Home ಜನ-ಗಣ-ಮನ ಹೆಣ್ಣೋಟ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ

ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ

0

ದಶಕದ ಸಂಭ್ರಮ: ಒಗ್ಗೂಡುವ ಹಬ್ಬ

ʼಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ವು ತಾನು ಕ್ರಮಿಸಿದ ಹತ್ತು ವರ್ಷಗಳ ಪಯಣದ ನೆನಪಿಗೆ  ‘ಒಗ್ಗೂಡುವ ಹಬ್ಬ’ ಕಾರ್ಯಕ್ರಮವನ್ನು ಆಯೋಜಿಸಿದೆ. ಒಕ್ಕೂಟದ ಸಕ್ರಿಯ ಸದಸ್ಯೆ ಹಾಗೂ ಬಿಜಾಪುರದ ಅಕ್ಕಮಹಾದೇವಿ ವಿ.ವಿ.ಯ ವಿಶ್ರಾಂತ  ಕುಲಪತಿಗಳಾದ ಸಬಿಹಾ ಭೂಮೀಗೌಡರು ಒಕ್ಕೂಟ ನಡೆದು ಬಂದ ಹಾದಿಯನ್ನು ನಿಮ್ಮ ಮುಂದೆ ತೆರೆದಿಟ್ಟಿದ್ದಾರೆ. ಚಳುವಳಿಗಳು ಕಸುವು ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಒಕ್ಕೂಟದ ಕ್ರಿಯಾಶೀಲತೆ ಒಂದಷ್ಟು ಭರವಸೆಯನ್ನು ಮೂಡಿಸುವಂತಿದೆ.

ಮೊದಲ ಹೆಜ್ಜೆಗಳು:

‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ವು ಆರಂಭವಾಗಿ ಹತ್ತು ವರ್ಷಗಳು ಪೂರ್ಣಗೊಂಡಿವೆ. ಈಗ ಹಿಂತಿರುಗಿ ನೋಡಿದಾಗ ಹಲವು ರಂಗುಗಳ, ಭಾವಗಳ, ಜನರ ನಾಡಿಮಿಡಿತದ ಸಮ್ಮಿಲನದಂತೆ ಒಕ್ಕೂಟವು ಕಾಣುತ್ತದೆ. ಅದು (2011-12) ಕರಾವಳಿಯಲ್ಲಿ ಅನೈತಿಕ ಪೊಲೀಸ್‍ಗಿರಿ ಮಿತಿಮೀರಿದ ಕಾಲ. ಪಬ್‍ಗೆ ಹೋಗಿದ್ದ ಯುವತಿಯರ ಮೇಲೆ ಹಲ್ಲೆ, ಹುಟ್ಟುಹಬ್ಬವನ್ನು ಹೋಮ್ ಸ್ಟೇಯಲ್ಲಿ ಆಚರಿಸುತ್ತಿದ್ದವರ ಮೇಲಿನ ಹಲ್ಲೆಗಳು ಕರಾವಳಿಯ ಜನರ ಸಹನೆಯ ಕಟ್ಟನ್ನು ಒಡೆದ ಘಟನೆಗಳು. ಶಾಲೆ-ಕಾಲೇಜುಗಳಿಗೆ ಹೋದ ತಮ್ಮ ಮಕ್ಕಳು ಸುರಕ್ಷಿತವಾಗಿ ಮನೆಗೆ ಬಂದಾರೇ ಎಂಬ ದಿಗಿಲು ಹೆತ್ತವರನ್ನು ಕಾಡಿದ ಕಾಲವದು. ಹೆತ್ತವರಲ್ಲ, ಬಂಧುಬಳಗವಲ್ಲ, ಯಾವುದೋ ಕಾಣದ ಪುಂಡುಪೋಕರಿಗಳು ಯುವಜನತೆಯನ್ನು ನಿಯಂತ್ರಿಸಿ, ನಿರ್ದೇಶಿಸುತ್ತಿದ್ದ ಕಾಲವೆನಿಸಿತ್ತು. ಇದನ್ನು ಕ್ರಿಯಾತ್ಮಕವಾಗಿ ಎದುರಿಸುವ ಅಗತ್ಯದ ಅನಿವಾರ್ಯತೆಯಿಂದ ಮಂಗಳೂರಿನ ಡೀಡ್ಸ್‌ ಸಂಸ್ಥೆಯ ಅಂಗಳದಲ್ಲಿ ಮರ್ಲಿನ್ ಮಾರ್ಟಿಸ್ ಅವರ ನೇತೃತ್ವದಲ್ಲಿ 2012ರ ಡಿಸೆಂಬರ್ ತಿಂಗಳಲ್ಲಿ 10-15 ಜನರು ಸೇರಿದ್ದೆವು. ಮಹಿಳಾ ದೌರ್ಜನ್ಯ ವಿರೋಧೀ ವೇದಿಕೆಯ ಆರಂಭವಿದು. ಸತ್ಯ ಶೋಧನಾ ವರದಿಗೆ ಇಳಿದದ್ದು ವೇದಿಕೆಯ ಮೊದಲ ಹೆಜ್ಜೆ. ಅದೇ ವೇಳೆಗೆ ನಡೆದ ನಿರ್ಭಯಾ ಪ್ರಕರಣವು ನಮ್ಮ ಕ್ರಿಯೆಗೆ ಇನ್ನಷ್ಟು ತೀವ್ರತೆಯನ್ನು ನೀಡಿತು. ರತಿ ರಾವ್ (ಮೈಸೂರು), ಡಾ. ಎಚ್ ಎಸ್ ಅನುಪಮಾ (ಕವಲಕ್ಕಿ), ದು. ಸರಸ್ವತಿ(ಬೆಂಗಳೂರು) ಮುಂತಾದ ಗೆಳತಿಯರು ಮಹಿಳಾ ದೌರ್ಜನ್ಯ ವಿರೋಧೀ ವೇದಿಕೆಯ ಕೆಲಸಗಳಿಗೆ ಕೈ ಜೋಡಿಸಿ, 2013ರ ಮಾರ್ಚ್‍ಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕನಸನ್ನು ವೇದಿಕೆಯ ಗೆಳತಿಯರಲ್ಲಿ ಬಿತ್ತಿದರು.

