ಕನ್ನಡಿಗರ ಪ್ರಾಧಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ನಿಂದ ಜನರ ಹಣದಲ್ಲಿ ನಡೆಯುವ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಬಾ ಸಾಹೇಬರ ಆಶಯವಾದ ಸಮಾನತೆಗೆ ಮತ್ತು ವಿಶ್ವಮಾನವ ಕವಿ ಕುವೆಂಪು ಪ್ರತಿಪಾದಿಸಿದ ಸರ್ವಜನಾಂಗದ ಶಾಂತಿಯ ತೋಟಕ್ಕೆ ಅವಕಾಶ ಇಲ್ಲದಿರುವುದನ್ನು ಗಮನಿಸಿ ಅನೇಕ ಪ್ರಜ್ಞಾವಂತ ಮನಸುಗಳು ಆ ಸಮ್ಮೇಳನದಿಂದ ಹೊರಬಂದಿವೆ. ಹೀಗೆ ಹೊರ ಬಂದಿರುವವರಲ್ಲಿ ಬಹು ಮುಖ್ಯ ಹೆಸರು ಹೆಚ್. ಆರ್. ಸುಜಾತಾ ಅವರದು. ಅವರೇಕೆ ಹೊರಬಂದರು ಎಂಬುದನ್ನು ಅವರದೇ ಮಾತುಗಳಲ್ಲಿ ಕೇಳಿ…

ನನ್ನ ಸ್ನೇಹಿತೆಯೊಬ್ಬರು ಆ ದಿನ ನನ್ನೊಡನೆ ಮಾತನಾಡಿ ಬಹಳ ಪ್ರೀತಿಯಿಂದ ಹಾವೇರಿ ಸಾಹಿತ್ಯ ಸಮ್ಮೇಳನದ ಮೂರು ಕವಿಗೋಷ್ಠಿಯಲ್ಲಿ ಒಂದು ಕವಿಗೋಷ್ಠಿಯೊಂದರ ಅಧ್ಯಕ್ಷರಾಗಿ ನೀವು ಬನ್ನಿ ಎಂದು ಕರೆದಾಗ ನಾನು ಏಳನೇ ತಾರೀಕಿನಂದು ಆಗಬಹುದು ಎಂದು ಹೇಳಿದ್ದು ನಿಜ. ಆದರೂ ಒಳಗೊಳಗೆ ಅನುಮಾನ ಇದ್ದುದೂ ನಿಜ. ‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಇಂದಿನ ಸರ್ಕಾರದ ಜಾಳುಜಾಳಾದ ಧೋರಣೆಗಳನ್ನು ಮೀರಿ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲ ಧರ್ಮದವರನ್ನು, ಒಳಗೊಂಡು ಭಿನ್ನಬೇಧವಿಲ್ಲದೆ ಪ್ರಬುದ್ಧತೆಯಿಂದ ಕಾರ್ಯಕ್ರಮವನ್ನು ನಿರ್ವಹಿಸುವರೇ? ಈಗಿನ ಅಧ್ಯಕ್ಷರು ರಾಜಕೀಯವನ್ನು ಮೀರಿ ಕನ್ನಡ ಸಾಹಿತ್ಯದ ತಿರುಳನ್ನು ಗಟ್ಟಿಗೊಳಿಸುವರೇ?’
ಸ್ನೇಹಿತೆ ಆಮಂತ್ರಿಸಿದವರ ಲಿಸ್ಟನ್ನು ನನಗೆ ಕಳಿಸುವೆ ಎಂದಿದ್ದ ಕಾರಣ ನಾನು ಅದನ್ನು ಮರೆತು ನನ್ನ ಊರಿನ ತಿರುಗಾಟವನ್ನು ಮುಗಿಸಿ ಬಂದಾಗ ಎರಡು ದಿನದಲ್ಲೇ ಆಮಂತ್ರಣ ಪತ್ರಿಕೆ ವಾಟ್ಸ್ಅಪ್ ಗೆ ಬಂದಿತ್ತು. ಅಂದು ಸೋಮವಾರ. ನಾನು ಆ ಆಮಂತ್ರಣ ಪತ್ರಿಕೆಯನ್ನು ಕಂಡಕೂಡಲೇ ಯೋಚಿಸತೊಡಗಿದೆ. ಒಂದೆಡೆ ನಾನು ಕೊಟ್ಟ ಒಪ್ಪಿಗೆ. ಇನ್ನೊಂದೆಡೆ ನಿರಾಕರಣೆಯ ಯೋಚನೆ. ಏನು ಮಾಡಲಿ? ಆಗ ಮನಸ್ಸು ಬಲವಾಗಿ ನಿಂತಿದ್ದು ನಿರಾಕರಣೆಯ ಕಡೆಗೆ….
ತಕ್ಷಣವೇ ಆಮಂತ್ರಣ ಪತ್ರಿಕೆಯಲ್ಲಿದ್ದ ನ್ಯೂನತೆಗಳನ್ನು ಅಧ್ಯಕ್ಷರಿಗೆ ಬರೆದು ತಿಳಿಸಿ ನಿರಾಕರಣೆಯ ಪತ್ರ ಬರೆದು ನಿರಾಳವಾದೆ. ಆ ನಂತರದ ನಾಲ್ಕು ದಿನ ಮಾಧ್ಯಮಗಳಲ್ಲಿ ಓಡಾಡುತ್ತಿದ್ದ ಪ್ರತಿರೋಧದ ಮಾತುಗಳನ್ನು ಕೇಳುತ್ತ ಸುಮ್ಮನಾದೆ. ಆಗ ನನ್ನ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ನೋಡಿದ ಸ್ನೇಹಿತೆ ಜನವಾದಿಯ ಕೆ. ಎಸ್. ವಿಮಲ ಶುಕ್ರವಾರ ಮೆಸೇಜ್ ಮೂಲಕ ನನ್ನನ್ನು ಕೇಳಿದಳು. ‘ನಿನ್ನ ಹೆಸರನ್ನು ನೋಡಿ ಅಲ್ಲೇ ಕಣ್ಣು ಕೀಲಿಸಿತು’ ಎಂದು. ನಾನು, ನನ್ನ ನಿರಾಕರಣೆಯ ಪತ್ರದ ವಿಚಾರವನ್ನು ತಿಳಿಸಿದಾಗ ಅದನ್ನು ಆಕೆ ಗ್ರೂಪಲ್ಲಿ ಹಾಕಲಾಗಿ ಇದು ಪ್ರಚಾರಕ್ಕೂ ಬಂತು.
ಇನ್ನು ಮುಂದೆ ಯಾವುದೇ ಕಾರ್ಯಕ್ರಮ ಒಪ್ಪಿಕೊಳ್ಳುವಾಗ ಇಂಥ ಗೊಂದಲಗಳಿಂದ ದೂರವಿರಲು ಮೊದಲೇ ನಮ್ಮೊಡನೆ ಯಾರಿರುತ್ತಾರೆ ಅನ್ನುವುದನ್ನು ಗಮನಕ್ಕೆ ತಂದು ಒಪ್ಪಿಗೆ ನೀಡುವುದು ಸರಿ ಎಂದುಕೊಳ್ಳುತ್ತೇನೆ. ತರತಮದ ವಾತಾವರಣಕ್ಕಿಂತ ಎಲ್ಲರನ್ನೂ ಗೌರವಿಸುವ ಕಡೆಗೆ, ತರತಮವಿಲ್ಲದೆಡೆಗೆ ನಿಲುವಿರಬೇಕು ಎಂದು ನಿಶ್ಚಯಿಸಿದ್ದೇನೆ.
ನಮ್ಮ ನಡೆಗಳು ಪರಿಷತ್ತಿನಂಥ ಸಂಸ್ಥೆಯನ್ನು ಸ್ಥಾಪಿಸಿದವರ ಶ್ರಮ, ಹಂಬಲ, ಅದನ್ನು ಮುಂದುವರೆಸಿದವರ ಸದುದ್ದೇಶಗಳನ್ನು ಮರೆಯದಂತೆ, ಇದೇ ಸಂಸ್ಥೆಯಲ್ಲಿ ಮುಂದುವರೆಯಲು ಮುಂದಿನವರು ಮೂಗು ಮುರಿಯದಂತೆ ನಿರ್ವಹಿಸುವ ಜವಾಬ್ದಾರಿಯೂ ಇರುತ್ತದೆ ಎನ್ನುವ ನಂಬಿಕೆ ನನ್ನದು.
