ಚನ್ನರಾಯಪಟ್ಟಣ : ಕಸ ಎಂದಾಕ್ಷಣ ಮೂಗು ಮುರಿಯುವವರೇ ಹೆಚ್ಚು. ಏಕೆಂದರೆ ಹೆಚ್ಚು ಕಡೆಗಳಲ್ಲಿ ಸರಿಯಾಗಿ ವಿಲೇವಾರಿ ಆಗುವುದಿಲ್ಲ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಿ ರಾಶಿ ಹಾಕಿದ ಗೊಬ್ಬರ ಕೊಳೆತು ಗಬ್ಬು ನಾರುತ್ತದೆ.ನಗರ ಅಥವಾ ಪಟ್ಟಣ ಪ್ರದೇಶಗಳಲ್ಲಿ ಸಾರ್ವಜನಿಕರು ಹಸಿ-ಒಣ ಕಸ ಹೀಗೆ ಬೇರ್ಪಡಿಸಿ ಸಹಕರಿಸುವುದಿಲ್ಲ, ಎಂಬಿತ್ಯಾದಿ ನೆಗೆಟಿವ್ ಮಾತುಗಳೇ ಹೆಚ್ಚಾಗಿ ಕೇಳಿ ಬರುತ್ತವೆ.
ಆದರೆ ಇದಕ್ಕೆ ಅಪವಾದ ಎಂಬAತೆ ಚನ್ನರಾಯಪಟ್ಟಣ ಪುರಸಭೆ ಹಾಸನ ಜಿಲ್ಲೆಯಲ್ಲೇ ಎಲ್ಲ ರೀತಿಯ ಕಸ ವಿಲೇವಾರಿಯಲ್ಲಿ ಮಾದರಿ ಹಾಗೂ ಅಚ್ಚುಕಟ್ಟು ಹೆಜ್ಜೆ ಇಟ್ಟಿದೆ. ಪುರಸಭೆಯ 23 ವಾರ್ಡ್ಗಳಿಂದ ಕಸ ಸಂಗ್ರಹಿಸಲು 10 ಆಟೋ ಟಿಪ್ಪರ್ಗಳಿವೆ.ನಿತ್ಯ ಹಸಿ-ಒಣ ಸೇರಿ ಒಟ್ಟಾರೆ 16-18 ಟನ್ ಕಸ ಉತ್ಪಾದನೆ ಆಗುತ್ತಿದ್ದು,ಇದನ್ನು ಸುಮಾರು 21 ರಿಂದ 25 ಎಕರೆ ಪ್ರದೇಶ ಇರುವ ನಲ್ಲೂರು ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಣೆ ಮಾಡಲಾಗುತ್ತಿದೆ. ಇದರಲ್ಲಿ ಶೇ.90 ರಷ್ಟು ಕಸವನ್ನು ಮರು ಬಳಕೆಗೆ ಪರಿವರ್ತನೆ ಮಾಡಲಾಗುತ್ತಿದೆ. ಶೇ.10 ರಷ್ಟು ನಿಸ್ಸತ್ವ ತ್ಯಾಜ್ಯವನ್ನು ಸ್ಯಾನಿಟರಿ ಲ್ಯಾಂಡ್ಫಿಲ್ನಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ.
ಎಲ್ಲವೂ ಸನ್ನದ್ಧ : ವೈಜ್ಞಾನಿಕ ರೀತಿಯಲ್ಲಿ ಕಸವಿಲೇವಾರಿಗಾಗಿ ಆಟೋ ಟಿಪ್ಪರ್,ಫ್ರಂಟ್ ಮತ್ತು ಬ್ಯಾಕ್ಹೋ ಲೋಡರ್ ಜೆಸಿಬಿ, ಕಾಂಪ್ಯಾಕ್ಟರ್, ಟ್ರಾಕ್ಟರ್, ಮಿನಿ ಇಟಾಚಿ ಅರೆಯುವ ಯಂತ್ರಗಳನ್ನು ಈಗಾಗಲೇ ಅಳವಡಿಸಲಾಗಿದೆ. ಅಚ್ಚುಕಟ್ಟು ಕಸ ವಿಲೇವಾರಿ ಕಾರ್ಯಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಉತ್ತಮ ರೀತಿಯ ಸಹಕಾರ ನೀಡುತ್ತಿದ್ದಾರೆ
ಕೋಟಿ ಕೋಟಿ ವೆಚ್ಚ : ಗಬ್ಬು ನಾರುವ ಕಸವನ್ನು ಮರು ಬಳಕೆ ಮಾಡುವ ರೀತಿಯಲ್ಲಿ ಪರಿವರ್ತಿಸಲು ಬೇಕಾದ ಬೈಲಿಂಗ್ ಯಂತ್ರ, ಶೇಡ್ದೆರ್ ಯಂತ್ರ ಟ್ರೊಮೆಲ್ ಮತ್ತು ಪ್ಲಾಸ್ಟಿಕ್ ಪೆಲ್ಲೆಟೈಸಿಂಗ್ ಯಂತ್ರಗಳಿಗೆ ಸುಮಾರು 1 ಕೋಟಿ ವ್ಯಯಿಸಲಾಗಿದೆ. ಜೊತೆಗೆ ಅಪ್ರೋಚ್ ರಸ್ತೆ, ಕಾಂಪೌಂಡ್ ಗೋಡೆ, ವಿಂಡ್ರೋ ಪ್ಲಾಟ್ ಫಾರ್ಮ್, ಶೆಡ್ಗಳು, ಸ್ಯಾನಿಟರಿ ಲ್ಯಾಂಫಿಲ್, ಲೀಚೇಟ್ಕೊಳ ಮತ್ತು ವಿದ್ಯುದ್ದೀಕರಣ ಹಾಗೂ ರಸ್ತೆಗೆ 2 ಕೋಟಿ ಖರ್ಚು ಮಾಡಲಾಗಿದೆ. ಇದೀಗ ಎಂಆರ್ಎಫ್ ಶೆಡ್, ಯಂತ್ರೋಪಕರಣ, ವಾಚ್ಮೆನ್ ಶೆಡ್, ಪೈಪ್ಲೈನ್ ಕಾಮಗಾರಿಯನ್ನು 1 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಶಂಕು ಸ್ಥಾಪನೆ ನೆರವೇರಿಸಲಾಗಿದೆ.
