ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾಗ ಕೊಡಗು ಜಿಲ್ಲೆಯ ಭೂಕುಸಿತದ ವೀಕ್ಷಣೆಗೆ ಬಂದಿದ್ದ ಸಂದರ್ಭದಲ್ಲಿ ಅವರ ಕಾರಿನ ಮೇಲೆ ಮೊಟ್ಟೆ ಎಸೆದು ಸುದ್ದಿಯಾಗಿದ್ದ ಆರೋಪಿ ಸಂಪತ್ ಕುಮಾರ್ ಈಗ ಹಾಸನದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಏಪ್ರಿಲ್ 9ರಂದು ಕುಶಾಲನಗರದಿಂದ ಸ್ನೇಹಿತನ ಕಾರಿನಲ್ಲಿ ಹಾಸನಕ್ಕೆ ಬಂದಿದ್ದ ಸಂಪತ್ ಕುಮಾರ್ ಆ ನಂತರ ಯಾರ ಸಂಪರ್ಕಕ್ಕೂ ಬಂದಿರಲಿಲ್ಲ. ಏ.10ರಂದು ಸಂಪತ್ ಕುಮಾರ್ ತೆಗೆದುಕೊಂಡು ಹೋಗಿದ್ದ ಕಾರು ಹಾಸನ ಜಿಲ್ಲೆಯ ಸಕಲೇಶಪುರದ ಕಲ್ಲಹಳ್ಳಿಬಳಿ ಪತ್ತೆಯಾಗಿತ್ತು.
ಪತ್ತೆಯಾದ ಕಾರಿನಲ್ಲಿ ರಕ್ತದ ಕಲೆಗಳು ಇದ್ದ ಹಿನ್ನೆಲೆ ಹಾಗೂ ಸಂಪತ್ ಸುಳಿವು ಸಿಗದ ಹಿನ್ನೆಲೆಯಲ್ಲಿ ಕುಶಾಲನಗರ ಠಾಣೆಯಲ್ಲಿ ಸಂಪತ್ ಕುಮಾರ್ ನಾಪತ್ತೆ ಕೇಸ್ ದಾಖಲಾಗಿತ್ತು.
ಇತ್ತ ಕಾರು ಪತ್ತೆಯಾದ ಬಗ್ಗೆ ಸ್ಥಳೀಯರು ಯಸಳೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದರು. ಆಗಲೂ ಸಂಪತ್ ಸುಳಿವು ಸಿಕ್ಕಿರಲಿಲ್ಲ. ಆದರೆ ಈಗ ಸಂಪತ್ ಕುಮಾರ್ ಮೃತದೇಹ ಕಲ್ಲಹಳ್ಳಿ ಬಳಿ ಪತ್ತೆಯಾಗಿದೆ.
ಮೇಲ್ನೋಟಕ್ಕೆ ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಬಳಿಕ ಶವವನ್ನು ಕಾರಿನಲ್ಲಿ ತಂದು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.