ಇಲ್ಲಿ ಸಮವಸ್ತ್ರದ ಶಾಲನ್ನು ತಲೆಗೇರಿಸುವುದನ್ನು ವಿರೋಧಿಸಿ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸಿದರೆ, ಇರಾನ್ ತಲೆಯಲ್ಲಿದ್ದ ವಸ್ತ್ರವು ಪೂರ್ಣವಾಗಿ ಕೂದಲನ್ನು ಮರೆಮಾಚಿಲ್ಲವೆಂಬ ಕಾರಣಕ್ಕೆ ಕ್ರೌರ್ಯವನ್ನು ಪ್ರದರ್ಶಿಸಿದೆ. ಹಾಗಾದರೆ ಹೆಣ್ಣಿಗೆ ತನ್ನ ಸ್ವಾತಂತ್ರ್ಯವನ್ನು ನಿರ್ಧರಿಸುವ ಹಕ್ಕಿಲ್ಲವೇ? ಎಂದು ಪ್ರಶ್ನಿಸುತ್ತಾರೆ ನಮ್ಮ ನಡುವಿನ ಸಂವೇದನಾಶೀಲ ಲೇಖಕಿ ಸಿಹಾನ ಬಿ ಎಂ.
ಮುಸ್ಲಿಮ್ ಹೆಣ್ಣುಮಕ್ಕಳ ವಸ್ತ್ರವನ್ನು ಸಾರ್ವಜನಿಕ ಚರ್ಚೆಯಲ್ಲಿರಿಸುವುದು, ಅದರ ವಿರುದ್ಧ ಪರ ವಿರೋಧ ಮಾತುಗಳು ಹರಡುತ್ತಿರುವುದು ಇದೇ ಮೊದಲಲ್ಲ. ಇದು ಕೊನೆಯೂ ಅಲ್ಲ. ಹಿಂದಿನಿಂದಲೂ ಇಂದಿನವರೆಗೂ ಇದು ಮುಂದುವರಿಯುತ್ತಲೇ ಇದೆ. ಹೆಣ್ಣಿಗೆ ಇಲ್ಲಿ ಇನ್ನೂ ಸಂಪೂರ್ಣವಾಗಿ ಸ್ವಾತಂತ್ರ್ಯ ಸಿಕ್ಕಿಲ್ಲ. ಪ್ರತಿಯೊಂದಕ್ಕೂ ಒಂದೊಂದು ಕಟ್ಟುಪಾಡಿನೊಂದಿಗೆ, ಹೇರಿಕೆ – ವಿರೋಧದೊಂದಿಗೆ ಆಕೆ ಉಸಿರಾಡುತ್ತಿದ್ದಾಳೆ. ಅನೇಕ ಬಾರಿ ಹೆಣ್ಣಾದ ನಾನು ನನ್ನಲ್ಲೇ ನನ್ನಷ್ಟಕ್ಕೆ ಪ್ರಶ್ನಿಸುತ್ತಲೇ ಇರುತ್ತೇನೆ…ಇದಕ್ಕೆ ಕೊನೆಯೆಂದೋ..?
ಬೆಂಕಿ ಹೊತ್ತಿಕೊಂಡಿದೆ..
ಹೌದು…ಇದು ಮುಗಿಯುವಂತಹುದಲ್ಲ. ಪ್ರತಿನಿತ್ಯ ಎದುರಿಸಬೇಕಾದ ಸವಾಲುಗಳಿವು. ನಿತ್ಯ ಜೀವನದಲ್ಲಿ ನಮ್ಮನ್ನು ಅತಿಯಾಗಿ ಪ್ರಭಾವಿಸಿರುವುದು ಧರ್ಮಗಳೇ. ಧರ್ಮವು ವ್ಯಕ್ತಿಗಳ ನೈತಿಕ ದಿಕ್ಸೂಚಿಯಾಗಿ ಮನುಷ್ಯನನ್ನು ಉನ್ನತಿಯೆಡೆಗೆ ಪ್ರೇರೇಪಿಸುತ್ತದೆ ನಿಜ. ಆದರೆ ಅದೇ ವೇಳೆಯಲ್ಲಿ ಹೇರಿಕೆ, ವಿರೋಧಗಳೆಲ್ಲ ಅತಿಯಾದಾಗ ಒಮ್ಮೆಲೆ ಜ್ವಾಲಾಮುಖಿಯೇಳುವುದು ಸಹಜ. ಅಂತಹದೇ ಒಂದು ಜ್ವಾಲಾಮುಖಿ ಇರಾನಿನಲ್ಲಿ ಈಗಾಗಲೇ ಹೊತ್ತಿಕೊಂಡಿದೆ. ನಮ್ಮ ದೇಶವು ಇಂತಹ ಜ್ವಾಲೆಯನ್ನು ಹರಡುವುದರಲ್ಲಿ ಕಡಿಮೆಯೇನಿಲ್ಲ. ಹೊತ್ತಿಸಿದ ಬೆಂಕಿಯನ್ನು ಆರಿಸುವ ಸಮಯ ಇನ್ನೂ ಬಂದಿಲ್ಲ.
