ಈ ದೇಶದ ಬಡ ಜನರಿಗೆ ಜಮೀನು ಎಂದರೆ ಜೀವ, ಜೀವನ. ಹುಟ್ಟು, ಮದುವೆ, ಸಾವು ಮಾತ್ರವಲ್ಲ ಅವರು ನಂಬಿದ ದೈವಗಳೊಂದಿಗೂ ಅದು ಸಂಬಂಧ ಹೊಂದಿರುತ್ತದೆ. ಅಂತಹ ನೆಲದಿಂದ ಅವರನ್ನು ಬೇರ್ಪಡಿಸುವುದು ಎಂದರೆ ಭೂಮಿಯಲ್ಲಿ ಆಳವಾಗಿ ಬೇರೂರಿದ ಮರವೊಂದನ್ನು ಕಿತ್ತು ಬೇರೆಡೆ ಇರಿಸಿದಂತೆ. ಹೀಗೆ, ನೆಲೆ ಕಳೆದುಕೊಂಡ ಎಂಕಜ್ಜಿಯ ಮನ ಕರಗಿಸುವ ಕತೆಯೊಂದಿಗೆ ಅಭಿವೃದ್ಧಿಯ ಕರಾಳ ಕಥನ ಇಂದಿನ ಶ್ರೀನಿ ಕಾಲಂ ನಲ್ಲಿ.
ಮುಖ್ಯ ವಿಷಯಕ್ಕೆ ಬರುವ, ಮೊದಲು ನಿಮಗೆ ಒಂದು ಸತ್ಯ ಘಟನೆಯನ್ನು ಹೇಳುತ್ತೇನೆ. ಎಂಕಜ್ಜಿ ಮದುವೆಯಾಗಿ ಗಂಡನ ಮನೆಗೆ ಬಂದ ಮೇಲೆ ಅಕ್ಷರಶಃ ‘ಕೊಟ್ಟ ಹೆಣ್ಣು ಕುಲದಿಂದ ಹೊರಗೆ’ ಎಂಬಂತೆ ಸರಿ ಸುಮಾರು ಅರ್ಧ ಶತಮಾನ ಕಾಲ ಬದುಕಿದ್ದು ಹಳ್ಳಿ ಮೂಲೆಯ ಆ ಪುಟ್ಟ ಜಮೀನಿನಲ್ಲಿ. ಗಂಡ ತೀರಿ ಹೋಗಿ ಬಹಳ ಕಾಲ ಆಯಿತು. ಈಗ ಒಂಟಿ ಬದುಕು. ಇದ್ದೊಬ್ಬಳು ಮಗಳು ಮದುವೆಯಾಗಿ ದೂರದ ಊರಿನಲ್ಲಿದ್ದಾಳೆ. ಆಗಾಗ ಬಂದು ಪ್ರೀತಿಯಿಂದ ಮಾತನಾಡಿಸಿ, ಬದುಕಿಗೆ ಅಗತ್ಯವಾದ ಸಾಮಗ್ರಿಗಳು, ಒಂದಿಷ್ಟು ಹಣ ಎಲ್ಲ ಕೊಟ್ಟು ಹೋಗುತ್ತಾಳೆ. ಇಲ್ಲೇ ಬಂದಿರಲು ಆಕೆಗೂ ಆಕೆಯದೇ ಆದ ಸಂಸಾರ ಇದೆಯಲ್ಲ? ಅಲ್ಲಿಗೆ ಹೋಗಲು ಎಂಕಜ್ಜಿ ತಯಾರಿಲ್ಲ.
ಎಂಕಜ್ಜಿಯದ್ದು ಪುಟ್ಟ ಜಮೀನು ಎಂದೆನಲ್ಲ, ಆ ಜಮೀನಿನಲ್ಲಿದ್ದುದೂ ಆಕೆಯಂತೆಯೇ ಈಗಲೋ ಆಗಲೋ ಬೀಳುವಂತಹ ಪುಟ್ಟ ಗುಡಿಸಲು. ಹಿಂದುಗಡೆ ಕಾಡು, ಮುಂದುಗಡೆ ಬೇರೆಯವರ ಗದ್ದೆ ತೋಟ ಇರುವ ಚಂದದ ಹಸಿರು ಪರಿಸರ. ಮನೆಯ ಸುತ್ತ ಬಸಳೆ, ಮನೊಳಿ ದೊಂಪ (ತೊಂಡೆ ಚಪ್ಪರ), ಬೆಂಡೆ, ಬದನೆ, ಹೀರೆ ಗಿಡ ಎಲ್ಲ ಇದೆ. ಇದು ಬಿಟ್ಟರೆ ಆಕೆ ಸಾಕಿರುವ ಕೋಳಿ, ಬೆಕ್ಕು, ನಾಯಿ, ಹಂದಿ ಆಕೆಯ ಪ್ರೀತಿಯ ಸಂಗಾತಿಗಳು. ಇದು ಎಂಕಜ್ಜಿಯ ಪುಟ್ಟ ಮತ್ತು ಸುಂದರ ಜಗತ್ತು. ಒಂಟಿಯಾಗಿರುವುದರಿಂದ ಮತ್ತು ವಯಸ್ಸೂ ಆಗಿರುವುದರಿಂದ ಬದುಕಲು ತುಂಬಾ ಕಷ್ಟದ ಪರಿಸ್ಥಿತಿ. ಆದರೆ ಮನೆಯ ಸುತ್ತ ಓಡಾಡುತ್ತಾ, ಗಿಡ ಬಳ್ಳಿಯ ಮೈದಡುವತ್ತಾ, ಬೆಂಡೆ ಗಿಡ, ಹರಿವೆ ಗಿಡದ ಬುಡಗಳನ್ನು ಒಕ್ಕಿ ಹಾಕುವ ಕೋಳಿಗಳಿಗೆ ವಾಚಾಮಗೋಚರ ಬಯ್ಯುತ್ತ, ಬೆಕ್ಕು, ನಾಯಿ, ಹಂದಿಗಳೊಂದಿಗೆ ಪ್ರೀತಿಯ ಮಾತನಾಡುತ್ತಾ, ಇರುವಾಗ ಆಕೆಗೆ ಸಮಯ ಮಾತ್ರವಲ್ಲ, ಆಯುಷ್ಯ ಕಳೆದುದೇ ತಿಳಿಯುವುದಿಲ್ಲ. ಸುಖ ಮತ್ತು ನೆಮ್ಮದಿ ಒಂದೇ ಅಲ್ಲ. ಸುಖ ಇರುವವರಲ್ಲಿ ನೆಮ್ಮದಿ ಇರಬೇಕಾಗಿಲ್ಲ. ಆದರೆ ಸುಖ ಇಲ್ಲದೆಯೂ ನೆಮ್ಮದಿ ಇರಬಹುದಾಗಿದೆ. ಇದಕ್ಕೆ ಎಂಕಜ್ಜಿ ಅತ್ಯುತ್ತಮ ಉದಾಹರಣೆ.
ಎಂಕಜ್ಜಿಗೆ ತೀರಾ ವಯಸ್ಸಾಯಿತು. ವಯೋಸಹಜ ಕಾಯಿಲೆಗಳೂ ವಕ್ಕರಿಸಲಾರಂಭಿಸಿದವು. ಮಗಳಿಗೆ ಒಂದೆಡೆ ತಾಯಿಯ ಚಿಂತೆಯಾದರೆ, ತನ್ನ ಸಂಸಾರದ ನಾನಾ ತಾಪತ್ರಯದಿಂದ ಆಗಾಗ ಬಂದು ಹೋಗುವುದೂ ಕಷ್ಟವಾಗುತ್ತಿದೆ. ಈ ಕಷ್ಟದಿಂದ ಪಾರಾಗುವ ದಾರಿ ಯಾವುದು? ಮಗಳಿಗೆ ಒಂದು ಆಲೋಚನೆ ಬಂತು. ಒಮ್ಮೆ ತಾಯಿಯ ಬಳಿ ಬಂದವಳು, “ಅಮ್ಮಾ ನಿನಗೆ ಈಗ ವಯಸ್ಸಾಯಿತು, ಒಬ್ಬಳೇ ಇದ್ದಿ, ನಿನ್ನನ್ನಿಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲ, ನನಗಲ್ಲಿ ಸದಾ ನಿನ್ನ ಚಿಂತೆಯಾಗುತ್ತಿರುತ್ತದೆ, ನೀನು ನಮ್ಮಲ್ಲೇ ಬಂದು ಯಾಕೆ ನಮ್ಮ ಜೊತೆ ಇರಬಾರದು? ನಿನಗೂ ಒಳ್ಳೆಯದು, ನಮಗೂ ಸಮಾಧಾನ” ಎಂದಳು. ಎಂಕಜ್ಜಿಯ ಮುಖದಲ್ಲಿ ಸಿಟ್ಟು, ಬೇಸರ, ನಾನಾ ಭಾವನೆಗಳು ಒಮ್ಮೆಲೇ ಸುಳಿದು ಹೋದವು. “ಮದುವೆಯಾಗಿ ಬಂದಂದಿನಿಂದಲೂ ಇಲ್ಲೇ ಇದ್ದೇನೆ, ನನ್ನ ಗಂಡನ ಜತೆ ಇದ್ದ ಮನೆ ಇದು. ಇವನ್ನೆಲ್ಲ ಬಿಟ್ಟು ನಾನು ಹೇಗೆ ಬರಲಿ? ಇಲ್ಲಿರುವುದರಿಂದ ಬದುಕಿದ್ದೇನೆ, ಬೇರೆ ಎಲ್ಲಿ ಹೋದರೂ ನಾನು ಸಾಯುತ್ತೇನೆ. ನಾನು ಇಲ್ಲೇ ಇದ್ದುದು, ಇಲ್ಲೇ ಸಾಯುವುದು, ಎಲ್ಲಿಗೂ ಬರಲಾರೆ” ಕಡ್ಡಿ ಮುರಿದಂತೆ ಅಂದಳು. ಮಗಳು ನಾನಾ ರೀತಿಯಲ್ಲಿ ಮನವೊಲಿಸಲು ಯತ್ನಿಸಿದಳು. ಆದರೆ ಎಂಕಜ್ಜಿ ಒಪ್ಪಲೇ ಇಲ್ಲ.
