ಗುಡಿಬಂಡೆ: ಗುಡಿಬಂಡಿ ತಾಲೂಕಿನ ಕಂಬಾರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೂಲ ಸೌಕರ್ಯಗಳಿಲ್ಲದೆ ದುಸ್ಥಿಯಿಂದ ಕೂಡಿದ್ದು ಶಾಲೆಯು ಮುಚ್ಚುವ ಪರಿಸ್ಥಿತಿಗೆ ತಲುಪಿದೆ.
ಆಂಧ್ರಗಡಿ ಪ್ರದೇಶದಲ್ಲಿರುವ ಈ ಶಾಲೆಯು ಮೂಲ ಸೌಕರ್ಯಗಳಿಲ್ಲದಿರುವ ಕಾರಣ ವರ್ಷದಿಂದ ವರ್ಷಕ್ಕೆ ಹಾಜರಾತಿ ಕುಸಿಯುತ್ತಿದ್ದು, ಶಾಲಾ ಆವರಣದಲ್ಲಿ ಅಂಗನವಾಡಿ ಮಕ್ಕಳು ಸೇರಿದಂತೆ 1 ರಿಂದ 7 ನೇ ತರಗತಿಯವರೆಗೆ ಒಟ್ಟು 28 ಜನ ಮಕ್ಕಳಿದ್ದಾರೆ.
ಶಾಲೆಯ ಹಾಜರಾತಿಯಲ್ಲಿರುವಂತೆ ಶಾಲೆಯಲ್ಲಿ 1 ನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ, ಎರಡನೇ ತರಗತಿಯಲ್ಲಿ 7 ವಿದ್ಯಾರ್ಥಿಗಳು, 3 ನೇ ತರಗತಿಯಲ್ಲಿ ಮತ್ತು 5 ನೇ ತರಗತಿಯಲ್ಲಿ ತಲಾ ಒಬೊಬ್ಬ ವಿದ್ಯಾರ್ಥಿಗಳು ಇದ್ದಾರೆ. ಹಾಗೆಯೇ 4 ನೇ ತರಗತಿಯಲ್ಲಿ ಇಬ್ಬರು 6ನೇ ಮತ್ತು 7 ನೇ ತರಗತಿಯಲ್ಲಿ ತಲಾ ಮೂವರು ವಿದ್ಯಾರ್ಥಿಗಳಿದ್ದು, ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ.
ಆಂಧ್ರ ಪ್ರದೇಶದ ಗಡಿಯಲ್ಲಿರುವ ಹಲವಾರು ವಿರ್ದಾರ್ಥಿಗಳು ಈ ಶಾಲೆಯನ್ನೇ ಅವಲಂಭಿಸಿದ್ದಾರೆ. ಆದರೆ ಶಾಲೆಯಲ್ಲಿ ಮಕ್ಕಳಿಗೆ ಕೂರಲು ಸರಿಯಾದ ಬೆಂಚ್ ವ್ಯವಸ್ಥೆ ಇಲ್ಲಾ, ಈಗಾಗಿ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳುತ್ತಿದ್ದಾರೆ. ಇನ್ನು ಶಾಲೆಯಲ್ಲಿ ಒಟ್ಟು ಮೂವರು ಶಿಕ್ಷಕರಿದ್ದು, ಒಬ್ಬ ಶಿಕ್ಷಕರು ಶಾಲೆಯ ಮುಖ್ಯಸ್ಥರಾಗಿದ್ದು, ಇನ್ನೊಬ್ಬ ಶಿಕ್ಷಕರು ಬಿಸಿಯೂಟದ ಜವಾಬ್ದಾರಿ ನಿರ್ವಹಿಸಿದರೆ, ಮತ್ತೊಬ್ಬ ಶಿಕ್ಷಕರು 1 ರಿಂದ 7 ತರಗತಿವರೆಗೆ ಪಾಠ ಮಾಡುತ್ತಿದ್ದು ಮಕ್ಕಳ ಬೌಧಿಕ ಗುಣ ಮಟ್ಟ ಕುಸಿಯುತ್ತಿದೆ ಎಂದು ಆರೋಪ ವ್ಯಕ್ತವಾಗಿದೆ.
ಈ ಕುರಿತು ಅಲ್ಲಿನ ಸ್ಥಳಿಯರು ಮಾಹಿತಿ ನೀಡಿದ್ದು, ಆಂಧ್ರಪ್ರದೇಶ ಸರ್ಕಾರದ ʼಅಮ್ಮವೂಡಿʼ ಯೋಜನೆಯೂ ಈ ಶಾಲೆಗೆ ಮತ್ತೊಂದು ಪೆಟ್ಟು ನೀಡುತ್ತಿದೆ. ಈ ಯೋಜನೆಯಡಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ಕುಟುಂಬದ ಮಹಿಳೆಯರಿಗೆ ಸರ್ಕಾರ 15 ಸಾವಿರ ರೂ.ಸಹಾಯಧನ ನೀಡುತ್ತಿದೆ. ಹೀಗಾಗಿ ಕರ್ನಾಟಕ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳು ಆಂಧ್ರಶಾಲೆಗಳಿಗೆ ಸೇರುತ್ತಿದ್ದಾರೆ. ಹೀಗಾಗಿ ಕಂಬಾರಹಳ್ಳಿ ಶಾಲೆಯನ್ನು ಮುಚ್ಚುವ ಪರಿಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ.