Home ಕರ್ನಾಟಕ ಚುನಾವಣೆ - 2023 ಕರ್ನಾಟಕ ಚುನಾವಣೆ: ಜನರ ನೋವುಗಳು ಮತ್ತು ನಿರೀಕ್ಷೆಗಳು

ಕರ್ನಾಟಕ ಚುನಾವಣೆ: ಜನರ ನೋವುಗಳು ಮತ್ತು ನಿರೀಕ್ಷೆಗಳು

0

ಬಿಜೆಪಿ ಈ ಹಿಂದಿನ ಚುನಾವಣೆಯಲ್ಲಿ ನೀಡಿದ ಭರವಸೆಗಳ ಪೈಕಿ ಶೇಕಡಾ 90 ರಷ್ಟನ್ನು ಈಡೇರಿಸಿಲ್ಲ. ಸಾಲದೆಂಬಂತೆ, ಅನ್ನ ಭಾಗ್ಯ, ಇಂದಿರಾ ಕ್ಯಾಂಟೀನ್ ಗಳಂತಹ ಒಳ್ಳೆಯ ಕಾರ್ಯಕ್ರಮಗಳನ್ನೂ ಹಳ್ಳ ಹಿಡಿಸಿತು. ಹಿಜಾಬ್, ಹಲಾಲ್, ಅಜಾನ್, ಮತಾಂತರ ಹೀಗೆ ಭಾವನಾತ್ಮಕ ವಿಷಯಗಳಲ್ಲಿಯೇ ಕಾಲ ಕಳೆಯಿತು. ಈಗ ಮತ್ತೆ ಚುನಾವಣೆ ಬಂದಿದೆ. ಯೋಚಿಸಿ ಮತ ಚಲಾಯಿಸಿ – ಶ್ರೀನಿವಾಸ ಕಾರ್ಕಳ

2023 ರ ಕರ್ನಾಟಕ ವಿಧಾನಸಭಾ ಚುನಾವಣೆ ಈಗ ಒಂದು ನಿರ್ಣಾಯಕ ಘಟ್ಟವನ್ನು ಪ್ರವೇಶಿಸಿದೆ. ಮತದಾನಕ್ಕೆ ಇನ್ನೂ ಒಂಬತ್ತು ದಿನಗಳು ಬಾಕಿ ಇದ್ದರೆ, ಬಹಿರಂಗ ಪ್ರಚಾರಕ್ಕೆ ಇರುವುದು ಕೇವಲ ಒಂದು ವಾರ. ಹಾಗಾಗಿಯೇ, ಒಂದೆಡೆ ಬಿಸಿಲಿನ ಕಾವು ಏರುತ್ತಿದ್ದರೆ ಅದನ್ನು ಲೆಕ್ಕಿಸದೆ ಇನ್ನೊಂದೆಡೆ ಚುನಾವಣಾ ಪ್ರಚಾರದ ಕಾವೂ ಅಷ್ಟೇ ತೀವ್ರವಾಗಿ ಏರುತ್ತಿದೆ.

ಅಭ್ಯರ್ಥಿಗಳು ಮತದಾರರ ಮನಗೆಲ್ಲಲು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬೆವರು ಹರಿಸುತ್ತಿದ್ದರೆ, ವಿವಿಧ ಪಕ್ಷಗಳ ತಾರಾ ಪ್ರಚಾರಕರು ರಾಜ್ಯ ಸುತ್ತುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಪರವಾಗಿ ಪ್ರಚಾರ ಮಾಡಲು ರಾಜ್ಯದ ಹೊರಗಿನಿಂದಲೂ ತಾರಾ ಪ್ರಚಾರಕರು ಬಂದಿದ್ದಾರೆ. ಪ್ರಮುಖ ಪಕ್ಷಗಳ ಪೈಕಿ, ಬಿಜೆಪಿ ಪರವಾಗಿ ನರೇಂದ್ರ ಮೋದಿ, ಅಮಿತ್ ಶಾ, ಪ್ರಚಾರದ ನೇತೃತ್ವ ವಹಿಸಿದ್ದರೆ, ಕಾಂಗ್ರೆಸ್ ಪರವಾಗಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ರಾಜ್ಯ ಸುತ್ತುತ್ತಿದ್ದಾರೆ. ಜೆಡಿಎಸ್ ಗೆ ದೇವೇಗೌಡರು ಮತ್ತು ಕುಮಾರಸ್ವಾಮಿಯೇ ತಾರಾ ಪ್ರಚಾರಕರು.

ಚುನಾವಣಾ ಘೋಷಣೆಗೆ ಮುನ್ನವೇ, ಯೋಜನೆಗಳ ಉದ್ಘಾಟನೆಗಳ ನೆಪದಲ್ಲಿ ರಾಜ್ಯಕ್ಕೆ ಅನೇಕ ಭೇಟಿ ನೀಡಿ, ಸರಕಾರಿ ಖರ್ಚಿನಲ್ಲಿ ಪಕ್ಷದ ಚುನಾವಣಾ ಭವಿಷ್ಯಕ್ಕೆ ನೆಲ ಹದಗೊಳಿಸಿ ಹೋಗಿರುವ ಪ್ರಧಾನಿಯವರು ಚುನಾವಣೆ ಘೋಷಣೆಯಾದ ಬಳಿಕ ಪ್ರಚಾರದಿಂದ ಬಹುತೇಕ ದೂರ ಉಳಿದಿದ್ದರು. ಆದರೆ ಮೊನ್ನೆ ಮತ್ತು ನಿನ್ನೆ ಅವರು ಕರ್ನಾಟಕಕ್ಕೆ ಬಂದು ಒಂದು ಸುತ್ತಿನ ಬಿರುಸಿನ ಪ್ರಚಾರ ಮಾಡಿ ಹೋಗಿದ್ದಾರೆ. ಇನ್ನೂ ಎರಡು ಸುತ್ತಿನ ಪ್ರಚಾರಕ್ಕೆ ಅವರು ಬರಲಿದ್ದಾರೆ.

ಎಂದಿನಂತೆ ಸಂಪೂರ್ಣ ಒಂದು ಪಕ್ಷದ ಪರವಾಗಿ ನಿಂತಿರುವ ‘ಮಾರಿಕೊಂಡ’ ಮಾಧ್ಯಮಗಳು ಬಿಜೆಪಿಯ ಪ್ರಚಾರಕ್ಕೆ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡಿವೆ. ಅವುಗಳು ಪ್ರಸಾರ ಮಾಡುತ್ತಿರುವ ಸುದ್ದಿ ನೋಡಿದರೆ ರಾಜ್ಯದಲ್ಲಿ ಬಿಜೆಪಿ ಬಿಟ್ಟು ಬೇರೆ ಯಾವ ಪಕ್ಷಗಳೂ ಏನೂ ಮಾಡುತ್ತಿಲ್ಲವೇನೋ ಎಂಬ ಅನುಮಾನ ಮೂಡಬೇಕು!

ಜವಾಬ್ದಾರಿ ಮರೆತ ಸರಕಾರ

2018 ರಲ್ಲಿ ರಾಜ್ಯದ ಮತದಾರರು ಸ್ಪಷ್ಟ ಬಹುಮತ ನೀಡದ ಕಾರಣ ಆರಂಭದಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರ ಇಲ್ಲಿ ಅಸ್ತಿತ್ವದಲ್ಲಿತ್ತು. ವರ್ಷ ಕಳೆಯುತ್ತಿದ್ದಂತೆ ‘ಆಪರೇಶನ್ ಕಮಲ’ ಕಾರ್ಯಾಚರಣೆ ಶುರುವಾಯಿತು. ಫಲವಾಗಿ, ಸಮ್ಮಿಶ‍್ರ ಸರಕಾರ ಉರುಳಿ ಬಿಜೆಪಿ ಅಧಿಕಾರಕ್ಕೆ ಬಂತು. ಹಿಂಬಾಗಿಲಿನಿಂದ ಅಧಿಕಾರ ಹಿಡಿದರೂ ಬಿಜೆಪಿಗೆ ಆ ಬಳಿಕ ಒಳ್ಳೆಯ ಆಡಳಿತ ನೀಡಿ ಜನರ ಮನಗೆಲ್ಲಲು ನಾಲ್ಕು ವರ್ಷಗಳ ಸುದೀರ್ಘ ಕಾಲಾವಕಾಶವಿತ್ತು. ಆದರೆ ಅದು ತನ್ನ ಚುನಾವಣಾ ಪ್ರಣಾಳಿಕೆಯ ಘೋಷಣೆಯನ್ನು ಜಾರಿಗೆ ತರಲು ಗಂಭೀರವಾದ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಸಾಲದೆಂಬಂತೆ, ಅನ್ನ ಭಾಗ್ಯ, ಇಂದಿರಾ ಕ್ಯಾಂಟೀನ್ ಗಳಂತಹ ಒಳ್ಳೆಯ ಕಾರ್ಯಕ್ರಮಗಳನ್ನೂ ಹಳ್ಳ ಹಿಡಿಸಿತು. ಹಿಜಾಬ್, ಹಲಾಲ್, ಅಜಾನ್, ಮತಾಂತರ ಹೀಗೆ ಭಾವನಾತ್ಮಕ ವಿಷಯಗಳಲ್ಲಿಯೇ ಕಾಲ ಕಳೆಯಿತು.

