ಬೇಲೂರು: ಪಟ್ಟಣದಲ್ಲಿ ನಡೆದ ತಾಲ್ಲೂಕು ಮಟ್ಟದ 17 ವರ್ಷದೊಳಗಿನ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಇರಲಿಲ್ಲ ಎಂಬ ಕಾರಣಕ್ಕೆ ಸ್ಥಳೀಯ ಶಾಸಕ ಎಚ್.ಕೆ. ಸುರೇಶ್ ಕೆಂಡಾಮಂಡಲರಾದರು. ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಇಂದು ಆಯೋಜನೆಗೊಂಡಿದ್ದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎಚ್.ಕೆ. ಸುರೇಶ್ ಹಾಗೂ ಬಿಇಓ ರಾಜೇಗೌಡರ ನಡುವೆ ತೀವ್ರ ವಾಗ್ವಾದ ಜರುಗಿತು.ವೇದಿಕೆಯಲ್ಲಿ ಶಾಸಕರು ಬಿಇಓ ವಿರುದ್ಧ “ರಾತ್ರಿಯೆಲ್ಲಾ ಕುಡಿದು ಫೋನ್ ಮಾಡ್ತಿಯಾ, ಶಿಕ್ಷಕರಿಗೆ ಚಿತ್ರಹಿಂಸೆ ಕೊಡ್ತಿಯಾ” ಎಂದು ಹರಿಹಾಯ್ದರು. ಇದಕ್ಕೆ ಪ್ರತಿಯಾಗಿ ಬಿಇಓ ರಾಜೇಗೌಡ “ಯಾರು ಹೇಳ್ದೋರು ನಿಮಗೆ ಕರೀರಿ ಅವರನ್ನು” ಎಂದು ಪ್ರತಿಕ್ರಿಯಿಸಿದರು.
ಇನ್ನು ಮುಂದೆ ಶಾಸಕರು “ನಾನು ಈ ಬಿಇಓ ಪಕ್ಕ ಕೂರಲ್ಲ” ಎಂದು ಹಠ ಹಿಡಿದು, ವೇದಿಕೆಯಿಂದಲೇ ಹೊರಟರು. ಬಿಇಓ ಸಹ “ನಾನು ಎದ್ದೇಳಲ್ಲಾ, ನಾನು ಈ ತಾಲ್ಲೂಕಿನ ಬಿಇಓ” ಎಂದು ಪ್ರತಿಕ್ರಿಯಿಸಿದ ಹಿನ್ನಲೆಯಲ್ಲಿ ಕಾರ್ಯಕ್ರಮದಲ್ಲಿ ವಾತಾವರಣ ಗದ್ದಲಮಯವಾಯಿತು. ಶಾಸಕ–ಬಿಇಓರ ನಡುವಿನ ಈ ಜಗಳದಿಂದ ಬಿಸಿಲಿನ ತಾಪದಲ್ಲಿ ನಿಂತಿದ್ದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸಿದರು.