ಬೆಂಗಳೂರು: ಕೆಜಿಎಫ್ ಚಲನಚಿತ್ರದ ಹಿಂದಿ ಅವತರಿಣಿಕೆಯ ಹಾಡುಗಳನ್ನು ಭಾರತ್ ಜೋಡೋ ಪ್ರಚಾರದಲ್ಲಿ ಬಳಸಿಕೊಂಡಿರುವುದಕ್ಕಾಗಿ ಎಂ.ಆರ್.ಟಿ. ಮ್ಯೂಸಿಕ್ ಸಂಸ್ಥೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹಾಗು ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಸುಪ್ರಿಯಾ ಶ್ರೀನೇತ್ ವಿರುದ್ಧ ದೂರು ದಾಖಲಿಸಿದೆ.
ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೆಜಿಎಫ್ ಚಿತ್ರದ ಹಾಡುಗಳ ಹಕ್ಕುಗಳು ನಮಗೆ ಸೇರಿದ್ದು, ಕಾನೂನು ಬಾಹಿರವಾಗಿ ಅವುಗಳನ್ನು ಭಾರತ್ ಜೋಡೋ ಯಾತ್ರೆಯ ಪ್ರಚಾರಕ್ಕೆ ಬಳಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ದೂರಿನ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ.
ರಾಷ್ಟ್ರಮಟ್ಟದ ರಾಜಕೀಯ ಪಕ್ಷವು ಹಕ್ಕುಸ್ವಾಮ್ಯದ ಕಾನೂನುಗಳನ್ನು ಉಲ್ಲಂಘಿಸಿದ್ದು, ಇದು ಕಾನೂನು ಮತ್ತು ಸಂಸ್ಥೆಗಳ ಹಕ್ಕುಗಳ ಕುರಿತಾದ ಅದರ ನಿರ್ಲಕ್ಷ್ಯತನವನ್ನು ತೋರಿಸುತ್ತದೆ ಎಂದು ಸಂಸ್ಥೆ ದೂರಿದೆ.
ಇಂದು ಡಿಜಿಟಲ್ ಜಗತ್ತಿನಲ್ಲಿ ಹಕ್ಕುಸ್ವಾಮ್ಯ ಕಾಯಿದೆಯಿಂದ ರಕ್ಷಿಸಲ್ಪಟ್ಟ ನಮ್ಮ ಬೌದ್ಧಿಕ ಆಸ್ತಿಯನ್ನು ಕಾಂಗ್ರೆಸ್ ಪಕ್ಷವು ದುರುಪಯೋಗಪಡಿಸಿಕೊಂಡಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಪಕ್ಷವು ಪೋಸ್ಟ್ ಮಾಡಿದ ವೀಡಿಯೊಗಳನ್ನು ನೋಡಿದ್ದೇವೆ, ಅವುಗಳಲ್ಲಿ ನಮ್ಮ ಅನುಮತಿ/ಪರವಾನಗಿಯನ್ನು ಪಡೆಯದೆ ತಮ್ಮ ಸ್ವಂತ ರಾಜಕೀಯ ಕಾರ್ಯಸೂಚಿಯನ್ನು ಮುಂದುವರಿಸಲು ಮತ್ತು ಮಾರ್ಕೆಟಿಂಗ್ ಮತ್ತು ಪ್ರಚಾರಕ್ಕಾಗಿ ನಮ್ಮ ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಈ ವೀಡಿಯೊಗಳನ್ನು ತಮ್ಮ ಅಧಿಕೃತ ಸಾಮಾಜಿಕ ಹ್ಯಾಂಡಲ್ಗಳಲ್ಲಿ INC ಯಿಂದ ಪ್ರಸಾರ / ಪೋಸ್ಟ್ ಮಾಡಲಾಗಿದೆ ಮತ್ತು ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿಯೂ ಸಹ ಕಾಣಬಹುದಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಭಾರತ ರಾಷ್ಟ್ರೀಯ ಕಾಂಗ್ರೆಸ್ನಂಥ ದೊಡ್ಡ ರಾಜಕೀಯ ಪಕ್ಷವು ಬೌದ್ಧಿಕ ಹಕ್ಕುಸ್ವಾಮ್ಯ ಕಾಯ್ದೆಯನ್ನು ಉಲ್ಲಂಘಿಸಿ, ಕೆಟ್ಟ ಮಾದರಿಯನ್ನು ಪ್ರದರ್ಶಿಸಿದೆ. ನಾವು ದೊಡ್ಡಮಟ್ಟದ ಹಣ ಹೂಡಿ ಕೆಜಿಎಫ್ ಚಿತ್ರಗಳ ಹಾಡುಗಳ ಹಕ್ಕನ್ನು ಪಡೆದಿದ್ದೇವೆ. ಹೀಗಿರುವಾಗ ನಮ್ಮ ಹಾಡುಗಳನ್ನು ಬಳಸಿಕೊಳ್ಳುವುದು ಕಾನೂನುಬಾಹಿರ ಎಂದು ಸಂಸ್ಥೆ ದೂರಿನಲ್ಲಿ ತಿಳಿಸಿದೆ.
ಕಾಂಗ್ರೆಸ್ ಪಕ್ಷದ ಈ ಕಾರ್ಯವು ಭಾರತೀಯ ನಾಗರಿಕರಿಗೆ ಸಂಪೂರ್ಣವಾಗಿ ತಪ್ಪು ಸಂಕೇತವನ್ನು ಕಳುಹಿಸುತ್ತದೆ ಮತ್ತು ನಮ್ಮ ಹಕ್ಕುಸ್ವಾಮ್ಯಗಳನ್ನು ರಕ್ಷಿಸುವ ಪ್ರಯತ್ನಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆ ಹೇಳಿದೆ.