ಕಾರಣವೇ ಇಲ್ಲದೆ ಒಬ್ಬರು ಮುಖ್ಯಮಂತ್ರಿಯನ್ನು ಅಧಿಕಾರದ ಕುರ್ಚಿಯಿಂದ ಇಳಿಸಿ ಇನ್ನೊಬ್ಬರನ್ನು  ಕೂರಿಸಲಾಯಿತು. ಹೆಸರಿಗೆ ಬೊಮ್ಮಾಯಿಯವರು ಮುಖ್ಯಮಂತ್ರಿಯವರಾದರೂ ಆಡಳಿತವನ್ನು ನಿಯಂತ್ರಿಸತೊಡಗಿದ್ದು ಬೆರಳೆಣಿಕೆಯ ಆರ್ ಎಸ್ ಎಸ್ ಮಂದಿ ಎಂಬ ಗುಸು ಗುಸು ಎಲ್ಲೆಲ್ಲಿಯೂ ಕೇಳಿಬಂತು (ವಿಶೇಷವಾಗಿ ಬಿ ಎಲ್ ಸಂತೋಷ‍್ ಹೆಸರು). ಇಲ್ಲಿ ನಡೆದ ಅಲ್ಪಸಂಖ್ಯಾತ ವಿರೋಧಿ ಕಾರ್ಯಕ್ರಮಗಳು, ಪಠ್ಯಪುಸ್ತಕ ಪರಿಷ್ಕರಣಾ ಗಲಾಟೆಗಳಂತಹ ವಿದ್ಯಮಾನಗಳು ಆ ಗುಸುಗುಸುಗಳು ಸತ್ಯ ಎಂಬುದಕ್ಕೆ ಇಂಬು ಕೊಡುವಂತೆಯೇ ಇದ್ದವು.