ಜನಪರ ಸಾಹಿತ್ಯ ಸಮ್ಮೇಳನದಲ್ಲಿ ಇರಬೇಕಾದ ಸಕಾರಾತ್ಮಕ ನಡೆಗಳು :
೧. ನಾವು ಹಿಂದಿನಿಂದಲೂ ನೋಡಿಕೊಂಡು ಬಂದ ಗಂಭೀರವಾದ ಸಾಹಿತ್ಯ ಸಮ್ಮೇಳನಗಳು ಯಾವುದೇ ಇರಲಿ, ಸಾಹಿತಿಗಳನ್ನು ಹತ್ತಿರದಿಂದ ಕಾಣುವ, ಅವರ ಮಾತುಗಳನ್ನು ಮನಕ್ಕಿಳಿಸುವ ಹಾಗೂ ಅನನ್ಯ ವಿಚಾರಗಳನ್ನು ಅರಗಿಸಿಕೊಳ್ಳುವ ವೇದಿಕೆಯಾಗಿದ್ದವು ಎಂಬುದರಲ್ಲಿ ಎರಡು ಮಾತಿಲ್ಲ.
೨. ದೂರದೂರದ ಸಾಹಿತಿಗಳನ್ನು ಸ್ನೇಹಿತರನ್ನು ಒಂದಾಗಿಸುವ, ಭೆಟ್ಟಿಯಾಗುವ ತಾಣವಾಗಿರುತ್ತವೆ.
೩. ಅತ್ಯಂತ ಗಂಭೀರ ಹಾಗೂ ಪ್ರಬುದ್ಧ ಯೋಚನಾಲಹರಿಯನ್ನು ಸಾಹಿತ್ಯ ಹುಟ್ಟು ಹಾಕಬಲ್ಲದು ಎನ್ನುವುದರಲ್ಲಿ ಎರಡು ಮಾತಿಲ್ಲ.
೪. ಎಷ್ಟೊಂದು ಪುಸ್ತಕಗಳನ್ನು ಕೊಳ್ಳುವ, ಹಾಗೂ ಪ್ರಕಟಣೆಗಳನ್ನು ಕಣ್ಣಾರೆ ಕಾಣುವ ಅವಕಾಶ
೫.ಅವರವರ ಸಾಹಿತ್ಯಕ್ಕೆ ಸಂಬಂಧಿಸಿದ ಅನುಭವಗಳನ್ನು, ಆತಂಕಗಳನ್ನು ಹಂಚಿಕೊಳ್ಳುವ ಸಮಯವೂ ಹೌದು.
೬. ಸಾಹಿತಿಗಳ ಸಮ್ಮೇಳನದಲ್ಲಿ ಸಾಹಿತಿಗಳ ಚಹರೆಗಳು, ಅಲೋಚನಾಲಹರಿಗಳು ಹೇಗೆ ಸಾಮಾನ್ಯರಿಗಿಂತ ಭಿನ್ನವಾಗಿರುತ್ತವೆ, ಅವರು ಈ ನೆಲದ ಜನಪರ ಕಾಳಜಿಯ ಪ್ರಶ್ನೆಗಳನ್ನು ಪ್ರಭುತ್ವದ ಎದುರು ಹುಟ್ಟುಹಾಕುತ್ತಿರುತ್ತಾರೆ ಎಂಬುದೂ ನಿಜ !
ಆದರೆ ವರ್ತಮಾನದಲ್ಲಿ-
೧. ಕನ್ನಡ ಸಾಹಿತ್ಯ ಪರಿಷತ್ತು ಇಂದು ಸಾಹಿತ್ಯಕ್ಕೆ ಪೂರಕವಾಗಿರದೇ ಭಿನ್ನವಾಗಿ ಮತ್ತೇನೋ ಚಟುವಟಿಕೆಗಳಲ್ಲಿ ರಾಜಕೀಯವನ್ನು ಬೆರೆಸಿಕೊಂಡು, ಅಧ್ಯಕ್ಷ ಸ್ಥಾನ ಹಣ ಹಾಗೂ ಬಲ ಪ್ರದರ್ಶನದ ಪೀಠವಾಗಿ, ಆಸೆಬುರುಕರ, ಜೊಲ್ಲುಬಡುಕರ ಸ್ಥಾನವಾಗಿದೆ.
