ಪಶ್ಚಿಮ ಬಂಗಾಳದ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಮಾಲ್ಡಾದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಬಂಗಾಳದ ಜನರು ಬದಲಾವಣೆಯನ್ನು ಬಯಸುತ್ತಿದ್ದು, ಅಭಿವೃದ್ಧಿ ಮತ್ತು ಜನಕಲ್ಯಾಣಕ್ಕೆ ಆದ್ಯತೆ ನೀಡುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಬಿಹಾರದಲ್ಲಿ ಎನ್ಡಿಎ ಗೆಲುವು ಸಾಧಿಸಿದಂತೆ, ಈಗ ಬಂಗಾಳದ ಸರದಿ ಬಂದಿದೆ ಎಂದು ಮೋದಿ ಹೇಳಿದರು. ರಾಜ್ಯಕ್ಕೆ ಅಕ್ರಮ ನುಸುಳುಕೋರರ ಹಾವಳಿ ದೊಡ್ಡ ಸವಾಲಾಗಿದೆ. ಮಾಲ್ಡಾ ಮತ್ತು ಮುರ್ಷಿದಾಬಾದ್ ಭಾಗಗಳಲ್ಲಿ ನಡೆಯುತ್ತಿರುವ ಗಲಭೆಗಳಿಗೆ ಹಾಗೂ ಜನಸಂಖ್ಯಾ ಸ್ವರೂಪದಲ್ಲಿನ ಬದಲಾವಣೆಗೆ ಇದೇ ಕಾರಣವಾಗಿದೆ. ಟಿಎಂಸಿ ಸರ್ಕಾರ ಇದನ್ನು ತಡೆಯುವ ಬದಲು, ನುಸುಳುಕೋರರನ್ನು ಮತದಾರರನ್ನಾಗಿ ಪರಿವರ್ತಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಪ್ರವಾಹ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ 40 ಬಾರಿ ಅನುದಾನ ನೀಡಿದ್ದರೂ, ಅದು ನೈಜ ಫಲಾನುಭವಿಗಳಿಗೆ ತಲುಪಿಲ್ಲ. ಕೇಂದ್ರದ ಅನುದಾನವನ್ನು ತೃಣಮೂಲ ಕಾಂಗ್ರೆಸ್ ಲೂಟಿ ಮಾಡುತ್ತಿದೆ ಎಂದು ಮೋದಿ ದೂರಿದರು. ಟಿಎಂಸಿ ಭ್ರಷ್ಟಾಚಾರ, ಹಿಂಸೆ ಮತ್ತು ಓಲೈಕೆ ರಾಜಕಾರಣದಲ್ಲಿ ತೊಡಗಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಅವರು ತಿಳಿಸಿದರು.
