Home ಅಂಕಣ ಜೆನ್ನಿ ವಾನ್ ವೆಸ್ಟ್‌ಫ್ಯಾಲೆನ್, ಅವಳು ಕ್ರಾಂತಿಯನ್ನೇ ಪ್ರೀತಿಸಿದಳು!

ಜೆನ್ನಿ ವಾನ್ ವೆಸ್ಟ್‌ಫ್ಯಾಲೆನ್, ಅವಳು ಕ್ರಾಂತಿಯನ್ನೇ ಪ್ರೀತಿಸಿದಳು!

0

ಇಂದು ಜೆನ್ನಿ ವಾನ್ ವೆಸ್ಟ್‌ಫ್ಯಾಲೆನ್ ಅವರ ಪುಣ್ಯತಿಥಿ. ಅಂದು ಮತ್ತು ಇಂದು ಕೂಡ ಬಂಡವಾಳಶಾಹಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಹೆಸರುಗಳಲ್ಲಿ ಜೆನ್ನಿ ಮಾರ್ಕ್ಸ್ ಅವರ ಹೆಸರು ಪ್ರಮುಖವಾದುದು. ಜೆನ್ನಿ ಮಾರ್ಕ್ಸ್ ಅವರನ್ನು ಪ್ರೀತಿಸಿದರು.

ಅವರು ಮಾರ್ಕ್ಸ್ ಅವರ ಜೀವನ ಸಂಗಾತಿಯಾದರು. ರಾಜಕೀಯದಲ್ಲೂ ಸಹಚರ್ಯ ನೀಡಿದರು. ಅವರ ಪ್ರೀತಿಯು ಮಹಾಕವಿ ಶ್ರೀಶ್ರೀ ಹೇಳಿದಂತೆ ಮಹಾರಾಜರ ಪ್ರೇಮಗಾಥೆಯಲ್ಲ ಅಥವಾ ಪುರಾಣ ಕಥೆಯೂ ಅಲ್ಲ. ತಾಜ್‌ಮಹಲ್ ಕಟ್ಟಿಸಿದ ಷಹಜಹಾನ್ ಮತ್ತು ಮುಮ್ತಾಜರ ಪ್ರೀತಿಯಂತೂ ಮೊದಲೇ ಅಲ್ಲ. “ತಾಜ್‌ಮಹಲ್ ನಿರ್ಮಾಣದಲ್ಲಿ ಕಲ್ಲು ಹೊತ್ತ ಕೂಲಿಗಳು ಯಾರು?” ಎಂದು ಶ್ರೀಶ್ರೀ ಪ್ರಶ್ನಿಸುತ್ತಾರೆ. ಆ ಕೂಲಿಗಳನ್ನು ಶ್ರಮದ ಶೋಷಣೆಯಿಂದ ಮುಕ್ತಗೊಳಿಸಲು ಸಮರ್ಪಿತವಾದ ಪ್ರೀತಿ ಜೆನ್ನಿ ಮತ್ತು ಮಾರ್ಕ್ಸ್ ಅವರದ್ದು.