ಶಿವಮೊಗ್ಗ ವಿಚಾರ ಸಂಕಿರಣ

ಮೊದಲ ಸಮಾವೇಶ:

2013ರ ಮಾರ್ಚ್‌೭ ರಂದು ಮಂಗಳೂರಿನಲ್ಲಿ ನಡೆದ ವಿಚಾರ ಸಂಕಿರಣದ ಉದ್ಘಾಟನೆಯು ಮಹಾರಾಷ್ಟ್ರದ ದಲಿತ ಚಿಂತಕಿ ಊರ್ಮಿಳಾ ಪವಾರ್ ಅವರಿಂದ ನಡೆಯಿತು. ಸಂಜೆಯ ಕಪ್ಪು ಉಡುಗೆಯಲ್ಲಿ ಮಹಿಳೆಯರ ಮೌನ ಪ್ರತಿಭಟನೆಯ ಕಾರ್ಯಕ್ರಮವು ವಿಮೋಚನಾದ ಗೆಳತಿಯರ ನೆರವಿನಿಂದ ನಡೆಯಿತು. ಯುವ ಜನರಿಗೆ ಚಿತ್ರ ಪ್ರದರ್ಶನ ಮತ್ತು ಚಿತ್ರವಿಮರ್ಶೆಯ ಕಾರ್ಯಕ್ರಮ ಕೂಡ ನಡೆಯಿತು. ಮರುದಿನ ಬೃಹತ್ ಸಾರ್ವಜನಿಕ  ರ‍್ಯಾಲಿಯನ್ನು ರಾಜಸ್ಥಾನದ ಸಾಥಿನ್ ಬಾಂವ್ರಿದೇವಿ ಉದ್ಘಾಟಿಸಿದರು. ಕರಾವಳಿಯ ನಾಗರಿಕರು, ಯುವಜನತೆ, ವಿವಿಧ ಮಹಿಳಾ ಸಂಘಟನೆಗಳು, ದಲಿತ ದಮನಿತರ ಸಂಘಟನೆಗಳು, ಅಂಗನವಾಡಿ, ಪೌರಕಾರ್ಮಿಕರು, ಬಿಸಿಯೂಟ ನೌಕರರು, ಆಶಾ ಕಾರ್ಯಕರ್ತೆಯರು-ಮನೆಕೆಲಸದ ಕಾರ್ಮಿಕರು, ಗಾರ್ಮೆಂಟ್ ಮತ್ತು ಇನ್ನಿತರ ಕಾರ್ಮಿಕರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಸ್ವಯಂಸೇವಾ ಸಂಸ್ಥೆಗಳು, ಲೈಂಗಿಕ ಕಾರ್ಯಕರ್ತರು-ಲಿಂಗತ್ವ ಅಲ್ಪಸಂಖ್ಯಾತರ ಗುಂಪುಗಳು, ಲೇಖಕಿಯರ ಸಂಘ, ರಂಗಕರ್ಮಿಗಳು, ಅಕಾಡೆಮಿಕ್ ವಲಯದ ಸಮಾನ ಮನಸ್ಕರು ಮೊದಲಾಗಿ ನೂರಾರು ಸಂಘ-ಸಂಸ್ಥೆ-ಸಂಘಟನೆಗಳು ಪ್ರೀತಿ ಮತ್ತು ಬದ್ಧತೆಯಿಂದ ವೇದಿಕೆಯ ಕೆಲಸಕ್ಕೆ ಕೈ ಜೋಡಿಸಿ ಮಹಿಳಾ ದಿನಾಚರಣೆಯನ್ನು ಯಶಸ್ವಿ ಗೊಳಿಸಿದರು. ಬೆಂಗಳೂರಿನ ಸಮುದಾಯದ ಭೂಮಿಬಳಗ ತಂಡದವರು ಮೊಳಗಿಸಿದ ಹಾಡುಗಳು ಒಟ್ಟು ಕಾರ್ಯಕ್ರಮಕ್ಕೆ ಚುರುಕನ್ನು ತಂದವು.

ವೇದಿಕೆಯು ಒಕ್ಕೂಟವಾಗಿ:

2013ರ ಸಂಜೆ ನಾಡಿನ ವಿವಿಧೆಡೆಯಿಂದ ಬಂದ ಮಹಿಳಾ ಮುಂದಾಳುಗಳ ಸೂಚನೆಯಂತೆ ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ವು ರಚನೆಯಾಯಿತು. ಹೀಗೆ ಆರಂಭವಾದ ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ದ ನಡಿಗೆಯು ಮೈಸೂರು, ಬೆಂಗಳೂರು, ವಿಜಯಪುರ, ಕೊಪ್ಪಳ, ಶಿವಮೊಗ್ಗ, ಧಾರವಾಡ, ಮಂಡ್ಯ, ಕೋಲಾರ, ಕಲ್ಬುರ್ಗಿ ಜಿಲ್ಲೆಗಳಿಗೆ ಸಾಗಿ 2023ರ ಮಾರ್ಚ್ 7, 8 ರಂದು ತುಮಕೂರಿನಲ್ಲಿ ನಡೆಯಲಿದೆ. ಎಲ್ಲೆಡೆಯೂ ಮೊದಲ ದಿನವು ಮಹಿಳಾ ವಿಚಾರಗಳಿಗೆ ಮತ್ತು ಸ್ಥಳೀಯ ಸಮಸ್ಯೆಗಳಿಗೆ ಸಂಬಂಧಿಸಿದ ವಿಚಾರ ಸಂಕಿರಣ, ಸಂಜೆ ಕಪ್ಪು ಉಡುಪಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೌನ ಪ್ರತಿಭಟನೆಯ ಕಾರ್ಯಕ್ರಮಕ್ಕೆ ಮೀಸಲು. ಎರಡನೆಯ ದಿನ ಬೃಹತ್ ಸಾರ್ವಜನಿಕ ರ್ಯಾಲಿ ಮತ್ತು ಸಮಾವೇಶ ನಡೆಸುವ ಪದ್ಧತಿಯನ್ನು ಬೆಳೆಸಿಕೊಳ್ಳಲಾಗಿದೆ. ಈ ಹತ್ತು ವರ್ಷಗಳ ಅವಧಿಯಲ್ಲಿ ಭಾರತದ ವಿವಿಧ ರಾಜ್ಯಗಳ ಮಹಿಳಾ ಸಬಲೀಕರಣಕ್ಕಾಗಿ ದುಡಿದ ಹೋರಾಟಗಾರ್ತಿಯರು ಒಕ್ಕೂಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅವರುಗಳೆಂದರೆ, ಕಾರಿನ್ ಕುಮಾರ್(ವಿಮೋಚನಾ), ಮಣಿಪುರದ ಸೇನೆಯ ವಿಶೇಷಾಧಿಕಾರವನ್ನು ವಿರೋಧಿಸಿ ಹುಟ್ಟಿದ ಮೈರಾ ಪೈಬಿ ಗುಂಪಿನ ಇಮಾ ನಂಬಿ, ಚಿತ್ರಾ ಅಹೆಂತಮ್, ರೇಣು ತಕಲೆಂಬಮ್, ಚೆನ್ನೈನ ವಿ. ಗೀತಾ, ಭೋಪಾಲ್ ಅನಿಲ ದುರಂತದ ಸಂತ್ರಸ್ತೆಯರಿಗಾಗಿ  ದುಡಿಯುತ್ತಿರುವ ರಶೀದಾ ಬಿ ಮತ್ತು ಚಂಪಾದೇವಿ ಶುಕ್ಲಾ, ಜೆಎನ್‍ಯು ಪ್ರಾಧ್ಯಾಪಕರಾದ ಉಮಾ ಚಕ್ರವರ್ತಿ, ನರ್ಮದಾ ಉಳಿಸಿ ಆಂದೋಲನದ ಮೇಧಾ ಪಾಟ್ಕರ್, ರಂಜನಾ ಪಾಂಡಿ(ಒರಿಸ್ಸಾ), ಗೋಗು ಶ್ಯಾಮಲ( ಆಂಧ್ರಪ್ರದೇಶ), ಕವಿತಾ ಕೃಷ್ಣನ್(ಐಪ್ವಾ), ಮನಿಶಾ ಗುಪ್ತೆ( ಪೂನಾ), ಕೌಟುಂಬಿಕ ಹಿಂಸೆಯ ವಿರುದ್ಧ ಗಟ್ಟಿ ದನಿ ಎತ್ತಿದ ಫ್ಲೇವಿಯಾ ಆ್ಯಗ್ನೆಸ್ (ಮುಂಬೈ), ಅಮರ್ ಜಿತ್ ಕೌರ್(ಎಐಸಿಟಿಯು), ಮಣಿಮೇಖಲಾ(ನವದೆಹಲಿ), ಲತಾ ಪಿ ಎಂ( ಮುಂಬೈ), ಹೋರಾಟಗಾರ್ತಿ ಮತ್ತು ಲೇಖಕಿ ವೊಲ್ಗಾ(ಹೈದರಾಬಾದ್), ಶಬನಮ್ ಹಶ್ಮಿ(ದೆಹಲಿ), ಜುಪಾಕ ಸುಭದ್ರಾ(ತೆಲಂಗಾಣ), ಮರಿಯಮ್ ಧವಳೆ( ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ). ಇಂಥ ಪ್ರಯತ್ನಗಳು ಮಹಿಳಾ ಹೋರಾಟಗಾರ್ತಿಯರನ್ನು ಒಗ್ಗೂಡಿಸುವ, ಹೊರ ರಾಜ್ಯಗಳ ಅವರ ತಿಳಿವನ್ನು ಇಲ್ಲಿಗೂ ಇಲ್ಲಿಯ ವಿಚಾರಗಳನ್ನು ಅಲ್ಲಿಗೂ ಬಿತ್ತರಿಸುವ ಮೂಲಕ ಪರಸ್ಪರ ಶಕ್ತಿಸಂಚಯ ಮಾಡಿಕೊಳ್ಳುವ ಸಕಾರಣವನ್ನು ಹೊಂದಿವೆ.

ಕೊಪ್ಪಳ ಸಮಾವೇಶ

ಸ್ಮೃತಿ ಸಂಚಯಗಳು

ಮಂಗಳೂರಿನಿಂದ ತೊಡಗಿ ಕಲಬುರುಗಿಯ ಸಮಾವೇಶದವರೆಗೂ ವಿಚಾರ ಸಂಕಿರಣ ಹಾಗೂ ಸಮಾವೇಶದ ಸಂದರ್ಭದ ನುಡಿಗಳನ್ನು ಬರಹ ರೂಪದಲ್ಲಿ ಸಂಕಲಿಸಿ ದಾಖಲಿಸಲಾಗಿದೆ. ಗತ ಹಾಗೂ ಭವಿಷ್ಯದ ಮಧ್ಯೆ ನಿಂತ ನಮ್ಮ ಹೋರಾಟದ ಅನುಭವಗಳು ಲಯವಾಗಿ ಹೋಗದಿರಲೆಂಬ ಕಾಳಜಿಯಿಂದ ಅವುಗಳನ್ನು ದಾಖಲಿಸುವುದೇ ಈ ಕೃತಿ ಪ್ರಕಟಣೆಯ ಒತ್ತಾಸೆಯಾಗಿದೆ. 

ಒಕ್ಕೂಟದ ಚಟುವಟಿಕೆಗಳು:

ಒಕ್ಕೂಟವು ತನ್ನ ಕಾರ್ಯಯೋಜನೆಯನ್ನು ವಿಸ್ತರಿಸಿಕೊಂಡದ್ದು ಇನ್ನೊಂದು ಹಂತ. ಯುವಜನತೆಯಲ್ಲಿ ಲಿಂಗತ್ವ ಸಮನ್ಯಾಯವನ್ನು ಬಿತ್ತುವ, ಲಿಂಗತ್ವ ಪೂರ್ವಾಗ್ರಹಗಳನ್ನು ಕಳಚುವ ಉದ್ದೇಶದಿಂದ ‘ಅರಿವಿನ ಪಯಣ’ ಎಂಬ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ಇದುವರೆಗೆ 50,000ಕ್ಕೂ ಹೆಚ್ಚು ಯುವಕ-ಯುವತಿಯರನ್ನು ಮತ್ತು ನೂರಾರು ಮಹಿಳಾ ಗುಂಪುಗಳನ್ನು ತಲುಪುವಲ್ಲಿ ಒಕ್ಕೂಟವು ಯಶಸ್ವಿಯಾಗಿದೆ. ಶಿವಮೊಗ್ಗದ ಸಮಾವೇಶದ ಸಂದರ್ಭದಲ್ಲಿ ‘ಸಂವಿಧಾನ ಅರಿವಿನ ಕಾರ್ಯಾಗಾರ’ವನ್ನು ಪುಣೆಯ ಲೋಕಾಯತ ಗುಂಪಿನವರ ಸಹಕಾರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಂದೆ ಒಕ್ಕೂಟವು ಸಂವಿಧಾನದ ಪ್ರಸ್ತಾವನೆಯನ್ನು ಮುದ್ರಿಸಿ, ಬುಕ್ ಮಾರ್ಕ್ ಮಾಡಿ ಎಲ್ಲರಿಗೂ ಹಂಚುವ ಮೂಲಕ ಸಂವಿಧಾನವನ್ನು ಜನರಿಗೆ ಪರಿಚಯಿಸುವ ಕೆಲಸವನ್ನು ಮಾಡಿದೆ. ಧಾರವಾಡದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುವಾಗ ಮಹಿಳೆಯರಿಂದ ಕಳಸ-ಕುಂಭ ಸ್ವಾಗತವನ್ನು ಪರಿಷತ್ತು ಹಮ್ಮಿಕೊಂಡದ್ದಕ್ಕೆ ಒಕ್ಕೂಟವು ಸ್ಪಷ್ಟವಾದ ವಿರೋಧವನ್ನು ದಾಖಲಿಸಿತು. ಧಾರವಾಡದಲ್ಲಿ ಒಕ್ಕೂಟದ ಸಮಾವೇಶದ ಸಂದರ್ಭದಲ್ಲಿ ಸರಕಾರೀ ಬಸ್ಸುಗಳಲ್ಲಿ ಮಹಿಳೆಯರಿಗೆ ಮೀಸಲಿಟ್ಟ ಸೀಟು ದೊರೆಯುವಂತಾಗಬೇಕು ಎಂದು ‘ನಮ್ಮ ಸೀಟು ನಮ್ಮ ಹಕ್ಕು’ ಎಂಬ ಅಭಿಯಾನ ಮಾಡಿ, ಜನಜಾಗೃತಿಯನ್ನು ಮೂಡಿಸಿತು. ರಾಜಕಾರಣದಲ್ಲಿ ಮಹಿಳೆಯರಿಗಿರುವ ಅವಕಾಶ ಮತ್ತು ಇಕ್ಕಟ್ಟುಗಳನ್ನು, ಸವಾಲುಗಳನ್ನು ಸಾರ್ವಜನಿಕರೆದುರು ತೆರೆದಿಡುವ ‘ಚುನಾವಣೆ- ಒಳಹೊರಗೆ’ ಎಂಬ ಕಾರ್ಯಕ್ರಮವನ್ನು ಹಲವು ಜಿಲ್ಲೆಗಳಲ್ಲಿ ನಡೆಸಿದ್ದಲ್ಲದೆ, ಬೆಳಗಾವಿಯ ಅಧಿವೇಶನದ ಸಮಯದಲ್ಲಿ ಒಕ್ಕೂಟದ  ಸದಸ್ಯೆಯರು ಚುನಾಯಿತ ಶಾಸಕಿಯರನ್ನು ಭೇಟಿಮಾಡಿ, ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಹಕ್ಕೊತ್ತಾಯ ಮಂಡಿಸಿದ್ದರು.

