ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಅಸಭ್ಯ ಮತ್ತು ತಪ್ಪು ಪ್ರಚಾರದ ಉದ್ದೇಶ ಹೊಂದಿದೆ ಎಂದು 53ನೇ ಭಾರತೀಯ ಚಲನಚಿತ್ರೋತ್ಸವದ ತೀರ್ಪುಗಾರರ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆಯ ಹಿರಿಯ ಮುಖಂಡ ಸಂಜಯ್ ರಾವತ್, ನಡವ್ ಲ್ಯಾಪಿಡ್ ಹೇಳಿಕೆ ಸರಿಯಾಗಿದೆ. ಒಂದು ಪಕ್ಷದ ವಿರುದ್ಧ ಇನ್ನೊಂದು ಪಕ್ಷದವರು ಅಪ ಪ್ರಚಾರ ಮಾಡುತ್ತಿದ್ದರು. ಒಂದು ಪಕ್ಷ ಮತ್ತು ಇಡೀ ಸರ್ಕಾರ ಪ್ರಚಾರದಲ್ಲಿ ನಿರತವಾಗಿತ್ತು. ಆದರೆ ಈ ಚಿತ್ರದ ನಂತರವೂ ಕೂಡಾ ಕಾಶ್ಮೀರದಲ್ಲಿ ಗರಿಷ್ಠ ಸಂಖ್ಯೆಯ ಹತ್ಯೆಗಳು ಸಂಭವಿಸಿವೆ. ಕಾಶ್ಮೀರ ಪಂಡಿತರು, ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದರು.
ಕಾಶ್ಮೀರಿ ಪಂಡಿತರ ಹತ್ಯೆಯಾಗುವಾಗ ಈ ಕಾಶ್ಮೀರ ಫೈಲ್ ಜನರು ಆಗ ಎಲ್ಲಿದ್ದರು? ಕಾಶ್ಮೀರಿ ಪಂಡಿತರ ಮಕ್ಕಳೂ ಹೋರಾಟ ಮಾಡುವಾಗ ಎಲ್ಲಿದ್ದರು? ಆಗ ಯಾರೂ ಮುಂದೆ ಬರಲಿಲ್ಲ ಎಂದು ಟೀಕಿಸಿದ್ದಾರೆ.
ಇನ್ನು ಮೂರು ದಿನಗಳ ಮುಂಚೆಯೇ ಶಿವಸೇನೆ ಪಕ್ಷ ಈ ವಿಚಾರ ಮುನ್ನೆಲೆಗೆ ತಂದು ಆರೋಪಿಸಿತ್ತು. ಶಿವಸೇನೆ ಸಂಸದ ಸಂಜಯ್ ರಾವುತ್ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ‘ಗುಜರಾತ್ ಮತ್ತು ರಾಜಸ್ಥಾನ ಚುನಾವಣೆ ಗೆಲ್ಲಲು ಬಿಜೆಪಿ ಕಾಶ್ಮೀರ್ ಫೈಲ್ಸ್ ಬಳಸಿದೆ. ಚಿತ್ರದ ಪ್ರಚಾರದ ಉಸ್ತುವಾರಿಯನ್ನು ಸ್ವತಃ ಪ್ರಧಾನಿ ಮೋದಿ ಕೈಗೆತ್ತಿಕೊಂಡಿದ್ದಾರೆ. ಕಾಶ್ಮೀರದಿಂದ ಹಿಂದೂ ಪಂಡಿತರ ವಲಸೆ, ಅವರ ಹತ್ಯೆಗಳು ಮತ್ತು ಅವರ ಮೇಲೆ ನಡೆದ ದೌರ್ಜನ್ಯಗಳನ್ನು ಆಧರಿಸಿದ ಚಿತ್ರವು ಆತಂಕಕಾರಿಯಾಗಿದೆ. ಆದರೆ ಹಿಂದೂ-ಮುಸ್ಲಿಂ ವಿಭಜನೆ ಇದು ಕಾರಣವಾಗಬಹುದು ಮತ್ತು ಮುಂಬರುವ ಚುನಾವಣೆಗಳನ್ನು ಗೆಲ್ಲಲು ಅದರ ಬಳಕೆಯು ಇನ್ನಷ್ಟು ಗೊಂದಲದ ಸಂಗತಿಯಾಗಿದೆ ಎಂದು ರಾವುತ್ ಸಾಮ್ನಾದಲ್ಲಿ ಬರೆದಿದ್ದರು.
ಸಧ್ಯ ಇಸ್ರೇಲಿ ನಿರ್ಮಾಪಕ IFFI ನಲ್ಲಿ ತಮ್ಮ ಅಭಿಪ್ರಾಯ ಹೊರ ಹಾಕಿದ ಹಿನ್ನೆಲೆಯಲ್ಲಿ ಅವರು ಇಸ್ರೇಲ್ ದೇಶದ ಸರ್ಕಾರವನ್ನೇ ಎದುರು ಹಾಕಿಕೊಂಡ ಬಗ್ಗೆಯೂ ಅಭಿಪ್ರಾಯ ಹೊರಬಂದಿವೆ. ಒಬ್ಬ ಯಹೂದಿ ನಿರ್ದೇಶಕನಾಗಿ ಇಡೀ ಇಸ್ರೇಲ್ ಸರ್ಕಾರವೇ ನಿರ್ಮಾಪಕ ನಾದವ್ ಲ್ಯಾಪಿಡ್ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಒಂದಿಡೀ ಸರ್ಕಾರವೇ ಕಾಶ್ಮೀರ್ ಫೈಲ್ಸ್ ಪರವಾಗಿ ನಿಂತಿರುವ ಹಿನ್ನೆಲೆಯಲ್ಲಿ ಇದು ಭಾರತ ಇಸ್ರೇಲ್ ನಡುವಿನ ಬಾಂಧವ್ಯದ ದೃಷ್ಟಿಯಿಂದಲೂ ಸಮಸ್ಯೆ ಎದುರಾಗಬಹುದು ಎಂಬುದು ಗಮನಾರ್ಹ.