ರಾಜಕಾಲುವೆ ಒತ್ತುವರಿ ಮಾಡಿ ಮನೆ ನಿರ್ಮಿಸಿದ ಆರೋಪದ ಮೇಲೆ ಬಿಬಿಎಂಪಿ ಅಧಿಕಾರಿಗಳು ಮನೆಗಳ ತೆರವಿಗೆ ಮುಂದಾಗಿದ್ದರು. ಈ ವೇಳೆ ದಂಪತಿಗಳು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಬಸವನಪುರದ ಎಸ್ ಆರ್ ಲೇಔಟ್ ನಲ್ಲಿ ನಡೆದಿದೆ.
ಹೌದು, ರಾಜಕಾಲುವೆ ಒತ್ತುವರಿ ಮಾಡಿ ಮನೆ ಕಟ್ಟಿದ್ದಾರೆ ಎಂದು ಆರೋಪಿಸಿ ದಂಪತಿಗಳು ವಾಸಿಸುತ್ತಿದ್ದ ಮನೆಯನ್ನು ಕೆಡವಲು ಹೋದಂತ ಅಧಿಕಾರಿಗಳಿಗೆ, ದಂಪತಿಗಳು ಮನೆ ನಿರ್ಮಿಸುವಾಗ ಬಿಬಿಎಂಪಿ ಅಧಿಕಾರಿಗಳೇ ಅನುಮತಿ ನೀಡಿದ್ದು, ಬ್ಯಾಂಕಿನಲ್ಲಿ ಲಕ್ಷಾಂತರ ರೂ. ಸಾಲ ಮಾಡಿ ಮನೆ ಕಟ್ಟಲಾಗಿದೆ. ಆಗ ಈ ಜಾಗ ರಾಜಕಾಲುವೆಯಲ್ಲಿದೆ ಎಂದು ಗೊತ್ತಿರಲಿಲ್ಲವೇ? ಅನುಮತಿ ನೀಡಿದ್ದು ಯಾಕೆ? ಆಗ ಅನುಮತಿ ನೀಡಿ ಈಗ ಏಕಾಏಕಿ JCB ತಂದು ಮನೆ ನೆಲಸಮ ಮಾಡಲು ಮುಂದಾಗಿರುವುದು ಏಕೆ ಎಂದು ದಂಪತಿ ಪ್ರಶ್ನಿಸಿದ್ದಾರೆ.
ಇದಲ್ಲದೇ ಅಧಿಕಾರಿಗಳು ತೆರವಿಗೆ ಮುಂದಾದಾಗ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೆ ತೆರವು ಮಾಡಿದ್ದಲ್ಲಿ ಮನೆಮಂದಿಯೊಂದಿಗೆ ನಾವೂ ಸುಟ್ಟು ಬೂದಿಯಾಗುತ್ತೇವೆ ಎಂದು ಎಚ್ಚರಿಸಿದ್ದಾರೆ.
ಆ ಬಳಿಕ ಮನೆ ತೆರವು ಕಾರ್ಯವನ್ನು ಬಿಬಿಎಂಪಿ ಅಧಿಕಾರಿಗಳು ನಿಲ್ಲಿಸಿದ್ದು, ಪೊಲೀಸರು ದಂಪತಿಯ ಮನವೊಲಿಸುತ್ತಿದ್ದಾರೆ. ಪೊಲೀಸರು ನಮ್ಮನ್ನು ತಡೆದು ಮನೆ ತೆರವಿಗೆ ಅನುವು ಮಾಡಿಕೊಟ್ಟರೆ ನಾವು ಆತ್ಮಹತ್ಯೆ ಮಾಡದೇ ಬಿಡುವುದಿಲ್ಲ ಎಂದು ದಂಪತಿ ಹೇಳಿದ್ದು, ಈ ಕಾರಣಕ್ಕಾಗಿ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.