ಬೆಂಗಳೂರು: ಬೆಂಗಳೂರಿನ ಕುಮಾರ ಪಾರ್ಕ್ನಲ್ಲಿರುವ ಆಮ್ ಆದ್ಮಿ ಪಾರ್ಟಿ ರಾಜ್ಯ ಕಚೇರಿಯಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಗಳೂರು ನಗರ ಎಎಪಿ ಅಧ್ಯಕ್ಷ ಮೋಹನ್ ದಾಸರಿಯವರರು, ʼಕನ್ನಡದ ಅಭಿವೃದ್ಧಿಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ಕನ್ನಡ ಶಾಲೆಗಳ ಕಡೆಗಣನೆ, ನಾಡಿನ ಗಡಿ ಪ್ರದೇಶಗಳ ಅಭಿವೃದ್ಧಿಗೆ ನಿರಾಸಕ್ತಿ, ಕೇಂದ್ರ ಸರ್ಕಾರದ ಹಿಂದಿ ಹೇರಿಕೆ, ಕನ್ನಡಿಗರ ಸರ್ಕಾರಿ ಉದ್ಯೋಗಾವಕಾಶ ಅನ್ಯಭಾಷಿಗರ ಪಾಲಾಗುತ್ತಿರುವುದು ಸೇರಿದಂತೆ ಅನೇಕ ಸಮಸ್ಯೆಗಳು ಕನ್ನಡ ಭಾಷೆಗೆ ಆತಂಕ ತಂದಿಟ್ಟಿವೆ. ಇವುಗಳನ್ನು ಗಂಭೀರವಾಗಿ ಪರಿಗಣಿಸಿ ಇತ್ಯರ್ಥ ಪಡಿಸಲು ಆಮ್ ಆದ್ಮಿ ಪಕ್ಷ ಬದ್ಧವಾಗಿದೆ. ಸ್ಥಳೀಯ ನುಡಿ, ಸಂಸ್ಕೃತಿಗೆ ಪೂರಕವಾಗುವಂತಹ ಆಡಳಿತ ನೀಡಬೇಕೆಂಬ ನೀತಿಯನ್ನು ಆಮ್ ಆದ್ಮಿ ಪಕ್ಷವು ದೇಶದೆಲ್ಲೆಡೆ ಪಾಲಿಸುತ್ತಿದೆʼಎಂದು ಹೇಳಿದರು.
ಈ ವೇಳೆ ಆಮ್ ಆದ್ಮಿ ಪಾರ್ಟಿ ಮುಖಂಡರಾದ ಕುಶಲಸ್ವಾಮಿ, ಜಗದೀಶ್ ವಿ ಸದಂ, ಚನ್ನಪ್ಪಗೌಡ ನೆಲ್ಲೂರು, ಸಂಚಿತ್ ಸೆಹ್ವಾನಿ, ಪ್ರಕಾಶ್ ನೆಡುಂಗಡಿ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ವಿವಿಧೆಡೆ ಆಚರಣೆ
ಬೆಂಗಳೂರಿನ ದಾಸರಹಳ್ಳಿ ವೃತ್ತದಲ್ಲಿ ಎಎಪಿ ಮುಖಂಡರಾದ ಸೌಂದರ್ಯ ಮಂಜಪ್ಪ ಹಾಗೂ ಕೀರ್ತನ್ ಕುಮಾರ್ ನೇತೃತ್ವದಲ್ಲಿ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಮಹಾಲಕ್ಷ್ಮೀ ಬಡಾವಣೆ, ವಿಜಯನಗರ, ಮಹದೇವಪುರ, ಕೆ.ಆರ್.ಪುರಂ, ಪದ್ಮನಾಭನಗರ, ಜಯನಗರ ಸೇರಿದಂತೆ ಅನೇಕ ವಿಧಾನಸಭಾ ಕ್ಷೇತ್ರಗಳ ಎಎಪಿ ಕಚೇರಿಯಲ್ಲಿ ಕನ್ನಡ ಬಾವುಟ ಹಾರಿಸಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮಿಸಲಾಯಿತು. ಜೊತೆಗೆ, ರಾಜ್ಯಾದ್ಯಂತ ಹಲವು ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಆಮ್ ಆದ್ಮಿ ಪಾಕ್ಷದ ಕಾರ್ಯಕರ್ತರು ಕನ್ನಡಾಂಬೆಗೆ ನಮನ ಸಲ್ಲಿಸಿ, ಸಿಹಿ ಹಂಚುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.