Home ದೇಶ ಸರ್ವಾಧಿಕಾರಿ ಧೋರಣೆಯ ವಿರುದ್ಧ ದುಡಿಯುವ ಜನರ ಮಹಾಧರಣಿ

ಸರ್ವಾಧಿಕಾರಿ ಧೋರಣೆಯ ವಿರುದ್ಧ ದುಡಿಯುವ ಜನರ ಮಹಾಧರಣಿ

0

ಕೇಂದ್ರದ ಫ್ಯಾಸಿಸ್ಟ್ ಸರಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ದ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಕರೆಯ ಮೇರೆಗೆ ದೇಶಾದ್ಯಂತ ನವೆಂಬರ್ 27 ರಿಂದ 29 ರವರೆಗೆ 72 ಗಂಟೆಗಳ ಮಹಾಧರಣಿಯನ್ನು  ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಫ್ರೀಡಂ ಪಾರ್ಕ ಆವರಣದಲ್ಲೂ ಮಹಾಧರಣಿ ಸಹಸ್ರಾರು ಜನರ ಭಾಗವಹಿಸುವಿಕೆಯೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆಯಿತು. 

ಕಳೆದ ಒಂಬತ್ತು ವರ್ಷಗಳಿಂದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಾರ್ಪೋರೇಟ್ ಬಂಡವಾಳಿಗರ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ದೇಶದ ದುಡಿಯುವ ಜನರನ್ನು ಶೋಷಿಸಲು ಅನುಕೂಲಕರವಾದ ಕಾನೂನುಗಳನ್ನು ಜಾರಿಗೆ ತರುತ್ತಲೇ ಇದೆ.

ಯಾವಾಗ  ಮೂರು ರೈತವಿರೋಧಿ ಕೃಷಿ ಕಾನೂನುಗಳನ್ನು ಸಂಸತ್ತಿನಲ್ಲಿ ಚರ್ಚೆಯನ್ನೂ ಮಾಡದೇ ಜಾರಿಗೆ ತರಲಾಯಿತೋ ಆಗ ದೇಶದ ರೈತಾಪಿ ಸಮುದಾಯ ತಿರುಗಿ ಬಿದ್ದಿತು. ಜೊತೆಗೆ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿ ಬಂಡವಾಳಿಗರ ಲಾಭವನ್ನು ಹೆಚ್ಚಿಸಲು ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸಿತೋ ಆಗ ಕಾರ್ಮಿಕ ಸಂಘಟನೆಗಳು ಎಚ್ಚರಗೊಂಡವು. ಈ ಕರಾಳ ಕಾಯ್ದೆಗಳ ವಿರುದ್ದ ಸಿಡಿದೆದ್ದ ಸಂಘಟನೆಗಳು ದೆಹಲಿ ಗಡಿಯಲ್ಲಿ 13 ತಿಂಗಳುಗಳ ಕಾಲ ಎಲ್ಲ ಅಡತಡೆಗಳನ್ನು ಎದುರಿಸಿ ರಾಜಿರಹಿತವಾಗಿ ಹೋರಾಟ ಮಾಡಿ ಕೇಂದ್ರ ಸರಕಾರ ಈ ದಮನಕಾರಿ ಕಾನೂನುಗಳನ್ನು ಹಿಂಪಡೆಯುವಂತೆ ಮಾಡಿತು. 

ಎಚ್ಚೆತ್ತ ರೈತರ ನಿರಂತರ ಹೋರಾಟಕ್ಕೆ ಬೆಚ್ಚಿ ಬಿದ್ದ ಮೋದಿ ಸರಕಾರ ಕರಾಳ ಕಾನೂನುಗಳನ್ನು ವಾಪಸ್ ಪಡೆಯುವಾಗ ರೈತರಿಗೆ ಕೊಟ್ಟ ಲಿಖಿತ ಭರವಸೆಗಳನ್ನು ಈಡೇರಿಸದೇ ಮೋಸಮಾಡಿತು. 

ಮಾತುಕೊಟ್ಟಂತೆ ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ (ಎಂ ಎಸ್ ಪಿ) ಕಾಯ್ದೆಯನ್ನು ಜಾರಿ ಮಾಡಲೇ ಇಲ್ಲ. ವಿದ್ಯುತ್ ತಿದ್ದುಪಡಿ ಮಸೂದೆಯನ್ನೂ ರದ್ದು ಮಾಡಲಿಲ್ಲ. ಸಿಂಘು ಗಡಿಯಲ್ಲಿ ಹುತಾತ್ಮ ರೈತರ ಸ್ಮಾರಕ ನಿರ್ಮಿಸಲು ಜಾಗ ಕೊಡಲಿಲ್ಲ. ಹೋರಾಟದ ಸಮಯದಲ್ಲಿ ಹುತಾತ್ಮರಾದವರ ಕುಟುಂಬಕ್ಕೆ ಪರಿಹಾರವೂ ಇಲ್ಲ ಪುನರ್ವಸತಿಯೂ ಇಲ್ಲ. ರೈತರ ಮೇಲೆ ಹಾಕಿರುವ ಪೊಲೀಸ್ ಕೇಸುಗಳನ್ನೂ ವಾಪಸ್ ಪಡೆಯಲಿಲ್ಲ. ರೈತರ ಸಂಘಟನಾತ್ಮಕ ಜನಾಂದೋಲನದ ಒತ್ತಡದಿಂದ ಪಾರಾಗಲು ಕೊಟ್ಟ ಲಿಖಿತ ಭರವಸೆಗಳನ್ನು ಈಡೇರಿಸದೇ ಮೋದಿ ಸರಕಾರ ಮೋಸ ಮಾಡಿತು. ಈ ವಂಚನೆಯ ವಿರುದ್ದ ಮತ್ತೆ ಹೋರಾಟಕ್ಕಿಳಿಯುವುದು ರೈತರು ಹಾಗೂ ಕಾರ್ಮಿಕರಿಗೆ ಅನಿವಾರ್ಯವಾಯಿತು. ಅದರಿಂದಲೇ ಈ ಮಹಾಧರಣಿ ಆಯೋಜನೆಗೊಂಡಿತು. 

ಕೇಂದ್ರ ಸರಕಾರದ ರೈತ- ಕಾರ್ಮಿಕ ವಿರೋಧಿತನವನ್ನು ಬೆತ್ತಲೆಗೊಳಿಸಲು ಇದೇ ಸಕಾಲ. ಯಾಕೆಂದರೆ ಲೋಕಸಭಾ ಚುನಾವಣೆ ಹತ್ತಿರದಲ್ಲಿದೆ. ಎಲ್ಲಾ ದುಡಿಯುವ ಜನರನ್ನು ಬಿಜೆಪಿ ಸರಕಾರದ ಜನವಿರೋಧಿತನದ ವಿರುದ್ದ ಜಾಗೃತಿಗೊಳಿಸುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಮೂರು ದಿನಗಳ ಮಹಾಧರಣಿ ಒಂದು ಹಂತಕ್ಕೆ ಯಶಸ್ವಿಯಾಗಿದೆ. ಜನಾಂದೋಲನದ ತೀವ್ರತೆಯನ್ನು ರಾಜಧಾನಿಗಳಿಂದ ಪ್ರತಿ ಪಟ್ಟಣ ಹೋಬಳಿ ಊರು ಕೇರಿಗಳಿಗೆ ವಿಸ್ತರಿಸಬೇಕಿದೆ. 

2014 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡುವುದಾಗಿ ಮೋದಿ ಭರವಸೆ ಕೊಟ್ಟಿತ್ತು. ರೈತರ ಬೆಳೆಗಳ ಉತ್ಪಾದನಾ ವೆಚ್ಚಕ್ಕೆ 50℅ ಸೇರಿಸಿ ಕನಿಷ್ಟ ಬೆಂಬಲ ಬೆಲೆ ಒದಗಿಸುವುದಾಗಿ ಆಶ್ವಾಸನೆ ಕೊಡಲಾಗಿತ್ತು. ರೈತರ ಆದಾಯ ದ್ವಿಗುಣ ಗೊಳಿಸುವಂತೆ ಮಾಡುವುದಾಗಿ ಹೇಳಲಾಗಿತ್ತು. ಈಗ ಮತ್ತೊಂದು ಲೋಕಸಭಾ ಚುನಾವಣೆ ಬಂದಿದೆ. ಆದರೆ ಆಗ ಕೊಟ್ಟ ಯಾವ ಭರವಸೆಗಳನ್ನೂ ಮೋದಿಯವರು ಈಡೇರಿಸಿಲ್ಲ. ಬಿಜೆಪಿಗರಿಗೆ ಬೇಕಾಗಿಲ್ಲ.

ಅದರ ಬದಲಾಗಿ ಕಾರ್ಪೋರೇಟ್ ವಲಯದ ತೆರಿಗೆಗಳನ್ನು ಕಡಿತಗೊಳಿಸಿ, ಸಾಮಾನ್ಯ ಜನರು ಬಳಸುವ ಉತ್ಪನ್ನಗಳ ಮೇಲೆ ಜಿಎಸ್ಟಿ ಹೊರೆಯನ್ನು ವಿಧಿಸಲಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೆಚ್ಚು ತೆರಿಗೆ ಹಾಕಿ ಅಗತ್ಯ ಸರಕುಗಳ ಬೆಲೆ ಏರಿಕೆಯಾಗುವಂತೆ ಮಾಡಲಾಗಿದೆ. ಇದರಿಂದಾಗಿ ದುಡಿಯುವ ಜನತೆ ತತ್ತರಿಸಿದ್ದಾರೆ. ವರ್ಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ  ಮೋದಿ ಹೇಳಿದ್ದು ಹುಸಿಯಾಗಿ ಇರುವ ಉದ್ಯೋಗಗಳೂ ನಷ್ಟವಾಗಿ ನಿರುದ್ಯೋಗ ಅತಿಯಾಗಿದೆ. ಇದರಿಂದಾಗಿ ರೈತರು ಹಾಗೂ ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶದ ಜನತೆ ತೀವ್ರ ಸಂಕಷ್ಟದಲ್ಲಿದ್ದಾರೆ.

ಪರಿಸ್ಥಿತಿ ಹೀಗಿದ್ದರೂ ಬಿಜೆಪಿ ಸರಕಾರವು ಸಂಘ ಪರಿವಾರದ ಜೊತೆ ಸೇರಿಕೊಂಡು ವಾಸ್ತವ ದುಸ್ಥಿತಿಯಿಂದ ಜನರ ಗಮನವನ್ನು ಭಾವತೀವ್ರತೆಯತ್ತ ಸೆಳೆಯಲು ಎಲ್ಲಾ ರೀತಿಯ ಪ್ರಯತ್ನವನ್ನೂ ಮಾಡುತ್ತಲೇ ಇದೆ. ಜಾತಿ ಧರ್ಮ ಭಾಷೆಗಳ ಹೆಸರಲ್ಲಿ ಜನತೆಯನ್ನು ಕೋಮು ವಿಭಜನೆಯ ಮೂಲಕ ಒಡೆದಾಳುವ ಹುನ್ನಾರ ಮುಂಚೂಣಿಯಲ್ಲಿದೆ. ಅನ್ಯಧರ್ಮದ್ವೇಷ ಹಾಗೂ ಹುಸಿ ದೇಶಪ್ರೇಮದ ಮೂಲಕ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುವ ಸಂಚು ಹಂತ ಹಂತವಾಗಿ ಜಾರಿಯಲ್ಲಿದೆ. ಇದನ್ನೆಲ್ಲಾ ಪ್ರಶ್ನಿಸುವವರನ್ನು, ಜನತೆಯ ಹಕ್ಕಿಗಾಗಿ ಧ್ವನಿ ಎತ್ತುವವರನ್ನು ಕರಾಳ ಕಾನೂನುಗಳ ಮೂಲಕ ಹತ್ತಿಕ್ಕಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ದಮನ ನಿರಂತರವಾಗಿದೆ. 

ಇಂತಹ ಆಘಾತಕಾರಿ ಪರಿಸ್ಥಿತಿಯಲ್ಲಿ,  ಪ್ರಭುತ್ವದ ಆಕ್ರಮಣಕಾರಿ ದಮನಾಡಳಿತದಲ್ಲಿ ದುಡಿಯುವ ಜನರ ಐಕ್ಯ ಹೋರಾಟವೊಂದೇ ಪರ್ಯಾಯ ಮಾರ್ಗವಾಗಿದೆ. ಬಿಡಿ ಬಿಡಿ ಹೋರಾಟಗಳನ್ನು ಬಡಿದು ಬಾಯಿಗೆ ಹಾಕಿಕೊಳ್ಳುವ ಈ ಫ್ಯಾಸಿಸ್ಟ್ ಪ್ರಭುತ್ವವನ್ನು ಜನಾಂದೋಲನಗಳಿಂದ ಮಾತ್ರ ನಿಯಂತ್ರಿಸಲು ಸಾಧ್ಯ. ಜನರ ಬದುಕಿನ ಬವಣೆ ಸಂಕಟಗಳಿಗೆ ನಿಜವಾದ ಕಾರಣರು ಯಾರು ಎಂಬುದನ್ನು ದೇಶದ ಜನತೆಗೆ ಮನವರಿಕೆ ಮಾಡಿಕೊಡುವ ಮೂಲಕ ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಈ ದಮನಕಾರಿ ಸರಕಾರವನ್ನು ಸೋಲಿಸಲು ಸಾಧ್ಯ. ಮತ್ತೊಮ್ಮೆ ಕೇಂದ್ರದಲ್ಲಿ ಇದೇ ಮೋದಿ ನೇತೃತ್ವದ ಸರಕಾರ ಬಹುಮತದಿಂದ ಬಂದಿದ್ದೇ ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯೂ ಇರುವುದಿಲ್ಲ, ಸಂವಿಧಾನವೂ ಬದುಕಿರುವುದಿಲ್ಲ. ಸರ್ವಾಧಿಕಾರಿ ಪ್ರಭುತ್ವ ಬರುವುದರಲ್ಲಿ ಸಂದೇಹವಿಲ್ಲ. 

ದೇಶಾದ್ಯಂತ ಮಹಾಧರಣಿ ಮಾಡಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕಲ್ಲಿ ಜನಸಮೂಹವೇ ಕಿಕ್ಕಿರಿದು ಸೇರಿ ಮಹಾಧರಣಿ ಅತ್ಯಂತ ಯಶಸ್ವಿಯಾಗಿದೆ. ಆದರೆ ಈ ಸುದ್ದಿ ಮಾಧ್ಯಮಗಳಿಗೆ ಏನಾಗಿದೆ? ಯಾವುದೋ ಪಕ್ಷದ ಸಭೆ ಸಮಾರಂಭ ಇದ್ದರೆ ಸಭೆ ಸೇರುವಲ್ಲಿ ಟೆಂಟ್ ಹಾಕಿಕೊಂಡು ನಿಂತು ಎಡಬಿಡದೇ ಸುದ್ದಿ ಬಿತ್ತರಿಸುವ ಈ ಗೋದಿ ಮಾಧ್ಯಮಗಳು ಇಷ್ಟು ದೊಡ್ಡಮಟ್ಟದಲ್ಲಿ ಮೂರು ದಿನಗಳ ಕಾಲ ಮಹಾಧರಣಿ ನಡೆದರೂ ಯಾಕೆ ನಿರಂತರ ಸುದ್ದಿ ಮಾಡಲಿಲ್ಲ?. ಇವರ ಕ್ಯಾಮರಾಗಳು ಹೋರಾಟದ ಸ್ಥಳದಲ್ಲಿ ಬೀಡು ಬಿಡಲಿಲ್ಲ?. ಯಾಕೆಂದರೆ ಬಹುತೇಕ ಸುದ್ದಿ ಮಾಧ್ಯಮಗಳು ಸಂಘ ಪರಿವಾರದ ಅಂಗಗಳಾಗಿವೆ. ತಮ್ಮನ್ನು ತಾವು ಮಾರಿಕೊಂಡಿವೆ. ಯಾವುದೇ ಕಾರಣಕ್ಕೂ ಜನರ ಹೋರಾಟ ದೇಶಾದ್ಯಂತ ಸುದ್ದಿಯಾಗಬಾರದು, ಕೇಂದ್ರ ಸರಕಾರದ ಜನವಿರೋಧಿ ನೀತಿಗಳು ದೇಶವಾಸಿಗಳಿಗೆ ತಿಳಿಯಬಾರದು, ಮೋದಿಯವರ ವರ್ಚಸ್ಸಿಗೆ ಕಳಂಕ ಬರಬಾರದು ಎನ್ನುವುದಕ್ಕೆ ಈ ಗೋದಿ ಮಾಧ್ಯಮಗಳು ಟೊಂಕ ಕಟ್ಟಿ ನಿಂತಿವೆ. ಜನಹೋರಾಟಗಳ ಬಗ್ಗೆ ದಿವ್ಯ ನಿರ್ಲಕ್ಷವನ್ನು ತೋರಿಸುತ್ತಿವೆ. ಏನೇ ಆದರೂ ಪರ್ಯಾಯ ಮಾಧ್ಯಮಗಳಾದ ಸಾಮಾಜಿಕ ಜಾಲತಾಣಗಳ ಮೂಲಕ ಸಾಧ್ಯವಾದಷ್ಟು ಜನರಿಗೆ ಹೋರಾಟದ ಗುರಿ, ಉದ್ದೇಶಗಳು ಗೊತ್ತಾಗುತ್ತಲೇ ಇವೆ. ದಮನ ಹೆಚ್ಚಿದಷ್ಟೂ ಜನರ ಹೋರಾಟ ತೀವ್ರಗೊಳ್ಳುತ್ತದೆ. ಅದಕ್ಕಾಗಿ ಈಗ ಈ ದೇಶ ಸಿದ್ಧವಾಗಿದೆ. ಸಂವಿಧಾನ ಉಳಿಸಲು, ಪ್ರಜಾತಂತ್ರ ಕಾಪಾಡಲು, ಜನರ ಬದುಕು ಹಸನಾಗಲು ಹೋರಾಟದ ದಾರಿ ಹಿಡಿಯುವುದು ಇಂದಿನ ಅಗತ್ಯವಾಗಿದೆ. 

ಶಶಿಕಾಂತ ಯಡಹಳ್ಳಿ, ರಂಗಕರ್ಮಿ

ಇದನ್ನೂ ಓದಿ- ಹರಿಯಾಣದಿಂದ ಕರ್ನಾಟಕದವರೆಗೆ, ಕೊರೋನಾ ನಿಯಮಗಳನ್ನು ಮತ್ತೆ ವಿಧಿಸಿದ ಸರ್ಕಾರ

You cannot copy content of this page

Exit mobile version