ತು ಸಾರ್ವಜನಿಕರಲ್ಲಿ ಅದು ಯಾವ ಅಭಿಪ್ರಾಯಕ್ಕೆ ಕಾರಣವಾಗುತ್ತದೆ ಎಂಬುದು ಇಲ್ಲಿನ ಮುಖ್ಯ ಪ್ರಶ್ನೆ. ಅಲ್ಲದೆ ಇಂತಹ ನಡೆವಳಿಕೆಗಳು ಕೆಟ್ಟ ಮೇಲ್ಪಂಕ್ತಿ ಹಾಕಿಕೊಟ್ಟು ಮುಂದೆ ಕರ್ತವ್ಯದಲ್ಲಿರುವಾಗಲೇ ನ್ಯಾಯಮೂರ್ತಿಗಳಿಗೆ ದಾರಿ ತಪ್ಪುವುದಕ್ಕೆ ಒಂದು ಪ್ರೇರಣೆಯಾಗಲಾರದೇ?

ಇದೇ ವಿಷಯದಲ್ಲಿ ಹತ್ತು ವರ್ಷಗಳ ಹಿಂದೆ ಅಂದರೆ  2012 ರಲ್ಲಿ ಬಿಜೆಪಿ ನಾಯಕ ಮತ್ತು ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಅರುಣ್ ಜೇಟ್ಲಿಯುವರು ಹೇಳಿದ Pre-retirement judgements are influenced by post-retirement jobs (ನಿವೃತ್ತಿ ನಂತರದ ಹುದ್ದೆಯ ಬಯಕೆಗಳು ನಿವೃತ್ತಿ ಪೂರ್ವ ತೀರ್ಪುಗಳ ಮೇಲೆ ಪ್ರಭಾವ ಬೀರುತ್ತವೆ)” ಎಂಬ ಅತ್ಯಂತ ವಾಸ್ತವಿಕ ಮತ್ತು ಸುಪ್ರಸಿದ್ಧ ಮಾತು ಸದಾ ಮನನೀಯ. ದುಃಖದ ಸಂಗತಿಯೆಂದರೆ, ಈಗಲೂ ನ್ಯಾಯಮೂರ್ತಿಗಳು ಆಮಿಷಗಳಿಗೆ ಬಲಿಯಾಗುತ್ತಾ ತಮ್ಮ ಪಾಲಿಗೆ ಮಾತ್ರವಲ್ಲ ನ್ಯಾಯಾಂಗದ ಚಾರಿತ್ರ್ಯಕ್ಕೂ ಮಸಿ ಬಳಿಯುತ್ತಲೇ ಇದ್ದಾರೆ.

ಇಷ್ಟಕ್ಕೂ 65 ವರ್ಷಗಳ ಬಳಿಕ ನಿವೃತ್ತರಾಗುವ ನ್ಯಾಯಮೂರ್ತಿಗಳಿಗೆ ಇಂತಹ ಹುದ್ದೆಗಳ ಅಗತ್ಯವಾದರೂ ಏನು? ಅರುಣ್ ಜೇಟ್ಲಿ ಹೇಳುವ ಹಾಗೆ ದಿಲ್ಲಿಯ ಲ್ಯೂಟಿನ್ಸ್ ಬಂಗಲೆಗಳೇ? ನ್ಯಾಯಮೂರ್ತಿಗಳಾದವರಿಗೆ ನಿವೃತ್ತಿಯ ನಂತರವೂ ಅತ್ಯಂತ ಆಕರ್ಷಕವಾದ ಪಿಂಚಣಿ ಸಿಗುತ್ತದೆ. ಇತರ ಅನೇಕ ಸರಕಾರಿ ಸೌಲಭ್ಯಗಳೂ ಮುಂದುವರಿಯುತ್ತವೆ. ಹೀಗಿರುವಾಗಲೂ ಅವರೆಲ್ಲ ಈ ಆಮಿಷಗಳಿಗೆ ಯಾಕೆ ಬಲಿಯಾಗುತ್ತಾರೆ? ಇದು ತಮ್ಮ ಚಾರಿತ್ರ್ಯಕ್ಕೊಂದು ಕಪ್ಪು ಚುಕ್ಕೆ ಎಂಬ ತೀರಾ ಸರಳ ಸಂಗತಿ ಅವರಿಗೇಕೆ ಅರ್ಥವಾಗುವುದಿಲ್ಲ? ಸಾರ್ವಜನಿಕ ಟೀಕೆಗಳ ಬಳಿಕವೂ ಅವರೇಕೆ ಮತ್ತೆ ಮತ್ತೆ ಇಂತಹ ನಾಚಿಕೆಗೇಡಿನ ತಪ್ಪು ಮಾಡುತ್ತಾರೆ? ಎಂಬ ಪ್ರಶ್ನೆಗಳಿಗೆ ಸುಲಭ ಉತ್ತರಗಳಿಲ್ಲ.

