Saturday, May 4, 2024

ಸತ್ಯ | ನ್ಯಾಯ |ಧರ್ಮ

ಮನುಷ್ಯರು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದ ಸುಳ್ಳುಗಳನ್ನು ಮೋದಿ-ಶಾ ನೀರು ಕುಡಿದಷ್ಟೇ ಸಲೀಸಾಗಿ ಹೇಳುತ್ತಾರೆ

ಸುರಪುರ ಮೇ 1: BJP ಯ ರಾಜುಗೌಡನನ್ನು ಸೋಲಿಸುವುದೇ ನನ್ನ ಗುರಿ. ಸುರಪುರ ವಿಧಾನಸಭೆ ಮತ್ತು ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಭರ್ಜರಿ ಬಹುಮತದಿಂದ ಗೆಲ್ಲಿಸಿ ಎಂದು ಸಿ.ಎಂ ಸಿದ್ದರಾಮಯ್ಯ ಕರೆ ನೀಡಿದರು.

ಸುರಪುರ ವಿಧಾನಸಭೆ ಮತ್ತು ರಾಯಚೂರು ಲೋಕಸಭಾ ಚುನಾವಣೆ ಪ್ರಯುಕ್ತ ನಡೆದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು ನೀಡುವಂತೆ ಕರೆ ನೀಡಿ ಮಾತನಾಡಿದರು.

ಸುರಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೂಗೌಡ ನನ್ನ ಬೆಂಬಲ ಇದೆ ಎಂದು ಸುಳ್ಳು ಹೇಳಿ ಅವರಿಗೆ ಮತ ಕೇಳುತ್ತಿದ್ದಾರೆ ಎನ್ನುವ ಸಂಗತಿ ನನ್ನ ಕಿವಿಗೆ ಬಿದ್ದಿದೆ. ಇದು ಅಪ್ಪಟ ಸುಳ್ಳು. ಮೋದಿಯಿಂದ ಹಿಡಿದು ಅಮಿತ್ ಶಾ ಮತ್ತು ರಾಜೂಗೌಡನವರೆಗೂ ಸುಳ್ಳುಗಳ ಸರದಾರರು. ಮನುಷ್ಯರು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದ ಸುಳ್ಳುಗಳನ್ನು ಇವರು ನೀರು ಕುಡಿದಷ್ಟೆ ಸಲೀಸಾಗಿ ಹೇಳುತ್ತಾರೆ. ಇವರ ಸುಳ್ಳುಗಳನ್ನು ನಂಬಿ ಹತ್ತತ್ತು ವರ್ಷ ಮೋಸ ಹೋಗಿದ್ದು ಸಾಕು. ಇನ್ನೂ ಎಷ್ಟು ವರ್ಷ ಬಿಜೆಪಿಯ ಸುಳ್ಳುಗಳಿಗೆ ಮೋಸ ಹೋಗ್ತೀರಿ ಎಂದು ಪ್ರಶ್ನಿಸಿದರು.

ಮೊದಲ ಮತ್ತು ಎರಡನೆ ಹಂತದ ಚುನಾವಣೆಗಳಲ್ಲಿ ಬಿಜೆಪಿ ಸೋಲುತ್ತದೆ ಎನ್ನುವುದು ಮೋದಿಗೆ ಸ್ಪಷ್ಟವಾಗಿ ಗೊತ್ತಾಗಿದೆ. ಬಿಜೆಪಿಯವರೇ ಮಾಡಿಸಿರುವ ಸಮೀಕ್ಷೆಯಲ್ಲೇ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿ 200 ಸೀಟು ಗೆದ್ದರೆ ಹೆಚ್ಚು ಎನ್ನುವಂತಹ ಸ್ಥಿತಿ ಇದೆ. ಹೀಗಾಗಿ ಸೋಲಿಗೆ ಹೆದರಿ ಮೋದಿ, ಶಾ, ರಾಜುಗೌಡ ಭರ್ಜರಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಈ ಸುಳ್ಳುಗಳಿಗೆ ಮರುಳಾಗಬೇಡಿ ಎಂದರು.

ರಾಯಚೂರು ಲೋಕಸಭೆ ಮತ್ತು ಸುರಪುರ ವಿಧಾನಸಭೆ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಭರ್ಜರಿ ಬಹುಮತದಿಂದ ಗೆಲ್ಲಿಸಬೇಕು ಎನ್ನುವುದು ನನ್ನ ಗುರಿ. ನನ್ನ ಗುರಿಯನ್ನು ನೀವೆಲ್ಲಾ ಗೆಲ್ಲಿಸಿಕೊಂಡು ಬನ್ನಿ ಎಂದು ಕೈ ಮುಗಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.‌

AICC ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, KPCC ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ , ದಿವಂಗತ ಶಾಸಕ ರಾಜಾ ವೆಂಕಟಪ್ಪನಾಯಕ ಅವರ ಪತ್ನಿ ಮತ್ತು ಪುತ್ರರು ಸೇರಿ ಜಿಲ್ಲಾ ಮತ್ತು ತಾಲ್ಲೂಕು ಹಾಗೂ ಬ್ಲಾಕ್ ಮುಖಂಡರುಗಳು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು