Home ರಾಜಕೀಯ ಕಲ್ಯಾಣ ಕರ್ನಾಟಕಕ್ಕೆ ಎಲ್ಲಾ ಬಗೆಯಲ್ಲೂ ಅನ್ಯಾಯ: ಬಿಜೆಪಿಗೆ ಕಾಂಗ್ರೆಸ್‌ ವಾಗ್ದಾಳಿ

ಕಲ್ಯಾಣ ಕರ್ನಾಟಕಕ್ಕೆ ಎಲ್ಲಾ ಬಗೆಯಲ್ಲೂ ಅನ್ಯಾಯ: ಬಿಜೆಪಿಗೆ ಕಾಂಗ್ರೆಸ್‌ ವಾಗ್ದಾಳಿ

0

ಬೆಂಗಳೂರು: ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ಮತ್ತು ನವ ಕರ್ನಾಟಕದಿಂದ ನವಭಾರತ ನಿರ್ಮಾಣ ರಾಜ್ಯ ಸರ್ಕಾರದ ಸಂಕಲ್ಪವಾಗಿದೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾತಿಗೆ ರಾಜ್ಯ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಬಸವರಾಜ ಬೊಮ್ಮಾಯಿ ಅವರೇ, ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಆಚರಿಸಲು ತೆರಳಿದ್ದೀರಿ ಸಂತೋಷ. ಆದರೆ ಆ ಭಾಗಕ್ಕೆ ಹಿಂದುಳಿದ ಪ್ರದೇಶವೆಂಬ ಪಟ್ಟದಿಂದ ವಿಮೋಚನೆ ನೀಡುವ ಕೆಲಸಗಳನ್ನು ಮಾಡದಿರುವುದೇಕೆ? ಅನುದಾನದಲ್ಲಿ, ಉದ್ಯೋಗದಲ್ಲಿ ನಿರಂತರ ಅನ್ಯಾಯ ಎಸಗುತ್ತಿರುವುದು ಏಕೆ? ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಮಾತನಾಡಿದ್ದ ಬಿಜೆಪಿ ಸರ್ಕಾರ ಈಗ ಆ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಆರ್ಟಿಕಲ್ 371ಜೆ ಕೋಶವನ್ನು ಕಲಬುರ್ಗಿಗೆ ಸ್ಥಳಾಂತರವನ್ನೂ ಮಾಡಲಿಲ್ಲ, ಇಷ್ಟು ದಿನ ನಿರ್ಲಕ್ಷಿಸಿ ಈಗ ಅಲ್ಲಿ ನಿಂತು ನಿಮ್ಮ ಯಾವ ಸಾಧನೆ ಹೇಳಿಕೊಳ್ಳುತ್ತೀರಿ? ಎಂದು ಬೊಮ್ಮಾಯಿ ವಿರುದ್ಧ  ಕಾಂಗ್ರೆಸ್‌ ಕಿಡಿಕಾರಿದೆ.

ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ಎಲ್ಲಾ ಬಗೆಯಲ್ಲೂ ಅನ್ಯಾಯ ಮಾಡಿದೆ ಎಂದು ಆ ಭಾಗದ ಸ್ವತಃ ಬಿಜೆಪಿ ಶಾಸಕರೇ ಆಕ್ರೋಶ ವ್ಯಕ್ತ ಪಡಿಸಿದ್ದರು. ಜನರ ಮಾತಲ್ಲ, ಕನಿಷ್ಠ ಅವರದೇ ಪಕ್ಷದ ಶಾಸಕರ ಮಾತನ್ನೂ ಕಲ್ಯಾಣ ಕರ್ನಾಟಕ ವಿರೋಧಿ ಬಿಜೆಪಿ ಸರ್ಕಾರ ಗಣನೆಗೆ ತೆಗೆದುಕೊಳ್ಳುತ್ತಿಲ್ಲ, ಆದರೂ ಯಾವ ಮುಖ ಇಟ್ಟುಕೊಂಡು ಕಾಲಿಟ್ಟಿದ್ದೀರಿ ಮುಖ್ಯಮಂತ್ರಿಗಳೇ?  ಎಂದು ಕಾಂಗ್ರೆಸ್‌ ವ್ಯಂಗಿಸಿದೆ.

You cannot copy content of this page

Exit mobile version