ಬೇರು ಕಿತ್ತ ಗಿಡ

ಹೀಗೆ ಮನವೊಲಿಸುವ ಕೆಲಸ ಕೆಲ ವರ್ಷಗಳೇ ನಡೆದುವು. ಪರಿಸ್ಥಿತಿ ಸಹಜವಾಗಿಯೇ ಹೆಚ್ಚು ಹೆಚ್ಚು ಚಿಂತೆಗೆ ಕಾರಣವಾಗುತ್ತಲೇ ಹೋಯಿತು. ಮನೆ ಬಿಟ್ಟು ಬರಲಾರೆ ಎನ್ನುವ ತಾಯಿ, ಅಂತಹ ಹಣ್ಣು ಹಣ್ಣು ಮುದುಕಿಯನ್ನು ಅಲ್ಲಿ ಬಿಟ್ಟು ಬಂದಿದ್ದೀರಲ್ಲ, ನಿಮಗೆ ಮಾನವೀಯತೆ ಇಲ್ಲವಾ? ಎನ್ನುವ ಊರವರು, ಮಗಳು ಕೊನೆಗೂ ದಾರಿಕಾಣದೆ ಒಂದು ಗಟ್ಟಿ ನಿರ್ಧಾರ ಮಾಡಿ ಮನೆಯ ಪಕ್ಕ ಒಂದು ಪುಟ್ಟ ಮನೆ ಕಟ್ಟಿಸಿದಳು. ಬಳಿಕ ಬಂದು, “ಅಮ್ಮ ಇಷ್ಟು ದಿನ ನೀನು ಹೇಳಿದಂತೆ ನಾನು ಕೇಳಿದ್ದೇನೆ. ಇನ್ನು ಸಾಧ್ಯವಿಲ್ಲ. ಈಗ ನಾನು ಹೇಳಿದಂತೆ ನೀನು ಕೇಳಬೇಕು. ನಮ್ಮ ಮನೆಯಲ್ಲಿ ಇರುವುದು ಬೇಡ, ನಿನಗಾಗಿ ಪುಟ್ಟ ಮನೆಯೊಂದನ್ನು ಕಟ್ಟಿಸಿದ್ದೇವೆ, ನಾಳೆ ನಿನ್ನನ್ನು ಕರೆದೊಯ್ಯಲು ಬರುತ್ತಿದ್ದೇವೆ. ಹೊರಡಲು ತಯಾರಾಗಬೇಕು” ಎಂದಳು. ಮರು ಮಾತಾಡಲು ಅವಕಾಶವೇ ಇರಲಿಲ್ಲ. ಎಂಕಜ್ಜಿಯ ಕಣ್ಣುಗಳಿಂದ ಬಳ ಬಳನೆ ನೀರು ಹರಿಯಿತು. ಆ ರಾತ್ರಿ ಎಂಕಜ್ಜಿಗೆ ನಿದ್ದೆ ಬರಲಿಲ್ಲ. ಮದುವೆಯಾಗಿ ಬಂದ ದಿನಗಳು, ಗಂಡನೊಂದಿಗೆ ಕಳೆದ ಸುಖದ ದಿನಗಳು, ಈ ಭೂಮಿಯನ್ನು ಹಸನುಗೊಳಿಸಲು ಇಬ್ಬರೂ ಹಾಕಿದ ಶ್ರಮ, ಈ ಗಿಡ ಬಳ್ಳಿ ತಾನು ಸಾಕಿದ ಪ್ರಾಣಿಗಳು, ಈ ನೆಲದೊಂದಿಗಿನ ಭಾವನಾತ್ಮಕ ನಂಟು ಎಲ್ಲದರ ನೆನಪೂ ಕಾಡತೊಡಗಿತು. ಈ ನೆಲವನ್ನು ಬಿಟ್ಟು ಹೋಗುವುದಾದರೂ ಹೇಗೆ, ಇಲ್ಲಿಗೆ ನನ್ನ ಬದುಕು ಮುಗಿಯಿತು ಎಂದೆಲ್ಲ ಆಕೆಗೆ ಅನಿಸತೊಡಗಿತು. ಮಾರನೇ ದಿನ ತನ್ನ ಭೂಮಿ, ಪುಟ್ಟ ಗುಡಿಸಲು, ಅಲ್ಲಿ ಬೆಳೆದ ಗಿಡ ಮರಗಳು ಎಲ್ಲವನ್ನೂ ಒಮ್ಮೆ ಕಣ್ಣು ತುಂಬಿಕೊಂಡು “ನಾನು ಹೇಳಿದರೆ ನೀನು ಕೇಳುವುದಿಲ್ಲ” ಎಂದು ಕಣ್ಣೀರಿಡುತ್ತಾ ಮಗಳೊಂದಿಗೆ ಹೊರಟು ಹೋದಳು. ಅಲ್ಲಿ ಮಗಳು ತನಗಾಗಿ ಕಟ್ಟಿಸಿದ ಮನೆಯನ್ನು ಒಲ್ಲದ ಮನಸಿನಲ್ಲಿ ಹೊಕ್ಕಳು. ಯಾಕೋ ಅದು ತನ್ನ ಮನೆ ಎಂದು ಅನಿಸಲೇ ಇಲ್ಲ ಆಕೆಗೆ. ಅಂದು ರಾತ್ರಿ ಅಲ್ಲಿ ಮಲಗಿದ ಎಂಕಜ್ಜಿ ಬೆಳಗ್ಗೆ ಏಳಲೇ ಇಲ್ಲ.
ಆಕಾಶ ನೋಡುತ್ತ ಕೂರುವುದು
ಮಂಗಳೂರಿನಲ್ಲಿ ತೈಲ ಶುದ್ಧೀಕರಣಾಗಾರ ಸ್ಥಾಪನೆಯಾದಾಗ ಅನೇಕ ಬಡವರು ಮನೆ, ನೆಲ ಕಳೆದುಕೊಂಡರು. ಇವರಲ್ಲಿ ಕೆಲವರು ಎರಡನೆ ಬಾರಿ ನೆಲೆ ಕಳೆದುಕೊಂಡವರು. ಮೊದಲೊಮ್ಮೆ ಮಂಗಳೂರು ಬಂದರಿಗಾಗಿ ಎತ್ತಂಗಡಿಯಾದವರಿಗೆ ಈಗ ಎಂ ಆರ್ ಪಿ ಎಲ್ ಇರುವ ಜಾಗದಲ್ಲಿ ಬದಲಿ ನಿವೇಶನ ಕೊಡಲಾಗಿತ್ತು. ಒಂದೆರಡು ದಶಕಗಳ ಕಾಲ ನೆಲೆಸಿ ಅಲ್ಲಿ ಅವರು ಬೇರೂರಿದ್ದರು. ಎಂ ಆರ್ ಪಿ ಎಲ್ ಬಂದಾಗ ಅವರನ್ನು ಮತ್ತೆ ನೆಲೆ ತಪ್ಪಿಸಿ ಒಂದು ಕಾಲೋನಿ ನಿರ್ಮಿಸಿ ಅಲ್ಲಿ ಹಾಕಲಾಯಿತು. ಒಮ್ಮೆ ಸ್ವಯಂಸೇವಾ ಸಂಸ್ಥೆಗೆ ಸೇರಿದವರೊಬ್ಬರು ಅವರನ್ನು ಸಂದರ್ಶಿಸಲು ಹೋಗಿದ್ದರು. ಆಗ ಅಲ್ಲಿನ ಮುದುಕಿಯೊಬ್ಬರು, “ಅಲ್ಲಿ ನಮ್ಮ ಜಮೀನು ಇತ್ತು, ತರಕಾರಿ ಅದು ಇದೂ ಬೆಳೆಯುತ್ತಾ, ಕೋಳಿ ದನ ಸಾಕಿಕೊಂಡು ನೆಮ್ಮದಿಯಾಗಿದ್ದೆವು. ಈಗ ಇಲ್ಲಿ ತಂದು ಹಾಕಿದ್ದಾರೆ. ಇಲ್ಲಿ ಏನು ಮಾಡುವುದು? ದಿನ ಇಡೀ ಆಕಾಶ ನೋಡುತ್ತಾ ಕೂರುವುದು. ಕಂಪೆನಿ ಶುರು ಮಾಡುವಾಗ ನಿಮಗೆ ಅದು ಕೊಡುತ್ತೇವೆ ಇದು ಕೊಡುತ್ತೇವೆ, ಕೆಲಸ ಕೊಡುತ್ತೇವೆ ಎಂದೆಲ್ಲ ಹೇಳುತ್ತಾರೆ, ನಮ್ಮ ಜಮೀನಿನಲ್ಲಿ ನಾವು ಮುದುಕರು ಯುವಕರು ಎಲ್ಲರೂ ಕೆಲಸ ಮಾಡುತ್ತಿದ್ದೆವು. ಈಗ ಕಂಪೆನಿಯಲ್ಲಿ ನಮಗೆ ಕೆಲಸ ಕೊಡುತ್ತಾರಾ? ಮನೆಯಲ್ಲಿ ಒಬ್ಬ ಹುಡುಗನಿಗೆ ಕೆಲಸ ಕೊಟ್ಟರೆ ಅದರಿಂದ ಇಡೀ ಕುಟುಂಬ ಸಾಕಲಿಕ್ಕೆ ಆಗ್ತದಾ? ಜವ್ವನರಿಗೆ ಕೆಲಸ ಕೊಡಬಹುದು ನಮ್ಮಂತ ಮುದುಕರಿಗೆ ಎಂತ ಕೆಲಸ ಕೊಡ್ತಾರೆ? ನಾವು ಸಮಯ ಕಳೆಯುವುದು ಹೇಗೆ? ಎಂದು ಅಳುತ್ತಾ ತಮ್ಮ ಸಂಕಟ ತೋಡಿಕೊಂಡರು.
ಇದನ್ನೆಲ್ಲ ಯಾಕೆ ಹೇಳಿದೆ ಎಂದರೆ, ನಮ್ಮನ್ನು ಆಳುವವರಿಗೆ ಜಮೀನು ಎಂದರೆ ಒಂದು ವಾಣಿಜ್ಯ ಸರಕಿದ್ದಂತೆ. ಯಾವಾಗ ಬೇಕಾದರೂ ಮಾರಬಹುದು, ಕೊಂಡುಕೊಳ್ಳಬಹುದು. ಆದರೆ ಈ ದೇಶದ ಬಡ ಜನರಿಗೆ ಜಮೀನು ಎಂದರೆ ಜೀವ, ಜೀವನ. ಪುಟ್ಟದಿರಲೀ ದೊಡ್ಡದಿರಲೀ ಅದರೊಂದಿಗಿನ ಅವರ ನಂಟು ಭಾವನಾತ್ಮಕವಾದುದು. ಹುಟ್ಟು, ಮದುವೆ, ಸಾವು ಮಾತ್ರವಲ್ಲ ಅವರು ನಂಬಿದ ದೈವಗಳೊಂದಿಗೂ ಅದು ಸಂಬಂಧ ಹೊಂದಿರುತ್ತದೆ. ಅಂತಹ ನೆಲದಿಂದ ಅವರನ್ನು ಬೇರ್ಪಡಿಸುವುದು ಎಂದರೆ ಭೂಮಿಯಲ್ಲಿ ಆಳವಾಗಿ ಬೇರೂರಿದ ಮರವೊಂದನ್ನು ಕಿತ್ತು ಬೇರೆಡೆ ಇರಿಸಿದಂತೆ. ಈ ಸೂಕ್ಷ್ಮ ನಮ್ಮನ್ನು ಆಳುವವರಿಗೆ ಅರ್ಥವಾಗದು.
ಯೋಜನೆಗಳ ದಾಳಿ
ಕಳೆದ ಸುಮಾರು ಐವತ್ತು ಅರವತ್ತು ವರ್ಷಗಳಿಂದ ದೇಶದಲ್ಲಿ ‘ಡೆವಲಪ್ ಮೆಂಟ್’ ಎಂಬ ಪದವನ್ನು ವ್ಯಾಪಕವಾಗಿ ಕೇಳುತ್ತಿದ್ದೇವೆ. ದೊಡ್ಡ ದೊಡ್ಡ ಅಣೆಕಟ್ಟುಗಳು, ಕೈಗಾರಿಕೆಗಳು, ಗಣಿಗಾರಿಕೆ, ತೀರಾ ಇತ್ತೀಚೆಗೆ ಅಗಲಗಲದ ಹೈವೇಗಳು, ಫ್ಲೈ ಓವರ್ ಗಳು… ಇದಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಬಡವರು, ರೈತಾಪಿ ಜನರು ತಮ್ಮ ಫಲವತ್ತಾದ ಜಮೀನನ್ನು ಕಳೆದು ಕೊಳ್ಳುತ್ತಿದ್ದಾರೆ. ಅವರಿಗೆ ಒಂದಿಷ್ಟು ಹಣ ಎಸೆದು ನಾವು ಅವರಿಗೆ ಪರಿಹಾರ ಕೊಟ್ಟಿಲ್ಲವಾ? ಎಂದು ಆಳುವವರು ಉಡಾಫೆಯ ಧಾಟಿಯಲ್ಲಿ ಮಾತನಾಡುತ್ತಾರೆ. ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಕೃಷಿ ಭೂಮಿ ಕೋಟ್ಯಂತರ ಮಂದಿಗೆ ಉದ್ಯೋಗ ನೀಡಿದ್ದವು. ಒಂದು ಕೃಷಿ ಭೂಮಿ ಎಂದರೆ ಅದರಿಂದ ಕುಟುಂಬದ ಎಲ್ಲರಿಗೂ ಉದ್ಯೋಗ. ಒಂದು ತುಂಡು