ಪುಸ್ತಕ : ಲಘುಬಿಗು
ಲೇ : ಚಂದ್ರಾವತಿ ಬಡ್ಡಡ್ಕ
ಪ್ರ : ಅಮ್ಮ ಪಬ್ಲಿಕೇಶನ್, ಕಟಪಾಡಿ
ಬೆಲೆ : ರು 120/
ಚಂದ್ರಾವತಿ ಬಡ್ಡಡ್ಕ ಅವರ ಲಘು ಬಿಗು ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಹಾಸ್ಯ ಲೇಖನಗಳಿಗೆ ಕೊಡಮಾಡುವ ʼನುಗ್ಗೆ ಹಳ್ಳಿ ಪಂಕಜʼ ದತ್ತಿ ಪ್ರಶಸ್ತಿ ಬಂದಿದೆ. ಇಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ. ಈ ಕೃತಿಯ ಕುರಿತು ಕೊಡಗಿನ ಸಂಗೀತಾ ರವಿರಾಜ್ ಬರೆದಿದ್ದಾರೆ.
ಭಾವ ಭಿತ್ತಿಯ ಲಹರಿಗಳನ್ನು ಫಳ ಫಳ ಹೊಳೆಯುವ ಹಾಗೆ ಬರೆಯುವ ಚಂದ್ರಾವತಿ ಬಡ್ಡಡ್ಕರವರ ಲಘು ಹರಟೆಗಳು ಎಂಬ ಹೆಸರು ಕೊಟ್ಟಿರುವ ಕೃತಿ ಲಘು ಬಿಗು. ಓದಿದಷ್ಟು ಓದಿಸಿಕೊಂಡು ಹೋಗುವ, ಹಂಬಲ ಹುಟ್ಟಿಸುವ ಇಲ್ಲಿನ ಪ್ರತಿ ಪದಗಳು, ಸಾಲುಗಳು ಓದಿನ ಕಡೆಗೆ ಒಂದು ರೀತಿಯಲ್ಲಿ ನಮ್ಮನ್ನು ಎಳೆದುಕೊಂಡು ಹೋಗುತ್ತವೆ. ಮಹಿಳೆಯರು ಹಾಸ್ಯ ಹರಟೆ ಬರೆಯುವುದು ತುಂಬಾ ಅಪರೂಪ ಎಂಬುದು ನಿಜ. ಈ ಅಪವಾದಕ್ಕೆ ಹೊರತಾಗಿ ಫೀನಿಕ್ಸ್ ನಂತೆ ನಮ್ಮ ನಡುವೆ ತಲೆ ಎತ್ತಿ ನಿಂತಿದೆ ಚಂದ್ರಕ್ಕ ನವರ ಲಘು ಬಿಗು ಹೊತ್ತಗೆ.
ಲಘು ಬಿಗುವಿನ ಎಲ್ಲ ಲಲಿತ ಪ್ರಬಂಧಗಳಲ್ಲಿ ಮೊದಲು ಕಂಡು ಬರುವ ಅಂಶವೆಂದರೆ ಮನುಷ್ಯನ ಒಳಗಿನ ಸಣ್ಣತನವನ್ನೆಲ್ಲ ಸಾರಾಸಗಟಾಗಿ ಯಾರಿಗೂ ನೋವಾಗದಂತೆ ಮೆಲ್ಲನೆ ಹೊರಗೆಳೆದಿರುವುದು. ಇಲ್ಲಿರುವ ಎಲ್ಲ ವಿಷಯಗಳು ಅತಿ ಸಾಮಾನ್ಯವೆಂಬಂತೆ ಕಂಡು ಬಂದರೂ ಅದು ಪ್ರತಿಯೊಬ್ಬರ ಜೀವನದಲ್ಲೂ ಎಲ್ಲೋ ಒಂದು ಕಡೆ ಅಸಮಾನ್ಯವಾಗಿ ಹಾಸು ಹೊಕ್ಕಾಗಿರುವ ವಿಷಯವೆ ಆಗಿದೆ. ಏನನ್ನು ಹೇಳಬೇಕೆಂದರು ಇತರ ಯಾರ ಬಗ್ಗೆಯು ಹೇಳದೆ ತನ್ನನ್ನೇ ತಾನು ನಗೆ ಪಾಟಲಿಗೆ ಈಡು ಮಾಡಿಕೊಂಡು ಬರೆದಿರುವುದು ಇವರ ಬರಹಗಳ ಬಹು ದೊಡ್ಡ ಶಕ್ತಿ ಮತ್ತು ಆಸ್ತಿ. ಯಾಕೆಂದರೆ ತನ್ನನ್ನೇ ತಾನು ಬರವಣಿಗೆಗೋಸ್ಕರ ಅಪಹಾಸ್ಯ ಮಾಡಿಕೊಳ್ಳುವ ಅಂತಃಶಕ್ತಿ ಎಲ್ಲರಿಗೆ ಬರಲು ಖಂಡಿತ ಸಾಧ್ಯವಿಲ್ಲ. ಯಾರಿಗೇ ಆದರೂ ನಾವೇನು ಬರೆದರು ಅದು ನಮ್ಮದೇ ಅನುಭವವೆಂದು ಜನ ಭಾವಿಸುತ್ತಾರೆ ಎಂಬ ಅಂಜಿಕೆಯಿರುತ್ತದೆ.
ಈ ಮೂಲಕ ಮೊದಲೇ ಹೇಳಿದಂತೆ ಮನುಷ್ಯನಲ್ಲಿರುವ ಗುಣವನ್ನೆಲ್ಲ ಸೂಕ್ಷ್ಮವಾಗಿ ಗುರುತಿಸುವಂತಹ ಸವಾಲಿನ ಕೆಲಸವನ್ನು ಸೃಜನಶೀಲತೆಯಿಂದ ಹುಡುಕಿ ಹಾಸ್ಯಭರಿತವಾಗಿ ಹೇಳಿ ಸಮಾಜ ತಿದ್ದಿ ನಡೆಯುವಂತೆ ಪ್ರೇರೇಪಿಸುತ್ತದೆ ಇಲ್ಲಿನ ಹರಟೆಗಳು. ” ಸೊಳ್ಳೆಯು ನಿನ್ನ ಬಳಿ ಸುಳಿಯುವುದಿಲ್ಲವೆಂದಾದರೆ ನೀನು ಅದ್ಯಾವ ಪರಿ ಕೊಳಕಿ ಇರಬಹುದು ಎಂಬುದು ಗೆಳತಿಯೊಬ್ಬಳ ಸ್ಟೇಟ್ಮೆಂಟ್ ” ಎಂಬುದು ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆಯು ಪ್ರಬಂಧದಲ್ಲಿದೆ. ಜೊತೆಗೆ ನಾನೊಬ್ಬಳು ಪ್ರೊಫೆಸರ್ ಮರೆವಿನ ವಿಚಾರದಲ್ಲಿ. ನಾನು ಸೋಮಾರಿ ಇತ್ಯಾದಿಗಳನ್ನು ನಿರ್ಭಿಡೆಯಿಂದ ಹೇಳಿಕೊಳ್ಳುವ ಲೇಖಕಿ ಹೀಗೆ ತನ್ನನ್ನು ಬರವಣಿಗೆಯಲ್ಲಿ ಅಪಹಾಸ್ಯ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ.

ತನ್ನ ಸ್ವ ಅನುಭವಕ್ಕೆ ಚಿಟಿಕೆಯಷ್ಟು ದಕ್ಕಿದ್ದನ್ನು ಬಲು ಸೃಜನಶೀಲತೆಯಿಂದ, ಲವಲವಿಕೆಯಿಂದ ಹಾಸ್ಯಮಯವಾಗಿ ಹೆಣೆದಿರುವುದು ಇಲ್ಲಿನ ಪ್ರಬಂಧಗಳ ಹೆಚ್ಚುಗಾರಿಕೆ. ದೈನಂದಿನ ಜೀವನಕ್ಕೆ ಮತ್ತು ಜೀವನದ ಹಾಸ್ಯ ಮನೋಭಾವಕ್ಕೆ ಒಂದು ಚಂದನೆಯ ಸಂಬಂಧ ಕಲ್ಪಿಸುವ ಇಲ್ಲಿನ ಪ್ರಬಂಧಗಳು ನಮ್ಮ ಮನೋಭಿತ್ತಿಯಲ್ಲಿ ಅಗ್ರಮಾನ್ಯ ಸ್ಥಾನ ಕಲ್ಪಿಸಿ ಕೊಡುತ್ತವೆ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಮಾಡಿರುವಂತಹ ‘ಲಾಫಿಂಗ್ ಸೆಂಟರ್’ ಗಳಿಗೆ ದುಡ್ಡು ಕೊಟ್ಟು ಹೋಗುವಂತಹ ಪ್ರಸ್ತುತ ದಿನಮಾನದ ಸಂದರ್ಭದಲ್ಲಿ , ಓದಿದಾಗ ದಿವ್ಯಾನುಭವ ನೀಡುವಂತಹ ಈ ಹಾಸ್ಯ ಹರಟೆಗಳು ಯಾವ ವೈದ್ಯರು ನೀಡುವಂತಹ ಮದ್ದಿಗೆ ಕಡಿಮೆಯಿಲ್ಲ. ಜನರನ್ನು ನಗಿಸುವ ಪ್ರಬಂಧ ಬರೆಯಬೇಕೆಂದರೆ ಅನುಭವಕ್ಕಾಗಿ ಗಲ್ಲಿಗಲ್ಲಿಯಲ್ಲಿ ಸುತ್ತಬೇಕಾಗುತ್ತದೆಯೆ ಎಂದು ಕೇಳಿರುವ ಪ್ರಸಂಗವೊಂದು ನನಗಿಲ್ಲಿ ನೆನಪಾಗುತ್ತಿದೆ. ಇದನ್ನು ಕೇಳಿದ್ದ ನಾನು ಮನಸಾರೆ ನಕ್ಕಿದ್ದೆ. ಜನರ ಮಾತಿನಂತೆ ಇವರೇನು ಗಲ್ಲಿ ಗಲ್ಲಿ ಸುತ್ತಿ ನಗು ಮಾಹಿತಿ ಸಂಗ್ರಹಿಸಿದರೇನೋ ಅಂದುಕೊಳ್ಳುವಷ್ಟು ವೈವಿಧ್ಯಮಯವಾಗಿ, ಸ್ವಾರಸ್ಯಕರವಾಗಿ ಮತ್ತು ಆಸಕ್ತಿದಾಯಕವಾದ ಬರಹಗಳು ಇಲ್ಲಿವೆ. ತಮ್ಮ ಜೀವನದಿಂದಲೇ, ಮನೆಯಿಂದಲೇ ಪ್ರಾರಂಭ ಮಾಡಿ ರೈಲ್ವೆ ಸ್ಟೇಷನ್, ಬಸ್ ಒಳಗಡೆ, ಬಾಡಿಗೆ ಮನೆ, ಆಫೀಸ್, ಪಿಕ್ನಿಕ್ ಹೀಗೆ ಹೋದಲ್ಲಿಂದೆಲ್ಲ ನಗುವಿನ ಕಡವನ್ನು ಹೊತ್ತು ತರುತ್ತಾರೆ. ಸೂಕ್ಷ್ಮತೆ ಎಂಬುದು ಇವರ ಮನಸ್ಸಿನಲ್ಲಿ ದೃಢವಾಗಿ ಬೇರೂರಿದೆ. ಹಾಗಾಗಿಯೇ ಇವರ ಪ್ರಬಂಧ ಗಳಲ್ಲಿ ಬರುವಂತೆ ಅಪ್ಪ ಅಮ್ಮನ ಶ್ರಮದ ದಿನಗಳು, ಕೂಡು ಕುಟುಂಬದಲ್ಲಿ ಬಾಳ್ವೆ ಮಾಡಿದ್ದು , ತುಂಬಾ ಶ್ರೀಮಂತಿಕೆಯಿಲ್ಲದ ಜೀವನ ಇವೆಲ್ಲ ಕಾರಣವಾಗಿರುತ್ತದೆ. ಮುಂದೆ ಬದುಕು ಕಟ್ಟಿಕೊಳ್ಳುವ ಹಂತದಲ್ಲಿಯೂ, ಧಾವಂತದ ಜೀವನದಲ್ಲಿಯೂ ತಮ್ಮ ಸೂಕ್ಷ್ಮತೆಯನ್ನು ಇನ್ನೂ ಒರೆಗೆ ಹಚ್ಚಿದಂತೆ ಕಾಪಾಡಿಕೊಂಡು ಬಂದಿರುವುದು ಬರವಣಿಗೆಯ ಪ್ರತಿಭೆ. ದುಬಾರಿ ಉಳ್ಳಾಗಡ್ಡಿ ಖರೀದಿಸುವ ಉಳ್ಳವರು” ಎಂಬ ಸಶಕ್ತ ಸಾಲೇ ಇವರ ಹಾಸ್ಯ ಬರವಣಿಗೆಗೆ ಹಿಡಿದ ಕೈಗನ್ನಡಿ ಎನ್ನಬಹುದು. ಇದರ ಒಳಾರ್ಥ ತಿಳಿಯ ಬೇಕೆಂದರೆ ಉಳ್ಳಾಗಡ್ಡಿ ಖರೀದಿಸುವ ಉಳ್ಳವರು ನಾವ್ ! ಪ್ರಬಂಧ ಓದಿಯೇ ತೀರಬೇಕು. ತುಂಬಾ ಚೆಂದನೆಯ ಪ್ರಬಂಧವಿದು.
ಪತ್ರಕರ್ತೆ ಎನ್ನುವ ನೀರ್ಭಿಡೆಯ ಉದ್ಯೋಗದಿಂದಾಗಿ ನಿರ್ಭಿಡೆಯಿಂದ ಬರೆಯುತ್ತಾರೋ ಅಥವಾ ನಿರ್ಭಿಡೆಯಿಂದ ಬರೆಯುವ ನೈಪುಣ್ಯದಿಂದ ಪತ್ರಕರ್ತೆಯಾದರೋ ಗೊತ್ತಿಲ್ಲ. ಒಟ್ಟಿನಲ್ಲಿ ನಿರ್ಭಿಡೆಯಿಂದ ಬರೆಯುವ ಅಂತಃಶಕ್ತಿ ಚಂದ್ರಾವತಿ ಬಡ್ಡಡ್ಕರಲ್ಲಿದೆ. ಇಲ್ಲಿನ ಲಲಿತ ಪ್ರಬಂಧ ಪ್ರಕಾರದಂತಹ ಲಘು ಹರಟೆಗಳನ್ನು ತಮ್ಮ ಮನೋಭಿತ್ತಿಯಿಂದ ನಿರ್ಭೀತಿಯಿಂದ ಹೊರಹಾಕಿದ್ದಾರೆ. ನಮಗೆಲ್ಲಾ, ತಿಂಡಿಯ ಘಮಕ್ಕೆ ಜೊಲ್ಲು ಸುರಿಸುತ್ತೇನೆ; ನಾನು ತಿಂಡಿಪೋತಿ, ಇಲ್ಲವೇ ಆಫೀಸ್ ಎಲ್ಲ ನಾತಮಯ ಹರಟೆಯಲ್ಲಿ ಇರುವಂತೆ ಹೂಸಿ ನ ಬಗ್ಗೆ ನಮ್ಮದೆಲ್ಲ ‘ ಸೌಂಡ್ ಫ್ಯಾಮಿಲಿ’, ಲುಂಗಿ ಕಥೆ ಈ ರೀತಿಯೆಲ್ಲ ಬರೆಯಲು ಏನೋ ಅಂಜಿಕೆ ಇರುತ್ತದೆ. ಏನು ಬರೆದರು ಅದು ನನ್ನ ಅನುಭವವೇ ಆಗಿರಬಹುದು ಎಂದು ಜನ ಊಹಿಸುತ್ತಾರೆ ಎನ್ನುವ ಅಂಜಿಕೆ ಬಹುತೇಕ ಬರಹಗಾರರದ್ದು ಆಗಿದ್ದರೂ ಇಲ್ಲಿ ಅಂತದ್ದಕ್ಕೆ ಆಸ್ಪದವೇ ಇಲ್ಲ. ಇದು ಕೂಡ ಈ ಕೃತಿಯ ಹೆಗ್ಗಳಿಕೆ.
ಇಲ್ಲಿನ ಹರಟೆಗಳೆಲ್ಲವೂ ನಮ್ಮೂರಿನ ಪ್ರಾದೇಶಿಕತೆಯ ಸೊಗಡಿನ ಲೇಪನದೊಂದಿಗೆ ತೇಜೋಹಾರಿಯಾಗಿ, ಸತ್ವಪೂರ್ಣವಾಗಿವೆ. ಸಾಮಾಜಿಕ ಸಂಬಂಧಗಳ ಹೂರಣದೊಂದಿಗೆ ಬರಹಗಳಲ್ಲಿ ನೀತಿಗಳು ಇವೆ. ಅಂದರೆ ಬರಹವನ್ನು ಓದಿ ಇದು ಸರಿ ಇದು ತಪ್ಪು ಎಂಬ ಸಂದೇಶಗಳನ್ನು ನಮಗೆ ನಾವೇ ರವಾನಿಸಿಕೊಂಡು ನಮ್ಮಿಂದ ತಪ್ಪಾಗುವ ಮೊದಲೇ ಅದನ್ನು ಸರಿಪಡಿಸಿಕೊಳ್ಳುವಂತಹ ಬರಹಗಳಿಂದ ನಾವು ಪ್ರೇರೇಪಿತಗೊಳ್ಳುತ್ತೇವೆ. ಚಿಕ್ಕ ಕೊರತೆಗಳನ್ನು ಲಘುವಾಗಿ ಪರಿಗಣಿಸದೆ ಇವರು ತಮಗೆ ತಾವೇ ಗುರುವಾಗಿದ್ದಾರೆ. ನಾಲಗೆಯ ಕುರಿತು ಇರುವ ಬರಹದಲ್ಲಿ, ರಾಜಕೀಯಕ್ಕೆ ಸಂಬಂಧಿಸಿದ ಬರಹಗಳಲ್ಲಿ, ಬಾಲ್ಯದ ಬೆಣ್ಣೆ ಕಡ್ಡಿ ಇಲ್ಲದ ಬರಹಗಳಲ್ಲೆಲ್ಲ ನಮಗಿದು ತೋರಿ ಬರುತ್ತದೆ. ಹಿರಿಯರು ನಿಶ್ಚಯಿಸಿಯೇ ಜಾತ್ಯತೀತ ಮದುವೆಯಾಗಿರುವುದನ್ನು ಉಲ್ಲೇಖಿಸಿರುವ ಪ್ರಬಂಧ’ ಅರ್ಥವೇ ಆಗದಿದ್ದ ಅಪ್ಪನೆಂಬ ಆಕಾಶ ತುಂಬಾ ಅಪ್ಯಾಯಮಾನವಾಗಿದೆ. ಅರೇಂಜ್ಡ್ ಮದುವೆಯಲ್ಲಿ ಜಾತ್ಯತೀತ ಎನ್ನುವುದೇ ನಮ್ಮೆಲ್ಲರ ಊಹೆಗೂ ನಿಲುಕದಷ್ಟು ಎತ್ತರದಲ್ಲಿದೆ. ತಂದೆಯ ಬಗ್ಗೆ ಇವರೇ ಹೇಳುವಂತೆ ಅನಕ್ಷರಸ್ಥರಾದರೂ ವಿದ್ಯಾವಂತ ! ಎಂಬ ಮಾತು ಅಕ್ಷರಶಃ ಒಪ್ಪುವಂಥದ್ದು.
ಚಂದ್ರಾವತಿ ಬಡ್ಡಡ್ಕ
ಲಘು ಬಿಗು ಸರ್ವರು ಓದುವಂತಹ ಕೃತಿ. ನಾನು ಇದನ್ನೋದಿ ಅದೆಷ್ಟೋ ನಕ್ಕಿದ್ದೇನೆ ಜೊತೆಗೆ ಹಗುರವಾಗಿ ಬಿಕ್ಕಿದ್ದೇನೆ ಕೂಡ… ಹಾಸ್ಯದಿಂದ ಕೂಡಿರುವ ಬರಹಗಳಾದರು, ಕಣ್ಣಂಚನ್ನು ತೇವಗೊಳಿಸುವ ಅಮ್ಮನ ಕುರಿತ ಅಕ್ಷರಗಳು ಇಲ್ಲಿವೆ. ಮುಗ್ಧ ಲೇಖಕಿಯ ನಗುವಿನ ಹಿಂದಿರುವ ಅಮಾಯಕ ನೋವಿನ ಗೆರೆಗಳೂ ಇದರಲ್ಲಿವೆ. ಇಲ್ಲಿನ ಬರಹದ ಗುಣಮಟ್ಟ ಅಗ್ರಮಾನ್ಯವಾಗಿ ಶ್ರೇಷ್ಠವಾಗಿದೆ. ಪದ ಸಂಪತ್ತು ಹೇರಳವಾಗಿದೆ. ಇಲ್ಲಿಯವರೆಗೆ ಪತ್ರಿಕೋದ್ಯಮದ ಒತ್ತಡದ ನಡುವೆ ಕೃತಿ ಪ್ರಕಟಿಸದೆ ಇದ್ದದ್ದು ಮಾತ್ರ ಓದುಗರಿಗಾಗಿರುವ ನಷ್ಟ ಎಂದರು ತಪ್ಪಲ್ಲ.
ಸಕಲ ಜೀವರಾಶಿಗಳನ್ನು ಒಳಗೊಂಡಂತೆ, ಇವರ ಹಾಸ್ಯ ಲಹರಿಗಳು ಹೊರ ಹೊಮ್ಮಿ ಓದುಗರಿಗೆ ತಂಪನ್ನೀಯಲಿ ಎಂಬುದಾಗಿ ಹಾರೈಸೋಣ. ಉಡುಪಿ ಕಟಪಾಡಿಯ ಅಮ್ಮ ಪ್ರಕಾಶನದಿಂದ ಈ ಕೃತಿಯು ಪ್ರಕಟಗೊಂಡಿದೆ.
ಸಂಗೀತ ರವಿರಾಜ್, ಕೊಡಗು
ಬರಹಗಾರರು