ಹೊಸದೆಹಲಿ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ಚುನಾವಣಾ ಭಾಷಣದಲ್ಲಿ 421 ಬಾರಿ ‘ಮಂದಿರ’ ಹಾಗೂ 758 ಬಾರಿ ‘ಮೋದಿ’ ಎಂದು ಉಲ್ಲೇಖಿಸಿದ್ದಾರೆ ಎಂದು ಟೀಕಿಸಿದರು.
ಪಾಕಿಸ್ತಾನ ಮತ್ತು ಅಲ್ಪಸಂಖ್ಯಾತರನ್ನು 224 ಬಾರಿ ಉಲ್ಲೇಖಿಸಲಾಗಿದೆ ಎಂದು ಅವರು ನೆನಪಿಸಿದರು. ಆದರೆ ಮೋದಿ ಒಮ್ಮೆಯೂ ಹಣದುಬ್ಬರ ಮತ್ತು ನಿರುದ್ಯೋಗದ ಬಗ್ಗೆ ಪ್ರಸ್ತಾಪಿಸಲಿಲ್ಲ ಎಂದು ಅವರು ಹೇಳಿದರು.
ಲೋಕಸಭೆ ಚುನಾವಣೆಯ ಕೊನೆಯ ಹಂತದ ಪ್ರಚಾರ ಗುರುವಾರ ಸಂಜೆ ಅಂತ್ಯಗೊಂಡಿದೆ. ಇದಕ್ಕೂ ಮುನ್ನ ಮಲ್ಲಿಕಾರ್ಜುನ ಖರ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದರು. ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ಪ್ರಚಾರವನ್ನು ಗಮನಿಸಿದರೆ ಕಳೆದ 15 ದಿನಗಳಲ್ಲಿ 232 ಬಾರಿ ಕಾಂಗ್ರೆಸ್ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅವರು 758 ಬಾರಿ ಮೋದಿ ಹೆಸರನ್ನು ಪ್ರಸ್ತಾಪಿಸಿದರೆ, 573 ಬಾರಿ ಇಂಡಿಯಾ ಒಕ್ಕೂಟ ಮತ್ತು ವಿರೋಧ ಪಕ್ಷಗಳ ಬಗ್ಗೆ ಮಾತನಾಡಿದರು. ಆದರೆ ಬೆಲೆ ಏರಿಕೆ ಮತ್ತು ನಿರುದ್ಯೋಗದ ಬಗ್ಗೆ ಒಮ್ಮೆಯೂ ಮಾತನಾಡಲಿಲ್ಲ. ಪ್ರಮುಖ ವಿಚಾರಗಳನ್ನು ಬದಿಗಿಟ್ಟು ಪ್ರಚಾರದಲ್ಲಿ ತಮ್ಮ ಬಗ್ಗೆ ಮಾತ್ರ ಮಾತನಾಡಿರುವುದು ಇದರಿಂದ ತಿಳಿಯುತ್ತದೆ ಎಂದರು.
ಇದೇ ವೇಳೆ ಮಾತನಾಡಿದ ಖರ್ಗೆ, ಗಾಂಧಿಯವರು ಅಹಿಂಸೆಯ ರಾಜಕಾರಣ ಮಾಡಿದ್ದು ದ್ವೇಷದ ರಾಜಕಾರಣವನ್ನಲ್ಲ. ಆದರೆ ಮೋದಿಯವರ ರಾಜಕಾರಣ ದ್ವೇಷದಿಂದ ಕೂಡಿದೆ ಎಂದು ಟೀಕಿಸಿದರು. ಜಾತಿ, ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡದಂತೆ ನಿಷೇಧ ಹೇರಿದ್ದ ಚುನಾವಣಾ ಆಯೋಗ ಮೋದಿಯವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಜನರಲ್ಲಿ ಒಡಕು ಮೂಡಿಸಲು ಮಾತನಾಡಿರುವ ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.
ಜೂನ್ 4ರ ಫಲಿತಾಂಶದಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಆ ನಂತರ ಬಿಜೆಪಿ ನಾಯಕರು ಗಾಂಧಿಯವರ ಪುಸ್ತಕಗಳನ್ನು ಓದಿ ಮಹಾತ್ಮರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಲಿ ಎಂದರು.