ಈ ಭೂಮಿಯ ಮೇಲೆ ಕೆಲವು ಜನರು ತಮ್ಮ ಸುಖ-ವಿಲಾಸಗಳಿಗಾಗಿ ಬದುಕುತ್ತಾರೆ. ಇನ್ನು ಕೆಲವರು ಜನರಿಗಾಗಿ ಬದುಕುತ್ತಾರೆ. ಮಾನವಕುಲಕ್ಕೆ ಅಪಾರ ಒಳಿತು ಮಾಡಿದ ಅನೇಕ ತತ್ವಜ್ಞಾನಿಗಳು, ವಿಜ್ಞಾನಿಗಳು ಮತ್ತು ರಾಜಕೀಯ ವ್ಯಕ್ತಿಗಳಿದ್ದಾರೆ. ಅಂತಹ ತತ್ವಜ್ಞಾನಿಗಳಲ್ಲಿ ಶ್ರೇಷ್ಠ ತತ್ವಜ್ಞಾನಿ ಕಾರ್ಲ್ ಮಾರ್ಕ್ಸ್. ಮಾರ್ಕ್ಸ್ ಅವರ ಸಿದ್ಧಾಂತವು ಶ್ರಮಿಕರನ್ನು ಅಧಿಕಾರದ ಪೀಠದ ಮೇಲೆ ಕುಳ್ಳಿರಿಸಿತು. ಅಂತಹ ಮಾರ್ಕ್ಸ್ ಅವರನ್ನು ಜೆನ್ನಿ ವರಿಸಿದರು. ಜೆನ್ನಿ ಇಲ್ಲದೆ ಮಾರ್ಕ್ಸ್ ಇಲ್ಲ, ಮಾರ್ಕ್ಸ್ ಇಲ್ಲದೆ ಮಾರ್ಕ್ಸ್‌ವಾದವಿಲ್ಲ. ಮಾರ್ಕ್ಸ್‌ವಾದವಲ್ಲದ್ದು ಕಾರ್ಮಿಕ ವರ್ಗದ ಸಿದ್ಧಾಂತವಲ್ಲ. ಆ ಸಿದ್ಧಾಂತವಿಲ್ಲದೆ ಶ್ರಮದ ಶೋಷಣೆಯಿಂದ ಕಾರ್ಮಿಕ ವರ್ಗಕ್ಕೆ ಮುಕ್ತಿ ಇಲ್ಲ. ಆ ಸಿದ್ಧಾಂತದ ಕರ್ತೃವನ್ನು ಮತ್ತು ಅವರ ಜೊತೆಗಿನ ಕಷ್ಟಗಳನ್ನು ವರಿಸಿದ ಜೆನ್ನಿ ಅವರ ಜೀವನದ ವಿಶೇಷಗಳನ್ನು ನಾವು ತಿಳಿದುಕೊಳ್ಳಬೇಕು.

ಜೆನ್ನಿ ಅವರ ಪೂರ್ಣ ಹೆಸರು ಜೊಹಾನ್ನಾ ಬರ್ತಾ ಜೂಲಿ ಜೆನ್ನಿ ವಾನ್ ವೆಸ್ಟ್‌ಫ್ಯಾಲೆನ್. ಅವರು 1814 ಫೆಬ್ರವರಿ 12ರಂದು ಜರ್ಮನಿಯಲ್ಲಿ ಜನಿಸಿದರು. 1881 ಡಿಸೆಂಬರ್ 2ರಂದು ತಮ್ಮ 67 ನೇ ವಯಸ್ಸಿನಲ್ಲಿ ಲಂಡನ್‌ನಲ್ಲಿ ನಿಧನರಾದರು. ಜೆನ್ನಿ ಅವರ ತಂದೆ-ತಾಯಿ ಶ್ರೀಮಂತರಾಗಿದ್ದರು. ಆಗ ಜರ್ಮನಿಯನ್ನು ಪ್ರುಸ್ಸಿಯಾ ಎಂದು ಕರೆಯಲಾಗುತ್ತಿತ್ತು. ಜೆನ್ನಿ ತಂದೆ ಲುಡ್ವಿಗ್ ವಾನ್ ವೆಸ್ಟ್‌ಫ್ಯಾಲೆನ್ ಒಬ್ಬ ಸರ್ಕಾರಿ ಉನ್ನತ ಅಧಿಕಾರಿ. ಜೆನ್ನಿ ಸಹೋದರ ಎಡ್ಗರ್ ಕಾರ್ಲ್ ಮಾರ್ಕ್ಸ್ ಸ್ನೇಹಿತರಾಗಿದ್ದರು. ಇನ್ನೊಬ್ಬ ಸಹೋದರ ಫರ್ಡಿನಾಂಡ್ ಪ್ರಶ್ಯ ರಾಜನಿಗೆ ಅತ್ಯಂತ ಆಪ್ತ ಸಚಿವನಾಗಿದ್ದನು.

ಜೆನ್ನಿ ಮತ್ತು ಕಾರ್ಲ್ ಮಾರ್ಕ್ಸ್ ಇಬ್ಬರೂ ಬಾಲ್ಯದ ಸ್ನೇಹಿತರು. ಇಬ್ಬರೂ ವಿದ್ಯಾಭ್ಯಾಸದಲ್ಲಿ ನಿಪುಣರು. ಜೆನ್ನಿ ಮಹಾನ್ ಸುಂದರಿಯಾಗಿದ್ದರು. ಮಾರ್ಕ್ಸ್ ಅವರ ತಂದೆ ಅದೇ ಪಟ್ಟಣದ ಪ್ರಮುಖ ವಕೀಲರಾಗಿದ್ದರು. ಅವರು ಮತ್ತು ಜೆನ್ನಿ ಅವರ ತಂದೆ ಲುಡ್ವಿಗ್ ಆಪ್ತ ಮಿತ್ರರು. ಜೆನ್ನಿ ಮಾರ್ಕ್ಸ್ ಅವರಿಗಿಂತ ನಾಲ್ಕೈದು ವರ್ಷ ದೊಡ್ಡವರಾಗಿದ್ದರು. ಆದರೂ ಅವರ ವಿಚಾರಗಳು ಅವರನ್ನು ಹತ್ತಿರ ತಂದವು. ಅದೇ ಅವರ ನಡುವಿನ ಪ್ರೀತಿಗೆ ದಾರಿಯಾಯಿತು. ಅವರ ಪ್ರೀತಿಯು ನಮ್ಮ ಸಿನಿಮಾಗಳಲ್ಲಿರುವಂತೆ ಕೇವಲ ರಸವತ್ತಾದ ಪ್ರೇಮಕಥೆಯಲ್ಲ; ಅದು ಶ್ರಮಿಕ ವರ್ಗದ ವಿಮುಕ್ತಿಗಾಗಿ ಸಮರ್ಪಿತವಾದ ಪ್ರೀತಿ. ಕಾಲಕ್ರಮೇಣ ಅವರು ವಿವಾಹವಾದರು. ಕಾರ್ಲ್ ಮತ್ತು ಜೆನ್ನಿ ದಂಪತಿಗೆ ಏಳು ಜನ ಮಕ್ಕಳು. ನಾಲ್ವರು ಮಕ್ಕಳು ಜನಿಸಿದ ಕೆಲವೇ ದಿನಗಳಲ್ಲಿ ತೀರಿಕೊಂಡರು. ಉಳಿದವರು ಮೂವರು ಪುತ್ರಿಯರು: ಜೆನ್ನಿ, ಲಾರಾ ಮತ್ತು ಎಲಿಯಾನರ್. ಅವರು ತಮ್ಮ ತಂದೆ-ತಾಯಿಯಂತೆ ಕಾರ್ಮಿಕ ಮತ್ತು ರಾಜಕೀಯ ಚಳವಳಿಗಳಲ್ಲಿ ಸೇರಿ ಸಹ-ಕಾರ್ಯಕರ್ತರನ್ನೇ ವಿವಾಹವಾದರು.

ಈಗ ನಾವು ಹೇಳುತ್ತಿರುವ ಕಥೆಯು 1810-1890 ರ ನಡುವಿನ ಕಾಲಘಟ್ಟದ್ದು. ಅಂದಿನ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳು ನಮಗೆ ಅರ್ಥವಾಗದಿದ್ದರೆ ಜೆನ್ನಿ ಮತ್ತು ಮಾರ್ಕ್ಸ್ ಅವರ ಜೀವನವೂ ಅರ್ಥವಾಗುವುದಿಲ್ಲ. 1750 ರಲ್ಲಿ ಫ್ರೆಂಚ್ ಕ್ರಾಂತಿ ಸಂಭವಿಸಿತು. ಲಕ್ಷಾಂತರ ಶ್ರಮಿಕ ಜನರ ಹೋರಾಟದ ಫಲವಾಗಿ ರಾಜಪ್ರಭುತ್ವವು ಕುಸಿಯಿತು. ಸಾಮಾನ್ಯ ಜನರೇ ದಂಗೆ ಎದ್ದು ರಾಜನಿಗೆ ಮರಣದಂಡನೆ ವಿಧಿಸಿದರು. ಆ ದಂಗೆಯು ಇಡೀ ಜಗತ್ತಿನಲ್ಲಿ ಶೋಷಣೆ ಮತ್ತು ದಬ್ಬಾಳಿಕೆಯ ವಿರುದ್ಧ ಹೋರಾಡಬೇಕೆಂಬ ವಿಚಾರಗಳನ್ನು ಜಾಗೃತಗೊಳಿಸಿತು. ಸ್ವಾತಂತ್ರ್ಯ, ಸಮಾನತೆಯ ಘೋಷಣೆಗಳು ಆಗಲೇ ಆರಂಭವಾದವು. ಫ್ರಾನ್ಸ್‌ನ ಪಕ್ಕದಲ್ಲೇ ಇದ್ದ ಪ್ರಶ್ಯ ರಾಜಪ್ರಭುತ್ವದಲ್ಲೇ ಇತ್ತು. ಆದರೂ ರಾಜಪ್ರಭುತ್ವ ಮತ್ತು ಸರ್ವಾಧಿಕಾರದ ವಿರುದ್ಧ ಜನರಲ್ಲಿ ಆಲೋಚನೆಗಳು ಶುರುವಾದವು. ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಬೆಲ್ಜಿಯಂನಂತಹ ದೇಶಗಳಲ್ಲಿ ಸೋಷಿಯಲಿಸ್ಟ್ ವಿಚಾರಗಳು ಪ್ರಚಾರಕ್ಕೆ ಬಂದವು. ಕೈಗಾರಿಕೀಕರಣದೊಂದಿಗೆ ಕಾರ್ಮಿಕ ವರ್ಗ ಅಥವಾ ಕ್ರಾಂತಿಕಾರಿ ವರ್ಗವು ಉದಯಿಸಿತು.

