Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಹರಿಯಾಣ : ಶಾಂತಿ ಕದಡುತ್ತಿರುವ ವಿಎಚ್‌ಪಿ ಹಾಗೂ ಭಜರಂಗದಳ ನಿಷೇಧಕ್ಕೆ ಕಾಫ್ ಪಂಚಾಯತ್ ಕರೆ

ಹರಿಯಾಣ : ಶಾಂತಿ ಕದಡುತ್ತಿರುವ ವಿಎಚ್‌ಪಿ ಹಾಗೂ ಭಜರಂಗದಳ ನಿಷೇಧಕ್ಕೆ ಕಾಫ್ ಪಂಚಾಯತ್ ಕರೆ

0

ಹರಿಯಾಣ : ರಾಜ್ಯದ ನುಹ್ ಜಿಲ್ಲೆಯಲ್ಲಿ ನಡೆದ ಕೋಮುಗಲಭೆಗಳ ನಂತರ ಹರಿಯಾಣಾದ ಸುಮಾರು 50 ಪಂಚಾಯತ್‌ಗಳು ಮುಸ್ಲಿಮರನ್ನು ಬಹಿಷ್ಕರಿಸಲು ಕರೆ ನೀಡಿವೆ. ಆದರೆ ರಾಜ್ಯದಲ್ಲಿ ತಮ್ಮದೇ ಆದ ಬಲ ಹೊಂದಿರುವ ರೈತ ಸಂಘಟನೆಗಳು ಹಾಗೂ ಖಾಫ್ ಪಂಚಾಯತ್ ಗಳು ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಮುಸ್ಲಿಂ ಸಮುದಾಯದವರ ಬಹಿಷ್ಕಾರಕ್ಕೆ ವಿರೋಧ ವ್ಯಕ್ತಪಡಿಸಿವೆ.

ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು ಮಟ್ಟ ಹಾಕುವ ಉದ್ದೇಶದಿಂದ ಹರಿಯಾಣದ ಹಿಸಾರ್ ಬಾಸ್ ಗ್ರಾಮದಲ್ಲಿ ಖಾಫ್ ಸಭೆಯನ್ನು ಆಯೋಜಿಸಲಾಗಿತ್ತು. ಮುಸಲ್ಮಾನರಿಗೆ ರಕ್ಷಣೆಯ ಪ್ರಮುಖ ಉದ್ದೇಶದಿಂದ ಈ ಸಭೆಯನ್ನು ನಡೆಸಲಾಗಿತ್ತು. ಅಷ್ಟೆ ಅಲ್ಲದೆ ರಾಜ್ಯದಲ್ಲಿ ಶಾಂತಿ ಕದಡುತ್ತಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳವನ್ನು ನಿಷೇಧಿಸಲು ಖಾಫ್ ಸಭೆಯಲ್ಲಿ ಕರೆ ನೀಡಿವೆ.

ಬುಧವಾರ ಭಾರತೀಯ ಕಿಸಾನ್ ಮಜ್ದೂರ್ ಯೂನಿಯನ್ ಬ್ಯಾನರ್‌ ಅಡಿಯಲ್ಲಿ ಹಿಸಾರ್ ಬಾಸ್ ಗ್ರಾಮದಲ್ಲಿ ಮಹಾ ಪಂಚಾಯತ್ ಅನ್ನು ಆಯೋಜಿಸಲಾಗಿತ್ತು. ಈ ಮಹಾಪಂಚಾಯತ್ ನಲ್ಲಿ ರಾಜ್ಯಾದ್ಯಂತ ಸುಮಾರು 2,000 ರೈತ ಮುಖಂಡರು ಭಾಗಿಯಾಗಿದ್ದರು. ಮಹಾಪಂಚಾಯತ್ ನಲ್ಲಿ ಕೋಮು ಸೌಹಾರ್ದತೆ ಮತ್ತು ಸಹೋದರತ್ವವನ್ನು ಬಲಪಡಿಸಲು ಕರೆ ನೀಡಲಾಗಿದೆ.

ಮಹಾಪಂಚಾಯತ್ ಆಯೋಜಿಸಿದ್ದ ರೈತ ನಾಯಕ ಸುರೇಶ್ ಕೋಠ್ ಮಾತನಾಡಿ, “ರಾಜ್ಯದಲ್ಲಿ ಕೋಮು ಸೌಹಾರ್ದ ಕದಡಲು ಕೆಲವರು ಯತ್ನಿಸಿದ್ದಾರೆ. ಅವರಿಗೆ ಧೈರ್ಯವಿದ್ದರೆ ಈ ಮಹಾಪಂಚಾಯತ್ ನಡೆವ ಜಾಗಕ್ಕೆ ಬಂದು ಮುಸಲ್ಮಾನರಿಗೆ ಪ್ರವೇಶ ನೀಡುವುದನ್ನು ಹೇಗೆ ತಡೆಯುವರು ನೋಡೋಣ” ಎಂದು ಆಕ್ರೋಶ ಹೊರಹಾಕಿದ್ದಾರೆ. ಹಾಗೆಯೇ ಮೇವಾತ್ ನಲ್ಲಿ ಶಾಂತಿ ನೆಲೆಸುವಂತೆ ಸಂಪುಟ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ನುಹ್ ಸೇರಿದಂತೆ ಹರಿಯಾಣದ ವಿವಿಧ ಜಿಲ್ಲೆಗಳಲ್ಲಿ ನಡೆದ ಹಿಂಸಾಚಾರದ ಅಡಿಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ, ಗಲಭೆಗೆ ಪ್ರಮುಖ ಕಾರಣರಾದ ಮೋನು ಮಾನೇಸರ್ ಹಾಗೂ ಬಿಟ್ಟು ಬಜರಂಗಿ ಅವರನ್ನು ಬಂಧಿಸುವಂತೆ ಒತ್ತಾಯಿಸಲಾಗಿದೆ. ಪ್ರಚೋದನಕಾರಿ ಭಾಷಣಗಳನ್ನು ಹಾಕಿ ಘರ್ಷಣೆಗೆ ಪ್ರಚೋದನೆ ನೀಡುವ ವಿಡಿಯೋಗಳನ್ನು ಶೇರ್ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಮಹಾ ಪಂಚಾಯತ್ ನಲ್ಲಿ ಒತ್ತಾಯಿಸಲಾಯಿತು.

ಸಧ್ಯ ಈ ಬಗ್ಗೆ ವಿಸ್ತೃತವಾಗಿ ವರದಿ ಮಾಡಿರುವ ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ (The New Indian Express) ಹಿಸಾರ್ ಬಾಸ್ ಗ್ರಾಮದಲ್ಲಿ ನಡೆದ ಖಾಫ್ ಸಭೆಯ ಮಾಹಿತಿ ಹೊರಹಾಕಿದೆ. ಪತ್ರಿಕೆಗೆ ನೀಡಿರುವ ಮಾಹಿತಿ ಪ್ರಕಾರ ನುಹ್ ಜಿಲ್ಲೆಯಲ್ಲಿ ಈಗ ನಿಷೇಧಾಜ್ಞೆ ಹೇರಿರುವ ಹಿನ್ನೆಲೆಯಲ್ಲಿ ಶಾಂತಿ ನೆಲೆಸಿದ ನಂತರ ಎರಡೂ ಸಮುದಾಯಗಳ ಮುಖಂಡರೊಂದಿಗೆ ಶಾಂತಿ ಸ್ಥಾಪನೆಯ ಮಾತುಕತೆ ನಡೆಸಲಾಗುವುದು ಎಂದು ಸರ್ವಖಾಪ್ ಪಂಚಾಯತ್‌ನ ರಾಷ್ಟ್ರೀಯ ವಕ್ತಾರ ಸುಬೆ ಸಿಂಗ್ ಸ್ಮೈನ್ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕದಡಲು ವಿಎಚ್‌ಪಿ ಹಾಗೂ ಭಜರಂಗದಳ ಹೊಂಚು ಹಾಕಿ ಕುಳಿತಿವೆ. ಇನ್ನು ವರ್ಷದ ಒಳಗೇ ಬರುವ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸಮುದಾಯಗಳನ್ನು ವಿಭಜಿಸುವ ಹಾಗೂ ರಾಜ್ಯದ ಮತದಾರರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ವಿಎಚ್‌ಪಿ ಹಾಗೂ ಭಜರಂಗದಳ ಪಿತೂರಿ ನಡೆಸಿವೆ. ಹೀಗಾಗಿ ವಿಎಚ್‌ಪಿ ಹಾಗೂ ಭಜರಂಗದಳದ ಸಂಪೂರ್ಣ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಕರೆ ನೀಡಿವೆ‌.

You cannot copy content of this page

Exit mobile version