Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಆತ್ಮಹತ್ಯೆ ಪ್ರಕರಣ : ಮಾಧ್ಯಮಗಳ ಸುಳ್ಳುಗಳು, ಬಿಜೆಪಿ ನಾಯಕರ ಟ್ವೀಟ್ ಗಳು..

ಆತ್ಮಹತ್ಯೆ ಪ್ರಕರಣ : ಮಾಧ್ಯಮಗಳ ಸುಳ್ಳುಗಳು, ಬಿಜೆಪಿ ನಾಯಕರ ಟ್ವೀಟ್ ಗಳು..

0

ಬೆಂಗಳೂರಿನಲ್ಲಿ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಅಡಿಯಲ್ಲಿ ಬಿಜೆಪಿ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆ ಹಾಗೂ ಬಿಜೆಪಿ ಪಕ್ಷದ ಕೆಲವು ನಾಯಕರು ಟ್ವಿಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಗುತ್ತಿಗೆದಾರನೇ ಅಲ್ಲ ಎಂಬ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ದೊಡ್ಡಯ್ಯ ಅವರ ಮಗ ಗೌತಮ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಗೌತಮ್ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯದ ಕೆಲವು ಪ್ರಮುಖ ಸುದ್ದಿವಾಹಿನಿಗಳು ಆತ ಒಬ್ಬ ಗುತ್ತಿಗೆದಾರ, ಬಿಲ್ ಪಾವತಿ ವಿಳಂಬದ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಆತ್ಮಹತ್ಯೆಗೆ ಸರ್ಕಾರವೇ ಪರೋಕ್ಷ ಹೊಣೆ ಎಂಬಂತೆ ಬೇಜವಾಬ್ದಾರಿಯಾಗಿ ವರದಿ ಬಿತ್ತರಿಸಿವೆ.

ಇತ್ತ ರಾಜ್ಯದ ಕೆಲವು ಗುತ್ತಿಗೆದಾರರೂ ಸಹ ಬಾಕಿ ಬಿಲ್ ಪಾವತಿಗಾಗಿ ಬೀದಿಯಲ್ಲಿ ನಿಂತು ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಈ ಸುದ್ದಿ ಹೆಚ್ಚು ಮಹತ್ವ ಪಡೆದಿದೆ. ಇದನ್ನೇ ಹಿಂದೆ ಮುಂದೆ ಯೋಚಿಸದೇ ಬಿಜೆಪಿ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆ ನ್ಯೂಸ್ ಚಾನಲ್ ಬಿತ್ತರಿಸಿದ ಸುಳ್ಳು ಸುದ್ದಿಯನ್ನೆ ಹಂಚಿಕೊಂಡು, ಸರ್ಕಾರದ ಮೇಲೆ ಆರೋಪ ಮಾಡಿದೆ.

ಅಷ್ಟೆ ಅಲ್ಲದೆ ಬಿಜೆಪಿ ನಾಯಕ ಸಿಟಿ ರವಿ ಕೂಡಾ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ‘ಇದು ರಾಜ್ಯದ ಗುತ್ತಿಗೆದಾರರಿಗೆ ಕಾಂಗ್ರೆಸ್ ಸರ್ಕಾರದ ಸೂಸೈಡ್ ಭಾಗ್ಯ. ಬಿಲ್ ಪಾವತಿ ವಿಳಂಬದ ಕಾರಣಕ್ಕೆ ಬಿಬಿಎಂಪಿ ಗುತ್ತಿಗೆದಾರ ಗೌತಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ..’ ಎನ್ನುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಅಷ್ಟೆ ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಸರ್ಕಾರ ಗುತ್ತಿಗೆದಾರರು ಬಾಕಿ ಬಿಲ್ ಪಾವತಿ ಮಾಡದೇ ಇದ್ದದ್ದಕ್ಕೆ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜನಾಂದೋಲನ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೂಡಾ ನೀಡಿದರು.

ಆದರೆ ಮಾಧ್ಯಮಗಳಲ್ಲಿ ಈ ಸುದ್ದಿ ಬಿತ್ತರವಾಗುತ್ತಿದ್ದಂತೆ ಗೌತಮ್ ಕುಟುಂಬಸ್ಥರು ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಅಷ್ಟೆ ಅಲ್ಲದೆ ಆತ ಗುತ್ತಿಗೆದಾರನೇ ಅಲ್ಲ, ಆತನ ಹೆಸರಿನಲ್ಲಿ ಗುತ್ತಿಗೆದಾರಿಕೆಯ ಲೈಸೆನ್ಸ್ ಕೂಡಾ ಇಲ್ಲ. ಆತ ಸ್ವಂತದ್ದಾಗಿ ಒಂದು ಕೋಳಿ ಫಾರಂ ನಡೆಸುತ್ತಿದ್ದದ್ದು ಬಿಟ್ಟರೆ ಬೇರೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಲ ದಿನಗಳಿಂದ ಗೌತಮ್ ಡಿಪ್ರೆಷನ್ ಗೆ ಒಳಗಾಗಿದ್ದಾರೆ. ಸರಿಯಾಗಿ ಊಟ ತಿಂಡಿ ಮಾಡುತ್ತಿರಲಿಲ್ಲ. ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಇದರ ನಡುವೆ ಆತನಿಗೆ ಮದುವೆ ತಯಾರಿ ಕೂಡಾ ನಡೆದಿತ್ತು. ಮದುವೆ ಸಂಬಂಧ ಮಾತುಕತೆ ಕೂಡಾ ನಡೆದಿತ್ತು. ಇದೇ ಕಾರಣಕ್ಕೆ ಆತ ಡಿಪ್ರೆಷನ್ ಗೆ ಹೋಗಿದ್ದ. ಆತ್ಮಹತ್ಯೆಗೂ ಹಿಂದಿನ ದಿನ ರಾತ್ರಿ ತಡವಾಗಿ ಮನೆಗೆ ಬಂದಿದ್ದಾನೆ. ಬೆಳಿಗ್ಗೆ ಎಷ್ಟು ಹೊತ್ತಾದರೂ ಏಳದ ಹಿನ್ನೆಲೆಯಲ್ಲಿ ಆತನ ರೂಮಿನಲ್ಲಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಪ್ರಕರಣದ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಇಷ್ಟಾದರೂ ಇದೊಂದು ಸುಳ್ಳು ಸುದ್ದಿ ಎಂಬ ಮಾಹಿತಿ ಹೊರ ಬಂದರೂ ಬಿಜೆಪಿ ಪಕ್ಷವಾಗಲಿ, ಬಿಜೆಪಿ ನಾಯಕರಾಗಲಿ ತಮ್ಮ ಟ್ವಿಟ್  ತಪ್ಪು ಮಾಹಿತಿಯಿಂದ ಬಂದದ್ದು ಎಂದು ಸ್ಪಷ್ಟಪಡಿಸಿಲ್ಲ. ಅಷ್ಟೆ ಅಲ್ಲದೆ ತಾವು ಮಾಡಿದ ಟ್ವಿಟ್ ನ್ನು ಇನ್ನೂ ಹಾಗೇ ಉಳಿಸಿಕೊಂಡಿದ್ದಾರೆ.

You cannot copy content of this page

Exit mobile version