ಕೃಷಿ ಭೂಮಿ ಅದೆಂತಹ ಬದುಕಿನ ಭದ್ರತೆ ನೀಡಬಹುದು ಎಂಬುದು ತಿಳಿದುದು ಕೊರೋನಾ ಕಾಲದಲ್ಲಿ. ದೂರದ ನಗರಗಳಲ್ಲಿ ಬಾಡಿಗೆ ಮನೆಯಲ್ಲಿದ್ದು ಅಲ್ಲಿನ ಉದ್ಯೋಗದಲ್ಲಿ ಬರುವ ಹಣದಿಂದ ಅಹಂಕಾರದಿಂದ ಮೆರೆಯುತ್ತಿದ್ದವರು ಉದ್ಯೋಗ ಕಳೆದುಕೊಂಡು ಮನೆ ಬಾಡಿಗೆ ತೆರಲೂ ಅಸಾಧ್ಯವಾದಾಗ ವಿಧಿಯಿಲ್ಲದೆ ಊರಿಗೆ ಮರಳಬೇಕಾಯಿತು. ಒಂದು ತುಂಡು ನೆಲ ಇದ್ದವರು ನೆಮ್ಮದಿಯ ಉಸಿರು ಬಿಟ್ಟರು, ಅದೂ ಇಲ್ಲದವರು ಭಿಕಾರಿಗಳಾದರು.
ಪಶ್ಚಿಮ ಘಟ್ಟ ಮತ್ತು ಕಡಲಿನ ನಡುವಣ ಸಣ್ಣ ಪ್ರದೇಶವಾದ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗೆ ಕಡಲು ಒಂದು ವರವೂ ಹೌದು. ಶಾಪವೂ ಹೌದು. ವರ ಏಕೆಂದು ವಿವರಿಸುವ ಅಗತ್ಯವಿಲ್ಲ. ಶಾಪ ಏಕೆಂದರೆ, ಕಡಲು ಒದಗಿಸುವ ಸುಲಭ ಸರಕು ಸಾಗಾಟ ಸೌಲಭ್ಯ ಮತ್ತು ಮಲಿನ ನೀರನ್ನು ಕಡಲಿಗೆ ಬಿಡುವ ಅವಕಾಶದ ಕಾರಣ ದೊಡ್ಡ ದೊಡ್ಡ ಉದ್ಯಮಿಗಳು ಕಣ್ಣು ಹಾಕುವುದೇ ಕರಾವಳಿ ಪ್ರದೇಶದ ಮೇಲೆ. ಮಾಲಿನ್ಯ ಉಂಟು ಮಾಡದ ಸಣ್ಣ ಪುಟ್ಟ ಅಭಿವೃದ್ಧಿ ಯೋಜನೆಗಳು ಬಂದಾಗ ತೊಂದರೆಯಾಗಲಿಲ್ಲ. ಆದರೆ ಯಾವಾಗ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಒಕ್ಕಲೆಬ್ಬಿಸುವ ಮತ್ತು ವಿಪರೀತ ಮಾಲಿನ್ಯ ಉಂಟುಮಾಡುವ ಕೈಗಾರಿಕೆಗಳು ಬರಲಾರಂಭಿಸಿದವೋ ಆಗ ಸಮಸ್ಯೆ ಶುರುವಾಯಿತು. ಇವುಗಳ ವಿರುದ್ಧ ಒಂದು ಕಾಲದಲ್ಲಿ ಶಿವರಾಮ ಕಾರಂತರ ನೇತೃತ್ವದಲ್ಲಿ ಜನಜಾಗೃತಿ ನಡೆಯಿತು ಮತ್ತು ಅನೇಕ ಹೋರಾಟಗಳು ನಡೆದವು. ಆದರೂ ಮಾಲಿನ್ಯಕಾರಕ MCF, MRPL, BASF ಉಷ್ಣ ವಿದ್ಯುತ್ ಸ್ಥಾವರ ಇವನ್ನು ತಡೆಯುವುದು ಸಾಧ್ಯವಾಗಲಿಲ್ಲ.
