ಮಾಧ್ಯಮಗಳು ಪುಣೆ ಪ್ರಕರಣದಲ್ಲಿ ನಡೆದುಕೊಂಡಂತೆ ಮಣಿಪುರ ವಿಷಯದಲ್ಲೂ ನಡೆದುಕೊಂಡಿದ್ದರೆ ಇನ್ನಷ್ಟು ಸಂಗತಿಗಳು ಹೊರಬರುತ್ತಿದ್ದವು ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕೆಎಂ ಜೋಸೆಫ್ ಹೇಳಿದ್ದಾರೆ.
ಅವರು ಸ್ಟೂಡೆಂಟ್ ಯೂನಿಯನ್ 2023-24, GLCE ಲಾ ಜರ್ನಲ್ ಮತ್ತು ಎರ್ನಾಕುಲಂನ ಸರ್ಕಾರಿ ಕಾನೂನು ಕಾಲೇಜಿನ ಭಗತ್ ಸಿಂಗ್ ಸ್ಟಡಿ ಸರ್ಕಲ್ ಆಯೋಜಿಸಿದ್ದ “ಬದಲಾಗುತ್ತಿರುವ ಭಾರತದಲ್ಲಿ ಸಂವಿಧಾನ” ಕುರಿತ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು “ದೇಶದಲ್ಲಿ ಸಂವಿಧಾನ ರಚನೆಯಾಗುವ ಹೊತ್ತಿನಲ್ಲಿ ವಿಭಜನೆಯ ಕರಾಳ ಅಧ್ಯಾಯ ನಡೆಯುತ್ತಿತ್ತು. ಆದರೆ ಅತ್ಯಂತ ಗಣ್ಯ ವ್ಯಕ್ತಿಗಳ ಅತ್ಯಂತ ಫಲಪ್ರದವಾದ ಚರ್ಚೆಯ ಕೊನೆಯಲ್ಲಿ, ನಾವು ಸಂವಿಧಾನವನ್ನು ಪಡೆದೆವು” ಎಂದು ಅವರು ತಿಳಿಸಿದರು.
75 ವರ್ಷಗಳ ಅವಧಿಯಲ್ಲಿ ನಾವು ಸಂವಿಧಾನಕ್ಕೆ 108 ತಿದ್ದುಪಡಿಗಳನ್ನು ಮಾಡಿದ್ದೇವೆ, ಅದು ಇನ್ನಷ್ಟು ನಿಬಂಧನೆಗಳನ್ನು ಸಂವಿಧಾನಕ್ಕೆ ಸೇರಿಸಲು ಕಾರಣವಾಗಿದೆ. ಮನುಷ್ಯರಾದ ನಾವೆಲ್ಲರೂ ಅಪರಿಪೂರ್ಣರೇ, ಹೀಗಾಗಿ ನಾವು ಸ್ಥಾಪಿಸುವ ಸಂಸ್ಥೆಗಳು ಸಹ ಅಪೂರ್ಣವಾಗಿರುತ್ತವೆ. ಈ ತಿದ್ದುಪಡಿಗಳನ್ನು ತಂದಿದ್ದಯ ಸಂವಿಧಾನ ಸಭೆಯ ಸದಸ್ಯರು ನೀಡಿದ ಕೊಡುಗೆಯ ಬೆಲೆಯನ್ನು ಕಡಿಮೆ ಮಾಡಲು ಅಲ್ಲ ಎನ್ನುವುದನ್ನು ನಾವು ನೆನಪಿಡಬೇಕು.
ಹಾಗೆಯೇ ಅತಿಯಾದ ಬದಲಾವಣೆಯೂ ಒಳ್ಳೆಯದಲ್ಲ ಎನ್ನಲಾಗುತ್ತದೆ. ಒಂದು ಕಾನೂನಿನ ಬಾಳಿಕೆಯೇ ಅದರ ಉತ್ತಮ ಗುಣವಾಗಿರುತ್ತದೆ ಎಂದು ಅವರು ಹೇಳಿದರು.
ಸಂವಿಧಾನದ ಮುಖ್ಯ ಗುರಿಗಳನ್ನು ಅದರ ಕರ್ತರು ಸಂವಿಧಾನದ ಪೀಠಿಕೆಯಲ್ಲೇ ಸುಂದರವಾಗಿ ವಿವರಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು, “ನಾನೀಗ ಮೂಲಭೂತ ಕರ್ತವ್ಯಗಳ ಬಗ್ಗೆ ಮಾತನಾಡುತ್ತೇನೆ. ಸಾಂವಿಧಾನಿಕತೆಯನ್ನು ಅನುಸರಿಸದ ಕಾರಣ ಅನೇಕ ದೇಶಗಳು ಸಂವಿಧಾನವನ್ನು ಕಳೆದುಕೊಂಡವು. ಸಂವಿಧಾನಕ್ಕೆ ಬದ್ಧವಾಗಿರುವುದು ಮೂಲಭೂತ ಕರ್ತವ್ಯ. ದೇಶದ ಪ್ರತಿಯೊಬ್ಬ ನಾಗರಿಕನೂ ಆ ನೆಲದ ಕಾನೂನುಗಳಿಗೆ ಬದ್ಧವಾಗಿರಬೇಕು.”
