ಮೈಸೂರು, ಅಕ್ಟೋಬರ್ 2: ದಸರಾ ಜನರ ಹಬ್ಬ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದಾಗ ಮಾತ್ರ ದಸರಾ ಆಯೋಜನೆ ಯಶಸ್ವಿಯಾಗುತ್ತದೆ. ಮೈಸೂರು ದಸರಾಕ್ಕೆ ಪ್ರವಾಸಿಗರನ್ನು ಸ್ವಾಗತಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಈ ಬಾರಿ ದಸರಾ ಹಬ್ಬವು ಹನ್ನೊಂದು ದಿನಗಳ ಕಾಲ ನಡೆದಿದ್ದು, ನಾಡಿನ ಜನತೆಗೆ ದಸರಾ ಮಹೋತ್ಸವದ ಶುಭಾಶಯಗಳನ್ನು ಕೋರುತ್ತೇನೆ. ಮೈಸೂರು ದಸರಾ ವಿಶ್ವವಿಖ್ಯಾತವಾಗಿದ್ದು, ಹೆಚ್ಚಿನ ಪ್ರವಾಸಿಗರನ್ನು ಸ್ವಾಗತಿಸುವುದಾಗಿ ತಿಳಿಸಿದರು. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿ , ಎಲ್ಲ ದಸರಾ ಉತ್ಸವಗಳಲ್ಲಿ ಭಾಗಿಯಾಗಿದ್ದೇನೆ. ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ 8 ಬಾರಿ ದಸರಾದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿದ್ದು, ಅತ್ಯಂತ ಸಂತೋಷವನ್ನು ತಂದಿದೆ ಎಂದರು.
ದಸರಾ ಯಶಸ್ವೀ ಆಯೋಜನೆ
ದಸರಾ ಜನರ ಹಬ್ಬ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದಾಗ ಮಾತ್ರ ದಸರಾ ಆಯೋಜನೆ ಯಶಸ್ವಿಯಾಗುತ್ತದೆ. ದಸರಾ ಉತ್ಸವವನ್ನು ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಅಭಿನಂದಿಸಿದ ಮುಖ್ಯಮಂತ್ರಿಗಳು, ದಸರಾ ಉತ್ಸವ ಯಾವುದೇ ಅಡಚಣೆಗಳಿಲ್ಲದೇ ಯಶಸ್ವಿಯಾಗಿ ನಡೆದಿರುವುದು ಸಂತಸ ತಂದಿದೆ. ಇದಕ್ಕಾಗಿ ಶ್ರಮಿಸಿದ ಸಚಿವರು, ಶಾಸಕರು ಹಾಗೂ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದರು.
ಜಂಟಿ ಸಮೀಕ್ಷೆ ನಂತರ ಬೆಳೆಪರಿಹಾರ
ಈ ವರ್ಷ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗಿದ್ದು, ಎಲ್ಲ ಜಲಾಶಯಗಳು ತುಂಬಿ, ಉತ್ತಮ ಬೆಳೆಯೂ ಆಗುತ್ತಿದೆ. ಆದರೆ ಉತ್ತರಕರ್ನಾಟಕದ ಕೆಲವು ಜಿ್ಲ್ಲೆಗಳಲ್ಲಿ ಅತಿವೃಷ್ಠಿಯಿಂದ ರಾಜ್ಯದಲ್ಲಿ ಸುಮಾರು 10ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದೆ. ರೈತರಿಗೆ ಸಮೀಕ್ಷೆ ನಡೆಸಿ ಬೆಳೆಪರಿಹಾರ ನೀಡುವುದಾಗಿ ಕಲ್ಬುರ್ಗಿಯ ಭೇಟಿ ಸಂದರ್ಭದಲ್ಲಿ ತಿಳಿಸಲಾಗಿದ್ದು, ಸರ್ಕಾರ ಮತ್ತು ಎನ್ ಡಿಆರ್ ಎಫ್ ಸೇರಿದಂತೆ ಖುಷ್ಕಿ ಜಮೀನಿನ ತಲಾ ಹೆಕ್ಟೇರ್ ಗೆ 17000 ರೂ ನೀರಾವರಿ ಜಮೀನಿಗೆ 17,500 ರೂ. ಮತ್ತು ಬಹುಬೆಳೆ ಬೆಳೆಯುವ ಜಮೀನಿಗೆ 31ಸಾವಿರ ರೂ.ಗಳ ಪರಿಹಾರ ನೀಡುವುದಾಗಿ ತಿಳಿಸಲಾಗಿದೆ. ಆದರೆ ಹೆಚ್ಚಿನಮಳೆಯಿರುವುದರಿಂದ ಬೆಳೆಹಾನಿಯ ಜಂಟಿಸಮೀಕ್ಷೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸಮೀಕ್ಷೆಯ ನಂತರ ಬೆಳೆಹಾನಿಯಾದ ಎಲ್ಲ 10 ಲಕ್ಷ ಹೆಕ್ಟೇರ್ ಗೂ ಪರಿಹಾರ ನೀಡಲಾಗುವುದು ಎಂದರು.