ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ದಲಿತ- ಅಲ್ಪ ಸಂಖ್ಯಾತರು ಒಂದಾಗಿದ್ದರೆ ‘ಇಂಡಿಯಾ’ ಬಣಕ್ಕೆ ಸರಳ ಗೆಲುವು ದಕ್ಕುತ್ತಿತ್ತು ಎಂದು ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಪಕ್ಷದ ಮುಖ್ಯಸ್ಥ ತೊಳ್ ತಿರುಮಾವಲವನ್ ಅಭಿಪ್ರಾಯ ಪಟ್ಟಿದ್ದಾರೆ.
ಚುನಾವಣೆ ಫಲಿತಾಂಶದ ಬಗ್ಗೆ ವಿಶ್ಲೇಷಣೆ ನಡೆಸಿದ ಅವರು, “ದಲಿತ ಮತ್ತು ಅಲ್ಪ ಸಂಖ್ಯಾತ ಮತಗಳು ಚದುರಿಹೋಗಿರುವುದು ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ” ಎಂದು ಹೇಳಿದರು.
“ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವಲ್ಲಿ ದಲಿತರ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ದಲಿತರ ಮತಗಳು ಇಂಡಿಯಾ ಬ್ಲಾಕ್ಗೆ ಹೋಗದಂತೆ ತಡೆಯುವ ಉದ್ದೇಶದಿಂದ ಮಾಯಾವತಿ ನೇತೃತ್ವದ ಬಿಎಸ್ಪಿ ಮತ್ತು ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಆಗಾಡಿ (ವಿಬಿಎ) ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ” ಎಂದು ತಿರುಮಾವಲವನ್ ಆರೋಪಿಸಿದರು.
ಬಿಜೆಪಿ ಮೈತ್ರಿಗೆ ಅನುಕೂಲವಾಗುವಂತೆ ದಲಿತ ಮತಗಳನ್ನು ವಿಭಜಿಸಲು; ಎನ್ಡಿಎ ಮತ್ತು ಇಂಡಿಯಾ ಬ್ಲಾಕ್ ಎರಡರ ವಿರುದ್ಧವೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ ಎಂಬ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ದಲಿತರು ಮತ್ತು ಅಲ್ಪಸಂಖ್ಯಾತರಂತಹ ಬಿಜೆಪಿ ವಿರೋಧಿ ಮತಗಳನ್ನು ಕ್ರೋಢೀಕರಿಸಲು ವಿರೋಧ ಪಕ್ಷಗಳಿಗೆ ಇದು ಸಕಾಲ ಎಂಬುದನ್ನು ಮಹಾರಾಷ್ಟ್ರ ಚುನಾವಣಾ ಫಲಿತಾಂಶ ತೋರಿಸುತ್ತದೆ ಎಂದು ತಿರುಮಾವಲವನ್ ಹೇಳಿದ್ದಾರೆ.