ಬೆಂಗಳೂರು: ನೀರು ಕುಡಿದನೆಂಬ ಕಾರಣಕ್ಕೆ ಹತ್ತು ವರ್ಷದ ದಲಿತ ಬಾಲಕನನ್ನು ಕೊಲೆಗೈದ ಪ್ರಕರಣ ಹಾಗು ಬಿಲ್ಕಿಸ್ ಬಾನು ಅತ್ಯಾಚಾರ ಮತ್ತು ಆಕೆಯ ಮೂರು ವರ್ಷದ ಮಗುವನ್ನು ಕೊಂದ ಆರೋಪಿಗಳಿಗೆ ಕ್ಷಮಾದಾನ ನೀಡಿ ಬಿಡುಗಡೆ ಮಾಡಿರುವುದನ್ನು ಖಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.

ರಾಜಸ್ತಾನದಲ್ಲಿ ಇಂದ್ರ ಮೇಘ್ವಾಲ್ ಎಂಬ ಹತ್ತು ವರ್ಷದ ಬಾಲಕ ನೀರು ಕುಡಿದ ಎಂಬ ಕಾರಣಕ್ಕೆ ಸವರ್ಣೀಯರು ಕೊಂದು ಹಾಕಿದ್ದರು. ಇದು ಅಸ್ಪೃಶ್ಯತೆ ಆಚರಣೆಯ ಕ್ರೂರತೆಯ ಪರಮಾವಧಿ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಹೆಣ್ಣನ್ನು ದೇವತೆ ಎಂದು ಕೊಂಡಾಡುವ ದೇಶದಲ್ಲಿ ಯಾವ ಹೆಣ್ಣುಗಳಿಗೂ ರಕ್ಷಣೆಯಿಲ್ಲ ಗೋದ್ರಾ ಹತ್ಯಾಕಾಂಡದ ಸಂಧರ್ಭದಲ್ಲಿ ಗರ್ಭಿಣಿ ಹೆಣ್ಣಿನ ಮೇಲಿನ ನಡೆದ ಅತ್ಯಾಚಾರದ ಖೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಿರುವುದು ದೇಶದ ಇಂದಿನ ಹೆಣ್ಣುಮಕ್ಕಳ ಸ್ಥಿತಿಗೆ ಉದಾಹರಣೆ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದರು.
ಜ್ಞಾನಭಾರತಿ ಆವರಣದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗ ಈ ಪ್ರತಿಭಟನೆಯನ್ನು ಬೆಂಬಲಿಸಿ ಹಿರಿಯ ದಲಿತ ಹೋರಾಟಗಾರರಾದ ಬಿ.ಗೋಪಾಲ್, ಮಾವಳ್ಳಿ ಶಂಕರ್ ಧರಣಿಯಲ್ಲಿ ಪಾಲ್ಗೊಂಡರು.