ಬೆಂಗಳೂರು: ನಕಲಿ ಮತದಾರರನ್ನು ತೆಗೆದರೆ ಮಾತ್ರ ನ್ಯಾಯ ಸಮ್ಮತ ಸಿಗುವುದು, ಎಲ್ಲಿಂದಲೋ ಬಂದವರನ್ನು ಎಲ್ಲೋ ಸೇರಿಸಿ ಗೆಲ್ಲುವ ಇಷ್ಟು ದಿನದ ತಂತ್ರ ಬಂದ್ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ಅರಿವು ಕಾರ್ಯಕ್ರಮ ಎಂಬ ಹೆಸರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಎಂದು ಚಿಲುಮೆ ಸಂಸ್ಥೆ ಮೂಲಕ ಮತದಾರರ ಮಾಹಿತಿಯನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿ, ಹಲವು ಕಾಂಗ್ರೆಸ್ ಮುಖಂಡರು ಸೇರಿ ನಡೆದಿರುವ ಅಕ್ರಮದ ವಿರುದ್ದ ಕೇಂದ್ರ ಚುನಾವಣೆ ಆಯೋಗದ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿಯವರು ಮಾಧ್ಯದವರ ಜೊತೆ ಮಾತನಾಡಿದ್ದಾರೆ.
ಈ ಕುರಿತು ಮಾತನಾಡಿದ ಬೊಮ್ಮಯಿಯವರು, ʼ2013ರಿಂದಲೂ ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಇತರ ಜವಾಬ್ದಾರಿಗಳನ್ನು ವಹಿಸಿದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದೇನೆ. ನಿರಾಧಾರ ಆರೋಪ ಮಾಡುತ್ತಿರುವ ಕಾಂಗ್ರೆಸ್ನ ಈ ಪ್ರಯತ್ನ, ಮುಂದಿನ ದಿನಗಳಲ್ಲಿ ಅವರಿಗೆ ತಿರುಗುಬಾಣವಾಗಲಿದೆʼ ಎಂದು ಹೇಳಿದ್ದಾರೆ.
ʼಈ ಚಿಲುಮೆ ಸಂಸ್ಥೆ ಬಗ್ಗೆ ಯಾರು, ಏನು ಆದೇಶ ಕೊಟ್ಡಿದ್ದಾರೆ ಎನ್ನುವುದು ಬಹಳ ಸ್ಪಷ್ಟವಾಗಿ ಸತ್ಯಾಸತ್ಯತೆ ಹೊರಗೆ ಬರಲಿ. ಜಾಗೃತಿ ಮೂಡಿಸಬೇಕೆಂದು ನಾವು ಆದೇಶ ಕೊಟ್ಟಿದ್ದೀವಿ ಮತ್ತು ಯಾವುದೇ ರಾಜಕೀಯ ಪಕ್ಷದ ಜೊತೆ ಸಂಬಂಧ ಇರಬಾರದು ಅಂತ ಹೇಳಿದ್ದೆವು. ಆದರೆ ಅವರು ಹೇಳಿರುವ ಆದೇಶದ ಪ್ರಕಾರ ಎಲೆಕ್ಷನ್ ಕಮೀಷನ್ ಜವಬ್ದಾರಿಯನ್ನು ಪ್ರೈವೇಟ್ಗೆ ಕೊಟ್ಟಿರುತ್ತಾರೆ. ಅದನ್ನೇ ತನಿಖೆ ಮಾಡಿ ಅಂತ ಹೇಳುವುದು ಅಕ್ಷಮ್ಯ ಅಪರಾಧವಾಗಿದೆʼ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ʼವೋಟರ್ ಡಿವಿಷನ್ ಅಲ್ಲಿ ಸೇರಿಸುವುದು ತೆಗೆಯುವುದು ಎಲ್ಲವೂ ಎಲೆಕ್ಷನ್ ಕಮೀಷನ್ ಮಾಡುತ್ತದೆ. ಆ ಕೆಲಸ ನಾವು ಮಾಡುವುದು ಅಲ್ಲವೇ ಅಲ್ಲ. ಸುಮ್ಮನೆ ರಾಜಕೀಯ ಪ್ರಯುಕ್ತವಾದ ಆರೋಪವನ್ನು ಮಾಡುತ್ತಿದ್ದಾರೆʼ ಎಂದು ತಿಳಿಸಿದರು.
ʼನಕಲಿ ಮತದಾರರನ್ನು ತೆಗೆದರೆ ಮಾತ್ರ ನ್ಯಾಯ ಸಮ್ಮತ ಸಿಗುವುದು, ಎಲ್ಲಿಂದಲೋ ಬಂದವರನ್ನು ಎಲ್ಲೋ ಸೇರಿಸಿ ಗೆಲ್ಲುವ ಇಷ್ಟು ದಿನದ ತಂತ್ರ ಬಂದ್ ಆಗುತ್ತದೆʼ ಎಂದು ಮಾತನಾಡಿದ್ದಾರೆ.