ಇತ್ತೀಚೆಗೆ 17 ವರ್ಷದ ಯುವಕನೊಬ್ಬ ಕುಡಿದು ವಾಹನ ಚಲಾಯಿಸಿ ಜನರನ್ನು ಕೊಂದ ಘಟನೆ ನಡೆದಿದೆ. ಕನಿಷ್ಠ 3 ಕಾನೂನುಗಳನ್ನು ಉಲ್ಲಂಘಿಸಲಾಗಿದೆ. ನಾನು ಇಲ್ಲಿಗೆ ಬರುವಾಗಲೂ ದಾರಿಯುದ್ದಕ್ಕೂ ರಸ್ತೆಗಳಲ್ಲಿ ಅನೇಕ ಜನರು ನಿರ್ದಾಕ್ಷಿಣ್ಯವಾಗಿ ಕಾನೂನು ಉಲ್ಲಂಘಿಸುವುದನ್ನು ನೋಡಿದೆ.
ಕಾನೂನು ಉಲ್ಲಂಘಿಸುವ ಮೂಲಕ ನಾವು ಸಂವಿಧಾನಕ್ಕೆ ಯಾವ ರೀತಿಯ ಗೌರವವನ್ನು ಸಲ್ಲಿಸುತ್ತಿದ್ದೇವೆ? ಇದೇ ರೀತಿ ನಡೆದುಕೊಂಡರೆ ಸಂವಿಧಾನಕ್ಕೆ ಬೆಲೆ ಎಲ್ಲಿರುತ್ತದೆ?
ಆದ್ದರಿಂದ ಮೂಲಭೂತ ಹಕ್ಕುಗಳು ಮತ್ತು ನಿರ್ದೇಶಕ ತತ್ವಗಳ ಜೊತೆಗೆ, ನಾಗರಿಕರು ಕಾನೂನು ಬದ್ಧರಾಗಿರುವುದನ್ನು ಕಲಿಯುವುದು ತುಂಬಾ ಮುಖ್ಯ ಎಂದು ನಾನು ಈ ಸಮಯದಲ್ಲಿ ಒತ್ತಿ ಹೇಳುತ್ತೇನೆ” ಎಂದು ಅವರು ಹೇಳಿದರು.
ಮುಂದುವರೆದು ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಕುರಿತು ಮಾತನಾಡಿದ ಅವರು “ಜನರನ್ನು ಎಚ್ಚರಿಸಬೇಕಿದ್ದ, ಕೆಲವು ವಿಷಯಗಳು ಏಕೆ ಬಹಳ ಮುಖ್ಯ ಎಂದು ಜನರಿಗೆ ತಿಳಿಸಿ ಹೇಳಬೇಕಿದ್ದ ಮಾಧ್ಯಮಗಳು ಇಂದು ದೊಡ್ಡ ಪ್ರಮಾಣದಲ್ಲಿ ಸರ್ಕಾರಕ್ಕೆ ಶರಣಾಗಿವೆ. ಇದು ಬಹಳ ದುರಾದೃಷ್ಟಕರ. ಮಾಧ್ಯಮಗಳ ಇಂತಹ ನಡೆ ಚುನಾವಣೆಯ ಮೇಲೂ ಪರಿಣಾಮ ಬೀರುತ್ತದೆ. ಜನರಿಗೆ ಸರಿಯಾದ ಮಾಹಿತಿಯನ್ನು ಮಾಧ್ಯಮಗಳು ನೀಡದೆ ಹೋದರೆ ಇನ್ಯಾರು ನೀಡಲು ಸಾಧ್ಯ? ಮಾಧ್ಯಮಗಳು ಪ್ರೊಪಗಾಂಡ ಹರಡು ಸಾಧನವಾಗಬಾರದು. ಮಾಧ್ಯಮಗಳು ಸರಿಯಾಗಿ ಕಾರ್ಯನಿರ್ವಹಿಸಿದರೆ ಏನಾಗುತ್ತದೆ ಎನ್ನುವುದನ್ನು ನಾವು ಪುಣೆ ಪ್ರಕರಣದಲ್ಲಿ ನೋಡಿದ್ದೇವೆ. ಅದೇ ರೀತಿಯಲ್ಲಿ ಮಣಿಪುರದ ವಿಷಯದಲ್ಲೂ ಮಾಧ್ಯಮಗಳು ನಿರಂತರವಾಗಿ ವರದಿ ಮಾಡಿದ್ದರೆ ಅಲ್ಲಿನ ಪರಿಸ್ಥಿತಿ ಬೇರೆಯದೇ ಇರುತ್ತಿತ್ತು” ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಆಧಾರ: Live law
ಭಾಷಣದ ಪೂರ್ಣಪಾಠವನ್ನು ಇಲ್ಲಿ ಓದಬಹುದು