‘ಮದರಸದಲ್ಲಿ ಕನ್ನಡ ಜಾರಿ’ ಇದು ಸರಕಾರವೊಂದು ಮಾಡಬೇಕಾದ ಆಧ್ಯತೆಯ ಕೆಲಸವಲ್ಲ. ಮದರಸ ಮಾತ್ರವಲ್ಲ, ಸಂಸ್ಕೃತ ವೇದ ಪಾಠ ಶಾಲೆ, ಕ್ರಿಶ್ಚಿಯನ್ನರ ಅಡಾರೇಷನ್ ಸೆಂಟರ್ ಗಳಲ್ಲೂ ಕನ್ನಡ ಕಡ್ಡಾಯ ಮಾಡುವುದು ಸರ್ಕಾರಿ ಪ್ರಾಧಿಕಾರದ ಕೆಲಸವಲ್ಲ. ಮುಸ್ಲೀಮರ ಮೇಲಿನ ಸಾವಿರಾರು ಆರೋಪಗಳಿಗೆ ಮದರಸಾ ಕಾರಣವಾಗಿರುವಂತೆ ಮುಸ್ಲೀಮರಿಗೆ ಕನ್ನಡ ಬರಲ್ಲ ಎಂಬ ಆರೋಪಕ್ಕೂ ಮದರಸಾವೇ ಕಾರಣವಾಗಿ ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ಕಂಡಿದ್ದು ವಿಪರ್ಯಾಸ !
ಕನ್ನಡ ಅಭಿವೃದ್ದಿ ಪ್ರಾಧಿಕಾರದ ಪುರುಷೋತ್ತಮ ಬಿಳಿಮಲೆಯವರು ಇಂದು ಮದರಸಾದೊಳಗೆ ‘ಕಾಳಜಿ’ಯಿಂದ ನುಗ್ಗಿ ಕೆಲಸ ಮಾಡುತ್ತಾರೆ ಎಂದಿಟ್ಟುಕೊಳ್ಳೊಣಾ. ಮುಂದೆ ಬರುವ ಬಿಜೆಪಿ ಸರ್ಕಾರಕ್ಕೆ ಇದು ರಹದಾರಿ ಆಗಿರುವುದಿಲ್ಲವೇ ? ಉತ್ತರಾಖಂಡ ಸರ್ಕಾರ ಈಗಾಗಲೇ ಮದರಸಾದಲ್ಲಿ ಶ್ರೀರಾಮ ಕತೆ ಪಾಠ ಮಾಡಲು ವಕ್ಫ್ ಇಲಾಖೆಯ ಮೂಲಕ ಚಿಂತನೆ ನಡೆಸಿದೆ ಎಂಬ ಸುದ್ದಿ ಇದೆ. ಜನವರಿ 25, 2024 ರಂದು ಸುದ್ದಿಗೋಷ್ಠಿ ನಡೆಸಿರುವ ಉತ್ತರಾಖಂಡ ವಕ್ಫ್ ಅಧ್ಯಕ್ಷ ಶಾದಾಬ್ ಅವರು “ಮದ್ರಸಾ ಆಧುನೀಕರಣ ಕಾರ್ಯಕ್ರಮದ ಭಾಗವಾಗಿ ಉತ್ತರಾಖಂಡ ವಕ್ಫ್ ಮಂಡಳಿಗೆ ಸಂಯೋಜಿತವಾಗಿರುವ ಮದರಸಾಗಳಿಗೆ ಭಗವಾನ್ ರಾಮನ ಅಧ್ಯಯನವನ್ನು ಹೊಸ ಪಠ್ಯಕ್ರಮದಲ್ಲಿ ಪರಿಚಯಿಸಲಾಗುವುದು” ಎಂದು ತಿಳಿಸಿದ್ದಾರೆ. ಕರ್ನಾಟಕ ಸರ್ಕಾರವೂ ಭವಿಷ್ಯದಲ್ಲಿ ಇಂತದ್ದೊಂದು ಕೃತ್ಯಕ್ಕೆ ಈಗಲೇ ಅಡಿಪಾಯ ಹಾಕಿಕೊಡುತ್ತದೆಯೇ ?