ಬೆಲೆ ಏರಿಕೆ, ನಿರುದ್ಯೋಗ, ಕೋಮುವಾದ

ಜನರ ಕಷ್ಟಗಳಿಗೆ ಮಿಡಿಯುವ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಸರಕಾರ ಮರೆತ ಕಾರಣ ಒಟ್ಟಾರೆಯಾಗಿ ಜನಸಾಮಾನ್ಯರ ಬದುಕು ನರಕವಾಯಿತು. ರಾಜ್ಯದಲ್ಲಿ ಸದಾ ಅಶಾಂತ ಪರಿಸ್ಥಿತಿ ತಲೆದೋರಿತು. ‘ಡಬ್ಬಲ್ ಎಂಜಿನ್’ ನ ಸಂವೇದನಾಹೀನತೆಯ ಕಾರಣವಾಗಿ, ವಿಶೇಷವಾಗಿ ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸಿಹೋದರು. ನೀವು ಯಾರೇ ಜನಸಾಮಾನ್ಯರನ್ನು ಮಾತನಾಡಿಸಿ ನೋಡಿ. ಪೆಟ್ರೋಲ್, ಡೀಸೆಲ್ ದುಬಾರಿಯಾದ ಬಗ್ಗೆ, ಅಡುಗೆ ಅನಿಲ ಸಿಲಿಂಡರ್ ದರ 1,200 ರುಪಾಯಿಯಾದ ಬಗ್ಗೆ, ಅಡುಗೆ ಎಣ್ಣೆಯ ದರ ಗಗನಕ್ಕೇರಿರುವ ಬಗ್ಗೆ ನೋವು ಮತ್ತು ಸಿಟ್ಟಿನಿಂದ ಮಾತನಾಡುತ್ತಾರೆ. ಹಳ್ಳಿಗಾಡಿನ ಯಾರಲ್ಲೇ ಹೋಗಿ ಮಾತನಾಡಿಸಿ ಅವರು ಏರಿದ ರಸಗೊಬ್ಬರ, ಕೀಟನಾಶಕಗಳ ಬೆಲೆ, ಮೂರು ಪಟ್ಟು ಆಗಿರುವ ಪಿವಿಸಿ ಪೈಪ್ ಗಳ ದರದ ಬಗ್ಗೆ, ಬೆಳೆದ  ಬೆಳೆಗೆ ಸೂಕ್ತ ಬೆಲೆ ದೊರೆಯದ ಬಗ್ಗೆ ಮಾತನಾಡುತ್ತಾರೆ. ರಾಜ್ಯದ ಹೆಮ್ಮೆಯಾದ ನಂದಿನಿಯನ್ನು ಮುಗಿಸುವ ಸಂಚು ಹೈನು ಉದ್ಯಮದಲ್ಲಿ ತೊಡಗಿಕೊಂಡಿರುವ ಲಕ್ಷಾಂತರ ಮಂದಿಯ ಜೀವನೋಪಾಯ ಕಸಿದುಕೊಳ್ಳಲಿದ್ದು, ಆ ಬಗ್ಗೆ ಜನರಲ್ಲಿ ಸಿಟ್ಟಿದೆ. ಸರಕಾರವಾದರೋ ಕೃಷಿಕರು ಮತ್ತು ಕಾರ್ಮಿಕರ ಬದುಕಿನ ಕಷ್ಟಗಳನ್ನು ಅರ್ಥಮಾಡಿಕೊಂಡು ಸಹಾನುಭೂತಿಯಿಂದ ಸ್ಪಂದಿಸುವ ಬದಲು ಅಂತಾರಾಷ್ಟ್ರೀಯ ಒಡಂಬಡಿಕೆಗಳು ಮತ್ತು ಉದ್ಯಮಿಗಳ ಹಿತಾಸಕ್ತಿಯನ್ನೇ ಗಮನದಲ್ಲಿರಿಸಿಕೊಂಡು ಕಾನೂನುಗಳನ್ನು ಜಾರಿಗೊಳಿಸುತ್ತಿದೆ.

ಉದ್ಯೋಗ ನಷ್ಟ ಮತ್ತು ಬೆಲೆ ಏರಿಕೆಯ ಕಾರಣ ಜನರ ಕೈಯಲ್ಲಿ ಹಣವಿಲ್ಲವಾಗಿದೆ; ಕೊಳ್ಳುವ ಶಕ್ತಿ ತೀವ್ರವಾಗಿ ಕಡಿಮೆಯಾಗಿದೆ. ಅನೇಕ ಕಡೆ ಶುದ್ಧ ಕುಡಿನೀರು, ಸುಸಜ್ಜಿತ ರಸ್ತೆ, ಕೈಗೆಟಕುವ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಜನರಲ್ಲಿ ತೀವ್ರ ಅಸಮಾಧಾನವಿದೆ.

