ಮಧ್ಯ ಪ್ರದೇಶ : ದಲಿತ ಯುವಕನೊಬ್ಬ ಗ್ರಾಮ ಪಂಚಾಯಿತಿ ಕಚೇರಿಯ ಕುರ್ಚಿಯಲ್ಲಿ ಕುಳಿತಿದ್ದಕ್ಕಾಗಿ ಮೇಲ್ಜಾತಿ ಗುಂಪೊಂದು ಅವನ ಮೇಲೆ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ಛತ್ತರ್ಪುರ್ ಜಿಲ್ಲೆಯ ಚೌಕ ಗ್ರಾಮದಿಂದ ತಿಳಿದು ಬಂದಿದೆ.
ದಲಿತ ಯುವಕನೊಬ್ಬ ಬಾವಿ ನಿರ್ಮಾಣದ ಅನುಮತಿ ಕೋರಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಲೆಂದು ಶನಿವಾರ ಕಚೇರಿಗೆ ಹೋಗಿದ್ದು ಅಲ್ಲಿದ್ದ ಕುರ್ಚಿಯೊಂದರಲ್ಲಿ ಕುಳಿತಿದ್ದಾನೆ. ಈ ವೇಳೆ ರೋಹಿತ್ ಸಿಂಗ್ ಠಾಕೂರ್ ಎಂಬ ಮೇಲ್ಜಾತಿ ವ್ಯಕ್ತಿ ಅವನ ಎದುರು ದಲಿತ ಯುವಕ ಕುರ್ಚಿಯಲ್ಲಿ ಕುಳಿತಿದ್ದಾನೆಂದು ತಕರಾರು ಮಾಡಿ ಮತ್ತಷ್ಟು ಮಂದಿಯ ಜೊತೆ ದಲಿತ ಯುವಕನನ್ನು ಥಳಿಸಿದ್ದಲ್ಲದೆ ಆತನ ಮನೆಗೂ ಹೋಗಿ ಅವನ ಮೇಲೆ ಹಲ್ಲೆ ನಡೆಸಿದ್ದಾರೆಂದು ಎಂದು ಆತನ ಪತ್ನಿ ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ ಅರವಿಂದ್ ಕುಮಾರ್ ಅಹಿರ್ವಾರ್ ಅವರು ಸುದ್ದಿ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.
ಈ ಕುರಿತು ಭೀತಿಗೊಂಡ ಸಂತ್ರಸ್ತನ ಪತ್ನಿ ಪೋಲೀಸರಿಗೆ ದೂರು ದಾಖಲಿಸಿದರೂ ಇದುವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಪತ್ನಿ ಹೇಳಿದ್ದಾರೆ.