Home ಬ್ರೇಕಿಂಗ್ ಸುದ್ದಿ ಮಹಾತ್ಮ ಗಾಂಧೀಜಿ ಬಗ್ಗೆ ಅವಹೇಳನ; ಬಸನಗೌಡ ಯತ್ನಾಳ್ ವಿರುದ್ಧ ದೂರು, ಪ್ರಕರಣ ದಾಖಲು

ಮಹಾತ್ಮ ಗಾಂಧೀಜಿ ಬಗ್ಗೆ ಅವಹೇಳನ; ಬಸನಗೌಡ ಯತ್ನಾಳ್ ವಿರುದ್ಧ ದೂರು, ಪ್ರಕರಣ ದಾಖಲು

0

ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತನ್ನ ಹಳೆಯ ಚಾಳಿಯಂತೆ ವಿವಾದಾತ್ಮಕ ಹೇಳಿಕೆಗಳಿಂದ ಮತ್ತೆ ಸುದ್ದಿಗೆ ಬಂದಿದ್ದಾರೆ. ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ಕಾರಣಕ್ಕೆ ಸುದ್ದಿಗೆ ಬರುವ ಯತ್ನಾಳ್ ಈ ಬಾರಿ ಮಹಾತ್ಮ ಗಾಂಧಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದಾರೆ. ಅಷ್ಟೇ ಅಲ್ಲದೆ ಇದೇ ವಿಚಾರಕ್ಕೆ ಅವರ ವಿರುದ್ಧ ದೂರು ದಾಖಲಾಗಿದೆ.

ಉಚ್ಛಾಟಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಗಾಂಧೀಜಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ವಿಜಯಪುರದ ಆದರ್ಶ ನಗರ ಪೊಲೀಸ್ ಠಾಣೆಗೆ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ವಿಜಯಪುರ ನಗರದ ಇಬ್ರಾಹಿಂ ರೋಜಾ ಪ್ರದೇಶದ ಅಲ್ಲಾಭಕ್ಷ ಡೋಗರಿಸಾಬ ಬಡೇಘರ ಎಂಬ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ನೀಡಿದ ದೂರಿನ ಅನ್ವಯ ಪೊಲೀಸರು ಯತ್ನಾಳ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೇ 12ರಂದು ಆದರ್ಶ ನಗರದಲ್ಲಿ ಬಸವೇಶ್ವರ ದೇವಸ್ಥಾನದ ಗುದ್ದಲಿ ಪೂಜೆಗೆ ಬಂದಂತಹ ಸಂದರ್ಭದಲ್ಲಿ ಮಾತನಾಡುತ್ತಾ ಶಾಸಕ ಯತ್ನಾಳ್, “ಮಹಾತ್ಮ ಗಾಂಧಿ ಹುಟ್ಟಿಸಿದ ಕೂಸೇ ಪಾಕಿಸ್ತಾನ. ಗಾಂಧಿ ಭಾರತದ ರಾಷ್ಟ್ರಪಿತ ಅಲ್ಲ, ಪಾಕಿಸ್ತಾನದ ರಾಷ್ಟ್ರಪಿತ ಮತ್ತು ಗಾಂಧಿ ದೇಶ ಒಡೆದವರು, ಗಾಂಧಿ ಮುಸಲ್ಮಾನರಿಗೆ ಪಾಕಿಸ್ತಾನ ಮಾಡಿಕೊಟ್ಟ, ನಮ್ಮ ದೇಶದ ಒಡೆದವರ ಮೂರ್ತಿಯನ್ನು ಬೀದಿ-ಬೀದಿಗಳಲ್ಲಿ ಸ್ಥಾಪನೆ ಮಾಡುತ್ತೇವೆ” ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.

ಈ ಬಗ್ಗೆ ದೂರು ದಾಖಲಿಸಿದ ಅಲ್ಲಾಭಕ್ಷ “ಗಾಂಧಿಜಿಯವರು ನಮ್ಮ ಭಾರತದ ದೇಶಕ್ಕೆ ಮಾತ್ರವಲ್ಲ ಇಡೀ ವಿಶ್ವದಲ್ಲಿ ಅಹಿಂಸೆ ಪ್ರತೀಕ ಎಂದೇ ಖ್ಯಾತರು. 2001ರಲ್ಲಿ ಯುನೈಟೆಡ್‌ ನೇಷನ್ ವತಿಯಿಂದ ಪ್ರತಿ ವರ್ಷ ಅ.2ರ ಗಾಂಧಿಜಿ ಜಯಂತಿಯಂದು ವಿಶ್ವ ಅಹಿಂಸಾ ದಿನ ಎಂದು ಘೋಷಿಸಿರುವುದೇ ಇದಕ್ಕೆ ಸಾಕ್ಷಿ. ವಿಶ್ವಾದ್ಯಂತ ಭಾರತ ಎಂದರೆ ಗಾಂಧೀಜಿ ಹಾಗೂ ಗಾಂಧೀಜಿ ಎಂದರೆ ಭಾರತ ಎನ್ನುವುದರ ಮಟ್ಟಿಗೆ ತಮ್ಮ ವ್ಯಕ್ತಿತ್ವ ಇಡಿ ವಿಶ್ವಕ್ಕೆ ಪರಿಚಯಿಸಿದ್ದಾರೆ. ಇಂತಹ ವ್ಯಕ್ತಿತ್ವ ವಿರುದ್ಧ ಹಗುರವಾಗಿ ಮಾತನಾಡಿದ ಶಾಸಕರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು” ಎಂದು ದೂರುದಾರರು ಒತ್ತಾಯಿಸಿದ್ದಾರೆ.

You cannot copy content of this page

Exit mobile version