Home ಜನ-ಗಣ-ಮನ ಧರ್ಮ- ಸಂಸ್ಕೃತಿ ಸದಭಿರುಚಿಯಿಲ್ಲದ ಉಬ್ಬುಶಿಲ್ಪ!

ಸದಭಿರುಚಿಯಿಲ್ಲದ ಉಬ್ಬುಶಿಲ್ಪ!

0

ಪರಶುರಾಮ ಥೀಂ ಪಾರ್ಕಿನಲ್ಲಿ ಸ್ಥಾಪನೆಯಾಗಿರುವ “ಪರಶುರಾಮನ ಕಾಲಬುಡದಲ್ಲಿ ನಿಂತಿರುವ ಭೂತಗಳು/ ದೈವಗಳು” ಉಬ್ಬು ಶಿಲ್ಪವನ್ನು ನೋಡಿ ಮನಸ್ಸಿಗೆ ತುಂಬಾ ಬೇಸರವಾಯಿತು.‌ ಈ ಭೂತಗಳು ಅಣಿ ಬಿಚ್ಚಿ ನಿಂತಿವೆ. ಅಣಿಯ ಅಕ್ಕ ಪಕ್ಕದಲ್ಲಿ ತಲೆಪಟ್ಟವನ್ನು ಧರಿಸಿದ ದೈವ ಮಾಧ್ಯಮದ ವ್ಯಕ್ತಿಗಳು ಕೈಮುಗಿದು ನಿಂತಿದ್ದಾರೆ. ಪರಶುರಾಮನನ್ನು ಸ್ವಾಗತಿಸಲು ನಿಂತಿವೆ ಎಂದಾದರೆ ಅಣಿ ಬಿಚ್ಚಿಡುವ ಅಗತ್ಯವಿಲ್ಲ. ಇಲ್ಲಿ ಶರಣಾಗತಿಯ ಭಾವವೇ ಎದ್ದು ಕಾಣುತ್ತದೆ. ಒಂದುವೇಳೆ ಪರಶುರಾಮ ತುಳುನಾಡನ್ನು ಸೃಷ್ಟಿಸಿ, ಸಮಗ್ರ ತುಳುನಾಡನ್ನು ಸಂರಕ್ಷಿಸಲು ಬಂದವನು ಎಂದಾದರೆ ಉಳಿದ ಧಾರ್ಮಿಕ ಪರಂಪರೆಗಳ ಅಧಿದೇವತೆಗಳು ಪರಶುರಾಮನ ಆಧಿಪತ್ಯವನ್ನು ಒಪ್ಪಿಕೊಳ್ಳಲು ಅಥವಾ ಸ್ವಾಗತಿಸಲು ಜೊತೆಗೆ ಇರಬೇಕಾಗಿತ್ತು.. ( ಹೀಗೆ ಮಾಡುವುದು ಕೂಡಾ ತಪ್ಪೇ ಆಗುತ್ತದೆ). ಕೇವಲ ತುಳುವರ ಆರಾಧ್ಯದೈವಗಳನ್ನು, ತುಳುನೆಲದ ಸತ್ಯಗಳನ್ನು ಮಾತ್ರ ಹೀಗೆ ಉಬ್ಬುಶಿಲ್ಪದಲ್ಲಿ ಕಾಣಿಸಿದ್ದರ ಹಿಂದೆ ಸದಭಿರುಚಿ ಇಲ್ಲ. ಅತಿಥಿ ಸತ್ಕಾರದ ಆಶಯ ಇದೆ ಎಂದಿಟ್ಟುಕೊಂಡರೂ ಉಬ್ಬು ಶಿಲ್ಪದಲ್ಲಿ ಇದನ್ನು ಸಮರ್ಥಿಸುವ ಪರಿಕರಗಳಿಲ್ಲ. ಅಣಿ ಬಿಚ್ಚಿ ಇಟ್ಟಿರುವುದರಿಂದ ಅವುಗಳ ದೈವತ್ವವನ್ನು ಪರಶುರಾಮನ ಮುಂದೆ ನಿರಾಕರಿಸಲಾಗಿದೆ. ಪರಶುರಾಮನ ಪ್ರಭುತ್ವವನ್ನು ಒಪ್ಪಿಕೊಳ್ಳುವ  ಭಾವವೇ ಎದ್ದು ಕಾಣುತ್ತದೆ. ಭೂತಾರಾಧನೆಯ ಮೇಲೆ ಹಲವು ವರ್ಷಗಳಿಂದ ಆಗುತ್ತಿರುವ ಅನ್ಯಧರ್ಮಗಳ ಪ್ರಭಾವ ಒಟ್ಟಾರೆಯಾಗಿ ಈ ಧಾರ್ಮಿಕ ರಂಗಭೂಮಿಯ ಅಂದ ಮತ್ತು ಅರ್ಥವನ್ನು ಕೆಡಿಸುತ್ತಿರುವ ಬಗ್ಗೆ ಎಲ್ಲಾ ಧರ್ಮಗಳ ಮತ್ತು ಜಾನಪದ ಪರಂಪರೆಯ ಪ್ರಜ್ಞಾವಂತ ವಿದ್ವಾಂಸರು ಕಳವಳ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಭೂತಗಳ ಗುಡಿ, ಆರಾಧನೆಯ ಸ್ವರೂಪಗಳಲ್ಲಿ ಭೂತಾರಾಧನೆಗೆ ಒಗ್ಗದ, ಒಪ್ಪದ ಅಂಶಗಳು ಸೇರುತ್ತಿರುವುದು ಸರಿಯಲ್ಲ ಎಂದು ನಾವು ಅನೇಕರು ಹೇಳುತ್ತಲೇ ಬಂದಿದ್ದೇವೆ. ಹೀಗೆ ಹೇಳುವುದು ಹೊಣೆಗಾರಿಕೆಯ ಕೆಲಸ ಎಂದಲ್ಲದೆ ಜಗಳಕ್ಕೆ, ಘರ್ಷಣೆಗೆ ಕಾರಣವಾಗಲಿ ಎಂದಲ್ಲ. ಸಮಾಜದ ಸಾಮರಸ್ಯವನ್ನು ಕೆಡಿಸುವ ಮತ್ತು ಒಂದು ನಿರ್ದಿಷ್ಟ ಧಾರ್ಮಿಕ ಪರಂಪರೆಯ ಜನರಿಗೆ ನೋವನ್ನು ತಂದು ಅವಮಾನಿಸುವ  ಯಾವುದೇ ಕಲಾಕೃತಿಗಳ ಸ್ಥಾಪನೆ ಸರಿಯಲ್ಲ ಎಂದೇ ನನ್ನ ಭಾವನೆ.

ಪ್ರೊ.ಕೆ. ಚಿನ್ನಪ್ಪ ಗೌಡ

ತುಳು ಜಾನಪದ ವಿದ್ವಾಂಸರು

You cannot copy content of this page

Exit mobile version