ಮಾರಾಟಕ್ಕೆ ಒಡಂಬಡಿಕೆ: ಹೆಚ್ಚುವರಿಯಾಗಿ ಇ-ತ್ಯಾಜ್ಯ ಮತ್ತು ಬಾರ್ಗಳಿಂದ ಹೊರ ಬೀಳುವ ವಿವಿಧ ಮದ್ಯಗಳ ಟೆಟ್ರಾ ಪ್ಯಾಕ್ ಸಂಗ್ರಹಣೆ ಮತ್ತು ಮಾರಾಟಕ್ಕಾಗಿ ಪುರಸಭೆ ಮತ್ತು ಕ್ಲಿಯರಿನ್ ಒ ಹಾಸನ ನಡುವೆ ಸಹಿ ಮಾಡಲಾಗಿದೆ. ಟೆಟ್ರಾ ಪ್ಯಾಕ್ಗಳನ್ನು ಬೆಲ್ಲದಚ್ಚು ರೀತಿ ಪಿಂಡಿ ಮಾಡಿ ಮಾರಾಟ ಮಾಡಲಾಗುತ್ತಿರುವುದು ಗಮನಾರ್ಹ ಎನಿಸಿದೆ. ಪ್ಲಾಸ್ಟಿಕ್ ಮಾಲಿನ್ಯ ಹಾಗೂ ಬಳಕೆ ಕಡಿಮೆ ಮಾಡಲು ಪುರಸಭೆ ಎಲ್ಲ ಕ್ರಮ ಕೈಗೊಂಡಿದೆ ಎಂದು ಪರಿಸರ ಇಂಜಿನಿಯರ್ ಕಾವ್ಯ ತಿಳಿಸಿದರು.
ಕಸ ವಿಲೇವಾರಿ ವಿಧಾನ : ಪ್ರಸ್ತುತ ಹಸಿ ತ್ಯಾಜ್ಯವನ್ನು ವಿಂಡ್ರೋ ಮತ್ತು ವರ್ಮಿ ಕಂಪೋಸ್ಟಿಂಗ್ ವಿಧಾನಗಳ ಮೂಲಕ ಸಿದ್ಧಪಡಿಸಿಕೊಂಡಿರುವ ಹಾಗೂ ಒಣ ತ್ಯಾಜ್ಯದ ದೈನಂದಿನ ಸಂಗ್ರಹ ತ್ಯಾಜ್ಯವನ್ನು ಬೇರ್ಪಡಿಸಲು ನೇರವಾಗಿ ಟ್ರಾಮೆಲ್ ಯಂತ್ರಕ್ಕೆ ತಲುಪಿಸಲಾಗುತ್ತದೆ. ನಂತರ ನಿಸತ್ವ ತ್ಯಾಜ್ಯವನ್ನು ಈಗಾಗಲೇ ಸ್ಥಾಪಿಸಿರುವ ಪ್ರತ್ಯೇಕ ಸ್ಯಾನಿಟರಿ ಲ್ಯಾಂಫಿಲ್ಗೆ ಹಾಕಲಾಗುತ್ತದೆ. ಮುಂಬರುವ ದಿನಗಳಲ್ಲಿ, ತ್ಯಾಜ್ಯ ವಿಭಜನೆ ಮತ್ತು ಮರುಬಳಕೆ ದಕ್ಷತೆ ಹೆಚ್ಚಿಸಲು ಅಗತ್ಯ ಯಂತ್ರೋಪಕರಣ ಜೊತೆಗೆ ಒಣ ತ್ಯಾಜ್ಯ ಸಂಸ್ಕರಣೆ ಮತ್ತು ವಸ್ತು ಮರು ಪಡೆಯುವಿಕೆ ಸೌಲಭ್ಯ ಶೆಡ್ ಸ್ಥಾಪನೆ ಮತ್ತು ಕಾರ್ಯಾಚರಣೆಗಾಗಿ ಕಾರ್ಯಾದೇಶ ನೀಡಲಾಗಿದೆ. ಒಣ ತ್ಯಾಜ್ಯ ನಿರ್ವಹಣೆ ಸುಗಮಗೊಳಿಸುವ ಮತ್ತು ಕಡಿಮೆ ಮಾಡುವ ಗುರಿ ಹೊಂದಲಾಗಿದೆ.