ಹೋದೆಯಾ ಪಿಶಾಚಿ ಎಂದರೆ…
ಈ ನಡುವೆ ಮತ್ತೆ ಕರಾವಳಿಯ ಮೇಲೆ ಇನ್ನೊಂದು ಸುತ್ತಿನ ದಾಳಿಯ ಸೂಚನೆ ಸಿಗುತ್ತಿದೆ. ಉಷ್ಣ ವಿದ್ಯುತ್ ಸ್ಥಾವರ ಹೊರ ಸೂಸುವ ಹಾರು ಬೂದಿ ಮಾಡಿದ ಹಾನಿ ಸಾಲದೆಂಬಂತೆ ಸಿಮೆಂಟು ಕಾರ್ಖಾನೆ ಸ್ಥಾಪನೆಯ ಸುದ್ದಿಯೂ ಕೇಳಿ ಬರುತ್ತಿದೆ. ಕರಾವಳಿಯ ಆಗುಹೋಗುಗಳ ಮೇಲೆ ಸದಾ ಎಚ್ಚರದ ಕಣ್ಣಿಟ್ಟಿರುವ ಹಿರಿಯ ಪತ್ರಕರ್ತ ರಾಜಾರಾಮ್ ತಲ್ಲೂರು ಹೀಗೆ ಹೇಳುತ್ತಾರೆ- “ ದೇಶದ ಅತ್ಯಂತ ಜನನಿಬಿಡ, ಫಲವತ್ತಾದ, ಸಾಂಸ್ಕೃತಿಕ ಶ್ರೀಮಂತಿಕೆ ಇರುವ ಮತ್ತು ಪಶ್ಚಿಮ ಘಟ್ಟದ ತಪ್ಪಲಿನ ಕರಾವಳಿ ಜಿಲ್ಲೆಗಳಿಗೆ ಅಭಿವೃದ್ಧಿಯ ಹೆಸರಲ್ಲಿ ವಿಷ ಉಣ್ಣಿಸುವ ಕೆಲಸ ಸತತವಾಗಿ ನಡೆದಿದೆ. ಇದರ ಹಿಂದೆ ಯಾವ ದ್ವೇಷವಿದೆಯೋ ಕಾಣೆ. ನಿನ್ನೆ ಆನಿ ಕಂಪನಿ ಕರ್ನಾಟಕದ ಜಾಗತಿಕ ಹೂಡಿಕೆದಾರರ ಮೇಳದಲ್ಲಿ, ಕರಾವಳಿಗೆ ಪ್ರತಿವರ್ಷ 20 ಲಕ್ಷ ಟನ್ ಉತ್ಪಾದನಾ ಸಾಮರ್ಥ್ಯದ ಸಿಮೆಂಟು ಕಾರ್ಖಾನೆಯನ್ನು ಪ್ರಕಟಿಸಿದೆ. ಇದು ಹೊಸ ಪ್ರಕಟಣೆಯೇನಲ್ಲ. 2018ರಲ್ಲೇ ಅವರು ಅನುಮತಿಗೆ ಅರ್ಜಿ ಸಲ್ಲಿಸಿದ್ದಾರೆ.
ತಮ್ಮೂರು ಗುಜರಾತಿಗೆ ಬೋಯಿಂಗ್ ವಿಮಾನ ಫ್ಯಾಕ್ಟರಿ, ಐಫೋನ್ ಫ್ಯಾಕ್ಟರಿ, ಮೈಕ್ರೋಚಿಪ್ ಫ್ಯಾಕ್ಟರಿಗಳನ್ನು ಹಾಕಿಸಿಕೊಂಡು, ಸಮೃದ್ಧವಾದ ಕರಾವಳಿಗೆ ಅತ್ಯಂತ ಮಾಲಿನ್ಯಕಾರಕ “ಸಿಮೆಂಟು ಕಾರ್ಖಾನೆ” ಮಂಜೂರು ಮಾಡುತ್ತಿರುವ ಸರ್ಕಾರದ ಪ್ರಯತ್ನಗಳಿಗೆ ಉಘೇ ಎನ್ನುತ್ತಿರುವ ಅವರ ಲೋಕಲ್ ಬೆಂಬಲಿಗರು, ಮಾಧ್ಯಮದ ಬಕೇಟುಗಳು ಇಲ್ಲಿಯ ತನಕ ಬೂದಿ, ಮಸಿ, ಡಾಮರು ತಿನ್ನುತ್ತಿದ್ದರು. ಇನ್ನು ಸದ್ಯವೇ ಅವರು ಸಿಮೆಂಟಿನ ಧೂಳು ತಿಂದು ಗಟ್ಟಿಮುಟ್ಟಾಗಿ, ಆರೋಗ್ಯವಂತರಾಗಲಿದ್ದಾರೆ, ನೂರ್ಕಾಲ ಬಾಳಲಿದ್ದಾರೆ!
ಈಗಾಗಲೇ MRPL ಮತ್ತು ಅದಾನಿ ಉಷ್ಣ ವಿದ್ಯುತ್ ಸ್ಥಾವರಗಳ ಮೂಲಕ ಕರಾವಳಿಗೆ ಕ್ಯಾನ್ಸರ್, ಅಲರ್ಜಿ, ಉಬ್ಬಸ ಮತ್ತಿತರ ರೋಗಗಳನ್ನು ಹಂಚಿ, ಆರೋಗ್ಯ ಉದ್ದಿಮೆಗೆ ಲಾಭ ಮಾಡಿಕೊಟ್ಟಿರುವ ಧಣಿಗಳು, ಇಲ್ಲಿ ಕುಡಿಯಲು ನೀರಿಲ್ಲದಿದ್ದರೆ ಕಿಲೋಮೀಟರ್ ಗಟ್ಟಲೆ ಪೈಪ್ ಹಾಕಿಯಾದರೂ ತಮ್ಮ ಉದ್ಯಮಿ ಬಂಧುಗಳಿಗೆ ನೀರು ತಂದುಕೊಡುತ್ತಾರೆ, ಮೀನುಗಾರರನ್ನು ಬದಿಗೊತ್ತಿ ಕಲ್ಲಿದ್ದಲು ಇಳಿಸಲು- ಸಿಮೆಂಟು ಸಾಗಿಸಲು ಸರ್ಕಾರಿ ಖರ್ಚಿನಲ್ಲಿ ಜೆಟ್ಟಿ ಕಟ್ಟಿಕೊಡುತ್ತಾರೆ”.
ಯಾರ ಅಭಿವೃದ್ಧಿ?
ಈವತ್ತು ದೇಶದ ಜನರು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನ ರಾಜಕೀಯ ಪಕ್ಷಗಳು ಕೋಟಿ ಉದ್ಯೋಗ ಸೃಷ್ಟಿಯ ಮಾತು ಆಡುತ್ತವೆ. ಆದರೆ ಅಧಿಕಾರಕ್ಕೆ ಬಂದ ಬಳಿಕ ತಮ್ಮ ಮಾತು ಉಳಿಸಿಕೊಳ್ಳುತ್ತಿಲ್ಲ; ಉಳಿಸಿಕೊಳ್ಳುತ್ತಿಲ್ಲ ಎಂದಲ್ಲ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಮುಖ್ಯ ಕಾರಣ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ನಡೆದ ಕೃಷಿ ವ್ಯವಸ್ಥೆಯ ನಾಶ. ಕೃಷಿ ಲಾಭದಾಯಕ ಅಲ್ಲ, ಕೃಷಿ ತೊರೆದು ಸೇವಾ ವಲಯಕ್ಕೆ ಬನ್ನಿ ಎನ್ನುವ ಮೂರ್ಖರಿಗೆ ಕೃಷಿಯ ಮಹತ್ವವೂ ಗೊತ್ತಿಲ್ಲ, ವಾಸ್ತವ ಪರಿಸ್ಥಿತಿಯ ಅರಿವೂ ಇಲ್ಲ.
ಅಭಿವೃದ್ಧಿ ಎಂಬ ಪದ ಕೇಳುವುದಕ್ಕೆ ಹಿತಕರವಾಗಿದೆ. ಆದರೆ ಈ ಅಭಿವೃದ್ಧಿ ಕಾರ್ಯವನ್ನು ‘ಹೇರುವ’ ಮುನ್ನ ಇದು ಯಾವ ಅಭಿವೃದ್ಧಿ ಮತ್ತು ಯಾರ ಅಭಿವೃದ್ಧಿ ಎಂಬ ಅಭಿವೃದ್ಧಿಯ ವ್ಯಾಖ್ಯೆಯನ್ನು ಸ್ಪಷ್ಟಪಡಿಸಿಕೊಳ್ಳಬೇಡವೇ? ಧಾರಣಾ ಸಾಮರ್ಥ್ಯ ಅಧ್ಯಯನ ಮಾಡದೆ, ಸಂತ್ರಸ್ತರ ಮಾತು ಆಲಿಸದೆ, ಜನಬಾಹುಳ್ಯ ಇರುವ, ಫಲವತ್ತಾದ ಜಮೀನು ಇರುವ, ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ, ಮಾರಕ ಮಾಲಿನ್ಯ ಉಂಟು ಮಾಡುವ ಕೈಗಾರಿಕೆಗಳನ್ನು ಸ್ಥಾಪಿಸುವುದು, ನೂರಾರು ಎಕರೆ ಬೇಕಾದಲ್ಲಿಗೆ ಸಾವಿರಾರು ಎಕರೆ ಭೂಸ್ವಾದೀನ ಮಾಡುವುದು, ಇದಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಜನರ ನೆಲೆ ತಪ್ಪಿಸುವುದು, ತಲೆಮಾರು ತಲೆಮಾರುಗಳ ಬದುಕನ್ನು ಅಸಹನೀಯಗೊಳಿಸುವುದು ಸುಖದ ಕನಸು ತೋರುತ್ತಾ ನೆಮ್ಮದಿಯನ್ನು ಇಲ್ಲದಂತೆ ಮಾಡುವುದು ಇವನ್ನೆಲ್ಲ ಅಭಿವೃದ್ಧಿ ಎಂದು ಹೇಗೆ ಹೇಳೋಣ?
ಶ್ರೀನಿವಾಸ ಕಾರ್ಕಳ
ಚಿಂತಕರು, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.