Home ರಾಜ್ಯ ದಕ್ಷಿಣ ಕನ್ನಡ ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾವ್‌ ಇನ್ನಿಲ್ಲ

ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾವ್‌ ಇನ್ನಿಲ್ಲ

0

ಹಿರಿಯ ತೆಂಕುತಿಟ್ಟು ಯಕ್ಷಗಾನ ವೇಷಧಾರಿ ಹಾಗೂ ತಾಳಮದ್ದಳೆ ಪಟು ಕುಂಬ್ಳೆ ಸುಂದರ ರಾವ್‌ ಅವರು ಮಂಗಳೂರಿನ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಕಾಯರ್ಕಾಡಿ ಕುಂಞಿಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ 1934ನೇ ಮಾರ್ಚ್ 20ರಲ್ಲಿ ಕೇರಳ ರಾಜ್ಯದ ಕುಂಬಳೆಯಲ್ಲಿ ಜನಿಸಿದ ಅವರು ಖ್ಯಾತ ಯಕ್ಷಗಾನ ಕಲಾವಿದರಾಗಿದ್ದರು. ಒಂದು ಬಾರಿಗೆ ಸುರತ್ಕಲ್‌ ಕ್ಷೇತ್ರದಿಂದ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಯಕ್ಷಗಾನ ಬಯಲಾಟ ಮತ್ತು ತಾಳಮದ್ದಲೆ ಅಭಿಮಾನಿಗಳು ಕುಂಬ್ಳೆಯವರ ಪಾಂಡಿತ್ಯಪೂರ್ಣ ಸಂಭಾಷಣೆಗಳನ್ನು ಅನುಭವಿಸಲೆಂದೇ ಬೇಗನೆ ಹೋಗಿ ಮುಂದಿನ ಸಾಲುಗಳಲ್ಲಿ ಕೂರುತ್ತಿದ್ದರು. ಕಂಚಿನ ಕಂಠ, ಕಿರೀಟದ ವೇಷಗಳು ಅವಿಸ್ಮರಣೀಯವಾಗಿರುತ್ತಿದ್ದವು.

ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಮೇಳಗಳಲ್ಲಿ ಅವರು ಕಲಾವಿದರಾಗಿ ಕಾರ್ಯ ನಿರ್ವಹಿಸಿದ್ದ ಇವರು ಪತ್ನಿ, ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಹಿರಿಯ ಕಲಾವಿದನ ಮರಣಕ್ಕೆ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬೊಮ್ಮಾಯಿಯವರು “ಯಕ್ಷಗಾನ, ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷರು, ಮಾಜಿ ಶಾಸಕರು ಹಾಗೂ ಯಕ್ಷಗಾನ ಮತ್ತು ತಾಳಮದ್ದಳೆಯ ಜನಪ್ರಿಯ ಕಲಾವಿದ ಶ್ರೀ ಕುಂಬಳೆ ಸುಂದರರಾವ್ ರವರು ನಿಧನರಾದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿಸಿಗಲಿ, ದೇವರು ಅವರ ಕುಟುಂಬದವರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ” ಎಂದು ಟ್ವೀಟ್‌ ಮಾಡಿದ್ದಾರೆ.

You cannot copy content of this page

Exit mobile version