ತನ್ನ ಸದಸ್ಯೆಯರ ಒಳಗೂ ಚಿಂತನೆಗಳನ್ನು ಬಿತ್ತುವ, ಹೊಸ ವಿಚಾರಗಳಿಗೆ ಅವರನ್ನು ಅನುವು ಮಾಡುವ  ನೆಲೆಯಿಂದ  ‘ಅಧ್ಯಯನ ಶಿಬಿರ’ ಮತ್ತು ‘ಅಧ್ಯಯನ ಪ್ರವಾಸ’ಗಳನ್ನು ಕೆಲ ವರ್ಷಗಳಿಂದ ಒಕ್ಕೂಟವು ನಿರಂತರ ನಡೆಸಿಕೊಂಡು ಬರುತ್ತಿದೆ. ಸೋದರಿತ್ವವನ್ನು ಗಟ್ಟಿಗೊಳಿಸುವ ನೆಲೆಯಲ್ಲಿ ‘ಕೌದಿ ಹೊಲಿಗೆ’ ಕಾರ್ಯಕ್ರಮವು ವಿನೂತನ ಪ್ರಯತ್ನ. ಇದರಲ್ಲಿ ಇದುವರೆಗೆ ಸೂಜಿ ಹಿಡಿಯದವರೂ ಮತ್ತು ಯುವಕರೂ ಭಾಗವಹಿಸಿ, ಬಟ್ಟೆಯಂತೆ ಮನಸಿಗೂ ಚಿತ್ತಾರ ಬಿಡಿಸಲು ಕಲಿತರು. ಹೊಲಿಯುತ್ತ ಮನವನ್ನು ತೆರೆದುಕೊಂಡವರು, ಕಥೆ-ಕವನಗಳಿಗೆ ಕಿವಿಯಾದವರು ಕೆಲವರು, ಚರ್ಚೆಯ  ಆಯಾಮಗಳನ್ನು ಬಿಡಿಸಿಟ್ಟವರು ಮತ್ತೆ ಕೆಲವರು. ಒಕ್ಕೂಟವು ಸ್ವಾತಂತ್ರ್ಯ ಚಳುವಳಿಗೆ ಮಹಿಳೆಯರ ಕೊಡುಗೆಯನ್ನು ದಾಖಲಿಸುವ ಭಾಗವಾಗಿ, ‘ಸ್ವಾತಂತ್ರ್ಯ 75’ ಎಂಬ ಕಿರುಹೊತ್ತಗೆಯನ್ನು ಪ್ರಕಟಿಸಿದೆ ಹಾಗೂ ಬೆಂಗಳೂರು, ಮೈಸೂರು, ಶಿವಮೊಗ್ಗ ಮುಂತಾದ ಕಡೆ ಇದರ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಯಾವುದೇ ಸದುದ್ದೇಶದ ಸಾರ್ವಜನಿಕ ಕೆಲಸವು ಎರಡು ಮುಖ್ಯ ಅಂಗಗಳನ್ನು ಹೊಂದಿರಬೇಕು. ಒಂದು ಸ್ವ-ಅವಲೋಕನವಾದರೆ ಇನ್ನೊಂದು ಸಾಮಾಜಿಕ ಉತ್ತರದಾಯಿತ್ವ. ಒಕ್ಕೂಟವು ಈವರೆಗೆ ಐದು ಸ್ವ-ಅವಲೋಕನ ಸಭೆಗಳನ್ನು ನಡೆಸಿದೆ. ಎರಡು ಬಾರಿ ಸಭೆ ಸೇರಿ ಒಕ್ಕೂಟವು ತನಗೆ ತನ್ನದೇ ಆದ ಸಂವಿಧಾನವನ್ನು ಸಿದ್ಧಪಡಿಸಿಕೊಂಡಿದೆ.