ಮದರಸಾದಲ್ಲಿ ಕನ್ನಡ ಶಿಕ್ಷಣ ನೀತಿಯ ಕರಡು ಪ್ರತಿಯನ್ನು ಬಿಳಿಮಲೆ ಸಿದ್ದಗೊಳಿಸಿದ್ದಾರೆ. ಮದರಸಾ ಧಾರ್ಮಿಕ ಶಿಕ್ಷಣದಲ್ಲಿ ಕಡ್ಡಾಯ ಕಲಿಕೆ ಎನ್ನುವುದು ಸರ್ಕಾರಿ ನೀತಿಯಾದರೆ ಮುಂದೊಂದು ದಿನ ಬಿಜೆಪಿ ಸರ್ಕಾರ ಬಂದಾಗ ‘ಮದರಸಾ ಕೇಸರಿಕರಣದ ವಿರುದ್ದ ಹೋರಾಟ’ ಎಂದು ಮುಸ್ಲಿಂ ಮಕ್ಕಳು ಹೊಸ ಸಂಘರ್ಷ ಎದುರಿಸಲು ಸಿದ್ದರಾಗಬೇಕು.
ಮುಸ್ಲೀಮರಿಗೆ ಕನ್ನಡ ಬರಲ್ಲ ಎನ್ನುವುದಕ್ಕೂ ಮದರಸಾಕ್ಕೂ ಏನು ಸಂಬಂಧ ? ಕನ್ನಡ ಬಾರದೇ ಇರುವ ಮುಸ್ಲೀಮರು ಇದ್ದಾರೆ ಎಂದರೆ ಅದಕ್ಕೆ ಕಾರಣ ಶಿಕ್ಷಣದ ಕೊರತೆಯೇ ಹೊರತು ಮದರಸಾವಲ್ಲ. ಕನ್ನಡ ಬಾರದ ತುಳುವರೂ, ಹಿಂದೂಗಳೂ, ಕ್ರಿಶ್ಚಿಯನ್ನರೂ ಅಷ್ಟೇ ಸಂಖ್ಯೆಯಲ್ಲಿ ಇದ್ದಾರೆ. ಭಯೋತ್ಪಾದನೆ, ಹವಾಲ ಹಣ, ಲವ್ ಜೆಹಾದ್, ಆಯುಧ ಸಂಗ್ರಹ, ಕೋಮುಗಲಭೆ ಹೀಗೆ ಎಲ್ಲದಕ್ಕೂ ಮದರಸಾ ಕಾರಣ ಎಂಬ ಆರೋಪದ ಬಳಿಕ ಈಗ ಮುಸ್ಲೀಮರಿಗೆ ಕನ್ನಡ ಬರಲ್ಲ ಎಂಬ ಆರೋಪಕ್ಕೂ ಮದರಸಾವೇ ಕಾರಣ ಎಂದು ಪ್ರಾಧಿಕಾರ ಘೋಷಿಸಿದಂತಿದೆ.
ಎಲ್ಲರೂ ಕನ್ನಡ ಓದು ಬರಹ ಬಲ್ಲವರಾಗಬೇಕು ಎಂಬ ಪ್ರಾಮಾಣಿಕ ಆಶಯ ಸರ್ಕಾರಕ್ಕೆ ಇದ್ದರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಮಾಡಲಿ. ಸರ್ಕಾರಿ ಅಥವಾ ಖಾಸಗಿ ಶಾಲೆಯಲ್ಲಿ ಇಂಗ್ಲೀಷ್ ಪ್ರಥಮ ಭಾಷೆಯಾದರೂ, ಉರ್ದು ಪ್ರಥಮ ಭಾಷೆಯಾದರೂ, ಕನ್ನಡ ಕಡ್ಡಾಯ ಭಾಷೆಯಾಗುವಂತೆ ನೋಡಿಕೊಳ್ಳುವುದು ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಪ್ರಾಧಿಕಾರದ ಆಧ್ಯತೆಯ ಕೆಲಸವಾಗಬೇಕಿತ್ತು.
ದುರಂತವೆಂದರೆ ಪ್ರಾಧಿಕಾರಗಳು ಭಾಷೆಯನ್ನು ಉಳಿಸಲು ಪಣತೊಡುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ‘ಜನಪ್ರೀಯ ಮಾದರಿ’ಯನ್ನು ಅನುಸರಿಸಿದೆ.