ಹಿರಿಯರು ಕೈಯಲ್ಲಿದ್ದ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಯುವ ಮಂದಿ ಉದ್ಯೋಗದ ಭರವಸೆಯಿಲ್ಲದೆ ಹತಾಶರಾಗಿದ್ದಾರೆ. 40 ಪರ್ಸೆಂಟ್ ಭ್ರಷ್ಟಾಚಾರ ರಾಜ್ಯದ ಪ್ರತಿಯೊಂದು ಕಚೇರಿ, ಯೋಜನೆಗಳನ್ನು ತಲಪಿ ಜನರ ಬದುಕನ್ನು ಹೈರಾಣುಗೊಳಿಸಿದೆ. ಇದೇ ಕಮಿಷನ್ ಹಗರಣದಿಂದ ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡರೂ ಬಿಜೆಪಿ ನಾಯಕ ಈಶ್ವರಪ್ಪ ಮೇಲೆ ಕ್ರಮವಿಲ್ಲ! ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮನೆಯಲ್ಲಿ ಎಂಟು ಕೋಟಿ ನಗದು ಸಿಕ್ಕರೂ, ಬಿಜೆಪಿಯಾಗಲೀ ಪ್ರಧಾನಿಯಾಗಲೀ ಅದರ ಬಗ್ಗೆ ಏನೂ ಹೇಳುವುದಿಲ್ಲ. ಪ್ರಧಾನಿಗಳ ‘ನಾ ಖಾವೂಂಗ, ನಾ ಖಾನೇ ದೂಂಗಾ’ ಘೋಷ ವಾಕ್ಯ ಕೇವಲ ಒಂದು ಜೋಕ್ ನಂತಾಗಿದೆ.

ಜನಾಂಗದ್ವೇಷಕ್ಕೆ ಪ್ರಭುತ್ವವೇ ಪ್ರೋತ್ಸಾಹ ಮತ್ತು ರಕ್ಷಣೆ ಒದಗಿಸುತ್ತಿದ್ದು ಸಾಮಾಜಿಕ ಸಾಮರಸ್ಯ ಹದಗೆಡುತ್ತಿದೆ. ಎಲ್ಲೆಲ್ಲೂ ದ್ವೇಷ ಭಾಷಣಗಳು. ಮುಸ್ಲಿಮರ ಮೇಲೆ ನಿರಂತರ ದಾಳಿ. ಪ್ರಧಾನಿಗಳ ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಹೇಳಿಕೆ ಕೇವಲ ಬೂಟಾಟಿಕೆಯದ್ದು ಎಂಬುದು ರುಜುವಾತಾಗಿದೆ.

ಉತ್ತರಿಸದ ಪ್ರಧಾನಿ

ಪ್ರಜೆಗಳಿಗೆ ಇವುಗಳಿಗೆಲ್ಲ ಉತ್ತರ ಕೇಳುವ ಅವಕಾಶ ಇರುವುದು ಐದು ವರ್ಷಗಳಿಗೆ ಒಮ್ಮೆ. ಎಂದೇ, ಈ ಚುನಾವಣಾ ಕಾಲದಲ್ಲೂ ರಾಜ್ಯದ ಮತದಾರರು ತಮ್ಮ ಪ್ರಶ್ನೆಗಳಿಗೆ ಉತ್ತರ ನಿರೀಕ್ಷಿಸುತ್ತಿದ್ದಾರೆ, ಕಷ್ಟಗಳಿಗೆ ಪರಿಹಾರ ಕೇಳುತ್ತಿದ್ದಾರೆ. ಆದ್ದರಿಂದಲೇ ಅವರಿಗೆ ದೇಶದ ಪ್ರಧಾನಿ ಚುನಾವಣಾ ಪ್ರಚಾರಕ್ಕೆ ಬಂದಾಗ ಏನೋ ಆಸೆ, ಏನೋ ಭರವಸೆ. ತಮ್ಮ ಕಷ್ಟಗಳಿಗೆ ಅವರು ಮಿಡಿಯಬಹುದು, ಆ ಬಗ್ಗೆ ಏನಾದರೂ ಮಾತನಾಡಬಹುದು ಎಂದು.

