Home ಕರ್ನಾಟಕ ಚುನಾವಣೆ - 2023 ರಸ್ತೆ, ಚರಂಡಿ ನಿರ್ಮಿಸುವುದು ಶಾಸಕರ ಕೆಲಸವೇ?

ರಸ್ತೆ, ಚರಂಡಿ ನಿರ್ಮಿಸುವುದು ಶಾಸಕರ ಕೆಲಸವೇ?

0

ರಿಯಲ್ ಎಸ್ಟೇಟ್ ಕುಳಗಳು, ಲಿಕ್ಕರ್ ಬ್ಯಾರನ್ ಗಳು, ಗಣಿ ಮಾಫಿಯಾಗಳು ಎಲ್ಲರೂ ಶಾಸನಸಭೆ ಸೇರಿಕೊಂಡಿದ್ದಾರೆ.  ಇವರಲ್ಲಿ ಹೆಚ್ಚಿನವರು ಹೆಚ್ಚು ಓದಿದವರಲ್ಲ. ಶಾಸನಗಳನ್ನು ಓದಿ ತಿಳಿದುಕೊಳ್ಳಬಲ್ಲ, ಗಂಭೀರ ಚರ್ಚೆ ಮಾಡಬಲ್ಲ ಸಾಮರ್ಥ್ಯ ಉಳ್ಳವರಲ್ಲ. ಇವರೆಲ್ಲ ಶಾಸನಸಭೆಯಲ್ಲಿದ್ದು ಏನು ಪ್ರಯೋಜನ?! – ʼಶ್ರೀನಿʼ ಕಾಲಂ ನಲ್ಲಿ ಶ್ರೀನಿವಾಸ ಕಾರ್ಕಳ.

“ನಿಮ್ಮ ಶಾಸಕರ ಬಗ್ಗೆ ನಿಮಗೇನನಿಸುತ್ತದೆ? ಅವರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆಂದು ಅನಿಸುತ್ತದೆಯೇ?” ಎಂಬ ಒಂದು ಸರಳ ಪ್ರಶ್ನೆಯನ್ನು ಜನರ ಮುಂದಿಡಿ. “ನಮ್ಮ ಶಾಸಕರು ತುಂಬಾ ಅಭಿವೃದ್ಧಿ ಮಾಡಿದ್ದಾರೆ. ರಸ್ತೆ, ಚರಂಡಿ ಎಲ್ಲ ಮಾಡಿದ್ದಾರೆ. ಈ ಬಾರಿ ಅವರನ್ನೇ ಚುನಾಯಿಸುವುದು ಎಂದು ನಿರ್ಧರಿಸಿದ್ದೇವೆ”. “ನಮ್ಮ ಶಾಸಕರು ರಸ್ತೆ, ಚರಂಡಿ ಹೀಗೆ ಯಾವ ಅಭಿವೃದ್ಧಿ ಕೆಲಸವನ್ನೂ ಮಾಡಿಲ್ಲ, ನಮ್ಮ ರಸ್ತೆ ಹೇಗಿದೆ ನೋಡಿ.. ಈ ಬಾರಿ ಅವರಿಗೆ ಓಟು ನೀಡಬಾರದು, ಹೊಸಬರನ್ನು ಆರಿಸಬೇಕು ಎಂದು ನಿರ್ಧರಿಸಿದ್ದೇವೆ”, ಸಾಮಾನ್ಯವಾಗಿ ಇಂತಹ ಮಾದರಿಯ ಉತ್ತರಗಳೇ ನಿಮಗೆ ಸಿಕ್ಕಿಯಾವು.

“ನಾನು ಸಾವಿರಾರು ಕೋಟಿಯ ಅನುದಾನವನ್ನು ನನ್ನ ಕ್ಷೇತ್ರಕ್ಕೆ ತಂದಿದ್ದೇನೆ. ಅಭಿವೃದ್ಧಿ ಮಾಡಿದ್ದೇನೆ. ರಸ್ತೆಯ ಕಾಂಕ್ರಿಟೀಕರಣ, ರಸ್ತೆ, ಬೀದಿ ದೀಪ ಎಲ್ಲ ಮಾಡಿಸಿದ್ದೇನೆ. ನನಗೆ ಈ ಬಾರಿಯೂ ಮತದಾರರು ಆಶೀರ್ವಾದ ಮಾಡುವ ಆಶಾವಾದವಿದೆ” ಎಂದು ಶಾಸಕರು, ಸಂಸದರು ಎದೆಯುಬ್ಬಿಸಿ ಹೇಳುತ್ತಿರುತ್ತಾರೆ!

ಈ ನಡುವೆ ಜನಪ್ರತಿನಿಧಿಯ, ಅಂದರೆ ಶಾಸಕರ ನಿಜವಾದ ಕೆಲಸವೇನು ಎಂದು ಶಾಸಕರಿಗೂ ಗೊತ್ತಿಲ್ಲ, ಪ್ರಜೆಗಳಿಗೂ ಗೊತ್ತಿಲ್ಲ. ಹಾಗಾಗಿ ಶಾಸಕನೆಂದರೆ ರಸ್ತೆ, ಚರಂಡಿ ಮಾಡಿಸುವವನು, ಅಭಿವೃದ್ಧಿ ಚಟುವಟಿಕೆ ಎಂದರೆ ರಸ್ತೆ ಚರಂಡಿ ಮಾಡಿಸುವುದು ಎಂಬ ಮಟ್ಟಕ್ಕೆ ನಮ್ಮ ಬೇಡಿಕೆಗಳು, ವಾದಗಳು ಆಲೋಚನೆಗಳು, ಕನಸುಗಳು ಬಂದು ನಿಂತಿವೆ.

ನಿಜ, ಜನರು ತಮ್ಮ ಜೀವನಮಟ್ಟದಲ್ಲಿ ಸುಧಾರಣೆ ಬಯಸುತ್ತಾರೆ. ಇದಕ್ಕೆ ಪೂರಕವಾಗಿ ಸಂಚಾರ ಯೋಗ್ಯ ರಸ್ತೆ, ಪರಿಶುದ್ಧ ಕುಡಿನೀರಿನ ವ್ಯವಸ್ಥೆ, ದುಬಾರಿಯಲ್ಲದ ಮತ್ತು ಗುಣಮಟ್ಟದ ಶಾಲೆ, ಆಸ್ಪತ್ರೆ ಇವನ್ನೆಲ್ಲ ಕೇಳುತ್ತಾರೆ. ಇದು ತಪ್ಪಲ್ಲ. ಇದನ್ನು ಜವಾಬ್ದಾರ ಸರಕಾರ ಒದಗಿಸಬೇಕು. ಸರಕಾರವನ್ನು ಆರಿಸಲು ಒಂದು ಮುಖ್ಯ ಕಾರಣ ಇದು ಕೂಡಾ. ಇದೇ ನಿಟ್ಟಿನಲ್ಲಿ ಸರಕಾರವು ಪ್ರತೀ ವರ್ಷ ಶಾಸನಸಭೆಯಲ್ಲಿ ಬಜೆಟ್ ಮಂಡಿಸುತ್ತದೆ. ಅದರಲ್ಲಿ ನೀರಾವರಿ, ರಸ್ತೆ, ಶಾಲೆ, ಆಸ್ಪತ್ರೆ ಎಲ್ಲದಕ್ಕೂ ಹಣ ತೆಗೆದಿರಿಸಲಾಗುತ್ತದೆ. ಒಮ್ಮೆ ಈ ಬಜೆಟ್ ಶಾಸನ ಸಭೆಯಲ್ಲಿ ಅನುಮೋದನೆಗೊಂಡಿತೆಂದರೆ ಅದನ್ನು ಕಾರ್ಯಗತಗೊಳಿಸುವ ಕೆಲಸವನ್ನು ಕಾರ್ಯಾಂಗವು ಶುರು ಮಾಡಬೇಕು. ಸರಕಾರದಲ್ಲಿ ನಿರ್ದಿಷ್ಟ ಉದ್ದೇಶಕ್ಕೆಂದೇ ರಚಿಸಲಾಗಿರುವ ಲೋಕೋಪಯೋಗಿ ಇಲಾಖೆಯಂತಹ ಇಲಾಖೆಗಳು ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ಕೆಲಸವನ್ನು ಮಾಡಬೇಕು.

