ಪುತ್ತೂರು: ಕಡಬ ತಾಲೂಕಿನ ಕಾಣಿಯೂರು ಸಮೀಪದ ದೋಲ್ಪಡಿ ಬಳಿ ಇಬ್ಬರು ಯುವಕರ ಮೇಲೆ ಭಜರಂಗ ದಳದ ಗುಂಪು, ಎರಡು ತಾಸುಗಳ ಕಾಲ ಮರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ನಡೆದಿದೆ.
ಹಲ್ಲೆಗೊಳಗಾದ ಯುವಕರು ಗಂಭೀರ ಸ್ಥಿತಿಯಲ್ಲಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಯುವಕರು ದೋಲ್ಪಾಡಿ ಬಳಿ ಜವಳಿ ವ್ಯಾಪಾರ ನಡೆಸುತ್ತಿದ್ದರು. ಭಜರಂಗ ದಳದ ಗುಂಪು ವ್ಯಾಪಾರಕ್ಕೆ ತಡೆಯೊಡ್ಡಿ, ಎಚ್ಚರ ತಪ್ಪುವ ರೀತಿಯಲ್ಲಿ ಥಳಿಸಿ, ದ್ವಿಚಕ್ರ ವಾಹನವನ್ನು ವ್ಯಾಪಾರಿಗಳ ಮೇಲೆ ಹರಿಸಿ, ಅವರ ಮೇಲೆ ಕಲ್ಲು ಎತ್ತಿ ಹಾಕುವ ಮೂಲಕ ಕೊಲೆ ಯತ್ನ ನಡೆಸಿದ್ದಲ್ಲದೆ, ಅವರ ಕಾರನ್ನೂ ಹಾನಿಗೊಳಿಸಲಾಗಿದೆ ಎಂಬುದು ತಿಳಿದು ಬಂದಿದೆ.

ಈ ಅಮಾನವೀಯ ಘಟನೆಯನ್ನು ಸ್ಥಳೀಯರು ತೀವ್ರವಾಗಿ ಖಂಡಿಸಿದ್ದಾರೆ. ಹಾಗು ಹಲವು ರಾಜಕೀಯ ಮತ್ತು ಸಾಮಾಜಿಕ ಮುಖಂಡರ ನಿಯೋಗವೊಂದು ಭೇಟಿ ಮಾಡಿ ಹಲ್ಲೆಗೊಳಗಾದ ಯುವಕರ ಆರೋಗ್ಯ ವಿಚಾರಿಸಿದರು.
ಕಳೆದ ಹಲವಾರು ವರ್ಷಗಳಿಂದ ಜವಳಿ ವ್ಯಾಪಾರ ನಡೆಸುತ್ತಿದ್ದ ಯುವಕರು ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿದ್ದಾರೆ, ಆದರೆ ಯುವಕರು ಮುಸ್ಲಿಮರು ಎಂಬ ಒಂದೇ ಕಾರಣಕ್ಕೆ ಹಿಗ್ಗಾಮುಗ್ಗ ಥಳಿಸಿದ್ದಾರೆ, ಆದ್ದರಿಂದ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.
ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು, ಕೃತ್ಯದ ವಿರುದ್ಧ ನಾಗರಿಕ ಸಮಾಜ ಒಗ್ಗಟ್ಟಾಗಿ ಪ್ರತಿಭಟಿಸಲಿದೆ. ದುಷ್ಕರ್ಮಿಗಳಿಗೆ ಪೊಲೀಸ್ ಇಲಾಖೆ, ಕಾನೂನಿನ ಯಾವುದೇ ಭಯ ಇಲ್ಲದಾಗಿದೆ. ಇಂತ ಘಟನೆಗಳು ಮತ್ತೆ ಮರುಕಳಿಸದಂತೆ ಪೊಲೀಸ್ ಇಲಾಖೆ ನೋಡಿ ಕೊಳ್ಳ ಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಘಟನೆ ಕುರಿತು ಮಾಜಿ ಸಚಿವ ಶಾಸಕ ಯು.ಟಿ ಖಾದರ್ ಅವರು ಪ್ರತಿಕ್ರಿಯಿಸಿ, ಕಾಣಿಯೂರು ವ್ಯಾಪಾರಿಗಳ ಮೇಲೆ ಹಲ್ಲೆ ಪ್ರಕರಣವನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ.