ಹಿರಿಯ ಜೆಡಿಎಸ್ ನಾಯಕ ಜಿಟಿ ದೇವೇಗೌಡರಿಗೆ ಜೆಡಿಎಸ್ ಶಾಸಕಾಂಗದ ನಾಯಕ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಸ್ವಪಕ್ಷೀಯರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.
ಶಾಸಕಾಂಗ ಪಕ್ಷದ ನಾಯಕ ಸ್ಥಾನ ಸಿ.ಬಿ. ಸುರೇಶ್ಬಾಬು ಅವರಿಗೆ ಸಿಕ್ಕಿದ್ದಕ್ಕೆ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ತಮ್ಮ ಆಪ್ತ ವಲಯದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಜೆಡಿಎಸ್ ನಾಯಕ ಕೇಂದ್ರ ಮಂತ್ರಿ ಕುಮಾರಸ್ವಾಮಿ ವಿರುದ್ಧವೂ ಬೇಸರ ವ್ಯಕ್ತಪಡಿಸಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾದ ಬಳಿಕ ಜೆಡಿಎಸ್ ನಾಯಕ ಸ್ಥಾನ ತಮಗೇ ಸಿಗಲಿದೆ ಎಂದು ಜಿ.ಟಿ.ದೇವೇಗೌಡ ನಿರೀಕ್ಷೆ ಇಟ್ಟುಕೊಂಡಿದ್ದರು. ಹಲವು ದಿನಗಳಿಂದ ಜಿಟಿ ದೇವೇಗೌಡರಿಗೆ ಸ್ಥಾನ ಕೈತಪ್ಪಿಸಲು ಜೆಡಿಎಸ್ ಪಕ್ಷದ ಒಳಗೇ ನಡೆಯುತ್ತಿದ್ದ ತಂತ್ರಗಳ ಬಗ್ಗೆ ಮಾಹಿತಿ ಇದ್ದ ಜಿಟಿ ದೇವೇಗೌಡರು, ಹೆಚ್ ಡಿ ಕುಮಾರಸ್ವಾಮಿ ಕೂಡ ಇದಕ್ಕೆ ತಲೆದೂಗಿರುವ ಬಗ್ಗೆ ತಮ್ಮ ಆಪ್ತ ವಲಯದಲ್ಲಿ ಬೇಸರ ತೋಡಿಕೊಂಡಿದ್ದಾರೆ.
ಸೋಮವಾರದ ವಿಧಾನಸಭಾ ಕಲಾಪದಲ್ಲೂ ಯಾವ ಪೂರ್ವ ಮಾಹಿತಿಯೂ ನೀಡದೇ ಸುರೇಶ್ ಬಾಬು ಅವರನ್ನು ಈ ಸ್ಥಾನಕ್ಕೆ ನೇಮಕ ಮಾಡಿದ್ದು ವಿಧಾನಸಭೆಯಲ್ಲಿ ಸ್ಪೀಕರ್ ಯುಟಿ ಖಾದರ್ ಅವರು ಈ ವಿಚಾರವನ್ನು ಪ್ರಕಟಿಸಿಯೂ ಬಿಟ್ಟರು. ಆ ನಂತರ ಎರಡೂ ದಿನಗಳ ಕಲಾಪಕ್ಕೆ ಜಿಟಿ ದೇವೇಗೌಡ ಗೈರಾಗಿದ್ದಾರೆ.
ಇದಕ್ಕೆ ಸ್ಪಷ್ಟನೆ ನೀಡಲು ಪ್ರಯತ್ನಿಸಿರುವ ಸುರೇಶ್ಬಾಬು, ನಮ್ಮಲ್ಲಿ ಯಾವುದೇ ಅಸಮಾಧಾನಗಳಿಲ್ಲ. ಮೇಲ್ಮನೆಯಲ್ಲಿ ಭೋಜೇಗೌಡರನ್ನು ಜೆಡಿಎಸ್ ನಾಯಕರನ್ನಾಗಿ ಮಾಡಿದ್ದು, ವಿಧಾನಸಭೆಯಲ್ಲಿ ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಜಿ.ಟಿ.ದೇವೇಗೌಡರು ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾಗಿದ್ದಾರೆ ಎಂದು ಸಮಾಧಾನದ ಮಾತುಗಳನ್ನು ಆಡಿದ್ದರು.
“ಪಕ್ಷದಲ್ಲಿ ನನಗೆ ಪದೇಪದೆ ಅನ್ಯಾಯ ಆಗುತ್ತಲೇ ಇದೆ. ಈ ಹಿಂದೆ ಪಕ್ಷ ತೊರೆಯಲು ಸಿದ್ಧನಾಗಿದ್ದೆ. ಆದರೆ ಬಲವಂತಕ್ಕೆ ಉಳಿದುಕೊಂಡೆ. ಕಣ್ಣೊರೆಸಲು ನನಗೆ ಕೋರ್ ಕಮಿಟಿ ಅಧ್ಯಕ್ಷ ಸ್ಥಾನ ನೀಡಿದರು. ಈ ಸ್ಥಾನ ಅಸಮಾಧಾನ ತಣಿಸಲೇ ಹೊರತು, ಇದರಿಂದ ಏನೂ ಪ್ರಯೋಜನವಿಲ್ಲ ಪಕ್ಷದಲ್ಲಿ ಹಿರಿಯನಾದ ನನಗೆ ಜೆಡಿಎಲ್ಪಿ ನಾಯಕ ಸ್ಥಾನ ಸಿಗಬೇಕಿತ್ತು. ಮಾಜಿ ಸಚಿವ ಸಾ.ರಾ. ಮಹೇಶ್ ಕುತಂತ್ರದಿಂದ ನನಗೆ ಸ್ಥಾನ ತಪ್ಪಿದೆ” ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.