ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು ನೀಡಿರುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಲು ಅವರ ತಂಗಿ ಕವಿತಾ ನಿರ್ಧರಿಸಿದ್ದಾರೆ. ಈ ಕುರಿತು ಅವರು ಗುರುವಾರ ನ್ಯಾಯಾಲಯದ ಬಾಗಿಲು ತಟ್ಟಲಿದ್ದಾರೆ.
“ನಾನು ಶೀಘ್ರದಲ್ಲೇ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತೇನೆ” ಎಂದು ಕವಿತಾ ಲಂಕೇಶ್ ಸೋಮವಾರ ದಿ ಟೆಲಿಗ್ರಾಫ್ ಪತ್ರಿಕೆಗೆ ತಿಳಿಸಿದ್ದಾರೆ, ಅವರ ವಕೀಲರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಪ್ರಕರಣದಲ್ಲಿ ಬಂಧಿತರಾದ 18 ಮಂದಿಯಲ್ಲಿ ಮೋಹನ್ ನಾಯಕ್ ಎನ್ನುವ ವ್ಯಕ್ತಿಗೆ ಮಾತ್ರ ಜಾಮೀನು ದೊರೆತಿದೆ.
ದಿಟ್ಟ ಪತ್ರಕರ್ತೆ ಮತ್ತು ಹಿಂದುತ್ವ ಸಿದ್ಧಾಂತದ ಕಟು ಟೀಕಾಕಾರರಾಗಿದ್ದ ಗೌರಿ ಅವರನ್ನು ಸೆಪ್ಟೆಂಬರ್ 5, 2017 ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರ ಪ್ರದೇಶದ ಅವರ ಮನೆಯ ಹೊರಗೆ ಇಬ್ಬರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು.
ಪ್ರಕರಣದ ತನಿಖೆ ನಡೆಸಿದ ಕರ್ನಾಟಕ ಪೊಲೀಸರ ವಿಶೇಷ ತನಿಖಾ ತಂಡ (ಎಸ್ಐಟಿ) ಆರೋಪಿಗಳಲ್ಲಿ ಅನೇಕರು ಗೋವಾ ಮೂಲದ ಉಗ್ರ ಹಿಂದುತ್ವ ಸಂಘಟನೆಯಾದ ಸನಾತನ ಸಂಸ್ಥೆಯ ಸದಸ್ಯರು ಅಥವಾ ಅದರ ಕುರಿತು ಸಹಾನುಭೂತಿ ಹೊಂದಿರುವವರು ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿರುವ ರಾಮನಗರದಲ್ಲಿ ಇಬ್ಬರು ಶೂಟರ್ಗಳಿಗೆ ಆಶ್ರಯ ನೀಡಿದ್ದ ಆರೋಪ ನಾಯಕ್ ಮೇಲಿದೆ.
ಸುಮಾರು ಐದು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯ ಹೊರತಾಗಿ ಕೊಲೆಯಂತಹ ಜಾಮೀನು ರಹಿತ ದಂಡದ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹೈಕೋರ್ಟಿನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ ನಾಯಕ್, ವಿಚಾರಣೆ ವಿಳಂಬವಾಗುತ್ತಿದೆ ಎಂದು ವಾದಿಸಿದ್ದ ಮತ್ತು ವಿಶೇಷ ನ್ಯಾಯಾಲಯವು 527 ಸಾಕ್ಷಿಗಳ ಪೈಕಿ 90 ಸಾಕ್ಷಿಗಳನ್ನು ಮಾತ್ರ ವಿಚಾರಣೆಗೆ ಒಳಪಡಿಸಿದೆ ಎಂದು ಒತ್ತಿ ಹೇಳಿದ್ದ.
ಗೌರಿ ಹಾಗೂ ವಿದ್ವಾಂಸ- ವಿಚಾರವಾದಿ ಎಂ.ಎಂ. ಕಲ್ಬುರ್ಗಿ ಹತ್ಯಾ ಪ್ರಕರಣಗಳ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶ ನೀಡಿರುವುದರಿಂದ ಕವಿತಾ ತ್ವರಿತ ವಿಚಾರಣೆಯ ನಿರೀಕ್ಷೆಯಲ್ಲಿದ್ದಾರೆ.
ಗೌರಿ ಹತ್ಯೆ ಪ್ರಕರಣದ ತ್ವರಿತ ವಿಚಾರಣೆಗೆ ಕವಿತಾ ಅವರು ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಮುಖ್ಯಮಂತ್ರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. “ನನ್ನ ಅಕ್ಕನ ಪ್ರಕರಣದ ವಿಚಾರಣೆ ಸುಮಾರು ಒಂದು ವರ್ಷದಲ್ಲಿ ಮುಗಿಯುವ ಭರವಸೆ ನನಗಿದೆ” ಎಂದು ಕವಿತಾ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಗೌರಿ ಮತ್ತು ಕಲ್ಬುರ್ಗಿಯವರ ಹತ್ಯೆಯ ಸಮಯದಲ್ಲೇ ಕಠೋರವಾದಿಗಳನ್ನು ಕೆರಳಿಸಿದ್ದ ಮತ್ತಿಬ್ಬರು ವಿಚಾರವಾದಿಗಳನ್ನು ಹತ್ಯೆ ಮಾಡಲಾಯಿತು.
ಮೂಢನಂಬಿಕೆ ವಿರೋಧಿ ಹೋರಾಟಗಾರ ನರೇಂದ್ರ ದಾಭೋಲ್ಕರ್ ಅವರು ಪುಣೆಯಲ್ಲಿ 2013ರ ಆಗಸ್ಟ್ 20ರಂದು ಬೆಳಗಿನ ವಾಕ್ ಮಾಡುವಾಗ ಗುಂಡಿಕ್ಕಿ ಕೊಲ್ಲಲ್ಪಟ್ಟರು ಮತ್ತು ಸಿಪಿಐ ನಾಯಕ ಗೋವಿಂದ್ ಪನ್ಸಾರೆ ಫೆಬ್ರವರಿ 16, 2015ರಂದು ಕೊಲ್ಲಾಪುರದಲ್ಲಿ ಗುಂಡು ಹಾರಿಸಲ್ಪಟ್ಟರು ಮತ್ತು ನಾಲ್ಕು ದಿನಗಳ ನಂತರ ಫೆಬ್ರವರಿ 20ರಂದು ನಿಧನರಾದರು.