೨. ಮೂಲ ಉದ್ದೇಶ ಇಲ್ಲಿ ಮರೆಯಾಗಿದೆ ಎಂದರೂ ತಪ್ಪಾಗಲಾರದು. ಪುಸ್ತಕ ಪ್ರಕಟಣೆಯ ಕಡೆಯಂತೂ ಗಮನವೇ ಇಲ್ಲ.
೩. ದೌಡಾಯಿಸುತ್ತಿರುವ ಈ ಕಾಲಮಾನದಲ್ಲಿ ಸಾವಧಾನದ ಕಾಲವು ಅವಸರದ ಬೆನ್ನಿಗೇರಿ ನಿಂತಿರುವುದರಿಂದ ಹಳೆಯ ಜಾಡಿನಲ್ಲಿ ಸಾಗುತ್ತಿರುವ ಸಾಹಿತ್ಯ ಸಮ್ಮೇಳನ ಅರ್ಥ ಕಳೆದುಕೊಂಡಿದೆ.
೪. ನಮ್ಮ ಭೇಟಿಗಳಿಗೂ ಸಹ ಕಾಲವನ್ನೇ ನಿಗದಿಪಡಿಸುವ ಕಾಲವಿದು. ಯಾರ ಬಗ್ಗೆಯೂ ಯಾರಿಗೂ ಕುತೂಹಲವಾಗಲಿ, ಅವಲೋಕನವಾಗಲಿ ಇಲ್ಲದಿರುವ ತಾಳ್ಮೆ ಯುವ ಜನತೆಯಲ್ಲಿ ಮರೆಯಾಗಿರುವುದೂ ಇದಕ್ಕೆ ಕಾರಣ.
೫. ಈಗ ತೆಳುವಾದ ವಿಚಾರ ವಿನಿಮಯ ಅಂಗೈ ಮೇಲಿನ ಮೊಬೈಲಿನಲ್ಲಿ ಬಂದು ಕೂತಿದೆ. ಗಂಭೀರ ಚಿಂತನೆ ಆಲೋಚನೆ ಇಳಿಮುಖವಾಗಿರುವುದು ಕೂಡಾ ಸಮ್ಮೇಳನಗಳ ಆಕರ್ಷಣೆ ಕುಂದಿಸಿದೆ ಎನ್ನಬಹುದು.
೬. ಜಾಗತೀಕರಣದ ಪ್ರಭಾವದಿಂದಾಗಿ ಎಲ್ಲವೂ ಬೆರಳ ತುದಿಯಲ್ಲೇ ಲಭ್ಯವಾಗಿ ಇಂಥ ಒಳಗೊಳ್ಳುವಿಕೆಗಳು ಸಾಹಿತ್ಯದಲ್ಲಿ ಹೊರತಾಗಿವೆ. ಸ್ಪರ್ಧೆಗಳು, ಸೋಲು, ಗೆಲುವು ಹಾಗೂ ವೈಯಕ್ತಿಕವಾಗಿ ನೆಲೆಗೊಳ್ಳುವ ಕಡೆಗೆ ಯುವ ಮನಸ್ಸು ತುಡಿಯುವುದಲ್ಲದೆ, ಸಾರ್ವತ್ರಿಕ ವಿದ್ಯಮಾನಗಳು ಮರೆಯಾಗಿ ವೈಯಕ್ತಿಕ ಹಂಬಲ ಮುಂದಾಗಿದೆ.
ಈ ಎಲ್ಲದರ ನಡುವೆಯೂ ಬದುಕು- ಬರಹ ಬೇರೆಯಲ್ಲ ಎಂಬ ನಂಬಿಕೆ, ತಮ್ಮೊಳಗನ್ನು ಎಲ್ಲರೊಳಗೊಂದಾಗಿಸುವ
ಸಾಹಿತ್ಯದ ಜವಾಬ್ದಾರಿ ಬಹು ದೊಡ್ಡದು. ಅದಕ್ಕಾಗಿ ದುಡಿಯುವ ಹಾವೇರಿ ಸಮ್ಮೇಳನದ ಉದ್ದೇಶಗಳು ತುಳು, ಕೊಂಕಣಿ ಹಾಗೂ ಇತರೆ ಅಕಾಡೆಮಿಗಳ ಜೊತೆ ಬ್ಯಾರಿ ಅಕಾಡೆಮಿಯನ್ನು ಒಳಗೊಂಡಿದ್ದರೆ, ಧರ್ಮ ಅಧರ್ಮಗಳನ್ನು ಮರೆತು ಭಿನ್ನಭೇಧವಿಲ್ಲದೆ ಅಪರೂಪದ ಸಾಹಿತಿಗಳೆಲ್ಲರನ್ನು ಸಮ್ಮೇಳನಕ್ಕೆ ಕರೆತಂದಿದ್ದರೆ ಅದು ಘನತೆಯಿಂದ ಜರುಗುತ್ತಿತ್ತೇನೋ….ಹಾಗೇ ನಡೆಯಬೇಕು ಎಂಬುದು ಎಲ್ಲರ ಆಶಯ. ಎಲ್ಲ ಸಮ್ಮೇಳನದಲ್ಲಿ ಹುಟ್ಟುವ ಇಂಥ ಭಿನ್ನಾಭಿಪ್ರಾಯಗಳು ನಮ್ಮ ಯುವ ಮನಸ್ಸುಗಳನ್ನು ಸಾಹಿತ್ಯದಿಂದ ದೂರವಾಗಿಸದಂತೆ ಒಳಗೊಳ್ಳುವ ಜವಾಬ್ದಾರಿ ಕೂಡಾ ನಮ್ಮ ಹೆಗಲ ಮೇಲಿದೆ.
ಇಂಥ ಸಮ್ಮೇಳನಗಳು ನವೀಕರಣಗೊಂಡು ಜನಪರ ಕಾಳಜಿಗಳನ್ನು, ಉತ್ಸಾಹದ ಯುವಮನಸ್ಸುಗಳನ್ನು ಕೂಡಿಕೊಂಡು ಹೆಜ್ಜೆ ಹಾಕಲಿ. ಕನ್ನಡವೆಂಬುದು ಭಾಷೆಯಲ್ಲ, ಮನಸ್ಸುಗಳ ಸಂಗಮ. ಹತ್ತಾರು ಕವಲುಗಳು ಸೇರಿದ ಈ ಮಣ್ಣೊಳಗೆ ಅರಳಿದ ಅನಾದಿ ಕಾಲದ ಮರ. ಬೇರುಗಳು ಆರೋಗ್ಯವಾಗಿದ್ದಲ್ಲಿ ಮಾತ್ರ ಕವಲೊಡೆದ ಕೊಂಬೆ, ಚಿಗುರು, ಹೂವು, ಹಣ್ಣು, ಹಕ್ಕಿ ಸಂಸಾರ. ಆಗಸಕ್ಕೆ ಚಿಗಿತ ಚಿಗುರು ಎಲೆಗಳು ತಮ್ಮ ಬೊಗಸೆಯಲ್ಲಿ ಮಳೆನೀರನ್ನಲ್ಲದೆ, ಇಬ್ಬನಿಯನ್ನೂ ಹಿಡಿದು ತನ್ನ ಬೇರಿಗೆ ಉಣಿಸುತ್ತವೆ ಎಂಬುದು ಸತ್ಯದರ್ಶನ.
