ಬೆಂಗಳೂರು: ಪಂಚೆ ತೊಟ್ಟಕೊಂಡು ಬಂದಿದ್ದ ರೈತನಿಗೆ ಪ್ರವೇಶ ನಿರಾಕರಣೆ ಮಾಡಿದ ಜಿ ಟಿ ಮಾಲ್ ಅನ್ನು ಏಳು ದಿನಗಳ ಕಾಲ ಮುಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಸದನದಲ್ಲಿ ಜಿ ಟಿ ಮಾಲ್ನಲ್ಲಿ ರೈತನಿಗೆ ಅವಮಾನ ಆದ ವಿಚಾರ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನ ಮಾಗಡಿ ಟೋಲ್ ಗೇಟ್ ಬಳಿಯಿರುವ ಜಿಟಿ ಮಾಲ್ನಲ್ಲಿ ಹಾವೇರಿ ಮೂಲದ ರೈತನೋರ್ವನಿಗೆ ಅಪಮಾನವಾದ ಘಟನೆ ಜುಲೈ 16 ರಂದು ನಡೆದಿತ್ತು. ವಿ
ಜಯನಗರದ ನಿವಾಸಿ ನಾಗರಾಜ್ ತಂದೆ ಹಾವೇರಿಯವರಾಗಿದ್ದು, ಬೆಂಗಳೂರಿಗೆ ಬಂದಾಗ ಸಿನಿಮಾ ತೋರಿಸಲೆಂದು ಜಿಟಿ ಮಾಲ್ಗೆ ಕರೆದುಕೊಂಡು ಹೋಗಿದ್ದರು. ಸಿನಿಮಾ ಥಿಯೇಟರ್ ಒಳಗೆ ಪ್ರವೇಶಿಸುವ ಸಂದರ್ಭದಲ್ಲಿ ತಪಾಸಣೆ ನಡೆಸುವ ಸೆಕ್ಯುರಿಟಿ ಸಿಬ್ಬಂದಿ, ರೈತ ಪಂಚೆ ಉಟ್ಟಿರುವ ಕಾರಣಕ್ಕೆ ಥಿಯೇಟರ್ ಒಳಗೆ ಬಿಟ್ಟಿರಲಿಲ್ಲ. ಬೇಸತ್ತ ನಾಗರಾಜ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಇದಕ್ಕೆ ನೆಟ್ಟಿಗರು ಸೇರಿದಂತೆ, ರಾಜ್ಯದಾದ್ಯಂತ ಮಾಲ್ ಸಿಬ್ಬಂದಿಗಳ ನಡೆಗೆ ಆಕ್ರೋಶ ಹೊರಹಾಕಿದ್ದರು.
ಜಿಟಿ ಮಾಲ್ ಒಳಗೆ ಪಂಚೆ ಉಟ್ಟ ರೈತನನ್ನ ಬಿಡದೆ ಅವಮಾನಿಸಿದ ವಿಚಾರವಾಗಿ ಸಭಾಧ್ಯಕ್ಷ ಯು ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದರು. “ರೈತನಿಗೆ ಅವಮಾನ ಮಾಡಿದವನು ಎಷ್ಟೇ ದೊಡ್ಡವನು ಇರಲಿ, ಅವಮಾನ ಮಾಡಿದ್ದನ್ನು ಖಂಡಿಸಬೇಕು. ಸರ್ಕಾರ ಕಠಿಣ ಕ್ರಮ ಜರುಗಿಸಬೇಕು” ಎಂದು ಅವರು ಆಗ್ರಹಿಸಿದ್ದರು.
ಶಾಸಕ ಲಕ್ಷಣ ಸವದಿ, “ಎಲ್ಲ ಮಾಲ್ಗಳಿಗೂ ಒಂದೇ ರೂಲ್ಸ್ ಮಾಡಬೇಕು. ಪಂಚೆ ನಮ್ಮ ಸಂಸ್ಕೃತಿ. ಸರ್ಕಾರದಿಂದ ಒಂದು ಆದೇಶ ಹೊರಡಿಸಲಿ, ಆ ಮಾಲ್ ಗೆ ವಾರಗಳ ಕಾಲ ಪವರ್ ಕಟ್ ಮಾಡಲಿ” ಎಂದು ಒತ್ತಾಯಿಸಿದರು. “ರೈತನಿಗೆ ಅವಮಾನ ಮಾಡಿದ ಆ ಮಾಲ್ ಅನ್ನು ಮುಚ್ಚಬೇಕು” ಎಂದು ಶಾಸಕ ಪ್ರಕಾಶ್ ಕೋಳಿವಾಡ ಕೂಡ ಎದ್ದು ನಿಂತು, ಆಗ್ರಹಿಸಿದರು.
“ಏಳು ದಿನಗಳ ಕಾಲ ಮಾಲ್ ಮುಚ್ಚಿಸುತ್ತೇವೆ. ಈಗಾಗಲೇ ಬಿಬಿಎಂಪಿ ಆಯುಕ್ತರ ಹತ್ತಿರ ಮಾತಾಡಿದ್ದೇವೆ. ಕಾನೂನಿನಲ್ಲಿ ಅವಕಾಶ ಇದೆ, ಸರ್ಕಾರದ ಕ್ರಮ ಕೈಗೊಳ್ಳಬಹುದು” ಎಂದು ಬೈರತಿ ಹೇಳಿದರು.