ಇವನ್ನೆಲ್ಲ ಮಾಡುವುದು ಸರಕಾರದ ಹೆಚ್ಚುಗಾರಿಕೆಯಾಗಲಿ, ಸಾಧನೆಯಾಗಲೀ ಅಲ್ಲ. ಅದು ಸರಕಾರದ ಕರ್ತವ್ಯ. ಸರಕಾರ ಇರುವುದೇ ಅದಕ್ಕೆ. ಕಾರ್ಯಾಂಗ ತನ್ನ ಕೆಲಸ ಸರಿಯಾಗಿ ಮಾಡದಿದ್ದಾಗ ಶಾಸನ ಸಭೆಯಲ್ಲಿ ಸರಕಾರವನ್ನು ಪ್ರಶ್ನಿಸಬಹುದು, ತರಾಟೆಗೆ ತೆಗೆದುಕೊಳ್ಳಬಹುದು, ಸರಕಾರ ಕ್ರಿಯಾಶೀಲವಾಗುವಂತೆ ಒತ್ತಡ ಪ್ರಯೋಗಿಸಬಹುದು.

ಶಾಸಕನ ಕರ್ತವ್ಯವೇನು?

ಹಾಗಾದರೆ ಶಾಸಕನ ಕೆಲಸವೇನು? ಜನತಂತ್ರ ವ್ಯವಸ್ಥೆಯೊಂದರಲ್ಲಿ, ‘ಮೆಂಬರ್ ಆಫ್ ಲೆಜಿಸ್ಲೇಟಿವ್ ಅಸೆಂಬ್ಲಿ’ಗೆ, ಅಂದರೆ ವಿಧಾನಸಭೆಗೆ ತಮ್ಮ ಪ್ರತಿನಿಧಿಯನ್ನು ಆರಿಸುವುದು ಜನರು. ಆದ್ದರಿಂದ ಇಲ್ಲಿ ಜನರದ್ದೇ ಪರಮಾಧಿಕಾರ. ಜನರು ತಮ್ಮ ಪ್ರತಿನಿಧಿಯಾಗಿ ಆರಿಸಿದ ಜನಪ್ರತಿನಿಧಿಯು ತಮ್ಮ ಕ್ಷೇತ್ರದ ಜನರ ಅಭಿಪ್ರಾಯಗಳನ್ನು ಆಶೋತ್ತರಗಳನ್ನು ಪ್ರತಿನಿಧಿಸುತ್ತಾರೆ. ಸರಕಾರವು ಪ್ರಸ್ತಾವಿಸಿದ ಮಾಡಿದ ರೆವಿನ್ಯೂ ಮತ್ತು ಖರ್ಚುವೆಚ್ಚಗಳನ್ನು ಅನುಮೋದಿಸುವುದು ಮತ್ತು ಅದರ ಮೇಲ್ವಿಚಾರಣೆ ನಡೆಸುವುದು ಕೂಡಾ ಶಾಸಕರ, ಸಂಸದರ ಕೆಲಸ.

‘ಶಾಸಕ’ ಎಂಬ ಪದದಲ್ಲಿಯೇ ಶಾಸನ ಇದೆ. ಶಾಸಕರನ್ನು ‘ಲಾ ಮೇಕರ್ಸ್’ ಎಂದೂ ಕರೆಯುವ ಪರಿಪಾಠವಿದೆ. ಈ ಅರ್ಥದಲ್ಲಿ ಶಾಸಕನಾದವನ ಬಹುಮುಖ್ಯ ಕೆಲಸ ಶಾಸನ ಸಭೆಯಲ್ಲಿ ಶಾಸನಗಳನ್ನು ರೂಪಿಸುವುದು, ಮಂಡಿಸುವುದು, ಅವುಗಳ ಬಗ್ಗೆ ಗಂಭೀರ ಚರ್ಚೆಗಳನ್ನು ನಡೆಸುವುದು, ಬದಲಾವಣೆಗಳನ್ನು ಸಲಹೆ ಮಾಡುವುದು ಮತ್ತು ಬದಲಾವಣೆಗಳನ್ನು ಮಾಡುವುದು ಇತ್ಯಾದಿ..

ಈವತ್ತು ಇಂತಹ ಕೆಲಸಗಳು ನಮ್ಮ ಶಾಸನಸಭೆಗಳಲ್ಲಿ ನಡೆಯುತ್ತಿವೆಯೇ? ಇಡೀ ನಾಡಿನ ಎಲ್ಲ ಸಮುದಾಯಗಳ ಹಿತಾಸಕ್ತಿ ಗಮನದಲ್ಲಿರಿಸಿಕೊಂಡು ಶಾಸನಗಳ ತಯಾರಿ ನಡೆಯುತ್ತಿದೆಯೇ? ಅವುಗಳ ಬಗ್ಗೆ ಶಾಸನಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆಯೇ? ಹೋಗಲಿ ಅಂಗೀಕಾರಗೊಳ್ಳುತ್ತಿರುವ ಮಸೂದೆಯಲ್ಲಿ ಏನಿದೆ ಎಂಬುದು ಅಲ್ಲಿನ ಎಷ್ಟು ಮಂದಿ ಜನಪ್ರತಿನಿಧಿಗಳಿಗೆ ಗೊತ್ತಿರಬಹುದು?

ಈ ಪ್ರಶ್ನೆಗಳಿಗೆ ಉತ್ತರ ನಿರಾಶಾದಾಯಕ. ಇಂತಹ ಪರಿಸ್ಥಿತಿಗೆ, ಯೋಗ್ಯರಲ್ಲದವರು ಶಾಸನಸಭೆ ಪ್ರವೇಶಿಸುತ್ತಿರುವುದೂ ಒಂದು ಕಾರಣ. ಸುಮ್ಮನೆ ಇತ್ತೀಚಿನ ಒಂದೆರಡು ದಶಕಗಳಿಂದ ನಮ್ಮ ಶಾಸನ ಸಭೆಗಳಲ್ಲಿ ಯಾರ್ಯಾರಿದ್ದಾರೆ ಎಂದು ಪರಾಂಬರಿಸಿ. ರಿಯಲ್ ಎಸ್ಟೇಟ್ ಕುಳಗಳು, ಲಿಕ್ಕರ್ ಬ್ಯಾರನ್ ಗಳು, ಗಣಿ ಮಾಫಿಯಾಗಳು ಎಲ್ಲರೂ ಶಾಸನಸಭೆ ಸೇರಿಕೊಂಡಿದ್ದಾರೆ.  ಇವರಲ್ಲಿ ಹೆಚ್ಚಿನವರು ಹೆಚ್ಚು ಓದಿದವರಲ್ಲ. ಶಾಸನಗಳನ್ನು ಓದಿ ತಿಳಿದುಕೊಳ್ಳಬಲ್ಲ, ಗಂಭೀರ ಚರ್ಚೆ ಮಾಡಬಲ್ಲ ಸಾಮರ್ಥ್ಯ ಉಳ್ಳವರಲ್ಲ. ಇವರೆಲ್ಲ ಶಾಸನಸಭೆಯಲ್ಲಿದ್ದು ಏನು ಪ್ರಯೋಜನ?!

ಅದೊಂದು ಕಾಲವಿತ್ತು!

