ಬೆಂಗಳೂರು : ಹಿಂದಿ ಹೇರಿಕೆಯನ್ನ ವಿರೋಧ ಮಾಡಿ ತಾಜ್ ವೆಸ್ಟೆಂಡ್ ಹೋಟೆಲ್ಗೆ ನುಗ್ಗಿ ಪ್ರತಿಭಟನೆ ಮಾಡಿದ್ದ 41 ಕರವೇ ಕಾರ್ಯಕರ್ತರನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈ ವಿಚಾರವನ್ನ ಖಂಡಿಸಿ ನಾಳೆ ರಾಜ್ಯಾದಾದ್ಯಂತ ಕರವೇ ಪ್ರತಿಭಟನೆ ಕರೆ ಕೊಟ್ಟಿದೆ.
14 ದಿನಗಳ ನ್ಯಾಯಾಂಗ ಬಂಧನ
ಕರವೇ ಕಾರ್ಯಕರ್ತರು ಹೋಟೆಲ್ನಲ್ಲಿ ಹಿಂದಿ ಹೇರಿಕೆಯನ್ನ ಖಂಡನೆ ಮಾಡಿ, ಹೋಟೆಲ್ಗೆ ನುಗ್ಗಿ ಪ್ರತಿಭಟನೆ ಮಾಡಿದ್ದರು. ಹೋಟೆಲ್ ಒಳಗೆ ಅಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ 41 ಕರವೇ ಕಾರ್ಯಕರ್ತರನ್ನ ಬಂಧಿಸಲಾಗಿದ್ದು, ಅವರನ್ನ 14 ದಿನಗಳ ಕಾಲ ನ್ಯಾಯಂಗ ಬಂಧನಕ್ಕೆ ನೀಡಲಾಗಿದೆ.
ಈ ವಿಚಾರವಾಗಿ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಹಿಂದೆ ಹೇರಿಕೆ ಖಂಡಿಸಿ, ದಬ್ಬಾಳಿಕೆ ಕ್ರಮವನ್ನ ವಿರೋಧಿಸಿ ಹೋರಾಟ ಮಾಡಿದ ಕಾರಣಕ್ಕೆ 41 ಕರವೇ ಕಾರ್ಯಕರ್ತರನ್ನ ಬಂಧಿಸಲಾಗಿದೆ. ಇದನ್ನ ಖಂಡನೆ ಮಾಡಿ 31 ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಕೇಸ್ ವಾಪಾಸ್ ಪಡೆಯಬೇಕು
ಬಲವಂತವಾಗಿ ಹಿಂದೆ ಹೇರಿಕೆ ಮಾಡಬಾರದು. ಈ ರೀತಿ ಮಾಡುವುದನ್ನ ಈಗಲೇ ನಿಲ್ಲಿಸಬೇಕು. ನಮ್ಮ ತೆರಿಗೆಯನ್ನ ಹಿಂದಿ ಭಾಷೆಯನ್ನ ಅಭಿವೃದ್ಧಿ ಮಾಡಲು ಬಳಕೆ ಮಾಡಲಾಗುತ್ತದೆ. ಈಗಲೇ ಕಾರ್ಯಕರ್ತರ ಮೇಲಿನ ಕೇಸ್ಗಳನ್ನ ವಾಪಾಸ್ ಪಡೆಯಬೇಕಾಗುತ್ತದೆ. ನಮ್ಮ ಕಾರ್ಯಕರ್ತರನ್ನ ರೌಡಿ ಶೀಟರ್ ಮಾಡಲು ಹೊರಟಿದ್ದೀರಾ? ಈ ರೀತಿ ಮಾಡುವುದರಿಂದ 78 ಲಕ್ಷ ಕಾರ್ಯಕರ್ತರು ದಂಗೆ ಏಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಪ್ರಕರಣ?
ಬೆಂಗಳೂರಿನ ತಾಜ್ ವೆಸ್ಟ್ ಹೋಟೆಲ್ನಲ್ಲಿ ಉತ್ತರ ಭಾರತದ ಸಂಸದರ ಕಾರ್ಯಕ್ರಮವನ್ನು ನಡೆಯುತ್ತಿದ್ದು, ಇದು ಹಿಂದಿ ಹೇರಿಕೆಯ ಕಾರ್ಯಕ್ರಮ ಎಂದು ಆರೋಪಿಸಿ ಕನ್ನಡ ರಕ್ಷಣೆ ವೇದಿಕೆಯ ನಾರಾಯಣ ಗೌಡ ಬಣ ಕಾರ್ಯಕರ್ತರು ಹೋಟೆಲ್ ಗೆ ನುಗ್ಗಿದ್ದರು. ಬೆಂಗಳೂರಿನ ತಾಜ್ ವೆಸ್ಟ್ ಹೋಟೆಲ್ ನಲ್ಲಿ ಮೂರು ದಿನಗಳ ಕಾಲ ಉತ್ತರ ಭಾರತದ ಸಂಸದರ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಇದೀಗ ಹಿಂದಿ ಮಾತನಾಡುವವರಿಗೆ ಉತ್ತಮ ವೇತನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಕಚೇರಿಯಲ್ಲಿ ಹಿಂದಿ ಹೇರಿಕೆಯ ವಿಚಾರ ಸಂಕಿರಣ ನಡೆಸಲಾಗುತ್ತಿದೆ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ತಿಳಿಸಿದ್ದರು.