ನ್ಯಾಯಮೂರ್ತಿಗಳ ಹುದ್ದೆ ಬೇರೆ ಸರಕಾರಿ ಹುದ್ದೆಯಂತಲ್ಲ. ಅದು ಅಪಾರ ವಿಶ್ವಾಸಾರ್ಹತೆಯನ್ನು, ನೈತಿಕತೆಯನ್ನು ಬೇಡುವ ಹುದ್ದೆ; ವೃತ್ತಿ ಕಾಲದಲ್ಲೂ, ನಿವೃತ್ತಿಯ ನಂತರವೂ. ಆದ್ದರಿಂದಲೇ ನಿವೃತ್ತಿ ನಂತರದ ಇವರ ಸರಕಾರಿ ಹುದ್ದೆಗಳ ವಿಷಯದಲ್ಲಿ ಕಾಲ ಕಾಲಕ್ಕೆ ಅನೇಕ ಸಲಹೆಗಳನ್ನು ಮುಂದಿಡಲಾಗಿತ್ತು.

ಮೊದಲನೆಯದಾಗಿ, ನಿವೃತ್ತ ನ್ಯಾಯಮೂರ್ತಿಗಳಿಗೆ ಯಾವುದೇ ಸರಕಾರಿ ಹುದ್ದೆ ಕೊಡಕೂಡದು, ಮತ್ತು ನ್ಯಾಯಮೂರ್ತಿಗಳು ಇಂತಹ ಉಡುಗೊರೆಗಳನ್ನು ಒಪ್ಪಿಕೊಳ್ಳಕೂಡದು ಎನ್ನುವುದು. ಎರಡನೆಯದಾಗಿ ಮತ್ತು ಬಹಳ ಮುಖ್ಯವಾಗಿ, ನ್ಯಾಯ ಮೂರ್ತಿಗಳನ್ನು ಯಾವುದೇ ಹುದ್ದೆಗೆ ನೇಮಿಸುವುದಾದರೂ ಅಲ್ಲೊಂದು ‘ಕೂಲಿಂಗ್ ಪೀರಿಯಡ್’ ಇರಬೇಕು ಎನ್ನುವುದು. ಅಂದರೆ ನಿವೃತ್ತಿಯ ತಕ್ಷಣ ನೇಮಿಸಿಕೊಳ್ಳದೆ, ಒಂದೋ ಎರಡೋ ವರ್ಷಗಳ ಬಳಿಕ ಅವರನ್ನು ನೇಮಿಸಿಕೊಳ್ಳಬಹುದು  ಎನ್ನುವುದು.

ಸಲಹೆಗಳೇನೋ ಕಾರ್ಯಸಾಧು ಮತ್ತು ಕಾರ್ಯಸಾಧ್ಯವಾಗಿಯೇ ಇವೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಪ್ರಭುತ್ವವೇ ತನ್ನ ಹಾದಿಗೆ ಅಡಚಣೆಯನ್ನು ತಂದುಕೊಳ್ಳುತ್ತದೆ ಎಂದು ನಿರೀಕ್ಷಿಸಬಹುದೇ?!

ಶ್ರೀನಿವಾಸ ಕಾರ್ಕಳ

ಚಿಂತಕರು

You cannot copy content of this page

Exit mobile version