ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸಕ್ಕೆ ದೊಡ್ಡ ನಷ್ಟ ಉಂಟಾಗುತ್ತೆ, ಕರ್ನಾಟಕ ಶ್ರೀಲಂಕಾ, ಪಾಕಿಸ್ತಾನದಂತೆ ಬರ್ಬಾದ್ ಆಗುತ್ತೆ ಅನ್ನೋ ಆರೋಪಗಳ ನಡುವೆ ರಾಜ್ಯದ ಮುಜರಾಯಿ ಇಲಾಖೆಗೆ ಸೇರುವ ದೇವಸ್ಥಾನಗಳ ಆದಾಯ ಕೇವಲ ಒಂದೇ ತಿಂಗಳಲ್ಲಿ ದುಪ್ಪಟ್ಟಾದ ಬಗ್ಗೆ ವರದಿ ಲಭ್ಯವಾಗಿದೆ.
ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುವುದಕ್ಕಿಂತ ಮುನ್ನ ಇದಕ್ಕೆಲ್ಲಾ ಹಣ ಎಲ್ಲಿಂದ ತರ್ತೀರಿ ಎಂದು ತಕರಾರು ತಗೆದವರು ಹಲವರು. ಆದರೆ ಈಗ ರಾಜ್ಯ ಪ್ರವಾಸೋದ್ಯಮ ಸೇರಿದಂತೆ ಮುಜರಾಯಿ ಇಲಾಖೆಯಿಂದ ರಾಜ್ಯದ ಬೊಕ್ಕಸಕ್ಕೆ ಅನಿರೀಕ್ಷಿತವಾಗಿ ಹಣ ಹರಿದು ಬರುತ್ತಿದೆ. ಸ್ವತಃ ಸರ್ಕಾರದ ಪ್ರತಿನಿಧಿಗಳೂ ಸಹ ಈ ಮಟ್ಟದ ಆದಾಯ ನಿರೀಕ್ಷಿಸಿರಲಿಲ್ಲ.
ಕೆಲವು ದೇವಾಲಯಗಳಂತೂ ಒಂದು ಇಡೀ ವರ್ಷಕ್ಕೂ ಮೀರಿದ ಆದಾಯವನ್ನು ಒಂದೇ ತಿಂಗಳಲ್ಲಿ ಗಳಿಸಿದ್ದು ದಾಖಲೆಯೇ ಸರಿ. ಕೇವಲ ದೇವಸ್ಥಾನಗಳು ಮಾತ್ರವಲ್ಲ, ಪ್ರವಾಸೋದ್ಯಮದ ಹಲವು ಪ್ರವಾಸಿ ತಾಣಗಳೂ ಕಿಕ್ಕಿರಿದು ಜನಸಂದಣಿ ಕಾಣುತ್ತಿವೆ. ನಷ್ಟ ಅನುಭವಿಸಬಹುದೆಂದೇ ನಿರೀಕ್ಷೆ ಮಾಡಿದ್ದ ಕೆಎಸ್ಆರ್ಟಿಸಿ ಸಂಸ್ಥೆಯ ಆದಾಯ ಕೂಡಾ ದ್ವಿಗುಣಗೊಂಡಿದೆ ಎಂಬ ವರದಿ ಲಭ್ಯವಾಗಿದೆ.
ಅಂದಹಾಗೆ ಮಾಹಿತಿಯ ಪ್ರಕಾರ 2022ರ ಜೂನ್ 11 ರಿಂದ ಜುಲೈ 15ರವರೆಗೆ ರಾಜ್ಯದ 58 ದೇವಾಲಯಗಳಲ್ಲಿ ಇ-ಹುಂಡಿಗಳ ಮೂಲಕ 19 ಕೋಟಿ ರೂ. ಸಂಗ್ರಹವಾಗಿತ್ತು. ಆದರೆ ಈ ವರ್ಷ ಬರೋಬ್ಬರಿ 24 ಕೋಟಿ 47 ಲಕ್ಷ ರೂಪಾಯಿ ಆದಾಯ ಬಂದಿದೆ.
● ಮೈಸೂರಿನ ಚಾಮುಂಡೇಶ್ವರಿ ಇ-ಹುಂಡಿಯಲ್ಲಿ ಭರ್ಜರಿ ಕಲೆಕ್ಷನ್ ಆಗಿದೆ. ಈ ವರ್ಷ ಜೂನ್ 11 ರಿಂದ ಜುಲೈ 15 ವರೆಗೆ 3 ಕೋಟಿ 63 ಲಕ್ಷ ಸಂಗ್ರಹವಾಗಿದ್ರೆ, ಕಳೆದ ವರ್ಷ ಕೇವಲ 48.01 ಲಕ್ಷ ಸಂಗ್ರಹವಾಗಿತ್ತು.
● ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಇ-ಹುಂಡಿಯಲ್ಲಿ ಈ ವರ್ಷ ಜೂನ್ 11 ರಿಂದ ಜುಲೈ 15 ವರೆಗೆ 11 ಕೋಟಿ 16 ಲಕ್ಷ ಸಂಗ್ರಹವಾಗಿದೆ. ಕಳೆದ ವರ್ಷ 11 ಕೋಟಿ 13 ಲಕ್ಷ ಸಂಗ್ರಹವಾಗಿತ್ತು.
● ಯಡಿಯೂರು ಸಿದ್ದಲಿಂಗೇಶ್ವರ ದೇಗುಲದ ಇ-ಹುಂಡಿಯಲ್ಲಿ ಈ ವರ್ಷ 1.48 ಕೋಟಿ ಸಂಗ್ರಹವಾಗಿದ್ರೆ, ಕಳೆದ ವರ್ಷ 1.20ಕೋಟಿ ರೂ. ಸಂಗ್ರಹವಾಗಿತ್ತು.
● ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸನ್ನಿಧಿಯ ಇ -ಹುಂಡಿಯಲ್ಲಿ ಈ ವರ್ಷ 1.27 ಕೋಟಿ ರೂ. ಸಂಗ್ರಹವಾಗಿದ್ದು, ಕಳೆದ ವರ್ಷ 1 ಕೋಟಿ 5 ಲಕ್ಷ ಬಂದಿತ್ತು.
● ಬೆಂಗಳೂರಿನ ಬನಶಂಕರಿ ದೇಗುಲದಲ್ಲೂ ಈ ವರ್ಷ 83.64 ಲಕ್ಷ ರೂ. ಸಂಗ್ರಹವಾಗಿದ್ದು, ಕಳೆದ ವರ್ಷ 65.82 ಲಕ್ಷ ಸಂಗ್ರಹವಾಗಿತ್ತು.
● ಬಳ್ಳಾರಿಯ ಕನಕದುರ್ಗಮ್ಮ ದೇವಿ, ಕೊಪ್ಪಳದ ಹುಲಿಗೆಮ್ಮ, ಕನಕಪುರದ ಕಬ್ಬಾಳಮ್ಮ, ಶ್ರೀರಂಗಪಟ್ಟಣದ ನಿಮಿಷಾಂಬ, ಬೆಂಗಳೂರಿನ ಬನಶಂಕರಿ ದೇವಿ ಸೇರಿ ದೇವಿ ದೇವಾಲಯಗಳಿಗೆ ಭಕ್ತರ ದಂಡಿನ ಜೊತೆ ಕೋಟ್ಯಂತರ ರೂ. ಆದಾಯ ಬಂದಿದೆ.
ಒಟ್ಟಾರೆ ಹೇಳುವುದಾದರೆ, ರಾಜ್ಯದ ದೇವಸ್ಥಾನಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಪ್ರವಾಸದ ಅಂದಾಜು ಇದ್ದರೂ, ಮಳೆಯ ಕಾರಣಕ್ಕೆ ಹೆಚ್ಚಿನ ಮಂದಿ ಪ್ರವಾಸ ಮೊಟಕುಗೊಳಿಸಿ, ಮುಂದಿನ ದಿನಗಳಲ್ಲಿ ಹೋಗುವ ತಯಾರಿ ಮಾಡಿಕೊಂಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲೂ ಈ ಆದಾಯ ದ್ವಿಗುಣಗೊಳ್ಳಬಹುದು ಎಂದೇ ಅಂದಾಜಿಸಲಾಗಿದೆ.