ಕೇರಳ: ಇಲ್ಲಿಯ ಕೊಯಿಲಾಂಡಿ ಎಂಬಲ್ಲಿ ದೇವಸ್ಥಾನದ ಅರ್ಚಕರೊಬ್ಬರು ಬುರ್ಖಾ ಧರಿಸಿ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ಅಕ್ಟೋಬರ್ 7 ರಂದು ಕೊಯಿಲಾಂಡಿ ಜಂಕ್ಷನ್ನಲ್ಲಿ ಜಿಷ್ಣು ನಂಬೂತಿರಿ (28) ಎನ್ನುವ ವ್ಯಕ್ತಿ ಆಟೋ ಚಾಲಕರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವೇಳೆ ಸಾರ್ವಜನಿಕರು ಈ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಆತನ ವಿರುದ್ಧ ಯಾವುದೇ ಅಪರಾಧ ಎಸಗಿದ ಬಗ್ಗೆ ಇನ್ನು ದೂರು ಬಂದಿಲ್ಲ. ಹೀಗಾಗಿ ಆತನ ಸಂಬಂಧಿಕರು ಪೊಲೀಸ್ ಠಾಣೆಗೆ ಬಂದ ಬಳಿಕ ವಿಚಾರಣೆ ನಡೆಸಿ ಆತನನ್ನು ಬಿಡುವುದಾಗಿ ಹೇಳಿದರು.
ವ್ಯಕ್ತಿಯು ಮೆಪ್ಪಯೂರು ಬಳಿಯ ದೇವಸ್ಥಾನವೊಂದರಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದು, ತನಗೆ ಚಿಕನ್ ಗುನ್ಯಾ ಇರುವ ಕಾರಣ ಬುರ್ಖಾ ಹಾಕಿಕೊಂಡಿದ್ದೆ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.