ಮಹಾ ಮೇಧಾವಿ ಮಾರ್ಕ್ಸ್ ಅವರ ಮೇಲೆ ಈ ಹೊಸ ಆಲೋಚನೆಗಳ ಪ್ರಭಾವ ಬೀರಿತು. ವಕೀಲರ ಮಗನಾಗಿದ್ದ ಅವರು ಅಧಿಕಾರ ಅಥವಾ ವಿಲಾಸಿ ಜೀವನವನ್ನು ಬಯಸಲಿಲ್ಲ. ಬದಲಾಗಿ ತಮ್ಮ ಮೇಧಾಶಕ್ತಿಯನ್ನು ಹರಿತಗೊಳಿಸಿದರು, ಅಧ್ಯಯನವನ್ನು ಹೆಚ್ಚಿಸಿದರು. ಕಾರ್ಮಿಕರ ಹೋರಾಟಗಳನ್ನು ಮತ್ತು ಸರ್ವಾಧಿಕಾರಿ ಸರ್ಕಾರಗಳ ವಿರುದ್ಧ ನಡೆಯುವ ಪ್ರತಿರೋಧಗಳನ್ನು ಗಮನಿಸಿದರು. ಕ್ರಮೇಣ ಅವುಗಳೊಂದಿಗೆ ಬೆರೆತು ಕೆಲಸ ಮಾಡಲು ಪ್ರಾರಂಭಿಸಿದರು. ತಮ್ಮ ಬರವಣಿಗೆಯನ್ನೇ ಆಯುಧವನ್ನಾಗಿ ಮಾಡಿಕೊಂಡರು. ಕಾರ್ಮಿಕ ವರ್ಗದ ವಿಮುಕ್ತಿಯನ್ನು ತಮ್ಮ ಜೀವನದ ಗುರಿಯನ್ನಾಗಿಸಿಕೊಂಡರು. ಬಂಡವಾಳಶಾಹಿ ಸರ್ಕಾರಗಳು ಅವರ ಮೇಲೆ ದ್ವೇಷ ಬೆಳೆಸಿಕೊಂಡವು. ಅವರನ್ನು ಎಲ್ಲೂ ನೆಲೆಸಲು ಬಿಡಲಿಲ್ಲ. ಸ್ವಂತ ದೇಶವಾದ ಜರ್ಮನಿಯಿಂದ ಹೊರಹಾಕಿದರು. ಅವರು ಪ್ಯಾರಿಸ್‌ನಲ್ಲಿ ಆಶ್ರಯ ಪಡೆದರು, ಅಲ್ಲಿಯೂ ಇರಲು ಬಿಡಲಿಲ್ಲ. ಬ್ರಸೆಲ್ಸ್ ತಲುಪಿದಾಗ ಅಲ್ಲಿನ ಸರ್ಕಾರವೂ ಹೊರಹಾಕಿತು. ಕೊನೆಗೆ ಲಂಡನ್ ನಗರದ ಕೊಳಗೇರಿಗಳಲ್ಲಿ, ಕಾರ್ಮಿಕರ ವಸತಿಗಳಲ್ಲಿ ವಾಸ ಮಾಡಿದರು.

