ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೆಸರನ್ನು ಬಳಸಿ ತನ್ನ ಸ್ನೇಹಿತರು, ಆಪ್ತರಿಗೆ 30 ಕೋಟಿಗೂ ಹೆಚ್ಚು ಹಣವನ್ನು ವಂಚಿಸಿದ ಆರೋಪದಲ್ಲಿ ಮಹಿಳೆಯೊಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೇರೆ ಬೇರೆ ಕಾರಣ ನೀಡಿ ತನ್ನ 20 ಕ್ಕೂ ಹೆಚ್ಚು ಮಂದಿ ಸ್ನೇಹಿತರಿಗೆ 30 ಕೋಟಿ ಮೊತ್ತದ ವಂಚಿಸಿದ ಆರೋಪದಲ್ಲಿ ದೂರು ಕೇಳಿ ಬಂದಿತ್ತು. ಸ್ನೇಹಿತರಲ್ಲಿ ತಾನು ಸಿಎಂ, ಡಿಸಿಎಂ ಸೇರಿದಂತೆ ಪ್ರಮುಖ ರಾಜಕಾರಣಿಗಳ ನಿಕಟ ಸಂಬಂಧವಿದೆ ಎಂಬುದನ್ನು ನಂಬಿಸಿ ಹಣದ ಆಮಿಷ ಇಟ್ಟು ವಂಚಿಸಿದ ಆರೋಪ ಕೇಳಿ ಬಂದಿದೆ.
ಸಿರಿವಂತ ಮಹಿಳೆಯರನ್ನು ಕಿಟ್ಟಿ ಪಾರ್ಟಿ ನೆಪದಲ್ಲಿ ಆಕರ್ಷಿಸುತ್ತಿದ್ದ ಸವಿತಾ, ಮನೆಗೆ ಕರೆದು ಊಟೋಪಚಾರಗಳನ್ನು ಮಾಡಿಸಿ ಅವರ ವಿಶ್ವಾಸ ಗಳಿಸುತ್ತಿದ್ದಳು. ಬಳಿಕ ತನಗೆ ಸಿಎಂ ಸಿದ್ದರಾಮಯ್ಯ ., ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ರಾಜಕಾರಣಿಗಳು, ಪ್ರಭಾವಿಗಳು ಪರಿಚಯವಿದ್ದಾರೆ ಎಂದು ಸುಳ್ಳು ಹೇಳಿ ವಂಚಿಸುತ್ತಿದ್ದಳು.
ಕಡಿಮೆ ಬೆಲೆಯಲ್ಲಿ ಚಿನ್ನ ಕೊಡುವುದು, ಪ್ರಭಾವಿ ರಾಜಕಾರಣಿಗಳಿಂದ ಬೇರೆ ಬೇರೆ ಕೆಲಸ ಮಾಡಿಸಿಕೊಳ್ಳುವುದು ಸೇರಿದಂತೆ ಮುಂತಾದ ಆಮಿಷ ತೋರಿಸಿ ಸಾಲ ಪಡೆಯುತ್ತಿದ್ದಳು. ಇದೇ ರೀತಿ ಒಬ್ಬೊಬ್ಬರಿಂದ 50 ಲಕ್ಷದಿಂದ 2.5 ಕೋಟಿ ರೂ. ವರೆಗೆ ಹಣ ಪಡೆದು ವಂಚಿಸಿದ್ದಳು.
ಈಕೆಯನ್ನು ಸವಿತಾ ಎಂದು ಗುರುತಿಸಲಾಗಿದೆ. ಈಕೆ ಈ ಹಿಂದೆಯೂ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಂಧನದ ನಂತರವು ಹಳೆಯ ಚಾಳಿ ಮುಂದುವರೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸಧ್ಯ ಬಸವೇಶ್ವರ ನಗರ ಪೊಲೀಸರು ಈಕೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.