ಬೆಂಗಳೂರು: ಎಂಟು ಜಿಲ್ಲೆಗಳ ಎಂಟು ಸರ್ಕಾರಿ ಅಧಿಕಾರಿಗಳ ಆಸ್ತಿಗಳ ಮೇಲೆ ಕರ್ನಾಟಕ ಲೋಕಾಯುಕ್ತ ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದೆ.
ಅಕ್ರಮ ಆಸ್ತಿ ಪ್ರಕರಣಗಳ ತನಿಖೆಯ ಭಾಗವಾಗಿರುವ ಕಾರ್ಯಾಚರಣೆಯು ಈ ಅಧಿಕಾರಿಗಳಿಗೆ ಸಂಬಂಧಿಸಿದೆಯೆನ್ನಲಾದ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಹುಡುಕಾಟಗಳನ್ನು ಒಳಗೊಂಡಿದೆ.
ಲೋಕಾಯುಕ್ತ ಮೂಲಗಳ ಪ್ರಕಾರ ಬೆಂಗಳೂರು, ಮಂಡ್ಯ, ಬೀದರ್, ಬೆಳಗಾವಿ, ತುಮಕೂರು, ಗದಗ, ಬಳ್ಳಾರಿ ಮತ್ತು ರಾಯಚೂರಿನಲ್ಲಿ ದಾಳಿ ನಡೆಯುತ್ತಿದೆ.
ಶೋಭಾ – ಜಂಟಿ ಆಯುಕ್ತರು, ಬೆಂಗಳೂರು ಸಾರಿಗೆ ಇಲಾಖೆ; ಎಸ್ ಎನ್ ಉಮೇಶ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಕಡೂರು; ರವೀಂದ್ರ – ನಿರೀಕ್ಷಕರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ, ಬೀದರ್; ಪ್ರಕಾಶ ಶ್ರೀಧರ ಗಾಯಕವಾಡ – ತಹಶೀಲ್ದಾರ್, ಖಾನಾಪುರ; ಎಸ್ ರಾಜು – ನಿವೃತ್ತ ಆರ್ಟಿಒ ಅಧಿಕಾರಿ, ತುಮಕೂರು; ಹುಚ್ಚೇಶ್ ಅಲಿಯಾಸ್ ಹುಚ್ಚಪ್ಪ – ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಗದಗ ಪುರಸಭೆ; ಆರ್ ಎಚ್ ಲೋಕೇಶ್- ಕಲ್ಯಾಣಾಧಿಕಾರಿ, ಹಿಂದುಳಿದ ವರ್ಗಗಳ ಇಲಾಖೆ, ಬಳ್ಳಾರಿ; ಮತ್ತು ಹುಲಿರಾಜ – ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕ್), ರಾಯಚೂರು ಇವರುಗಳಿಗೆ ಸಂಬಂಧಿಸಿದ ಆಸ್ತಿಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ಪ್ರಕರಣಗಳಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳ ದಾಖಲೆಗಳು, ಆಸ್ತಿ, ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ.
ಇದು ಭ್ರಷ್ಟಾಚಾರ ನಿಗ್ರಹ ದಳದ ಈ ವರ್ಷದ ಮೊದಲ ಪ್ರಮುಖ ಕಾರ್ಯಾಚರಣೆಯಾಗಿದೆ. ಡಿಸೆಂಬರ್ 12ರಂದು ಲೋಕಾಯುಕ್ತರು ಹತ್ತು ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಆಸ್ತಿಗಳ ಮೇಲೆ ದಾಳಿ ನಡೆಸಿದ್ದು, 48.55 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಬಹಿರಂಗಪಡಿಸಿದ್ದರು.