ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಸಮಯದಲ್ಲಿ 84 ಲಕ್ಷಕ್ಕೂ ಹೆಚ್ಚು ಮತದಾರರನ್ನು ASDDO (ಗೈರುಹಾಜರಿ, ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಮತ್ತು ಇತರರು) ವರ್ಗಕ್ಕೆ ಸೇರಿಸಿರುವುದಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ತೀವ್ರ ಕಳವಳ ವ್ಯಕ್ತಪಡಿಸಿದೆ.
ಯಾವುದೇ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ಮೊದಲು ಸಂಪೂರ್ಣ ಪರಿಶೀಲನೆಯನ್ನು ಖಚಿತಪಡಿಸಿಕೊಳ್ಳಬೇಕೆಂದು ಪಕ್ಷವು ಮುಖ್ಯ ಚುನಾವಣಾಧಿಕಾರಿ (CEO) ವಿ. ಅನ್ಬುಕುಮಾರ್ ಅವರನ್ನು ಆಗ್ರಹಿಸಿದೆ.
ಮುಖ್ಯ ಚುನಾವಣಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಎಂಎಲ್ಸಿ ರಮೇಶ್ ಬಾಬು ಅವರು, ಸೂಕ್ತ ಪರಿಶೀಲನೆ ನಡೆಸದೆ ಎಸ್ಡಿಡಿಒ (ASDDO) ಪಟ್ಟಿಯ ಆಧಾರದ ಮೇಲೆ ಕ್ರಮ ಕೈಗೊಂಡರೆ, ಅರ್ಹ ಮತದಾರರ ಹೆಸರುಗಳು ತಪ್ಪಾಗಿ ರದ್ದಾಗಿ ಅವರ ಸಾಂವಿಧಾನಿಕ ಮತದಾನದ ಹಕ್ಕಿಗೆ ಧಕ್ಕೆಯಾಗಬಹುದು ಎಂದು ಹೇಳಿದ್ದಾರೆ.
ಸಂದೇಹಾಸ್ಪದವೆಂದು ಗುರುತಿಸಲಾದ ಎಲ್ಲಾ ಪ್ರಕರಣಗಳ ಎರಡನೇ ಹಂತದ ಭೌತಿಕ ಪರಿಶೀಲನೆ, ಒಂದೇ ಭೇಟಿಯ ಆಧಾರದ ಮೇಲೆ ಯಾವುದೇ ಹೆಸರನ್ನು ರದ್ದುಗೊಳಿಸದಿರುವುದು, ಹೆಸರು ತೆಗೆದುಹಾಕುವ ಮೊದಲು ಪೂರ್ವಾಪರ ನೋಟಿಸ್ ನೀಡುವುದು, ಗ್ರಾಮ ಮತ್ತು ವಾರ್ಡ್ ಮಟ್ಟದಲ್ಲಿ ಹೆಚ್ಚಿನ ಸಹಾಯ ಕೇಂದ್ರಗಳನ್ನು ಸ್ಥಾಪಿಸುವುದು, ಕ್ಷೇತ್ರವಾರು ಹೆಸರು ರದ್ದತಿ ದತ್ತಾಂಶವನ್ನು ಪ್ರಕಟಿಸುವುದು, ಪರಿಶೀಲನಾ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ರಾಜಕೀಯ ಪಕ್ಷಗಳಿಗೆ ಅನುಮತಿ ನೀಡುವುದು ಹಾಗೂ ಹಿರಿಯ ನಾಗರಿಕರು, ವಿಕಲಚೇತನರು (PwD), ಮಹಿಳೆಯರು ಮತ್ತು ವಲಸೆ ಮತದಾರರಿಗೆ ವಿಶೇಷ ರಕ್ಷಣೆ ನೀಡುವುದು ಸೇರಿದಂತೆ ಏಳು ರಕ್ಷಣಾತ್ಮಕ ಕ್ರಮಗಳನ್ನು ಕಾಂಗ್ರೆಸ್ ಒತ್ತಾಯಿಸಿದೆ.
ವಿಶೇಷ ತೀವ್ರ ಪರಿಷ್ಕರಣೆ ಕುರಿತು ಹರಡುತ್ತಿರುವ ಸುಳ್ಳು ಮಾಹಿತಿಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್, ಮುಖ್ಯ ಚುನಾವಣಾಧಿಕಾರಿಗಳು ಈ ಬಗ್ಗೆ ಸಾರ್ವಜನಿಕ ಸ್ಪಷ್ಟನೆ ನೀಡಬೇಕು ಮತ್ತು ಜನಪ್ರತಿನಿಧಿ ಕಾಯ್ದೆಯಡಿ ತಪ್ಪು ಮಾಹಿತಿ ಹರಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಅಲ್ಲದೆ, ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಮತದಾರರ ಜಾಗೃತಿ ಅಭಿಯಾನಗಳನ್ನು ನಡೆಸಬೇಕೆಂದು ಪಕ್ಷ ಕರೆ ನೀಡಿದೆ.
