ಉತ್ತರ ಕನ್ನಡ, ಬೆಳಗಾವಿ ಮತ್ತು ಧಾರವಾಡ ಸೇರಿದಂತೆ ಕಿತ್ತೂರು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಗುಡುಗು, ಮಿಂಚು ಹಾಗೂ ಬಲವಾದ ಗಾಳಿ ಸಹಿತ ಭಾರಿ ಮಳೆ ಸುರಿದಿದೆ.
ಈ ಅಕಾಲಿಕ ಮಳೆಯಿಂದಾಗಿ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ರಸ್ತೆ, ರೈಲು ಸಂಚಾರ ಮತ್ತು ವಿದ್ಯುತ್ ಪೂರೈಕೆಗೆ ಭಾರಿ ವ್ಯತ್ಯಯ ಉಂಟಾಗಿದೆ.
ಖಾನಾಪುರ ತಾಲೂಕಿನ ನಾಗರಗಾಲಿ-ತಾವರಗಟ್ಟಿ ರೈಲ್ವೆ ನಿಲ್ದಾಣಗಳ ನಡುವೆ ಹಳಿಗಳ ಮೇಲೆ ಮರ ಬಿದ್ದಿದ್ದರಿಂದ ಕೊಲ್ಹಾಪುರ-ತಿರುಪತಿ ಹರಿಪ್ರಿಯಾ ಎಕ್ಸ್ಪ್ರೆಸ್ ಸೇರಿದಂತೆ ಹಲವು ರೈಲುಗಳ ಸಂಚಾರಕ್ಕೆ ಅಡ್ಡಿಯಾಯಿತು. ಅಳ್ನಾವರ ಮತ್ತು ಲೋಂಡಾ ಮಾರ್ಗದ ರೈಲು ಸೇವೆ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
ಬೆಂಗಳೂರು-ಸಾಂಗ್ಲಿ ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ ಅನ್ನು ಲೋಂಡಾ ನಿಲ್ದಾಣದಲ್ಲಿ ಮತ್ತು ಬೆಳಗಾವಿ-ಮೈಸೂರು ಎಕ್ಸ್ಪ್ರೆಸ್ ಅನ್ನು ಖಾನಾಪುರ ನಿಲ್ದಾಣದಲ್ಲಿ ತಡೆಹಿಡಿಯಲಾಗಿತ್ತು. ಹಳಿ ಮೇಲಿನ ಮರ ಮತ್ತು ಕಸವನ್ನು ತೆರವುಗೊಳಿಸಿದ ನಂತರವೇ ರೈಲು ಸಂಚಾರ ಪುನರಾರಂಭವಾಯಿತು.
ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು, ಕಲಘಟಗಿ, ಕುಂದಗೋಳ ಮತ್ತು ಅಳ್ನಾವರದಲ್ಲಿ ಸಂಜೆ ಸುರಿದ ಮಳೆಯು ಈ ಭಾಗದ ಜನರಿಗೆ ಸುಡುವ ಬಿಸಿಲಿನಿಂದ ನಿರಾಳತೆ ನೀಡಿದೆ. ಆದರೆ ಗಾಳಿಯ ತೀವ್ರತೆಗೆ ಹಲವೆಡೆ ಹಾನಿಯೂ ಸಂಭವಿಸಿದೆ.
ಕರಾವಳಿ ಮತ್ತು ಉತ್ತರ ಕನ್ನಡದ ಮಲೆನಾಡು ಭಾಗದಲ್ಲಿ ಗುಡುಗಿನ ಆರ್ಭಟ ಜೋರಾಗಿತ್ತು. ಸದಾಶಿವಗಡ-ಔರಾದ್ ರಾಜ್ಯ ಹೆದ್ದಾರಿ ಮತ್ತು ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯು ಕೆಸರುಮಯವಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು.
ದಾವಣಗೆರೆ ಜಿಲ್ಲೆಯ ಮಾಯಕೊಂಡ ಸೇರಿದಂತೆ ಹಲವೆಡೆ ಸೋಮವಾರ ರಾತ್ರಿ ಸುರಿದ ಮಳೆಗೆ ನೂರಾರು ಅಡಿಕೆ ಮರಗಳು ಮತ್ತು ಬಾಳೆ ತೋಟಗಳು ನೆಲಸಮವಾಗಿವೆ. ಇತ್ತ ಕೊಡಗಿನ ನಾಪೋಕ್ಲು ಸಮೀಪವೂ ಮಂಗಳವಾರ ಸಂಜೆ ಬೃಹತ್ ಮರವೊಂದು ಉರುಳಿ ಬಿದ್ದಿದೆ.
ಮಳೆಯಿಂದ ಕಟ್ಟಡಗಳಿಗೆ ಹಾನಿಯಾಗುವ ಭೀತಿ ಹಿನ್ನೆಲೆಯಲ್ಲಿ, ರಾಜ್ಯದ ಆಸ್ಪತ್ರೆ ಕಟ್ಟಡಗಳ ಸುರಕ್ಷತೆಯನ್ನು ತಪಾಸಣೆ ನಡೆಸುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