ಇಲ್ಲಿ ಸಮವಸ್ತ್ರದ ಶಾಲನ್ನು ತಲೆಗೇರಿಸುವುದನ್ನು ವಿರೋಧಿಸಿ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿದರೆ, ಅಲ್ಲಿ ತಲೆಯಲ್ಲಿದ್ದ ವಸ್ತ್ರ ಪೂರ್ಣವಾಗಿ ಕೂದಲನ್ನು ಮರೆಮಾಚಿಲ್ಲವೆಂಬ ಕಾರಣಕ್ಕೆ ಕ್ರೌರ್ಯವನ್ನು ಪ್ರದರ್ಶಿಸಿದೆ. ಹಾಗಾದರೆ ಹೆಣ್ಣಿಗೆ ತನ್ನ ಸ್ವಾತಂತ್ರ್ಯವನ್ನು ನಿರ್ಧರಿಸುವ ಹಕ್ಕಿಲ್ಲವೇ? ಶೋಷಣೆಗೊಳಗಾಗುವ ಮತ್ತು ಶೋಷಿಸಲ್ಪಡುವ ಅಸ್ತ್ರವಾಗಿಯೇ ಆಕೆ ಜಗತ್ತಿನಲ್ಲಿ ಗುರುತಿಸಿಕೊಳ್ಳಬೇಕೇ?
ಬಾಬಾ ಸಾಹೇಬ್ ಅಂಬೇಡ್ಕರ್ ಸಮರ್ಪಿಸಿದ ಸಂವಿಧಾನದ ಆಶಯಗಳಿಂದ ಕೂಡಿದ ಮುತ್ತಿನಹಾರದಿಂದ ಹೆಕ್ಕಿ ತೆಗೆದ ಮುತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು. ಆ ಮುತ್ತನ್ನು ಬಲು ಆರ್ತಿಯಿಂದ ಎದೆಗೇರಿಸಿ ಹೃದಯದೊಳಗಿಳಿಸಿ ಇಲ್ಲಿ ನಾವು ಹೆಣ್ಣಿನ ಹಕ್ಕಿನ ಬಗ್ಗೆ ಮಾತನಾಡುತ್ತಿದ್ದೇವೆ. ವಿರೋಧಿಗಳಿಗೆ ಸೆಡ್ಡು ಹೊಡೆಯುವ ಬಾಣದ ಪ್ರಹಾರ ನಡೆಸಿದರೂ ಇಂದು ಮುಸ್ಲಿಮ್ ಹೆಣ್ಣುಮಕ್ಕಳು ತುಂಡುಬಟ್ಟೆಯ ಕಾರಣದಿಂದ ತಮ್ಮ ಹಕ್ಕುಗಳಿಂದ ವಂಚಿತರಾಗಿಯೇ ಉಳಿದಿದ್ದಾರೆ. ಇಲ್ಲಿ ಹೆಣ್ಣಿನ ಮೇಲೆ ಶೋಷಣೆ ಬರೀ ಶಿಕ್ಷಣದಲ್ಲಿ ಮಾತ್ರ ನಡೆಯುತ್ತಿಲ್ಲ. ಅದು ಹಲವಾರು ಕಡೆ ತನ್ನ ಕೋರೆಹಲ್ಲನ್ನು ಚಾಚುತ್ತಲೇ ಇದೆ. ಕಟ್ಟುಪಾಡುಗಳನ್ನು ಹೇರುತ್ತಾ ಆಕೆಯನ್ನು ದ್ವಿತೀಯ ದರ್ಜೆಯವಳನ್ನಾಗಿಸಿ ಅವಕಾಶಗಳನ್ನು ಕೊಡದೆ ಮಾಡಿದ ದ್ರೋಹ ಮಾನವೀಯತೆಗೆ ಬಗೆದ ವಿದ್ರೋಹವಾಗಿದೆ.
ವಸ್ತ್ರದ ಸುತ್ತ ಸುತ್ತಿಕೊಂಡ ಕೂಗು..

ಇರಾನ್ ಈಗ ಹೆಣ್ಣಿನ ವಸ್ತ್ರದ ವಿಷಯವಾಗಿ ಕ್ರೌರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಅತೀ ದೊಡ್ಡ ಕ್ರಾಂತಿ ಮಾಡಿದ ದೇಶ ಇರಾನ್. ಅಲ್ಲಿಯೂ ಹೆಣ್ಣುಮಕ್ಕಳು ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಇಲ್ಲಿಯ ಹೆಣ್ಣುಮಕ್ಕಳ ಕೂಗು ಮತ್ತು ಅಲ್ಲಿಯ ಹೆಣ್ಣುಮಕ್ಕಳ ಕೂಗು ಭಿನ್ನವಾದರೂ ಅದು ವಸ್ತ್ರದ ಸುತ್ತ ಸುತ್ತಿಕೊಂಡಿದೆ. ಚಿಂತಕರ, ಹೋರಾಟಗಾರರ, ಸಾಧಕರ ಪಟ್ಟಿಯಲ್ಲಿ ಇರಾನ್ ತನ್ನನ್ನು ಗುರುತಿಸಿಕೊಳ್ಳುತ್ತಲೇ ಬಂದಿದೆ. ಇಸ್ಲಾಮೀ ರಾಷ್ಟ್ರವನ್ನಾಗಿಸುತ್ತಾ ಇಸ್ಲಾಮೀ ನಿಯಮಗಳನ್ನು ನಿರ್ದೇಶಿಸಿ, ಕಠಿಣವಾಗಿ ಅದನ್ನು ಪಾಲಿಸುವಂತೆ ಆದೇಶಿಸುತ್ತದೆ ಇರಾನ್. ಹೀಗೆ ಬಲವಂತದಿಂದ ಹೇರುವುದರ ಪರಿಣಾಮವಾಗಿ ಇಂದು 22 ವರ್ಷದ ಮಹ್ಸಾ ಅಮಿನಿ ಎಂಬ ಹೆಣ್ಣುಮಗಳ ಹತ್ಯೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದು ಸುದ್ದಿಯಲ್ಲಿದೆ. ಪ್ರತೀ ದೇಶಕ್ಕೂ ಅದರದೇ ಆದ ನಿಯಮ ನಿರ್ದೇಶನಗಳಿವೆ. ಆದರೆ ಆ ನಿಯಮ ನಿರ್ದೇಶನಗಳು ಕ್ರೌರ್ಯಕ್ಕೆ ದಾರಿ ಮಾಡಿ ಕೊಡುವಂತಾಗಬಾರದು. ಬಲಿಷ್ಟವಾಗಿ ಪಹರೆ ಕಾಯುವ, ಬಲು ಕಟ್ಟೆಚ್ಚರದಲ್ಲಿದ್ದು ಅದನ್ನು ಪ್ರಜೆಗಳ ಮೇಲೆ ಹೇರುವಾಗ ಸಾಮಾನ್ಯವಾಗಿ ಅಲ್ಲಿಯ ಪ್ರಜೆಗಳಿಗೂ ಸರಕಾರದ ಮೇಲೆ ಅಸಹನೆ ಹುಟ್ಟಿಕೊಳ್ಳುವುದು ಸಹಜವೇ. ಹತ್ಯೆಗೊಳಗಾದ ಆ ಹೆಣ್ಣುಮಗಳು ಹಿಜಾಬ್ ಧರಿಸಿದ್ದಳು. ಹಿಜಾಬನ್ನು ತಿರಸ್ಕರಿಸಿ ತಲೆಗೂದಲನ್ನು ಸಂಪೂರ್ಣವಾಗಿ ತೆರೆದು ನಡೆದವಳಲ್ಲ. ಹಿಜಾಬಿನೆಡೆಯಿಂದ ಒಂದಷ್ಟು ತಲೆಗೂದಲು ಹೊರ ಕಾಣುತ್ತಿದೆಯೆಂಬ ಕಾರಣಕ್ಕೆ ಹತ್ಯೆಗೀಡಾದಳು. ಇಸ್ಲಾಮಿನ ಹೆಸರಿನಲ್ಲಿ ಹೀಗೆ ಕೊಲೆಗೈಯ್ಯುವಂತೆ ಇಸ್ಲಾಮ್ ಎಲ್ಲಾದರು ಹೇಳಿದೆಯೇ? ಹೆಣ್ಣಿಗೆ ವಸ್ತ್ರಸಂಹಿತೆಯನ್ನು ನಿರ್ದೇಶಿಸಿ ಅದನ್ನು ಕಡ್ಡಾಯಗೊಳಿಸಿದರೂ ಬಲವಂತವಾಗಿ ಹೇರುವಂತೆಯೂ ಅದು ಹೇಳಿಲ್ಲ. ಇಸ್ಲಾಂ ಅವಳಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ಕೊಟ್ಟಿದೆ. ಹೆಣ್ಣು ಏನನ್ನು ತೊಡಬೇಕು, ಏನನ್ನು ತೊಡಬಾರದೆಂಬ ಪೂರ್ಣ ಸ್ವಾತಂತ್ರ್ಯ ಆಕೆಗಿದೆ. ಧರ್ಮದಲ್ಲಿ ಬಲವಂತವಿಲ್ಲವೆಂದೇ ಇಸ್ಲಾಮ್ ಹೇಳಿದೆ. ಹೀಗಿರುವಾಗ, ಕಟ್ಟುನಿಟ್ಟಾದ ಕಠೋರವಾದ ರೀತಿಯಲ್ಲಿ ಕಟ್ಟುಪಾಡುಗಳನ್ನು ಹೇರಿ, ಮಾನವ ಘನತೆಗೆ ಎಳ್ಳು ಕಾಳಿನಷ್ಟು ಬೆಲೆ ಕೊಡದೆ, ಇಸ್ಲಾಮ್ ನಿಷೇಧಿಸಿದ ಅನ್ಯಾಯವಾಗಿ ಒಂದು ಮಾನವ ಜೀವದ ಹತ್ಯೆಗೆ ತೊಡಗಿಸಿಕೊಂಡಿರುವುದು ಖಂಡನೀಯ.
ಇದು ಇಸ್ಲಾಮ್ ಬೋಧಿಸಿದ ಮಾರ್ಗ..
ಇಸ್ಲಾಮೀ ರಾಷ್ಟ್ರವಾದ ಇರಾನಿನೊಂದಿಗೆ ಇಸ್ಲಾಮಿನ ಭಾಷೆಯೊಂದಿಗೆ ಪ್ರಶ್ನಿಸಬೇಕಾಗಿದೆ. ನಮ್ಮ ದೇಶದ ಸಂವಿಧಾನವನ್ನು ಹಿಡಿದು ಅಲ್ಲಿಯವರನ್ನು ಪ್ರಶ್ನಿಸುವಂತಿಲ್ಲ. ಅಲ್ಲಿಯ ನಿಯಮಗಳು ಬೇರೆ. ಇಲ್ಲಿಯ ನಿಯಮಗಳು ಬೇರೆ. ಪ್ರತಿಯೊಂದು ದೇಶವು ಅದರದೇ ಆದ ಶಾಸನಗಳನ್ನು ರೂಪಿಸಿಕೊಂಡಿದೆ. ಇನ್ನು ಇಸ್ಲಾಮೀ ದೃಷ್ಟಿಕೋನದಲ್ಲಿ ನೋಡುವುದಾದರೆ ಬಲವಂತದ ಹೇರಿಕೆಯಿಂದ ಪ್ರವಾದಿ ಮುಹಮ್ಮದ್(ಸ)ರು ಅಜ್ಞಾನದಲ್ಲಿದ್ದ ಅರಬರನ್ನು ಬದಲಾವಣೆಯತ್ತ ತೆರೆದುಕೊಳ್ಳುವಂತೆ ಮಾಡಿದರೇ? ಹೆಣ್ಣು, ಜೂಜು, ಮದ್ಯ, ಯುದ್ಧಗಳಲ್ಲಿಯೇ ಮುಳುಗಿದ್ದ ಅರಬ್ ದೇಶದಲ್ಲಿ ಮಹತ್ತಾದ ಕ್ರಾಂತಿಯನ್ನು ಹೇರಿಕೆಯಿಂದ ಮಾಡಿದ್ದಾರೆಯೇ? ಪ್ರವಾದಿ ಮುಹಮ್ಮದ್(ಸ) ಅತ್ಯುತ್ತಮ ಆಡಳಿತಗಾರರಾಗಿದ್ದರು. ಉತ್ತಮ ನಾಯಕರೂ ಆಗಿದ್ದರು. ಅವರ ಇತಿಹಾಸದಲ್ಲಿ ಹೇರಿಕೆಯಿಂದ ಬದಲಾಯಿಸಿದ ಒಂದೇ ಒಂದು ಘಟನೆ ನಡೆದಿದೆಯೇ? ಎಲ್ಲಾ ಕ್ಷೇತ್ರಗಳಲ್ಲಿ ಮಾತನಾಡಿದ ಕುರ್ ಆನ್, ಕೆಡುಕುಗಳ ನಿರ್ಮೂಲನವನ್ನು ಸಹ ಬಲವಂತದಿಂದ ಒಮ್ಮೆಲೆ ನಡೆಸುವಂತೆ ಆದೇಶಿಸಿಲ್ಲ. ಹಂತ ಹಂತವಾಗಿಯೇ ಒಂದೊಂದೇ ಕೆಡುಕನ್ನು ನಿರ್ಮೂಲನ ಮಾಡುವಂತಹ ಸುಂದರ ವಿಧಾನವನ್ನು ಇಸ್ಲಾಮ್ ಕಲಿಸಿದೆ. ಮದ್ಯ ನಿಷೇಧದ ಹಿನ್ನೆಲೆಯನ್ನು ಗಮನಿಸಿದರೆ ಎಷ್ಟು ಹಂತಗಳಲ್ಲಿ ಅದು ಆಜ್ಞಾಪಿಸುತ್ತಾ ಬಂದಿದೆಯೆಂದು ಅರ್ಥಮಾಡಬಹುದು. ಪ್ರತಿಯೊಂದನ್ನು ಕೂಡ ಸರಳವಾಗಿಯೇ ಆದೇಶಿಸುತ್ತಾ ಬಂದಿದೆ. ಸರಳವಾದ ಇಸ್ಲಾಮನ್ನು ಕಠಿಣವಾಗಿ ತೋರಿಸುವುದೇ ಇಂದು ಈ ಎಲ್ಲಾ ಅನಾಹುತಗಳಿಗೆ ಕಾರಣ. ಅದೇನೇ ಇರಲಿ. ಧರ್ಮದ ಉಳಿವಿಗಾಗಿ, ನಿಯಮಗಳನ್ನು ಹೇರುವಾಗ ಇಸ್ಲಾಮ್ ಬೋಧಿಸಿದ ಮಾರ್ಗವನ್ನು ಸಹ ಅರಿಯಬೇಕಾಗಿದೆ.
ಇಷ್ಟೆಲ್ಲ ಬೋಧಿಸಿದ ಇಸ್ಲಾಮ್ ಹೇರಿಕೆಯಿಂದ ನಿಯಮವನ್ನು ಜಾರಿಗೊಳಿಸಿಯೆಂದು ಎಲ್ಲೂ ಹೇಳಿಲ್ಲ. ಶಾಂತಿಯ ಧರ್ಮವಾದ ಇಸ್ಲಾಮ್ ಕ್ರೌರ್ಯದಿಂದ ಶಾಂತಿ ಸಂಸ್ಥಾಪಿಸಿಯೆಂದೂ ಹೇಳಿಲ್ಲ. ಒಬ್ಬ ಮಾನವನನ್ನು ಕೊಂದರೆ ಇಡೀ ಮನುಕುಲವನ್ನು ಕೊಂದಂತೆಯೇ ಎಂದು ಅನ್ಯಾಯವಾಗಿ ಕೊಲ್ಲುವ ಹತ್ಯೆಯನ್ನು ಖಂಡಿಸಿದೆ. ಇಸ್ಲಾಮಿನ ಹೆಸರಿನಲ್ಲಿ ಕ್ರೌರ್ಯ ನಡೆಸುವ ಹಕ್ಕನ್ನು ಯಾರಿಗೂ ಕೊಟ್ಟಿಲ್ಲ. ವಸ್ತ್ರಸಂಹಿತೆಯನ್ನು ಸ್ತ್ರೀ ಪುರುಷರಿಬ್ಬರಿಗೂ ಕಡ್ಡಾಯಗೊಳಿಸಿದರೂ ಅವರವರ ಇಷ್ಟದಂತೆ ಬದುಕುವ ಸ್ವಾತಂತ್ರ್ಯವನ್ನು ಸಹ ಕೊಟ್ಟಿದೆ. “ನಿಮಗೆ ಎರಡು ಮಾರ್ಗಗಳನ್ನು ತೋರಿಸಿದ್ದೇವೆ. ನಿಮಗಿಷ್ಟ ಬಂದ ದಾರಿಯನ್ನು ನೀವು ಆಯ್ಕೆ ಮಾಡಿಕೊಳ್ಳಿ” ಎಂದು ಧಾರಾಳವಾಗಿ ಆಯ್ಕೆಯ ಸ್ವಾತಂತ್ರ್ಯವನ್ನು ಕೊಟ್ಟ ಇಸ್ಲಾಮನ್ನು ಮುಂದಿಟ್ಟು ಅದ್ಯಾವ ಧರ್ಮರಕ್ಷಣೆಯನ್ನು ಇರಾನ್ ನಡೆಸುತ್ತಿದೆ?
ಧಾರ್ಮಿಕ ನಿಯಮದ ಹೇರುವಿಕೆ ತಪ್ಪು..
ಧರ್ಮಗಳು ವ್ಯಕ್ತಿಯ ವ್ಯಕ್ತಿತ್ವವನ್ನು, ಚಿಂತನಾಕ್ರಮಗಳನ್ನು ರೂಪಿಸುತ್ತದೆ ಎಂದು ಹೇಳುವುದಾದರೂ ಇಂತಹ ಅತಿರೇಕದ ಪೈಶಾಚಿಕತೆಯತ್ತ ಅವರನ್ನು ದೂಡುವಂತೆ ಪ್ರೇರೇಪಿಸಿದ ಧರ್ಮವಾದರೂ ಯಾವುದು? ಹೆಣ್ಣಿನ ವಸ್ತ್ರದ ವಿಷಯದಲ್ಲಿ ಹೆಣ್ಣಿಗೆ ಪೂರ್ಣ ಸ್ವಾತಂತ್ರ್ಯವಿದೆ. ಆಕೆಗೆ ಇಷ್ಟವಿದ್ದರೆ ಧರಿಸುವ, ಇಷ್ಟವಿಲ್ಲದಿದ್ದರೆ ತಿರಸ್ಕರಿಸುವ ಹಕ್ಕೂ ಆಕೆಗಿದೆ. ಅದವಳ ವೈಯಕ್ತಿಕ ಆಯ್ಕೆ ಮತ್ತು ಹಕ್ಕು. ವಸ್ತ್ರ ಮಾತ್ರವಲ್ಲ ಅವಳ ಬದುಕನ್ನು ಕೂಡ ಅವಳಿಷ್ಟದಂತೆ ಆಕೆ ನಡೆಸಬಹುದು. ಅವಳಿಗೂ ಭಾವನೆಗಳಿವೆ, ಅವಳಿಗೂ ಬದುಕಿದೆ. ಅವಳನ್ನು ಬಂಧನದಲ್ಲಿಟ್ಟು, ಕಟ್ಟಿ ಹಾಕಿ ಕೈಗೊಂಬೆಯಾಗಿಸುವ ಅಧಿಕಾರ ಯಾರಿಗೂ ಇಲ್ಲ.
ಬಾಹ್ಯ ನೋಟಕ್ಕೆ ಇರಾನಿನ ಈ ಕಿಚ್ಚು ಹಿಜಾಬಿನ ವಿರುದ್ಧವೆಂದು ಕಂಡರೂ ಅದು ಸಂಪೂರ್ಣವಾಗಿ ಹಿಜಾಬಿನ ವಿರುದ್ಧವಲ್ಲ. ಅಲ್ಲಿಯ ಅನೈತಿಕ ಪೊಲೀಸ್ ಗಿರಿಯ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಆ ಆಕ್ರೋಶವನ್ನು ಅವರು ಹಿಜಾಬನ್ನು ಸುಡುವುದರ ಮೂಲಕ, ಕೂದಲು ಕತ್ತರಿಸುವುದರ ಮೂಲಕ ಹೊರ ಹಾಕುತ್ತಿದ್ದಾರೆ. ಅಲ್ಲಿರುವುದು ಬರೀ ಮುಸ್ಲಿಮರು ಮಾತ್ರವಲ್ಲ. ಇತರ ಜನರೂ ಇದ್ದಾರೆ. ಹಾಗಾಗಿ ಒಂದು ಧರ್ಮದ ನಿಯಮವನ್ನು ಹೇರುವಾಗ ಅದು ಇತರ ಧರ್ಮೀಯರಿಗೂ ತೊಂದರೆಯಾಗಬಾರದು. ಹೇರುವುದೇ ತಪ್ಪು. ಅಂತಹದರಲ್ಲಿ ಕೂದಲು ಹೊರ ಕಾಣುತ್ತದೆಯೆಂದು ಕೊಲ್ಲುವುದು ಮಹಾಪರಾಧ. ಅಲ್ಲದೆ ಪ್ರತಿಭಟನೆಯಲ್ಲಿ ಬಹುಪಾಲು ಮಹಿಳೆಯರು ಹಿಜಾಬ್ ಧರಿಸಿದ್ದಾರೆ. ಅದರಲ್ಲಿ ಹಿಜಾಬ್, ಬುರ್ಖಾ ಧರಿಸಿದವರೂ ಇದ್ದಾರೆ. ಧರಿಸದವರೂ ಇದ್ದಾರೆ. ಇದೂ ಸಹ ಗಮನಾರ್ಹ ಅಂಶವೇ. ಅವಳಿಗಿಷ್ಟವಿರುವುದನ್ನು ಅವಳು ಧರಿಸಬಹುದೆಂದು ಇದರಲ್ಲೇ ವ್ಯಕ್ತವಾಗುತ್ತದೆ. ಹಿಜಾಬ್ ಧರಿಸಿರುವುದು ಸರಿಯಾಗಿಲ್ಲವೆಂಬ ಕಾರಣವು ಕ್ರೌರ್ಯಕ್ಕೆ ತೊಡಗಿಸಿಕೊಳ್ಳುವಷ್ಟು ಮುಂದುವರಿಯಬಾರದು.
ಎದ್ದು ನಿಂತಿವೆ ಮತಾಂಧ ಶಕ್ತಿಗಳು!
ಇನ್ನೊಂದು ತಮಾಷೆಯೇನೆಂದರೆ ಅಲ್ಲಿ ಹಿಜಾಬ್ ವಿರೋಧ ಕಂಡಾಕ್ಷಣ ಇಲ್ಲಿಯ ಮತಾಂಧ ಶಕ್ತಿಗಳು ಮತ್ತೊಮ್ಮೆ ಎದ್ದು ನಿಂತಿವೆ. ಇದು ಹಾಸ್ಯಾಸ್ಪದವಾಗಿದೆ. ಮೊದಲು ಸೋರುವ ನಮ್ಮ ಮನೆಯನ್ನು ಸರಿಪಡಿಸಿಕೊಳ್ಳಬೇಕು. ನಮ್ಮದಿಷ್ಟು ಗಬ್ಬುನಾತ ಹೊಡೆಯುತ್ತಿರುವಾಗ ಪರರ ಹೊಲಸಿನೆಡೆಗೇಕೆ ಚಿಂತೆ ಇವರಿಗೆ? ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಎಂಬಂತೆ ಇಲ್ಲಿ ಬಡತನ, ನಿರುದ್ಯೋಗ ತಾಂಡವವಾಡುತ್ತಿರುವಾಗ ಅವರಿಗೆ ಅದ್ಯಾವುದೂ ಸಮಸ್ಯೆಯಲ್ಲ. ಮುಸ್ಲಿಮ್ ಹೆಣ್ಣುಮಕ್ಕಳ ಸಂಪೂರ್ಣ ಮೈ ಮುಚ್ಚುವ ಬಟ್ಟೆ ಇವರಿಗೆ ಸಮಸ್ಯೆಯಾಗಿರುವುದು! ಇರಾನನ್ನು ತೋರಿಸಿ ಇಲ್ಲಿಯೂ ಹಾಗೆ ಮಾಡಬೇಕೆಂದು ಹೇಳುವುದಾದರೆ ನಾಳೆ ಅವರಿಗೂ ಅದರಿಂದ ಹೊಡೆತ ಬೀಳಲಾರದೆಂಬ ಗ್ಯಾರಂಟಿಯೇನಿದೆ? ಇವರು ಧಾರ್ಮಿಕ ಕಟ್ಟುಪಾಡಿಗೆ ಬದ್ಧರಾಗಿ ನಡೆದರೆ ತಪ್ಪಲ್ಲ. ಆದರೆ ಮುಸ್ಲಿಮ್ ಹುಡುಗಿಯರು ತಲೆಗೆ ಶಾಲು ಹಾಕಬಾರದು. ಎಂತಹ ವಿಪರ್ಯಾಸ !
ಧರ್ಮ ಎಂದರೆ ಶಾಂತಿ, ಸಹಬಾಳ್ವೆ..
ಮನೋವ್ಯಾಧಿಗಳ ಈ ರೋಗ ಆಗಾಗ ಉಲ್ಬಣವಾಗುತ್ತಲೇ ಇರುತ್ತದೆ. ಪ್ರತೀ ಬಾರಿ ಜಾತಿ, ಧರ್ಮದ ಹೆಸರಿನಲ್ಲಿ ಕ್ಷುಲ್ಲಕ ಕಾರಣವನ್ನಿಟ್ಟು ಅಕ್ರಮ, ಅನ್ಯಾಯಕ್ಕೆ ತಮ್ಮನ್ನು ತೊಡಗಿಸಿಕೊಳ್ಳುತ್ತಲೇ ಬಂದಿದ್ದಾರೆ. ಇಲ್ಲಿ ಧರ್ಮದೊಂದಿಗೆ ಬದುಕುವವರೂ ಇದ್ದಾರೆ. ಧರ್ಮವಿಲ್ಲದೆ ಬದುಕುವವರೂ ಇದ್ದಾರೆ. ಎಲ್ಲರೂ ಜೊತೆಯಾಗಿ ಬಾಳುವ ದೇಶವೇ ನಮ್ಮ ಭಾರತ. ಅದಿಲ್ಲದಿದ್ದರೆ ಭಾರತ ಭಾರತವಾಗುವುದಿಲ್ಲ. ಕೊನೆಗೆ ಧರ್ಮ ಅಂದರೆ ಮಾನವೀಯತೆ. ಧರ್ಮ ಅಂದರೆ ಇನ್ನೊಬ್ಬರಿಗೆ ತೊಂದರೆ ಕೊಡದೆ ಬದುಕುವುದು. ಧರ್ಮ ಅಂದರೆ ಶಾಂತಿ, ಸಮಾಧಾನ, ಸಹಬಾಳ್ವೆ. ಇದಿಷ್ಟನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡರೆ ಸಾಕು.
ಸಿಹಾನ ಬಿ.ಎಂ.
ಶಿಕ್ಷಕಿ, ಲೇಖಕಿ.