ಆದರೆ ಚುನಾವಣಾ ಪ್ರಚಾರಕ್ಕೆ ಬಂದ ಪ್ರಧಾನಿಗಳು ಆ ಬಗ್ಗೆ ತುಟಿ ಪಿಟಕ್ಕೆನ್ನುವುದಿಲ್ಲ. ‘40 ಪರ್ಸೆಂಟ್ ಭ್ರಷ್ಟಾಚಾರ ಇನ್ನು ಮುಂದೆ ಇಲ್ಲದಂತೆ ಮಾಡುವೆ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಹಣ ಪಾವತಿ ಮಾಡುತ್ತೇನೆ, ಜಿ ಎಸ್ ಟಿ ಪರಿಹಾರ ಸಮರ್ಪಕವಾಗಿ ದೊರೆಯುವಂತೆ ಮಾಡುತ್ತೇನೆ’ ಎನ್ನುವುದಿಲ್ಲ. ಬದಲಿಗೆ ‘ನನಗೆ ಕಾಂಗ್ರೆಸ್ ನವರು 91 ಬಾರಿ ಬೈದರು, ಕಾಂಗ್ರೆಸ್ ನವರು 85 ಪರ್ಸೆಂಟ್ ಕಮಿಷನ್ ಹೊಡೆಯುತ್ತಾರೆ, ಅಂಬೇಡ್ಕರ್ ರನ್ನು ಕಾಂಗ್ರೆಸ್ ಅವಮಾನಿಸಿದೆ’ ಎನ್ನುತ್ತಾರೆ!

ಕೆಲವು ಪ್ರಜ್ಞಾವಂತರು ಬೆಟ್ಟು ಮಾಡಿದ ಹಾಗೆ ಈ ಸರಕಾರದ ಬಳಿ ಕೋವಿಡ್ ಕಾಲದಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸರಬರಾಜಿನ ಕೊರತೆಯಿಂದ ಸತ್ತವರು, ದಿಢೀರ್ ಲಾಕ್ ಡೌನ್ ನಿಂದ ಸತ್ತ ವಲಸೆ ಕಾರ್ಮಿಕರು, ದೇಶದಲ್ಲಿರುವ ನಿರುದ್ಯೋಗಿಗಳು ಇತ್ಯಾದಿಗಳ ಬಗ್ಗೆ ಅಂಕಿ ಅಂಶಗಳಿಲ್ಲ (ಡಾಟಾ). ಆದರೆ ಕಾಂಗ್ರೆಸ್ ನವರು ಎಷ್ಟು ಬಾರಿ ಬೈದರು ಎಂಬ ನಿಖರ ಅಂಕಿ ಅಂಶಗಳಿವೆ!

ಸುಳ್ಳು ಭರವಸೆಗಳು

ಈಗ ಮತ್ತೆ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. 2018 ರಲ್ಲಿ ತಾನು ನೀಡಿದ ಭರವಸೆಗಳ ಪೈಕಿ ಅದು ಶೇಕಡಾ 90 ರಷ್ಟನ್ನು ಈಡೇರಿಸಿಲ್ಲ (ರಾಜ್ಯದಲ್ಲಿ 300 ‘ಮುಖ್ಯಮಂತ್ರಿ ಅನ್ನಪೂರ್ಣ ಕ್ಯಾಂಟೀನ್’ ಆರಂಭಿಸುವುದಾಗಿಯೂ ಅದು ಹೇಳಿತ್ತು! ಈ ಬಾರಿ ಅದು ಅಟಲ್ ಆಹಾರ ಕೇಂದ್ರ ಶುರುಮಾಡುವುದಾಗಿ ಹೇಳುತ್ತಿದೆ!) ಎನ್ನುವುದು ಒಂದು ಭಾಗವಾದರೆ, ಈಗ ಮತ್ತೆ ಅದು ನೀಡಿರುವ ಯಾವ ಹೊಸ ಭರವಸೆಗಳೂ ಜನರಲ್ಲಿ ಭರವಸೆ ಮೂಡಿಸುವಂತಿಲ್ಲ ಎನ್ನುವುದು ಇನ್ನೊಂದು ಭಾಗ. ಸಾಲದೆಂಬಂತೆ, ಅದು ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದಾಗಿಯೂ ಭರವಸೆ ನೀಡಿದೆ! ಇದನ್ನು ಯಾರು ಆಗ್ರಹಿಸಿದ್ದಾರೆ!? ಇದರಿಂದ ಜನಸಾಮಾನ್ಯರ ನಿತ್ಯ ಬದುಕಿನ ಸಮಸ್ಯೆಗಳಿಗೆ ಪರಿಹಾರ ಸಿಗುವುದೇ?! ಸಮಾನ ನಾಗರಿಕ ಸಂಹಿತೆ ಕೇಂದ್ರ ಸರಕಾರ ನಿರ್ಧರಿಸಬೇಕಾಗಿರುವುದೇ ಅಥವಾ ರಾಜ್ಯವೇ?! ಅಂದರೆ ಮತ್ತೆ ಬಿಜೆಪಿಗೆ ಜನರ ನಿತ್ಯಬದುಕಿನ ವಿಷಯಗಳಿಗಿಂತಲೂ ಭಾವನಾತ್ಮಕ ವಿಷಯವೇ ಮುಖ್ಯ ಎಂದಾಯಿತು.

ನಮ್ಮ ಸಂಸದೀಯ ಜನತಂತ್ರ ವ್ಯವಸ್ಥೆಯ ನ್ಯೂನತೆಯೆಂದರೆ ಇಲ್ಲಿ ಒಮ್ಮೆ ತಮ್ಮ ಜನಪ್ರತಿನಿಧಿಯನ್ನು ಚುನಾಯಿಸಿದ ಬಳಿಕ ಅವರನ್ನು ಮತ್ತೆ ಕರೆಸಿಕೊಳ್ಳುವ ಅವಕಾಶ ಇಲ್ಲ. ನಿಜ ಅರ್ಥದಲ್ಲಿ ಜನಪ್ರತಿನಿಧಿಯಾಗಿ ಕೆಲಸ ಮಾಡದವರನ್ನು ಪ್ರಶ್ನಿಸಲು, ಶಿಕ್ಷಿಸಲು ಅವರು ಐದು ವರ್ಷಗಳ ಕಾಲ ಕಾಯಬೇಕು. ಇದು ಒಂದು ಲೋಪ ಹೇಗೋ ಹಾಗೆಯೇ ಅವಕಾಶ ಕೂಡಾ. ಹಾಗಾಗಿಯೇ ಚುನಾವಣೆಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬಹಳ ಮಹತ್ತ್ವದ ಸ್ಥಾನವಿದೆ. ಇದನ್ನು ಪಕ್ಷಗಳೂ ಅರ್ಥಮಾಡಿಕೊಂಡು ಸಕಾರಾತ್ಮಕ ನೆಲೆಯಲ್ಲಿ ಚುನಾವಣೆ ಎದುರಿಸಬೇಕು. ಆಡಳಿತದಲ್ಲಿರುವ ಪಕ್ಷ ತಾನು ಮಾಡಿರುವ ಕೆಲಸದ ಮೇಲೆ ಮತ ಕೇಳಬೇಕು. ವಿಪಕ್ಷಗಳು ಆಡಳಿತದ ಲೋಪವನ್ನು ಎತ್ತಿ ತೋರಿಸುತ್ತಾ ಮುಂದೆ ತಾನು ಏನು ಮಾಡಲಿರುವೆ ಎನ್ನುವುದರ ಮೇಲೆ ಮತ ಕೇಳಬೇಕು.

ಆದರೆ, ಜನರನ್ನು ಕಾಡುತ್ತಿರುವ ಗಂಭೀರ ವಿಷಯಗಳ ಮೇಲೆ ಈಗ ಚುನಾವಣೆ ನಡೆಯುತ್ತಿದೆಯೇ? ಯಾಕೆ ಈ ವಿಷಯಗಳು ಮುಖ್ಯವಾಗದೆ ಜಾತಿ, ಧರ್ಮ, ಹಣ ಮತ್ತು ಹೆಂಡವೇ ಚುನಾವಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ? ಈ ಬಗ್ಗೆ ರಾಜಕೀಯ ಪಕ್ಷಗಳು ಮಾತ್ರವಲ್ಲ ಮತದಾರರೂ ಯೋಚಿಸಬೇಕು.

ಶ್ರೀನಿವಾಸ ಕಾರ್ಕಳ

ಚಿಂತಕರೂ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡವರು.

ಇದನ್ನೂ ಓದಿ –https://peepalmedia.com/11-murders-69-acquitted/ http://11 ಕೊಲೆ, 69 ಖುಲಾಸೆ…!

You cannot copy content of this page

Exit mobile version