ಹಿಂದೆ ಅರವತ್ತರ ದಶಕದಲ್ಲಿ ಶಾಂತವೇರಿ ಗೋಪಾಲಗೌಡರು, ಎಸ್ ಶಿವಪ್ಪ (ಪ್ರಜಾ ಸೋಷಲಿಸ್ಟ್ ಪಕ್ಷದ ನಾಯಕರು). ಕೆ ಎಚ್ ರಂಗನಾಥ, ಎಪ್ಪತ್ತರ ದಶಕದಲ್ಲಿ ಕೋಣಂದೂರು ಲಿಂಗಪ್ಪ, ಕಾಗೋಡು ತಿಮ್ಮಪ್ಪ, ಬಂಗಾರಪ್ಪ, ವಾಟಾಳ್ ನಾಗರಾಜ್, ಬಿವಿ ಕಕ್ಕಿಲ್ಲಾಯ, ಎಂ ಎಸ್ ಕೃಷ್ಣನ್, ಬಸವಲಿಂಗಪ್ಪ, ಹುಚ್ಚ ಮಾಸ್ತಿಗೌಡ, ಗಂಗಾಧರ ನಮೋಶಿ (ಕಲಬುರ್ಗಿ ಕಮ್ಯುನಿಸ್ಟ್ ಶಾಸಕ), ವಿ ಎನ್ ಪಾಟೀಲರು (ಹುಮ್ನಾಬಾದ್ ಸಿಪಿಐ ಶಾಸಕರು) ಜೆ ಎಚ್ ಪಟೇಲ್, ರಾಮಕೃಷ್ಣ ಹೆಗ್ಡೆ, ದೇವೇಗೌಡ, ಎಂ ಪಿ ಪ್ರಕಾಶ್, ಗೋವಿಂದೇ ಗೌಡ, ಶ್ರೀರಾಮ ರೆಡ್ಡಿ ಹೀಗೆ ಗಂಭೀರ ಚರ್ಚೆ ಮಾಡಬಲ್ಲ ಅನೇಕರು ಮೇಧಾವಿಗಳು ಇದ್ದ ಶಾಸನಸಭೆ ನಮ್ಮದು.

ಈಗ ಕರ್ನಾಟಕ ಶಾಸನಭೆಯಲ್ಲಿ ಸಂವಿಧಾನವನ್ನು ಉಲ್ಲೇಖಿಸುತ್ತಾ, ನಿಖರ ಆರ್ಥಿಕ ಅಂಕಿಅಂಶಗಳೊಂದಿಗೆ ಮಾತನಾಡಬಲ್ಲ ಸಿದ್ದರಾಮಯ್ಯ, ಬಿ ಕೆ ಹರಿಪ್ರಸಾದ್, ಕೃಷ್ಣಬೈರೇಗೌಡ, ಪ್ರಿಯಾಂಕ ಖರ್ಗೆ ಮುಂತಾದವರನ್ನು ಹೊರತುಪಡಿಸಿದರೆ ಬೇರೆ ಯಾರಿದ್ದಾರೆ? ಅದರಲ್ಲೂ ಆಡಳಿತ ಪಕ್ಷದಲ್ಲಿ ದುರ್ಬೀನು ಹಾಕಿ ಹುಡುಕಿದರೂ ಯಾರೂ ಸಿಗರು. ಇತ್ತೀಚೆಗೆ ಕಾರ್ಮಿಕರ ದುಡಿಮೆಯ ಅವಧಿಯನ್ನು ಹೆಚ್ಚಿಸಿದಾಗ ಬಿಜೆಪಿಯವರೇ ಆದರೂ ಇದನ್ನು ವಿರೋಧಿಸಿ ಆಯನೂರು ಮಂಜುನಾಥ ಅವರು ವಿಧಾನಪರಿಷತ್ತಿನಲ್ಲಿ ಮಾಡಿದ ಭಾಷಣ ವೈರಲ್ ಆಗಿದ್ದು ಇಲ್ಲಿ ಉಲ್ಲೇಖನೀಯ. ಕರ್ನಾಟಕ ಶಾಸನಸಭೆಯಲ್ಲಿ ಇಂಥವರ ಸಂಖ್ಯೆ ಈಗ ಬೆರಳೆಣಿಕೆಯಷ್ಟು. “ಮುಕ್ತ ಮಾಡುತ್ತೇವೆ, ನಾಲಿಗೆ ಕತ್ತರಿಸುತ್ತೇವೆ, ನೀನು ಅಂಥವನು ನೀನು ಇಂಥವನು” ಎಂದು ನಿಂದಿಸುತ್ತಾ ಆರ್ಭಟಿಸುವವರ ಸಂಖ್ಯೆಯೇ ಹೆಚ್ಚು.