ಈ ಕಾಲದಲ್ಲಿ ಜೆನ್ನಿ ಮತ್ತು ಮಾರ್ಕ್ಸ್ ಅವರ ಸಂಸಾರ ಸಾಗಿದ ರೀತಿ ಊಹಾತೀತವಾದುದು. ಜೆನ್ನಿ ರಾಜವಂಶದ ಕುಡಿಯಾಗಿದ್ದರು. ಆಕೆ ಬಯಸಿದ್ದರೆ ರಾಜಪುತ್ರನೇ ಪತಿಯಾಗಿ ಸಿಗುತ್ತಿದ್ದನು. ಆದರೆ ಆಕೆಯ ಜೀವನದ ಆಶಯವೇ ಬೇರೆಯಾಗಿತ್ತು. ಆಕೆ ಮಾರ್ಕ್ಸ್ ಅವರನ್ನು ಪ್ರೀತಿಸಿದರು ಮತ್ತು ಮಾರ್ಕ್ಸ್ ಅವರ ವಿಚಾರಗಳನ್ನು ಪ್ರೀತಿಸಿದರು. ಎಂತಹ ಕಷ್ಟಗಳನ್ನಾದರೂ ಸಹಿಸಿದರು. ಬಡತನವು ಅವರ ಮೇಲೆ ಸೇಡು ತೀರಿಸಿಕೊಂಡಂತಿತ್ತು. ಸ್ಥಿರವಾದ ನಿವಾಸವಿಲ್ಲದೆ ದೇಶಭ್ರಷ್ಟರಾಗಬೇಕಾಯಿತು. ವಲಸೆ ಹಕ್ಕಿಗಳಂತೆ ಎಷ್ಟು ದೇಶಗಳನ್ನು ಅಲೆದರೋ? ಹೆತ್ತ ಮಕ್ಕಳಿಗೆ ಹೊಟ್ಟೆತುಂಬಾ ಅನ್ನ ನೀಡಲಾಗದೆ, ಚಿಕಿತ್ಸೆ ಕೊಡಿಸುವ ಶಕ್ತಿ ಇಲ್ಲದೆ ನಾಲ್ವರು ಮಕ್ಕಳನ್ನು ಕಳೆದುಕೊಂಡರು.

“ಪಾಪ, ಆ ಪುಟ್ಟ ಮಗು ಮೂರು ದಿನ ಸಾವು-ಬದುಕಿನ ನಡುವೆ ಹೋರಾಡಿತು. ಅತ್ಯಂತ ದಾರುಣ ಬಡತನದ ನಡುವೆ ಆ ಮಗು ಮರಣ ಹೊಂದಿತು. ಆಗ ನಮ್ಮ ಜರ್ಮನ್ ಮಿತ್ರರೂ ಹತ್ತಿರವಿರಲಿಲ್ಲ, ನಮ್ಮನ್ನು ಆದುರಿಸುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ನಡುಗುವ ಎದೆಯಿಂದ ಪಕ್ಕದ ಉಪನಗರದಲ್ಲಿದ್ದ ಒಬ್ಬ ಫ್ರೆಂಚ್ ವಲಸಿಗನ ಬಳಿಗೆ ಹೋದೆ. ಅವರು ನಮಗೆ ಪರಿಚಯಸ್ಥರಾಗಿದ್ದರು. ಅವರು ಅತ್ಯಂತ ಸ್ನೇಹಭಾವ ಮತ್ತು ಸಹಾನುಭೂತಿಯಿಂದ ಎರಡು ಪೌಂಡ್‌ಗಳನ್ನು ನೀಡಿದರು. ಅದರಿಂದ ಶವಪೆಟ್ಟಿಗೆಯನ್ನು ಖರೀದಿಸಿದೆವು. ಇಗೋ, ಅಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ನನ್ನ ಮಗು! ಮಗು ಹುಟ್ಟಿದಾಗ ಉಯ್ಯಾಲೆ ಕೊಡಲು ಸಾಧ್ಯವಾಗಲಿಲ್ಲ, ಕೊನೆಗೆ ಅದರ ಮಣ್ಣಿನ ಮನೆಗೂ (ಶವಪೆಟ್ಟಿಗೆ) ಬಹಳ ಹೊತ್ತು ಕಾಯಬೇಕಾಯಿತು” ಎಂದು ಮಾರ್ಕ್ಸ್ ತಮ್ಮ ಮಿತ್ರನಿಗೆ ಬರೆದ ಪತ್ರದ ಮಾತುಗಳು ಸಾಮಾನ್ಯ ಕಣ್ಣೀರಿನ ಕಥೆಯಲ್ಲ.

ಲಾಕ್‌ಡೌನ್ ಕಾಲದಲ್ಲಿ ವಲಸೆ ಕಾರ್ಮಿಕರ ಕಷ್ಟಗಳನ್ನು ನಾವು ನೋಡಿದ್ದೇವೆ. ಜೆನ್ನಿ-ಮಾರ್ಕ್ಸ್ ಅವರ ಜೀವನ ಅದಕ್ಕಿಂತ ಸುಲಭವಾದುದೇನೂ ಆಗಿರಲಿಲ್ಲ. ಶತ್ರುಗಳಿಗೂ ಬೇಡವೆನ್ನಿಸುವಂತಹ ಕಷ್ಟಗಳನ್ನು ಅವರು ಅನುಭವಿಸಿದರು. ಮಾರ್ಕ್ಸ್ ಕುಟುಂಬಕ್ಕೆ ಎಂಗೆಲ್ಸ್ ಅವರ ಸ್ನೇಹವು ಬೆಟ್ಟದಂತಹ ಬೆಂಬಲವಾಗಿತ್ತು. ಮಾರ್ಕ್ಸ್ ಅವರ ಮರಣದ ನಂತರವೂ ಎಂಗೆಲ್ಸ್ ಮಾರ್ಕ್ಸ್ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡರು.

“ಗೆಲ್ಲಲು ಇಡೀ ಪ್ರಪಂಚವೇ ಇದೆ” ಎಂದು ಶ್ರಮಿಕ ವರ್ಗಕ್ಕೆ ಕರ್ತವ್ಯ ಬೋಧನೆ ಮಾಡಿದ ಕಮ್ಯುನಿಸ್ಟ್ ಪ್ರಣಾಳಿಕೆಯು 1848 ರಲ್ಲಿ ಪ್ರಕಟವಾಯಿತು. ಅದು ಕಾರ್ಮಿಕ ವರ್ಗಕ್ಕೆ ಒಂದು ದಿಕ್ಸೂಚಿಯಾಯಿತು. ಅಂದಿನಿಂದ ಅನೇಕ ದೇಶಗಳಲ್ಲಿ ಪ್ರತಿರೋಧಗಳು ಮತ್ತು ಹೋರಾಟಗಳು ನಡೆದವು. ರಾಜಪ್ರಭುತ್ವ, ಸರ್ವಾಧಿಕಾರ, ವಲಸೆಶಾಹಿ ಮತ್ತು ಸಾಮ್ರಾಜ್ಯಶಾಹಿ ವಿರುದ್ಧ ದಂಗೆ ಏಳದ ದೇಶವೇ ಇಲ್ಲದಂತಾಯಿತು. ಮಾರ್ಕ್ಸ್ ಹುಟ್ಟಿದ ದೇಶದಲ್ಲೇ ಹಿಟ್ಲರ್ ಹುಟ್ಟಿದನು. ಆದರೆ ಆತ ಸೋವಿಯತ್ ಸೈನ್ಯದ ಕೈಯಲ್ಲಿ ನಾಯಿ ಸಾವು ಸತ್ತಿದ್ದು ನಮಗೆ ತಿಳಿದೇ ಇರುವ ಇತಿಹಾಸ. ತಾತ್ಕಾಲಿಕವಾಗಿ ಕ್ರಾಂತಿಕಾರಿ ಚಳವಳಿಗಳಿಗೆ ಹಿನ್ನಡೆಯಾಗುತ್ತಲೇ ಇರುತ್ತದೆ. ಮಾರ್ಕ್ಸ್ ಕಾಲದಲ್ಲೂ ಹಿನ್ನಡೆಯಾಗಿತ್ತು. ಕ್ರಾಂತಿಕಾರಿ ಶಕ್ತಿಗಳು ಸೋತು ಪ್ರತಿಗಾಮಿ ಶಕ್ತಿಗಳು ವಿಜೃಂಭಿಸಿದಾಗಲೆಲ್ಲಾ ಮಾರ್ಕ್ಸ್ ದೇಶಭ್ರಷ್ಟರಾಗಬೇಕಾಯಿತು. ಆದರೂ ರಾಜಕೀಯ ಅರ್ಥಶಾಸ್ತ್ರದ ‘ದಾಸ್ ಕ್ಯಾಪಿಟಲ್’ ಗ್ರಂಥ ರಚನೆ ಮತ್ತು ಕಾರ್ಮಿಕ ವರ್ಗದ ಹೋರಾಟವನ್ನು ಉತ್ತುಂಗಕ್ಕೆ ಕೊಂಡೊಯ್ಯುವುದು ಅವರ ಜೀವನದ ಉದ್ದೇಶವಾಗಿತ್ತು.

ಜೆನ್ನಿ ಕೇವಲ ಸಾಮಾನ್ಯ ಗೃಹಿಣಿಯಾಗಿರಲಿಲ್ಲ. ಆಕೆ ಮಾರ್ಕ್ಸ್ ಅವರನ್ನು ಮಾತ್ರವಲ್ಲದೆ ಕ್ರಾಂತಿಯನ್ನೇ ಪ್ರೀತಿಸಿದರು. ಆಕೆ ಕೇವಲ ತನ್ನ ಮಕ್ಕಳನ್ನಷ್ಟೇ ಅಲ್ಲದೆ, ರಾಜಕೀಯ ಕಾರ್ಯಕರ್ತರನ್ನೂ ಪೋಷಿಸಿದರು. ಕಮ್ಯುನಿಸ್ಟರ ಮೇಲೆ ಅಪಪ್ರಚಾರ ಅಂದೂ ಇತ್ತು, ಇಂದೂ ಇದೆ, ಮತ್ತು ಕಮ್ಯುನಿಸಂ ಬರುವವರೆಗೂ ಇರುತ್ತದೆ. “ಅಯ್ಯೋ, ಇಷ್ಟಕ್ಕೇ ಸುಸ್ತಾದರೆ ಹೇಗೆ?” ಎಂದು ಸಣ್ಣಪುಟ್ಟ ಕೆಲಸಗಳಿಗೇ ಬೇಸರಗೊಂಡರೆ, ಪ್ರಖ್ಯಾತ ಲೇಖಕ ತೆನ್ನೆಟಿ ಸೂರಿ ಒಂದು ಹಾಡಿನಲ್ಲಿ ಕೇಳುವಂತೆ “ಅಸಲಿಗೆ ನೀನು ಇದನ್ನು ಏಕೆ ಶುರು ಮಾಡಿದೆ?” ಎಂದು ಪ್ರಶ್ನೆ ಮಾಡಿಕೊಳ್ಳಬೇಕು. ಆದರೆ ಒಮ್ಮೆ ಶುರು ಮಾಡಿದ ಮೇಲೆ ಮಾಡುವಂತದ್ದೇನಿದೆ? ಶೋಷಣೆ ಮತ್ತು ದೌರ್ಜನ್ಯಗಳನ್ನು ಸಹಿಸೋಣವೇ? ಇಂದು ದೇಶದ ರಾಜಧಾನಿಯಲ್ಲಿ ಲಕ್ಷಾಂತರ ರೈತರು ಹೋರಾಡುತ್ತಿದ್ದಾರೆ. ಶೋಷಣೆ ಎಲ್ಲಿದೆಯೋ ಅಲ್ಲಿ ಹೋರಾಟ ಇದ್ದೇ ಇರುತ್ತದೆ. ನಾವು ಒಂದು ಹೆಜ್ಜೆ ಮುಂದೆ ಇಡೋಣ. ಶೋಷಣೆಯನ್ನು ಅಂತ್ಯಗೊಳಿಸೋಣ. ಜೆನ್ನಿ-ಮಾರ್ಕ್ಸ್-ಎಂಗೆಲ್ಸ್ ಅವರ ತ್ಯಾಗಗಳನ್ನು ಮರೆಯದೆ ಅವರ ಕನಸುಗಳನ್ನು ನನಸು ಮಾಡೋಣ.

ತೆಲುಗು ಮೂಲ: ಎಸ್‌. ಪುಣ್ಯವತಿ

You cannot copy content of this page

Exit mobile version