ಒಕ್ಕೂಟ ಎಂದರೆ:

 ಸ್ವಾತಂತ್ರ್ಯ, ಸಮಾನತೆ, ಬಂಧುತ್ವವೇ ಜೀವಾಳವಾದ ನಮ್ಮ ಸಂವಿಧಾನದಲ್ಲಿ ಶ್ರದ್ಧೆ, ನಂಬಿಕೆಗಳನ್ನಿರಿಸಿರುವ ಒಕ್ಕೂಟವು ಒಂದು ಸಂಘವಲ್ಲ, ಸಂಸ್ಥೆಯಲ್ಲ, ಸಂಘಟನೆಯಲ್ಲ, ಬದಲಿಗೆ ಹಲವು ಜನಪರ, ಜೀವಪರ, ಪ್ರಜಾಸತ್ತಾತ್ಮಕ ಸಂಘಟನೆಗಳ ಒಗ್ಗಟ್ಟಿನ ಜಾಲ. ಸಮಾನತೆ, ಸ್ವಾತಂತ್ರ್ಯ, ಸೋದರಿತ್ವ, ಪ್ರಜಾಸತ್ತಾತ್ಮಕ ಮೌಲ್ಯ ಮತ್ತು ಸಾಮಾಜಿಕ ನ್ಯಾಯಗಳಲ್ಲಿ ನಂಬಿಕೆ ಇರುವವರೆಲ್ಲ ಇದರ ಸದಸ್ಯರು.

ನಮ್ಮ ಆಶಯ

• ಲಿಂಗ, ಲಿಂಗತ್ವ, ಜಾತಿ, ವರ್ಗ, ಮತ, ಧರ್ಮ, ಸಂಸ್ಕೃತಿ, ಜನಾಂಗ, ಯುದ್ಧ, ಸಿದ್ಧಾಂತ, ಗಡಿ, ಭಾಷೆಗಳ ಹೆಸರಿನಲ್ಲಿ ನಡೆಯುವ ಹಿಂಸೆ, ಅತ್ಯಾಚಾರ, ತಾರತಮ್ಯಗಳಿರದ, ಭಯಮುಕ್ತ ನಾಡನ್ನು ಕಟ್ಟುವುದು ನಮ್ಮ ಕನಸು.

• ಪಾರಂಪರಿಕವಾಗಿ ಬಂದ ಮಹಿಳೆಯರ ಜ್ಞಾನ, ಅನುಭವ, ಕೌಶಲ್ಯ, ದುಡಿಮೆ, ಆತ್ಮಗೌರವಗಳಿಗೆ ಎಲ್ಲೆಡೆ ಮಾನ್ಯತೆ ಸ್ಥಾಪಿಸಲು ಸಜ್ಜಾಗುವುದು ನಮ್ಮ ಕಾಳಜಿ.

• ಯಾವುದೇ ಸಾಂಸ್ಥೀಕೃತ ಧನಸಹಾಯವನ್ನು ತೆಗೆದುಕೊಳ್ಳದೇ ಸಾರ್ವಜನಿಕವಾಗಿ ಹಣ ಸಂಗ್ರಹಿಸಿ ಒಕ್ಕೂಟದ ಕಾರ್ಯಕ್ರಮಗಳನ್ನು ನಡೆಸುವುದು, ಹಣ ದುರುಪಯೋಗವಾಗದಂತೆ ಪಾರದರ್ಶಕವಾಗಿ ಎಲ್ಲವನ್ನು ಲೆಕ್ಕವಿಟ್ಟು ಸಾರ್ವಜನಿಕರಿಗೆ ಒಪ್ಪಿಸುವುದು ನಮ್ಮ ಬದ್ಧತೆ.

ಮಂಗಳೂರು ಸಮಾವೇಶ

ನಡೆದ ಮತ್ತು ನಡೆಯಬೇಕಾದ ಹೆಜ್ಜೆಗಳು:

ಹಿಂತಿರುಗಿ ನೋಡಿದಾಗ ಸಮ್ಮಿಶ್ರ ಭಾವ ಮೂಡುತ್ತದೆ. ಕಾಲದ ಅಗತ್ಯಕ್ಕೆ ಸ್ಪಂದಿಸಿದ್ದಕ್ಕೆ, ಹಲವು ವ್ಯಕ್ತಿಗಳು, ಸಂಘಟನೆಗಳು ಬದ್ಧತೆಯಿಂದ ಒಗ್ಗೂಡಿದ್ದಕ್ಕೆ, ಅನೇಕ ಜಿಲ್ಲೆಗಳ ಹಿರಿಯ-ಯುವ ಗೆಳತಿಯರು ಸಮಾನ ಮನಸ್ಕರು ಒಕ್ಕೂಟದ ನಿಮಿತ್ತವಾಗಿ ಒಂದೆಡೆ ಸೇರುವಂತಾದುದಕ್ಕೆ ಸಂತಸ ಮತ್ತು ಹೆಮ್ಮೆ ಇದೆ. ನಾವು ಯಾವ ಮಹಿಳಾ ದೌರ್ಜನ್ಯವನ್ನು ವಿರೋಧಿಸಿ ದನಿ ಎತ್ತಿದೆವೋ ಅವು ಹೆಚ್ಚುತ್ತಲೇ ಇರುವುದಕ್ಕೆ, ಅತ್ಯಾಚಾರಿಗಳು ಸಂಖ್ಯೆಯಲ್ಲಿ ಮಾತ್ರವಲ್ಲ ಕ್ರೌರ್ಯದಲ್ಲೂ ಮಿತಿಮೀರಿರುವುದಕ್ಕೆ, ಹೆಣ್ಣು ಜೀವವನ್ನು ಘನತೆಯಿಂದ ಕಾಣುವ ಮನಸ್ಥಿತಿ ಜನರಲ್ಲಿ ಕ್ಷೀಣಿಸುತ್ತಿರುವುದಕ್ಕೆ, ಜಾತಿ ಮತ್ತು ಆರ್ಥಿಕ ನೆಲೆಯ ಹಿಂಸೆಗಳು/ದ್ವೇಷಗಳು ಹೆಚ್ಚುತ್ತಿರುವುದಕ್ಕೆ ನೋವು, ವಿಷಾದ, ಹತಾಶೆ ಮುತ್ತುತ್ತಿವೆ. ನಡೆದ ಹಾದಿ ಸಾಗಿದ ಅನುಭವವನ್ನು ನೀಡುತ್ತಿಲ್ಲ. ಅದೇ ವೇಳೆಯಲ್ಲಿ ಕನಿಷ್ಟ ಅವಕಾಶಗಳಲ್ಲಿ ಅರಳಿ ಗರಿಷ್ಟ ಸಾಧನೆ ಮಾಡುತ್ತಿರುವ ಅಕ್ಕ-ತಂಗಿಯರ ಬಗ್ಗೆ ಅಪಾರ ಗೌರವ, ಹೆಮ್ಮೆ ಖಂಡಿತವಾಗಿ ಇದೆ.

ಒಗ್ಗೂಡುವ ಹಬ್ಬ:

ಹತ್ತು ವರ್ಷಗಳ ನಮ್ಮ ನಡಿಗೆಯ ಅವಲೋಕನದ ಕೆಲಸ ಈಗಾಗಲೇ ನಡೆದಿದೆ. ಅದು ನಿರಂತರ ಪ್ರಕ್ರಿಯೆ. ಜೊತೆಗೆ ನಿಂತು ಅವಲೋಕಿಸಿಕೊಂಡು ನಮಗೆ ನಾವೇ ಹುಮ್ಮಸ್ಸು, ಚೈತನ್ಯ ತುಂಬಿಕೊಳ್ಳಲು 2023ರ ಜನವರಿ 8 ಭಾನುವಾರದಂದು ಬೆಂಗಳೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ (ಕೊಂಡಜ್ಜಿ ಬಸಪ್ಪ) ಸಭಾಭವನದಲ್ಲಿ `ಆಚರಣೆಯಲ್ಲಿ ಸ್ತ್ರೀವಾದ’ ಎಂಬ ವಿಷಯದ ಬಗೆಗೆ ಇಡಿಯ ದಿನ ಚರ್ಚೆ, ಸಂವಾದ ನಡೆಯಲಿದೆ.

ಬನ್ನಿ, ಎಲ್ಲರೂ ಒಗ್ಗೂಡಿ, ಪರಸ್ಪರ ಜೊತೆಯಾಗೋಣ.

 ಸಬಿಹಾ ಭೂಮೀಗೌಡ

ಬಿಜಾಪುರದ ಅಕ್ಕಮಹಾದೇವಿ ವಿ.ವಿ.ಯ ವಿಶ್ರಾಂತ ಕುಲಪತಿಗಳು, ಒಕ್ಕೂಟದ ಸಕ್ರಿಯ ಸದಸ್ಯರು.

You cannot copy content of this page

Exit mobile version