ಮದರಸದಲ್ಲಿ ಕನ್ನಡ ಕಡ್ಡಾಯವನ್ನು ಸಮರ್ಥಿಸುತ್ತಿರುವವರು ಕೆಲ ವಾದಗಳನ್ನು ಮುಂದಿಡುತ್ತಾರೆ. ಅದರಲ್ಲಿ ಮುಖ್ಯವಾದುದು “ಮದರಸಾಗಳು ಎಲ್ಲಾ ಪ್ರದೇಶಗಳಲ್ಲಿ ಒಂದೇ ರೀತಿ ಕಾರ್ಯನಿರ್ವಹಿಸುವುದಿಲ್ಲ. ಕೆಲ ಮದರಸಾಗಳು ಬೆಳಗ್ಗೆ ಮತ್ತು ಸಂಜೆ ಒಂದೆರಡು ಗಂಟೆ ನಡೆಯುತ್ತದೆ. ಅಲ್ಲಿನ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣವನ್ನೂ ಪಡೆಯುತ್ತಾರೆ. ಅಂತಹ ಮದರಸಾದಲ್ಲಿ ಕನ್ನಡ ಕಡ್ಡಾಯದ ಅವಶ್ಯಕತೆ ಇಲ್ಲ. ಇನ್ನೂ ಕೆಲ ಮದರಸಾಗಳಲ್ಲಿ ವಿದ್ಯಾರ್ಥಿಗಳು ಮದರಸಾ ಶಿಕ್ಷಣದ ಹೊರತು ಬೇರಾವ ಶಿಕ್ಷಣವನ್ನೂ ಪಡೆಯುವುದಿಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ಅರಬಿ ಅಥವಾ ಮಲಯಾಳಂನಲ್ಲಿ ಮದರಸಾ ಶಿಕ್ಷಣ ಮಾತ್ರ ಪಡೆಯುತ್ತಾರೆ. ಇನ್ನೂ ಕೆಲ ಮದರಸಾ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಉರ್ದು ಶಾಲೆಗಳಿಗೆ ಹೋಗುತ್ತಾರೆ. ಅಲ್ಲೂ ಕನ್ನಡ ಇರುವುದಿಲ್ಲ. ಹಾಗಾಗಿ ಮದರಸಾದಲ್ಲಿ ಕನ್ನಡ ಜಾರಿ ಒಳ್ಳೆಯದು” ಎನ್ನುವ ವಾದ ಮಂಡಿಸುತ್ತಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯೊಳಗಿನ ಶಾಲೆಗಳಿಗೆ ಹೋಗದ ವಿದ್ಯಾರ್ಥಿಗಳನ್ನು “ಶಾಲೆಯಿಂದ ಹೊರಗುಳಿದವರು” ಎಂಬ ಪಟ್ಟಿಗೆ ಸೇರಿಸಬೇಕಾದುದು ಸರ್ಕಾರದ ಕರ್ತವ್ಯ. ಯಾವುದೇ ಮದರಸಾ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಸರ್ಕಾರಿಯೋ, ಖಾಸಗಿಯೋ ಕನ್ನಡ, ಇಂಗ್ಲೀಷ್ ಅಥವಾ ಉರ್ದು/ಅರಬಿ ಶಾಲೆಯಲ್ಲಿ ಶಿಕ್ಷಣ ಪಡೆಯುವುದು ಕಡ್ಡಾಯ. ಅದು ಸಂಸ್ಕೃತ ವೇದ ಪಾಠ ಶಾಲೆಗೂ, ಅಡಾರೇಷನ್ ಸೆಂಟರ್ಗೂ ಅನ್ವಯಿಸುತ್ತದೆ. ಒಂದು ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ “ಕಡ್ಡಾಯ ಶಿಕ್ಷಣ” ವ್ಯಾಪ್ತಿಯಿಂದ ಯಾರಾದರೂ ಮಕ್ಕಳು ಹೊರಗಿದ್ದಾರೆ ಎಂದರೆ ಅದು ಸರ್ಕಾರದ ಘೋರ ವೈಫಲ್ಯ. ಹಾಗೊಂದು ವೇಳೆ ದೊಡ್ಡ ಸಂಖ್ಯೆಯ ಮಕ್ಕಳು ಈ ಕಾಲದಲ್ಲೂ ಶಿಕ್ಷಣದಿಂದ ಹೊರಗುಳಿದಿದ್ದರೆ ಶಿಕ್ಷಣ ಸಚಿವರ ರಾಜೀನಾಮೆಗೆ ಹೊರಡಲು ದಕ್ಷ ಶಿಕ್ಷಣ ಸಚಿವರ ನೇಮಕಕ್ಕೆ ನಾವು ಒತ್ತಾಯಿಸಬೇಕು.
ಹಾಗಾಗಿ ಎಲ್ಲಾ ಮಕ್ಕಳು “ಕಡ್ಡಾಯ ಶಿಕ್ಷಣ” ನೀತಿಯಡಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆಯೇ ಎಂದು ಸರ್ಕಾರ ಮೊದಲು ಖಾತ್ರಿಪಡಿಸಿಕೊಳ್ಳಲಿ. ಆ ಬಳಿಕ ಎಲ್ಲಾ ಶಾಲೆಗಳಲ್ಲಿ ಕನ್ನಡ ಶಿಕ್ಷಣವನ್ನು ಕಡ್ಡಾಯಗೊಳಿಸಲಿ. ಪ್ರಥಮ ಭಾಷೆಯಾಗಿ ಯಾವ ಭಾಷೆಯಿದ್ದರೂ ಕನ್ನಡ ಕಡ್ಡಾಯ ಭಾಷೆ ಎಂದು ಸರ್ಕಾರ ಆದೇಶ ಹೊರಡಿಸಲಿ. ಅದು ಜಾರಿಯಾಗುತ್ತಿದೆಯೇ ಎಂದು ಕಾಲಕಾಲಕ್ಕೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲು ಶಿಫಾರಸ್ಸು ಮಾಡುವುದು ಪ್ರಾಧಿಕಾರದ ಕೆಲಸ.
ಮಾಡಬೇಕಾದ ಕೆಲಸವನ್ನು ಮಾಡದೇ ಧಾರ್ಮಿಕ ವಿಚಾರಗಳಲ್ಲಿ ಸರ್ಕಾರ ಅನಗತ್ಯ ಮೂಗು ತೂರಿಸಿ ರಾಡಿ ಎಬ್ಬಿಸಬಾರದು. ಧಾರ್ಮಿಕ ಸಂಸ್ಥೆಗಳು ಸಂವಿಧಾನ ಬದ್ದವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಾತ್ರಿ ಪಡಿಸಿಕೊಳ್ಳುವುದಷ್ಟೇ ಸರ್ಕಾರದ ಕೆಲಸವೇ ಹೊರತು ಅವರ ಮೂಲಭೂತ ಹಕ್ಕುಗಳನ್ನು ಕಸಿಯುವುದಲ್ಲ. ಸಂಸ್ಕೃತ ವೇದ ಪಾಠ ಶಾಲೆಯನ್ನು ಬಿಟ್ಟು ಮದರಸಾವನ್ನೇ ಗುರಿ ಮಾಡಿರುವ ಹಿಂದೆ ‘ಅವರು ಲೆಫ್ಟಿಸ್ಟ್, ಕಾಂಗ್ರೆಸ್ ಆದರೂ ಮುಸ್ಲೀಮರನ್ನೂ ಬಿಟ್ಟಿಲ್ಲ ಮಾರಾಯ್ರೆ’ ಎಂದು ಅನ್ನಿಸಿಕೊಳ್ಳುವ ಇರಾದೆಗಳು ಮುಸ್ಲೀಮರನ್ನು ಭವಿಷ್ಯದಲ್ಲಿ ಅಪಾಯಕ್ಕೆ ದೂಡುತ್ತದೆ.
ಮದರಸಾಗಳೇ ಕನ್ನಡ ಸೇರಿದಂತೆ ಯಾವ ಭಾಷೆಯನ್ನಾದರೂ ಕಲಿಸಲಿ. ಪ್ರಾಧಿಕಾರಕ್ಕೆ ಆಸಕ್ತಿ ಇದ್ದರೆ ಅಂತಹ ಮದರಸಾಗಳಿಗೆ ಅನುದಾನ, ಪ್ರೋತ್ಸಾಹ, ಪ್ರಶಸ್ತಿ ನೀಡಲಿ. ಬದಲಾಗಿ ಸರ್ಕಾರವೇ ನೀತಿಯ ಮೂಲಕವಾಗಿ ಮದರಸಾ ಪ್ರವೇಶ ಮಾಡುವುದು ಮುಸ್ಲೀಮರ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ.