ಈಗಾಗಲೇ ಕೊಲೆ ಯತ್ನ, ಹನಿಟ್ರಾಪ್ ಪ್ರಕರಣ, ಕಿರುಕುಳ, ಜೀವ ಬೆದರಿಕೆ, ಜಾತಿ ನಿಂದನೆ, ಅತ್ಯಾಚಾರ ಪ್ರಕರಣದಂತಹ ಗಂಭೀರ ಆರೋಪ ಹೊತ್ತಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಇಂದು ಮತ್ತೊಂದು ದೂರು ದಾಖಲಾಗಿದೆ. ಬಿಬಿಎಂಪಿ ಮಾಜಿ ಸದಸ್ಯ ನಾರಾಣಸ್ವಾಮಿ ಮುನಿರತ್ನ ವಿರುದ್ಧ ಜೀವ ಬೆದರಿಕೆ, ಕೊಲೆಗೆ ಸುಪಾರಿ, ಕಿರುಕುಳ ವಿವಿಧ ಆರೋಪದಡಿ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈಗಾಗಲೇ ಮುನಿರತ್ನ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ 2 ಮತ್ತು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿವೆ. ಈ 3 ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ಎಸ್ ಐಟಿ ರಚಿಸಿದೆ. ಈಗಾಗಲೇ ಎಸ್ಐಟಿ ಒಂದೊಂದೇ ಪ್ರಕರಣ ತನಿಖೆ ನಡೆಸುತ್ತಿದೆ.
ಸಧ್ಯ ಇಂದು ದಾಖಲಾಗಿರುವ ಹೊಸ ಪ್ರಕರಣ ಸೇರಿದಂತೆ ಎಲ್ಲಾ ಪ್ರಕರಣಗಳು ಸದ್ಯದಲ್ಲೇ ಸಿಐಡಿಯ ವಿಶೇಷ ತನಿಖಾ ದಳ(ಎಸ್ ಐಟಿ)ಕ್ಕೆ ವರ್ಗಾವಣೆಯಾಗುವ ಸಾಧ್ಯತೆಯಿದೆ.
ಈಗಾಗಲೇ ಜಾತಿ ನಿಂದನೆ ಆರೋ ಪದ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ, ಆರೋಪಿ ಮುನಿರತ್ನ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇನ್ನು ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಹಣಕ್ಕೆ ಬೇಡಿಕೆ ಆರೋಪದ ಪ್ರಕರಣ ಮತ್ತು ಮಹಿಳೆಯ ಅತ್ಯಾಚಾರ ಪ್ರಕರಣಗಳ ತನಿಖೆ ನಡೆಸುತ್ತಿದ್ದು, ಸದ್ಯದಲ್ಲೇ ಈ ಪ್ರಕರಣಗಳ ಆರೋಪಪಟ್ಟಿ ಸಲ್ಲಿಸಲಿದ್ದಾರೆ.