ಅಪ್ರಸ್ತುತಗೊಳ್ಳುತ್ತಿರುವ ಶಾಸನಸಭೆ

ಹೀಗೆ ಗಂಭೀರವಾಗಿ ಚರ್ಚೆ ಮಾಡಬಲ್ಲವರು, ಸರಕಾರವನ್ನು ತರ್ಕಬದ್ಧ ವಾದದ ಮೂಲಕ ಕಟ್ಟಿಹಾಕಬಲ್ಲವರು ಇಲ್ಲದಿದ್ದಾಗ ಸರಕಾರ ದುರುದ್ದೇಶದಿಂದ ಮುಂದಿಡುವ ‘ಸಿಎಎ’, ‘ಮತಾಂತರ ನಿಷೇಧ’ದಂತಹ ಮಸೂದೆಗಳು ಲೀಲಾಜಾಲವಾಗಿ ಸೆಕೆಂಡುಗಳಲ್ಲಿ ಪಾಸ್ ಆಗುತ್ತವೆ. ಶಾಸನಸಭೆಯ ಕಲಾಪಗಳು ಕೇವಲ ಗದ್ದಲ ಕೋಲಾಹಲಗಳಲ್ಲಿಯೇ ಮುಳುಗಿ ಮುಗಿದು ಹೋಗುತ್ತವೆ. ಈಗ ಹಿಂದಿನಷ್ಟು ದಿನಗಳ ಕಾಲ ಶಾಸನಸಭೆಯ ಕಲಾಪಗಳೂ ನಡೆಯುವುದಿಲ್ಲ. ಹಾಗಾಗಿ ನಿಧಾನವಾಗಿ ಶಾಸನಸಭೆಗಳು ತಮ್ಮ ಪ್ರಸ್ತುತತೆಯನ್ನೇ ಕಳೆದುಕೊಳ್ಳುತ್ತಿವೆ. ಅಲ್ಲಿನ ಪ್ರಕ್ರಿಯೆಗಳು ರಿಚುವಲ್ ಮಟ್ಟಕ್ಕೆ ಇಳಿದಿವೆ. ಇದು ರಾಜ್ಯ ವಿಧಾನಸಭೆಯ ಕತೆ ಮಾತ್ರವಲ್ಲ, ಸಂಸತ್ತಿನ ಕತೆಯೂ ಹೀಗೆಯೇ ಆಗಿದೆ.

ಇದಕ್ಕೆ ಕಾರಣ ಏನು ಎಂದು ನಾವು ಆತ್ಮಾವಲೋಕನ ನಡೆಸಬೇಕು. ಮೊದಲಾಗಿ ನಮ್ಮ ಶಾಸಕರ ಕರ್ತವ್ಯವನ್ನು ಅಂದರೆ ಈಗಾಗಲೇ ಹೇಳಿದ ಶಾಸನಸಭೆಯಲ್ಲಿನ ಕರ್ತವ್ಯಗಳನ್ನು ಅರ್ಥಮಾಡಿಕೊಳ್ಳಬೇಕು  ಮತ್ತು ಅವನ್ನು ಅವರು ನಿಭಾಯಿಸುತ್ತಿದ್ದಾರೆಯೇ ಎಂದು ಕಣ್ಣಿಡಬೇಕು. ಶಾಸಕರು ಶಾಸನ ಸಭೆಯಲ್ಲಿ ಡಿಬೇಟುಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆಯೇ, ಜನರಿಗೆ ಸಂಬಂಧಿಸಿ ಪ್ರಶ್ನೆಗಳನ್ನು ಎತ್ತಿದ್ದಾರೆಯೇ? ಎಂದು ಪರಾಂಬರಿಸಬೇಕು.

