ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದ್ದ ರೈತ ಪಕೀರಪ್ಪ ಅವರ ವಿಚಾರ ಇಂದು ವಿಧಾನ ಸಭೆಯಲ್ಲಿ ಮತ್ತೆ ಮರುಕಳಿಸಿದೆ. ಬೆಂಗಳೂರಿನ ಪ್ರತಿಷ್ಠಿತ ಜಿಟಿ ಮಾಲ್ ಸಿಬ್ಬಂದಿ ಮತ್ತು ಅಧಿಕಾರಿಗಳು, ರೈತ ಫಕೀರಪ್ಪ ಅವರನ್ನು ನಡೆಸಿಕೊಂಡ ಯಡವಟ್ಟಿನ ಬಗ್ಗೆ ವಿಧಾನಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮಂಗಳವಾರ ತನ್ನ ಮಗನೊಂದಿಗೆ ಜಿಟಿ ಮಾಲ್ ಗೆ ತೆರಳಿದ್ದ ರೈತ ಫಕೀರಪ್ಪ ಎಂಬುವವರು ಪಂಚೆ ಧರಿಸಿದ್ದ ಕಾರಣ ಅವರನ್ನು ಮಾಲ್ ಒಳಗೆ ಪ್ರವೇಶಕ್ಕೆ ನಿರಾಕರಣೆ ಮಾಡಲಾಗಿತ್ತು. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಜಾಲತಾಣ ಮತ್ತು ಅದರ ಹೊರಗೆ ಜಿಟಿ ಮಾಲ್ ವಿರುದ್ಧ ದೊಡ್ಡ ಮಟ್ಟಕ್ಕೆ ಆಕ್ರೋಶ ವ್ಯಕ್ತವಾಗಿತ್ತು.
ಈ ವಿಚಾರವಾಗಿ ಇಂದು ಸದನದಲ್ಲಿ ಧ್ವನಿ ಎತ್ತಿದ ಶಾಸಕ ಲಕ್ಷ್ಮಣ್ ಸವದಿ, 7 ದಿನಗಳ ಕಾಲ ಜಿಟಿ ಮಾಲ್ ಗೆ ವಿದ್ಯುತ್ ಕಡಿತಗೊಳಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಧ್ವನಿಗೂಡಿಸಿದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ, ಕರೆಂಟ್ ಕಟ್ ಮಾತ್ರವಲ್ಲ, ಮಾಲ್ನ ಸೆಕ್ಯೂರಿಟಿ ಏಜೆನ್ಸಿಯನ್ನೇ ಬ್ಯಾನ್ ಮಾಡಬೇಕು ಎಂದರು. ಅತ್ತ ಸಚಿವ ಬೈರತಿ ಸುರೇಶ್ ಎದ್ದು ನಿಂತು ಸರ್ಕಾರಕ್ಕೆ ಎಲ್ಲ ಅಧಿಕಾರವಿದೆ. ಏಳು ದಿನಗಳ ಕಾಲ ಜಿಟಿ ಮಾಲ್ ಬಂದ್ ಮಾಡಿಸುತ್ತೇವೆ ಎಂದು ಸದನಕ್ಕೆ ಉತ್ತರಿಸಿದರು.