Home ದೇಶ ‘ಈ-20 ಬಗ್ಗೆ ಚರ್ಚಿಸೋಣ!..’: ಕೇಂದ್ರದ ಮೇಲೆ ಜೆನ್‌-ಜಿ ಪ್ರತಿಭಟನೆಯ ಎಫೆಕ್ಟ್‌; ಬದಲಾದ ಸರ್ಕಾರದ ರಾಗ

‘ಈ-20 ಬಗ್ಗೆ ಚರ್ಚಿಸೋಣ!..’: ಕೇಂದ್ರದ ಮೇಲೆ ಜೆನ್‌-ಜಿ ಪ್ರತಿಭಟನೆಯ ಎಫೆಕ್ಟ್‌; ಬದಲಾದ ಸರ್ಕಾರದ ರಾಗ

0

ಹೊಸದೆಹಲಿ: ಜಂತರ್‌ಮಂತರ್‌ ಬಳಿ ನಡೆದ ಪ್ರತಿಭಟನೆಗಳ ಕಹಿ ಅನುಭವಗಳು ಕೇಂದ್ರದ ಬಿಜೆಪಿ ಸರ್ಕಾರದ ಮನಸ್ಸಿನಲ್ಲಿ ಇನ್ನೂ ಹಸಿಯಾಗಿಯೇ ಇವೆ. ಜೆನ್‌-ಝೀ (Gen-Z) ವಿದ್ಯಾರ್ಥಿಗಳ ಆಕ್ರೋಶ ಹಾಗೂ ಆಂದೋಲನದಿಂದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಾಗಿ ಬಂದ ಹಿನ್ನೆಲೆಯಲ್ಲಿ, ಮೋದಿ ಸರ್ಕಾರ ಈಗ ಮತ್ತೊಂದು ಆಂದೋಲನ ಬೀದಿ ಹೋರಾಟವಾಗಿ ಬದಲಾಗುವುದನ್ನು ತಡೆಯಲು ಯತ್ನಿಸುತ್ತಿರುವಂತೆ ಕಾಣುತ್ತಿದೆ.

ಈ ಬಾರಿಯ ಆಕ್ರೋಶ, ಸರ್ಕಾರ ಅತ್ಯಂತ ಪ್ರತಿಷ್ಠಾತ್ಮಕವಾಗಿ ತೆಗೆದುಕೊಂಡಿರುವ ಇಥನಾಲ್ ಬ್ಲೆಂಡೆಡ್ ಪೆಟ್ರೋಲ್ (EBP) ಕಾರ್ಯಕ್ರಮದ ವಿರುದ್ಧ ಆರಂಭವಾಗಿದೆ. ಈ-20 (E-20) ಪೆಟ್ರೋಲ್ ಅನ್ನು ತರಾತುರಿಯಲ್ಲಿ ಜಾರಿಗೆ ತಂದಿರುವುದನ್ನು ನಿರಸಿಸಿ, ಸಾಮಾಜಿಕ ಕಾರ್ಯಕರ್ತ ತೆಹಸೀನ್ ಪೂನಾವಾಲಾ ನೇತೃತ್ವದ ‘ಟೀಮ್ ಭಾರತ್’ ಜುಲೈ 31 ರಂದು ಸಂಸತ್ತಿನ ಸಮೀಪ ‘ಗಡ್ಡೀ ಮಾರ್ಚ್’ ನಡೆಸಲು ಯೋಜನೆ ರೂಪಿಸಿತ್ತು.

ಈ ಪ್ರತಿಭಟನಾ ಮೆರವಣಿಗೆಗೆ ಕೇವಲ ಎರಡು ದಿನಗಳ ಮುನ್ನ, ಅಂದರೆ ಬುಧವಾರದಂದು ‘ಟೀಮ್ ಭಾರತ್’ ಪ್ರತಿನಿಧಿಗಳೊಂದಿಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸಭೆ ನಡೆಸಿದರು. ಕೇಂದ್ರ ಸರ್ಕಾರ ಇಬಿಪಿ ಕಾರ್ಯಕ್ರಮವನ್ನು ವೇಗವಾಗಿ ಅನುಷ್ಠಾನಗೊಳಿಸುತ್ತಿರುವುದಕ್ಕೆ ಕೆಲವು ವಾಹನ ಸವಾರರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಶೇಕಡಾ 20 ರಷ್ಟು ಇಥನಾಲ್ ಬೆರೆಸಿದ ಪೆಟ್ರೋಲ್‌ನಿಂದಾಗಿ ಇಂಜಿನ್‌ಗಳು ಹಾಳಾಗುತ್ತಿವೆ, ಮೈಲೇಜ್ ಕಡಿಮೆಯಾಗುತ್ತಿದೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದೆ ಎಂದು ಅವರು ಆರೋಪಿಸುತ್ತಿದ್ದಾರೆ.

ಮುಖ್ಯವಾಗಿ ಏಪ್ರಿಲ್ 2023 ಕ್ಕಿಂತ ಮೊದಲು ತಯಾರಾದ ವಾಹನಗಳಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದು ಹೇಳಲಾಗುತ್ತಿದೆ. ಇಥನಾಲ್ ಬೆರೆಸುವುದಕ್ಕೂ ವಾಹನಗಳು ಹಾಳಾಗುವುದಕ್ಕೂ ನೇರ ಸಂಬಂಧವಿದೆ ಎಂಬುದನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆಯಾದರೂ, ಈ ಹಿಂದೆಂದೂ ಮಾಡದಂತೆ ಈ ಬಾರಿ ಮುಂಚಿತವಾಗಿಯೇ ಮಾತುಕತೆ ನಡೆಸಲು ಮುಂದಾಗಿದೆ.

ಪ್ರತಿಭಟನೆಗಳು ಆರಂಭವಾಗುವ ಮುನ್ನವೇ ಕೇಂದ್ರ ಸರ್ಕಾರ ಪ್ರತಿಭಟನಾಕಾರರೊಂದಿಗೆ ಚರ್ಚೆಗೆ ಬಂದಿರುವುದು ಇದೇ ಮೊದಲು ಎಂದು ಪೂನಾವಾಲಾ ಹೇಳಿದ್ದಾರೆ. ಈ ಸಭೆಯಲ್ಲಿ ಪೂನಾವಾಲಾ ನೇರವಾಗಿ ಭಾಗವಹಿಸದಿದ್ದರೂ, ಸರ್ಕಾರ ತೋರಿದ ಈ ಉಪಕ್ರಮ ಹಾಗೂ ಟೀಮ್ ಭಾರತ್ ಜೊತೆಗಿನ ಭೇಟಿಯನ್ನು ಧನಾತ್ಮಕ ಹೆಜ್ಜೆ ಎಂದು ಬಣ್ಣಿಸಿದ್ದಾರೆ.

“ಆರಂಭದಲ್ಲಿ ಪೆಟ್ರೋಲಿಯಂ ಇಲಾಖೆಯ ಅಧಿಕಾರಿಗಳೊಂದಿಗೆ ಮಾತ್ರ ಸಭೆ ನಡೆಯಬಹುದು ಎಂದು ಭಾವಿಸಲಾಗಿತ್ತು, ಆದರೆ ಇದು ಉನ್ನತ ಮಟ್ಟದ ಭೇಟಿಯಾಗಿ ಬದಲಾಯಿತು. ಸ್ವತಃ ಸಚಿವ ಹರ್ದೀಪ್ ಸಿಂಗ್ ಪುರಿ ಅವರೇ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರದ ಈ ಕ್ರಮಕ್ಕೆ ನಾವು ಕೃತಜ್ಞರಾಗಿದ್ದೇವೆ” ಎಂದು ಪೂನಾವಾಲಾ ತಿಳಿಸಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಈ ಭೇಟಿಯಲ್ಲಿ ಈ-20 ಬ್ಲೆಂಡಿಂಗ್ ನೀತಿ ಜಾರಿಗೆ ಸಂಬಂಧಿಸಿದ ಪ್ರತಿಯೊಂದು ವಿಷಯವನ್ನೂ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.

ಕಲ್ಮಶ ಅಥವಾ ಕಲಬೆರಕೆ ಇಂಧನದಿಂದಾಗಿ ಹಾನಿಯಾಗುತ್ತಿದೆಯೇ ಹೊರತು ಇಥನಾಲ್‌ನಿಂದ ಅಲ್ಲ ಎಂದು ಸಚಿವ ಪುರಿ ನಮ್ಮ ತಂಡಕ್ಕೆ ತಿಳಿಸಲು ಪ್ರಯತ್ನಿಸಿದರು. ಆದರೆ ನಮ್ಮ ಪ್ರಶ್ನೆ ಅತ್ಯಂತ ಸರಳವಾಗಿತ್ತು. ಪೆಟ್ರೋಲ್ ಬಂಕ್‌ಗಳಿಗೆ ಕಲಬೆರಕೆ ಇಂಧನ ಹೇಗೆ ತಲುಪುತ್ತಿದೆ? ಇದಕ್ಕೆ ಜವಾಬ್ದಾರರು? ಹೊಣೆಗಾರಿಕೆ ಮತ್ತು ತಪಾಸಣೆ ಇರಬೇಕಲ್ಲವೇ ಎಂದು ಪೂನಾವಾಲಾ ಪ್ರಶ್ನಿಸಿದ್ದಾರೆ. ಜುಲೈ 31 ರಂದು ನಡೆಸಲು ಉದ್ದೇಶಿಸಿರುವ ಮಾರ್ಚ್ ಬಗ್ಗೆ ಮರುಪರಿಶೀಲಿಸುವಂತೆ ಸಚಿವ ಪುರಿ ಅವರ ತಂಡ ಕೋರಿದ್ದು, ಆಂತರಿಕ ಚರ್ಚೆಯ ನಂತರವೇ ತಮ್ಮ ತಂಡ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ಸರ್ಕಾರದ ಮುಂದಿರುವ ‘ಟೀಮ್ ಭಾರತ್’ ಬೇಡಿಕೆಗಳು:

ಸಭೆಯಲ್ಲಿ ಟೀಮ್ ಭಾರತ್ ಸರ್ಕಾರದ ಮುಂದೆ ಕೆಲವು ನಿಖರವಾದ ಶರತ್ತುಗಳನ್ನು ಇಟ್ಟಿದೆ. 2023 ಕ್ಕಿಂತ ಮೊದಲು ತಯಾರಾದ ವಾಹನಗಳಿಗಾಗಿ ಈ-10 (E-10) ಪೆಟ್ರೋಲ್ ಅನ್ನು ಲಭ್ಯಗೊಳಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಆ ವಾಹನಗಳಲ್ಲಿ ಹೆಚ್ಚಿನವು ಈ-20 ಇಂಧನವನ್ನು ನಿರಂತರವಾಗಿ ಬಳಸಲು ಅನುಕೂಲಕರವಾಗಿ ತಯಾರಾಗಿಲ್ಲ ಎಂದು ಹೇಳಲಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಶುದ್ಧ ಪೆಟ್ರೋಲ್ (E-0) ಕೈಗೆಟುಕುವ ದರದಲ್ಲಿ ಸಿಗುವಂತೆ ನೋಡಿಕೊಳ್ಳಬೇಕು ಎಂದೂ ಗ್ರೂಪ್ ಬೇಡಿಕೆಯಿಟ್ಟಿದೆ.

ಮತ್ತೊಂದು ಪ್ರಮುಖ ಬೇಡಿಕೆಯೆಂದರೆ, ಶುದ್ಧ ಪೆಟ್ರೋಲ್‌ಗೆ ಹೋಲಿಸಿದರೆ ಈ-20 ಇಂಧನವನ್ನು ಶೇಕಡಾ 20 ರಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಬೇಕು. ಭಾರತದಲ್ಲಿ ಸಂಸ್ಕರಿಸಿದ ಇಂಧನವನ್ನು ಆಮದು ಮಾಡಿಕೊಳ್ಳುವ ನೇಪಾಳದಂತಹ ದೇಶಗಳು ಕಡಿಮೆ ಬೆಲೆಗೆ ಪೆಟ್ರೋಲ್ ಪಡೆಯುತ್ತಿರುವಾಗ, ಕಡಿಮೆ ಪೆಟ್ರೋಲ್ ಹೊಂದಿರುವ ಇಂಧನಕ್ಕೆ ಭಾರತೀಯ ಗ್ರಾಹಕರು ಏಕೆ ಸಮಾನ ಬೆಲೆ ನೀಡಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ಇದರೊಂದಿಗೆ ಈ-20 ಯ ಸಂಪೂರ್ಣ ನೀತಿ ದಾಖಲೆ (Policy Document) ಮತ್ತು ವೈಜ್ಞಾನಿಕ ಅಧ್ಯಯನಗಳನ್ನು ಸಾರ್ವಜನಿಕರ ಮುಂದೆ ಇಡಬೇಕೆಂದು ಟೀಮ್ ಭಾರತ್ ಆಗ್ರಹಿಸಿದೆ.

You cannot copy content of this page

Exit mobile version