ಹೀಗೆ ಮಾಡಿದರೆ, ನಮ್ಮಲ್ಲಿ ಶೇಕಡಾ 90 ಕ್ಕೂ ಅಧಿಕ ಮಂದಿ ಜನಪ್ರತಿನಿಧಿಗಳು ನಾಲಾಯಕ್ ಗಳು ಎಂದು ನಿಮಗೆ ಅರಿವಾದೀತು. ಉದಾಹರಣೆಗೆ, 2019 ರಲ್ಲಿ, ರಾಜ್ಯದಿಂದ 28 ಮಂದಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1, ಪಕ್ಷೇತರ 1 (ಪಕ್ಷೇತರ ಇದ್ದವರೂ ಈಗ ಬಿಜೆಪಿಯತ್ತ ವಾಲಿದ್ದಾರೆ). ಇವರಲ್ಲಿ ಎಷ್ಟು ಮಂದಿ ಸಂಸತ್ ನಲ್ಲಿ ಮಾತನಾಡಿದ್ದಾರೆ? ನಮ್ಮ ಸಂಸದ ನಳಿನ್ ಕುಮಾರ್ ಕಟೀಲ್ ಅವರು ವಿದ್ಯಾವಂತರ ಜಿಲ್ಲೆಯಿಂದ ಮೂರು ಅವಧಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ! ಅವರು ಸಂಸತ್ ನಲ್ಲಿ ಗಂಭೀರ ಡಿಬೇಟ್ ನಲ್ಲಿ ಎಂದಾದರೂ ಭಾಗವಹಿಸಿ ತಮ್ಮ ವಾದ ಮಂಡಿಸಿದ್ದನ್ನು ನೀವು ನೋಡಿದ್ದೀರಾ? ಅವರು ಹಾಗೆ ಮಾತನಾಡುವ ಸಾಮರ್ಥ್ಯ ಹೊಂದಿದ್ದಾರೆಂದು ನಿಮಗನಿಸುತ್ತದೆಯೇ?

ಯೋಚಿಸಿ ಮತ ಚಲಾಯಿಸೋಣ

ಈಗ ಮತ್ತೆ ಮೊದಲಿನ ಪ್ರಶ್ನೆಗೆ ಬಂದರೆ, ನಮ್ಮ ಜನಪ್ರತಿನಿಧಿಗಳು ಹೀಗಾಗಲು ಮತದಾರರಾಗಿ ನಾವೂ  ಕಾರಣರಲ್ಲವೇ? ಶಾಸಕನ ಕೆಲಸ ರಸ್ತೆ, ಚರಂಡಿ ನಿರ್ಮಾಣವಾದಾಗ ಅಲ್ಲಿ 40 ಪರ್ಸೆಂಟ್ ಕಮಿಷನ್ ನ ಭ್ರಷ್ಟಾಚಾರ ನಡೆದೇ ನಡೆಯುತ್ತದೆ. ಹೆಗಲಿಗೆ ಪುಟ್ಟದೊಂದು ಚೀಲ ನೇತುಹಾಕಿಕೊಂಡು, ನಡೆದುಕೊಂಡು ಬರುವ ವ್ಯಕ್ತಿ ಶಾಸಕನಾಗಿ ಐದೇ ವರ್ಷದಲ್ಲಿ ಕೋಟಿಗಟ್ಟಲೆಯ ಬೇನಾಮಿ ಆಸ್ತಿ ಸಂಪಾದಿಸುತ್ತಾನೆ, ಬಿಎಂ ಡಬ್ಲ್ಯೂ ಕಾರಿನಲ್ಲಿ ಓಡಾಡುತ್ತಾನೆ!

ಈಗ ಮತ್ತೆ ಚುನಾವಣೆ ಬಂದಿದೆ. ಮುಂದಿನ ಐದು ವರ್ಷಕ್ಕೆ ನಾವು ವಿಧಾನಸಭೆಗೆ ನಮ್ಮ ಪ್ರತಿನಿಧಿಗಳನ್ನು ಕಳುಹಿಸಬೇಕಾಗಿದೆ. ನಾಳೆ ರಸ್ತೆ, ಚರಂಡಿ ನಿರ್ಮಿಸಿಕೊಡುತ್ತಾನೋ ಎಂದು ಯೋಚಿಸುವ ಬದಲಿಗೆ, ಪುನರಾಯ್ಕೆ ಬಯಸುವವನಾದರೆ/ಳಾದರೆ ಈ ಹಿಂದೆ ಆತನ/ಆಕೆಯ ಶಾಸನಸಭೆಯ ಟ್ರಾಕ್ ರೆಕಾರ್ಡ್ ಹೇಗಿದೆ ಪರಾಂಬರಿಸೋಣ. ತಮ್ಮ ಕ್ಷೇತ್ರದ ಜನರ ಆಶೋತ್ತರಗಳ ಪ್ರತಿನಿಧಿಯಾಗಿ ಅವರು ಅಲ್ಲಿ ಕೆಲಸ ಮಾಡಿದ್ದಾರೆಯೇ? ಜನಪರವಾದ ಶಾಸನಗಳ ಬಗ್ಗೆ ಯೋಚಿಸಿದ್ದಾರೆಯೇ, ಮಂಡಿಸಿದ್ದಾರೆಯೇ, ಮಸೂದೆಗಳನ್ನು ಕುರಿತ ಗಂಭೀರ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆಯೇ? ಇವನ್ನೆಲ್ಲ ನೋಡೋಣ. ಹೊಸಬರಾದರೆ ಆತನಲ್ಲಿ/ ಆಕೆಯಲ್ಲಿ ಇಂತಹ ಯೋಗ್ಯತೆ ಇದೆಯೋ ಹುಡುಕೋಣ. ‘ಮದುವೆಯಲ್ಲಿ ಹೆಣ್ಣಿನ ಕಡೆಯವರು ಗಂಡಿನ ಪೂರ್ವಾಪರಗಳನ್ನು ತಿಳಿಯುವ ಕ್ರಮವಿದೆ. ಒಬ್ಬ ಶಾಸಕ, ಸಂಸದನನ್ನು ಆರಿಸುವಾಗ ಯಾಕೆ ಬೇಜವಾಬ್ದಾರಿಯಿಂದ ವರ್ತಿಸುತ್ತೀರಿ?’ ಎಂದು ಕೆಲ ಪ್ರಜ್ಞಾವಂತರು ಮತದಾರರನ್ನು ಪ್ರಶ್ನಿಸುವುದಿದೆ. ಅದಕ್ಕೆ ಆಸ್ಪದ ಕೊಡದೆ ಜವಾಬ್ದಾರಿಯಿಂದ ಯೋಚಿಸಿ ಮತ ಚಲಾಯಿಸೋಣ. 40 ಪರ್ಸೆಂಟ್ ಕಮಿಷನ್ ವ್ಯವಹಾರಕ್ಕೆ ನಾವೇ ಪರೋಕ್ಷವಾಗಿ ಕಾರಣರಾಗದಿರೋಣ.

ಶ್ರೀನಿವಾಸ ಕಾರ್ಕಳ

ಚಿಂತಕರು, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

You cannot copy content of this page

Exit mobile version