Home ರಾಜ್ಯ “ದೇವನಹಳ್ಳಿ ಭೂ ಸಮಸ್ಯೆ” : ಮುಂದಿನ ಸಂಪುಟ ಸಭೆಯಲ್ಲಿ ಇದೇ ವಿಶೇಷ ಅಜೆಂಡಾವಾಗಲಿ : ಹೋರಾಟ...

“ದೇವನಹಳ್ಳಿ ಭೂ ಸಮಸ್ಯೆ” : ಮುಂದಿನ ಸಂಪುಟ ಸಭೆಯಲ್ಲಿ ಇದೇ ವಿಶೇಷ ಅಜೆಂಡಾವಾಗಲಿ : ಹೋರಾಟ ಸಮಿತಿ ಆಗ್ರಹ

0

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೈಗಾರಿಕಾ ಉದ್ದೇಶದ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರ್ಕಾರದ ನಿಲುವನ್ನು ಪ್ರಶ್ನಿಸಿ, ಸಂಯುಕ್ತ ಹೋರಾಟ ಸಮಿತಿ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಿವೆ. ಅದರಂತೆ ಜುಲೈ 4 ರ ಮುಖ್ಯಮಂತ್ರಿಗಳ ಭೇಟಿಯಲ್ಲಿ ಸಕಾರಾತ್ಮಕ ಸ್ಪಂದನೆ ಸಿಗದೇ ಹೋದರೆ ಹೋರಾಟ ಇನ್ನಷ್ಟು ತೀವ್ರ ಸ್ವರೂಪ ಪಡೆಯಲಿದೆ ಎಂದು ಸಮಿತಿ ಹೇಳಿದೆ.

ಇಡೀ ರಾಜ್ಯ ದೇವನಹಳ್ಳಿಯ ರೈತರ ಪರವಾಗಿ ದನಿ ಎತ್ತಿದ ನಂತರವೂ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ ನಂತರವೂ, ದೊಡ್ಡ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲರು ಪತ್ರಿಕೆಯಲ್ಲಿ ಲೇಖನ ಬರೆದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿರುವುದನ್ನು ಹಾಗೂ ಸರ್ಕಾರಿ ಜಾಹಿರಾತನ್ನು ನೀಡಿ ಹಳೇ ಪ್ರಸ್ತಾಪವನ್ನೇ ಪುನರುಚ್ಛರಿಸಿರುವುದನ್ನು ಗಮನಿಸಿದರೆ ಸರ್ಕಾರ ಕರೆದಿರುವ ಜುಲೈ 4ರ ಸಭೆ ಮತ್ತೊಂದು ಮರೀಚಿಕೆಯಾಗುವ ಸಾಧ್ಯತೆ ಇದೆ ಎಂದು ಹೋರಾಟ ಸಮಿತಿ ಅಭಿಪ್ರಾಯಪಟ್ಟಿದೆ.

‘ಒಂದಲ್ಲಾ ಒಂದು ಕಾರಣ ನೀಡಿ, ನೋಟಿಫೀಕೇಶನ್‌ ಅನ್ನು ರದ್ದು ಮಾಡದೇ ಮುಂದೂಡಿದಲ್ಲಿ ಪರಿಣಾಮಗಳು ಗಂಭೀರವಾಗುವುದು ಶತಸಿದ್ಧವಿದೆ. ಇದನ್ನು ತಡೆಯಬೇಕಾದರೆ ಇಡೀ ರಾಜ್ಯ ಮತ್ತೊಮ್ಮೆ ಗಟ್ಟಿಯಾಗಿ ಕೂಗಿ ಹೇಳಬೇಕಿರುವ ಮತ್ತು ಇಡೀ ಸರ್ಕಾರ ಕಣ್ಣು ತೆರೆಯಲೇಬೇಕಾದ ವಾತಾವರಣ ನಿರ್ಮಿಸುವ ಅಗತ್ಯವಿದೆ. ಅದಕ್ಕಾಗಿ ಹೋರಾಟ ಸಮಿತಿಯು ಈ ಕೆಳಕಂಡ ತೀರ್ಮಾನಗಳನ್ನು ತೆಗೆದುಕೊಂಡಿದೆ ಎಂದು ಸಮಿತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಜುಲೈ 2 ರಂದು ನಂದಿಬೆಟ್ಟದಲ್ಲಿ ನಡೆಯುತ್ತಿರುವ ವಿಶೇಷ ಕ್ಯಾಬಿನೇಟ್‌ ಸಭೆಯಲ್ಲಿ ”ದೇವನಹಳ್ಳಿ ಭೂ ಸಮಸ್ಯೆ” ವಿಶೇಷ ಅಜೆಂಡಾ ಆಗಬೇಕು ಎಂದು ಹೋರಾಟ ಸಮಿತಿ ಒತ್ತಾಯಿಸಿದೆ. ದೇವನಹಳ್ಳಿಯ ಮೂಲಕವೇ ಬೆಟ್ಟಕ್ಕೆ ಹೋದವರು ಬರಿ ಗೈಯಲ್ಲಿ ಬಾರದಿರಿ ಎಂದು ಕ್ಯಾಬಿನೆಟ್‌ ಸಚಿವರುಗಳಲ್ಲಿ ಸಮಿತಿ ಮನವಿ ಮಾಡಿದೆ.

ಜೊತೆಗೆ ‘ದೇವನಹಳ್ಳಿ ವಿವಾದದ ನಿಜವಾದ ಚಿತ್ರಣ ಬಹುತೇಕ ಸಚಿವರುಗಳಿಗೆ ಹಾಗೂ ಶಾಸಕರುಗಳಿಗೆ ಸ್ಪಷ್ಟವಾಗಿಲ್ಲ. ನಿಮ್ಮ ನಿಮ್ಮ ಜಿಲ್ಲೆಯಲ್ಲಿರುವ ಶಾಸಕರು ಮತ್ತು ಸಚಿವರನ್ನು ಕಂಡು, ವಿಚಾರ ವಿವರಿಸಿ, ರೈತಪರ ನಿಲುವು ತೆಗೆದುಕೊಳ್ಳುವಂತೆ, ಮನವೊಲಿಸಬೇಕು ಎಂದು ರಾಜ್ಯದ ಎಲ್ಲಾ ಹೋರಾಟಗಾರರಲ್ಲೂ ಸಮಿತಿ ಮನವಿ ಮಾಡಿದೆ.

ಸರ್ಕಾರದ ಮೇಲೆ ಸಾತ್ವಿಕ ಒತ್ತಡ ಹೆಚ್ಚಿಸುವ ದೃಷ್ಟಿಯಿಂದ ಜುಲೈ 4 ರಂದು ಫ್ರೀಡಂ ಪಾರ್ಕಿನಲ್ಲಿ ಬೃಹತ್‌ “ನಾಡ ಉಳಿಸಿ ಸಮಾವೇಶ”ವನ್ನು ಸಂಘಟಿಸಲಾಗುತ್ತಿದೆ.  ರಾಜ್ಯದ ಎಲ್ಲಾ ತಾಲ್ಲೂಕುಗಳಿಂದಲೂ ಸಮಾನ ಮನಸ್ಕರು ದೊಡ್ಡ ಸಂಖ್ಯೆಯಲ್ಲಿ ಈ ಸಮಾವೇಶದಲ್ಲಿ ಜೊತೆಯಾಗಲಿದ್ದಾರೆ ಎಂದು ಹೋರಾಟಗಾರರ ಸಮಿತಿ ತಿಳಿಸಿದೆ.

ಜುಲೈ 4 ರಂದು ಸರ್ಕಾರ ನಿಟ್ಟುಸಿರು ಬಿಡುವಂತಹ ತೀರ್ಮಾನ ತೆಗೆದುಕೊಂಡಲ್ಲಿ ಸಿದ್ದರಾಮಯ್ಯನವರನ್ನು ಹಾಗೂ ಅವರ ಸರ್ಕಾರವನ್ನು ಅಭಿನಂದಿಸಿ ಇಲ್ಲಿಂದ ಹೊರಡುತ್ತೇವೆ. ಒಂದು ವೇಳೆ ಮತ್ತೊಮ್ಮೆ ನ್ಯಾಯ ನಿರಾಕರಣೆ ನಡೆದಲ್ಲಿ ಇನ್ನಷ್ಟು ಕಠಿಣ ಹೋರಾಟದ ದಿಟ್ಟ ತೀರ್ಮಾನವನ್ನು ಅಂದು ತೆಗೆದುಕೊಳ್ಳುತ್ತೇವೆ. ಅಂತಿಮ ಗೆಲುವಂತೂ ನ್ಯಾಯದ್ದೇ ಆಗಲಿದೆ ಎಂದು ಹೋರಾಟ ಸಮಿತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

You cannot copy content of this page

Exit mobile version