ಇದರೊಡನೆ ನನ್ನ ತವರಿನ ನೆನಪೊಂದು ಒತ್ತಿ ಬರುತ್ತಿದೆ. ನಮ್ಮ ಹೊಲದ ಬದಿಯಲ್ಲೊಂದು ಹಳೆಯ ಹಲಸಿನ ಮರ. ಅದಕ್ಕೊಂದು ದೊಡ್ಡ ಪೊಟರೆ. ಪ್ರತಿ ವರ್ಷವೂ ಮರೆಯದೆ ನನ್ನಪ್ಪ ಅದಕ್ಕೆ ಕಲ್ಲು ತುಂಬಿಸಿ ಮಣ್ಣು ಒತ್ತರಿಸಿ ಬುಡವನ್ನು ಗಟ್ಟಿಗೊಳಿಸುತ್ತಿತ್ತು. ಮೇಲೆ ನೋಡಿದರೆ ಹಗ್ಗದಲ್ಲಿ ಇಳಿಸಬೇಕಾದ ದೊಡ್ಡ ದೊಡ್ಡ ಹಣ್ಣುಗಳು. ಅವನ್ನು ಜೋಕೇಲಿ ಇಳಿಸಿ ಬಚ್ಚಲುಮನೆಯ ಮೂಲೆಯಲ್ಲಿ ಒಟ್ಟು ಹಾಕಿರುತ್ತಿದ್ದರು. ನಾವು ಮಾತ್ರವಲ್ಲದೆ ಆಳುಕಾಳು, ಇಡೀ ಊರೇ ಬಂದು ಹಣ್ಣು ಕೊಯ್ದು ತಿನ್ನುತ್ತಿತ್ತು. ಅಟ್ಟಣಿಗೆಯ ಮೇಲೊಂದು ಕುಡಲು, ಎಣ್ಣೆ ಬಟ್ಟಲು ಇರುತಿತ್ತು. ಹಣ್ಣು ಕೊಯ್ದಾಗ ಒಸರುವ ಮೇಣವನ್ನು ಕೊಟ್ಟಿಗೆಯಲ್ಲಿನ ಹುಲ್ಲುತಂದು ಅಂಟು ಒರೆಸಿ ನೀರೊಲೆಗೆ ಎಸೆದರೆ ಮುಗಿಯಿತು. ಮಾತುಮಾತು, ಹಣ್ಣಿನ ಘಮ ಹಿಂದಿನ ಅರಿಯನ್ನು ತುಂಬಿರುತ್ತಿತ್ತು.
ಈಗ ಹೈವೇಗಳಲ್ಲಿ ಕಾಯಿಕಸಿಯನ್ನೇ ಕಿತ್ತು ತಂದು ಗುಡ್ಡೆಹಾಕಿ ಹಲಸು ಮಾರುವುದನ್ನು ಕಂಡಾಗ, ಹತ್ತಾರು ಹಲಸಿನ ಮರವಿದ್ದರೂ ಪೊಟರೆಯಾಗಿದ್ದ ಆ ಮರವನ್ನು ಕಾಪಾಡುತ್ತಿದ್ದ ಅಪ್ಪ, ಮನೆಮಕ್ಕಳನ್ನು ಮೀರಿ ಹೊಟ್ಟೆ ತುಂಬ ಹಣ್ಣು ತಿಂದು ಮಾತಾಡಿ ಹೋಗುತ್ತಿದ್ದ ನಮ್ಮವರೆಲ್ಲರ ನೆನಪಾಗುತ್ತದೆ. ನೆಲದಲ್ಲಿ ನಿಂತು ತಲೆಯೆತ್ತಿ ನೋಡಿದಾಗ ಆ ಹಳೆ ಮರದ ತುಂಬ ಹಣ್ಣನ್ನು ಕುಕ್ಕುತ್ತಿದ್ದ ಥರಥರದ ಹೊಸ ಹಕ್ಕಿಗಳು, ಕಾಗೆಗಳು. ಹಣ್ಣು ಕೊಯ್ದಾಗ ಮನೆ ಮನ ತುಂಬುತ್ತಿದ್ದ ಹಲಸಿನ ಸೇಡೆಗೆ ಮುಸುಮುಸನೆ ಸದ್ದು ಮಾಡುತ್ತಿದ್ದ ಕೊಟ್ಟಿಗೆಯ ದನಕರುಗಳು, ಎಷ್ಟೊಂದು ನಂಟು ಬಾಯಿ ತೆರೆಯುತ್ತಿದ್ದವು ನಮ್ಮೊಡನೆ. ಅಂಥ ಸಾವಯವ ಸಂಬಂಧವನ್ನು ಕಾಯುವಂಥ ತಾಳ್ಮೆ ಎಲ್ಲ ಸಾಹಿತ್ಯ ಸಮ್ಮೇಳನದಲ್ಲಿ ನಮಗೆ ಸಿಗಲಿ.
ಹೆಚ್. ಆರ್. ಸುಜಾತಾ
ಲೇಖಕರು, ಕವಿಗಳು, ಕಥೆಗಾರರು, ಅಂಕಣಕಾರರು.