ಹೊಸದಿಲ್ಲಿ: ಕೋಲಾರದ ಜೆಡಿಎಸ್ ಮುಖಂಡರಾದ ಸುಹೆಲ್ ದಿಲ್ ನವಾಜ್ರವರು ಆಮ್ ಆದ್ಮಿ ಪಾರ್ಟಿಯ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆಯವರ ಸಮ್ಮುಖದಲ್ಲಿ ದೆಹಲಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ಈ ವೇಳೆ ಸುಹೆಲ್ ದಿಲ್ ನವಾಜ್ರವರ ಕುರಿತು ಮಾತನಾಡಿದ ದಿಲೀಪ್ ಪಾಂಡೆ, “ಸುಹೆಲ್ರವರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿದವರು. ಇವರ ತಂದೆ ಕೋಲಾರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಬ್ದುಲ್ ಲತೀಫ್ರವರು ʻಕರ್ನಾಟಕದ ರೇಷ್ಮೆ ಉದ್ಯಮದ ಪಿತಾಮಹʼ ಎಂದೇ ಪ್ರಸ್ತಿದ್ಧರಾಗಿದ್ದರು. ಸುಹೆಲ್ರವರು ಇಂಗ್ಲೆಂಡ್ನಲ್ಲಿ ಎಂಎ, ಎಲ್ಎಲ್ಬಿ, ಐಎಲ್ಟಿ ಶಿಕ್ಷಣ ಪಡೆದಿದ್ದಾರೆ. ಕಿರಿಯ ವಯಸ್ಸಿನಿಂದಲೂ ರಾಜಕೀಯ ಹೋರಾಟಗಳಲ್ಲಿ ಆಸಕ್ತಿ ಹೊಂದಿದ್ದಾರೆ. ವಿದ್ಯಾರ್ಥಿ ನಾಯಕರಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ ಅನುಭವ ಹೊಂದಿದ್ದಾರೆ”ಎಂದು ಪರಿಚಯಿಸಿದರು.
ʼಜೆ.ಎಚ್.ಪಟೇಲ್ರವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸುಹೆಲ್ರವರು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ (ಪಿಡಿಎಸ್) ವೆಚ್ಚ ಕಡಿತ ಹಾಗೂ ಇನ್ನಿತರ ಬದಲಾವಣೆಗಳನ್ನು ತಂದಿದ್ದರು. ಕೋಲಾರದ ರೈಲ್ವೆ ಸಂಪರ್ಕ ಅಭಿವೃದ್ಧಿಯಲ್ಲಿ ಸುಹೆಲ್ರವರ ಪಾತ್ರ ಮಹತ್ವದ್ದಾಗಿದೆ. ಇಂತಹ ಅನುಭವಿ ವ್ಯಕ್ತಿತ್ವ ಹಾಗೂ ಅಪಾರ ಜನಪರ ಕಾಳಜಿಯುಳ್ಳ ನಾಯಕರು ಜೆಡಿಎಸ್ ತೊರೆದು ಆಮ್ ಆದ್ಮಿ ಪಾರ್ಟಿ ಸೇರುತ್ತಿರುವುದು ಸಂತಸದ ವಿಚಾರʼಎಂದು ದಿಲೀಪ್ ಪಾಂಡೆ ಹೇಳಿದರು.
ಸುಹೆಲ್ ದಿಲ್ ನವಾಜ್ರವರು ಮಾತನಾಡಿ, “ಜನಾನುರಾಗಿ ಆಡಳಿತ ಹೇಗಿರುತ್ತದೆ ಎಂಬುದನ್ನು ಆಮ್ ಆದ್ಮಿ ಪಾರ್ಟಿಯು ತೋರಿಸಿಕೊಡುತ್ತಿದೆ. ಆರೋಗ್ಯ, ಶಿಕ್ಷಣ, ಸಾರಿಗೆ ಮುಂತಾದ ಕ್ಷೇತ್ರದಲ್ಲಿ ದೆಹಲಿ ಹಾಗೂ ಪಂಜಾಬ್ ರಾಜ್ಯಗಳ ಎಎಪಿ ಸರ್ಕಾರಗಳು ಮಾಡಿರುವ ಸಾಧನೆ ಪ್ರಶಂಸನೀಯ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರೆ ಮೂಲಭೂತ ಸೌಲಭ್ಯಗಳನ್ನು ಉಚಿತವಾಗಿ ನೀಡಲು ಸಾಧ್ಯವಿದೆ ಎಂಬುದನ್ನು ಪಕ್ಷವು ಸಾಧಿಸಿ ತೋರಿಸಿದೆ. ಕರ್ನಾಟಕದ 40% ಸರ್ಕಾರವನ್ನು ಕಿತ್ತೊಗೆದು, ಪಾರದರ್ಶಕ ಆಡಳಿತ ನೀಡುವ ಆಮ್ ಆದ್ಮಿ ಪಾರ್ಟಿಯನ್ನು ಅಧಿಕಾರಕ್ಕೆ ತರಲು ಜನರು ಪಣ ತೊಡಬೇಕು”ಎಂದು ಹೇಳಿದರು.
ಸುಹೆಲ್ ದಿಲ್ ನವಾಜ್ರವರ ಜೊತೆ ಅವರ 25ಕ್ಕೂ ಹೆಚ್ಚು ಬೆಂಬಲಿಗರು ಆಮ್ ಆದ್ಮಿ ಪಾರ್ಟಿ ಸೇರಿದ್ದಾರೆ.ಈ ವೇಳೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೋಲಾರ ಜಿಲ್ಲಾ ಉಸ್ತುವಾರಿ ರವಿಶಂಕರ್ ಸಹ ಹಾಜರಿದ್ದರು.